200 ಬೀದಿನಾಯಿಗಳಿಗೆ, ಸಾವಿರಾರು ಪಾರಿವಾಳಗಳಿಗೆ "ಅನ್ನದಾತ"ನಾದ ಜೈನ್ ಅನಿಮಲ್ ಕೇರ್
ಬೆಂಗಳೂರು, ಜೂ. 10: ಕೊರೊನಾ ಈ ಕಷ್ಟ ಕಾಲದಲ್ಲಿ ನಮಗೆ ನಾವೇ ಊಟ ಸಂಪಾದನೆ ಮಾಡಿಕೊಳ್ಳಲಾಗದ ಸಂಕಷ್ಟ ಕಾಲ. ಕಠಿಣ ಲಾಕ್ ಡೌನ್ನಿಂದ ರಾಜಧಾನಿಯಲ್ಲಿ ನರ ಮಾನವ ಮನೆಯಿಂದ ಹೊರಗೆ ಬರಲಾರದ ಪರಿಸ್ಥಿತಿ. ಇಂಥ ಸಂಕಷ್ಟ ಸ್ಥಿತಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳು, ಪಾರಿವಾಳ ಮತ್ತು ಮಂಗಗಳಿಗೆ ದಿನವೂ ಅನ್ನ ಹಾಕುವ ಮೂಲಕ ಜೈನ ಸಮುದಾಯದ ಐವರು ಯುವಕರ ತಂಡ ಪ್ರಾಣಿ- ಪಕ್ಷಿಗಳ ಸೇವೆ ಮಾಡುತ್ತಿದೆ. ಲಾಕ್ ಡೌನ್ನಲ್ಲಿ ಇವರು ಬರುವುದನ್ನೇ ಪಕ್ಷಿಗಳು- ಪ್ರಾಣಿಗಳು ಕಾದು ಕುಳಿತಿರುತ್ತವೆ. ಇಂತಹ ಹೃದಯ ಕಲುಕುವ ಮಾನವೀಯ ಘಟನೆಗೆ ಹೈಕೋರ್ಟ್ನ ಪಾರಿವಾಳಗಳು ಸಾಕ್ಷಿಯಾದವು.
Recommended Video
ಮಧ್ಯಾಹ್ನ 1 ಗಂಟೆ ಸಮಯ. ಪ್ರೆಸ್ ಕ್ಲಬ್ ಸಮೀಪ ಆ ಇಬ್ಬರು ಯುವಕರು ಬಂದಿದ್ದೆ ತಡ ಪಾರಿವಾಳಗಳೇ ಗುಂಪು ಕಟ್ಟಿ ಬಂದವು. ಚೀಲದಲ್ಲಿ ತಂದಿದ್ದ ಆಹಾರವನ್ನು ಎಸೆಯುತ್ತಿದ್ದಂತೆ ನಾಮುಂದು ತಾಮುಂದು ಎಂದು ಪಾರಿವಾಳಗಳು ಹೊಟ್ಟೆ ತುಂಬಿಸಿಕೊಳ್ಳುವ ಕಾರ್ಯದಲ್ಲಿ ಮಗ್ನವಾದವು. ವಿಪರ್ಯಾಸವೆಂದರೆ ಆ ಯುವಕರು ಹೋದ ಕಡೆಯೆಲ್ಲ ಪಾರಿವಾಳಗಳು ಹಿಂಬಾಲಿಸುತ್ತಿದ್ದವು. ಕೊರೊನಾ ಕಠಿಣ ಲಾಕ್ ಡೌನ್ ಈ ಕಷ್ಟ ಕಾಲದಲ್ಲಿ ಮನೆಯಿಂದ ಹೊರಗೆ ಬಂದರೆ ಪೊಲೀಸರು ಲಾಠಿ ಬೀಸುತ್ತಾರೆ. ಇಂಥ ಕಷ್ಟದಲ್ಲೂ ಪಾರಿವಾಳಗಳಿಗೆ ಊಟ ಕೊಟ್ಟು ಪೋಷಣೆ ಮಾಡುತ್ತಿದ್ದ ಅವರ ಸೇವೆ ಹೃದಯಕ್ಕೆ ನಾಟುವಂತಿತ್ತು. ಈ ಕುರಿತು ಅವರನ್ನು ವಿಚಾರಿಸಿದಾಗ ಗೊತ್ತಾಗಿದ್ದು ಸದ್ದಿಲ್ಲದೇ ನಡೆದು ಬರುತ್ತಿರುವ ಹತ್ತು ವರ್ಷಗಳ ಕಾಲದ ಸೇವೆಯ ವಿವರ.
ಪಾರಿವಾಳಗಳಿಗೆ ಆಹಾರ ಕೊಡುತ್ತಿದ್ದ ಜೀತು ಭಾಯ್ ಕಳೆದ ಹತ್ತು ವರ್ಷಗಳಿಂದ ಜೈನ್ ಅನಿಮಲ್ ಕೇರ್ ಮತ್ತು ಶ್ರೀ ಧಂದಾರ್ ಜೈನ್ ಯುವ ಮೋರ್ಚಾ ವತಿಯಿಂದ ಮಾಡುತ್ತಿರುವ ಸೇವೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಇದು ಕೇವಲ ಇವತ್ತು ಮಾಡುತ್ತಿರುವ ಕೆಲಸವಿಲ್ಲ. ಕಳೆದ ಹತ್ತು ವರ್ಷದಿಂದ ಕಬ್ಬನ್ ಪಾರ್ಕ್ ಸುತ್ತ ಮುತ್ತ ಇರುವ ಬೀದಿ ನಾಯಿಗಳಿಗೆ, ಪಾರಿವಾಳಗಳಿಗೆ ಹಾಗೂ ಮಂಗಗಳಿಗೆ ದಿನ ನಿತ್ಯ ಆಹಾರವನ್ನು ನೀಡುವ ಕಾರ್ಯ ಮಾಡುತ್ತಿದ್ದೇವೆ. ಇದು ಇಡೀ ಜೈನ್ ಸಮುದಾಯದಿಂದ ಮಾಡುತ್ತಿರುವ ಪುಟ್ಟ ಕಾಣಿಕೆ.
ಈ ಸೇವೆಯನ್ನು ಹತ್ತು ವರ್ಷದಿಂದ ಮಾಡುತ್ತಿದ್ದೇವೆ
ಮನುಷ್ಯ ಯಾವ ರೀತಿಯಲ್ಲಾದರೂ ತನ್ನ ಅನ್ನ ಸಂಪಾದನೆ ಮಾಡಿಕೊಳ್ಳುತ್ತಾನೆ. ಕಾಂಕ್ರಿಟ್ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳು ಆಹಾರಕ್ಕೆ ಏನು ಮಾಡಬೇಕು ? ಎಲ್ಲೋ ಹೋಗಿ, ಈ ವಾಹನಗಳ ದಟ್ಟಣೆಗೆ ಜೀವವನ್ನೇ ಕಳೆದಕೊಳ್ಳುತ್ತವೆ. ಹೀಗಾಗಿ ಈ ಪ್ರಾಣಿ ಪಕ್ಷಿಗಳಿಗೆ ಅನ್ನ ಕೊಡುವ ಪ್ರಯತ್ನ ಮಾಡಿದೆವು. ಐವರು ಯುವಕರ ತಂಡ ಈ ಸೇವೆಯನ್ನು ಹತ್ತು ವರ್ಷದಿಂದ ಮಾಡುತ್ತಿದ್ದೇವೆ. ಇಡೀ ಜೈನ ಸಮುದಾಯ ತಮ್ಮ ಕೈಲಾದ ನೆರವು ಕೊಡುತ್ತಾರೆ. ಹೀಗಾಗಿ ಜೈನ್ ಅನಿಮಲ್ ಕೇರ್ ಎಂಬ ಸ್ವಯಂ ಸೇವಾ ಸಂಸ್ಥೆ ಮಾಡಿಕೊಂಡು ಪ್ರಾಣಿಗಳ ಸೇವೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.
|
200 ಬೀದಿ ನಾಯಿಗಳಿಗೆ ಹಾಲು ಬನ್
ಇನ್ನು ಜೈನ್ ಅನಿಮಲ್ ಕೇರ್ ಕೇವಲ ಹತ್ತಿಪ್ಪತ್ತು ನಾಯಿಗಳನ್ನು ಪೋಷಣೆ ಮಾಡುತ್ತಿಲ್ಲ. ಬೆಂಗಳೂರಿನ ಹೃದಯ ಭಾಗದಲ್ಲಿ ಓಡಾಡಿಕೊಂಡಿರುವ ಸುಮಾರು 200 ಬೀದಿ ನಾಯಿಗಳನ್ನು ಪೊಷಣೆ ಮಾಡುತ್ತಿದೆ. ದಿನಕ್ಕೆ 120 ಲೀಟರ್ ಹಾಲು ಸರಬರಾಜು ಮಾಡುತ್ತಿದೆ. ಇದರ ಜತೆಗೆ ಬನ್, ಆಹಾರವನ್ನು ನೀಡುತ್ತಿದೆ. ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಅವು ಕೂಡ ನಮ್ಮಂತೆ. ಆದರೆ ತಿನ್ನಲಿಕ್ಕೆ ಒಂದು ನಾಯಿಗೂ ಆಹಾರ ಸಿಗಲ್ಲ. ಇಂತಹ ಲಾಕ್ ಡೌನ್ ಕಠಿಣ ಪರಿಸ್ಥಿತಿಯಲ್ಲೂ ನಾಯಿಗಳಿಗೆ ಆಹಾರ ಕೊಡುವ ಮೂಲಕ ಮೂಕ ಪ್ರಾಣಿಗಳ ಹಸಿವಿನ ವೇದನೆಯನ್ನು ನೀಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಜೀತು ಬಾಯ್ ತಂಡ ಬರುವುದನ್ನೇ ನಾಯಿಗಳು ಕಾದು ಕೊಂಡು ಕೂತಿರುತ್ತವೆ. ಬಂದ ಕೂಡಲೇ ಹೊಟ್ಟೆ ತುಂಬಾ ತಿಂದು ಬಾಲ ಅಲ್ಲಾಡಿಸಿ ಒಂದು ಸಲಾಂ ಹೇಳುತ್ತವೆ. ಬಡಿಸಿದ ಊಟ ಮುಗಿಸುವ ವರೆಗೂ ಜೀತುಬಾಯ್ ತಂಡ ಕೂಡ ಎಲ್ಲೂ ಹೋಗಲ್ಲ. ಅವು ಊಟ ಮುಗಿಸಿ ಹೋಗುವವರೆಗೂ ಕಾಯುತ್ತಾರೆ. ಆನಂತರ ಮನೆಗೆ ಹೋಗುತ್ತಾರೆ. ಸರದಿ ಪ್ರಕಾರ ಐವರು ಜೈನ ಸಮುದಾಯದ ಯುವಕರು ಈ ಸೇವೆ ಮಾಡಿಕೊಂಡು ಬರುತ್ತಿದ್ದಾರೆ.
ಹೈಕೋರ್ಟ್ ನಲ್ಲಿ ಪಾರಿವಾಳಗಳ ಅರ್ಭಟ
ಪ್ರೆಸ್ ಕ್ಲಬ್ಗೆ ಹೊಗುವ ಹಾದಿಯಲ್ಲಿರುವ ಬಾರ್ ಕೌನ್ಸಿಲ್ ಬಳಿ ಹೋದರೆ ಸಾಕು ಸಾವಿರಾರು ಪಾರಿವಾಳಗಳು ರೆಕ್ಕೆ ಬಡಿಯುತ್ತಾ ಕೂತಿರುತ್ತವೆ. ಆ ಪಾರಿವಾಳಗಳೇ ಹೈಕೋರ್ಟ್ ನ ಅಂದವನ್ನು ನೋಡುಗರಿಗೆ ಮತ್ತಷ್ಟು ಮುದ ನೀಡುತ್ತವೆ. ಆದರೆ ಅವು ಆಹಾರಕ್ಕಾಗಿ ಪರದಾಡುವ ಹಸಿವು ಮಾತ್ರ ಯಾರಿಗೂ ಕಾಣಲ್ಲ. ಅಷ್ಟೊಂದು ಪಾರಿವಾಳಗಳು ಈ ಕಾಂಕ್ರಿಟ್ ಕಾಡಿನಲ್ಲಿ ಎಲ್ಲೆಲ್ಲೋ ಹೋಗಿ ಊಟ ಸಂಪಾದನೆ ಮಾಡುವುದು ಕಷ್ಟಕರ ಕೆಲಸವೇ.
ಜೀತುಬಾಯ್ ತಂಡ ಚೀಲಗಟ್ಟಲೆ ಕಾಳು ತಂದು ಇಲ್ಲಿ ಸುರಿಯುತ್ತದೆ. ಸುತ್ತಮುತ್ತಲಿನ ಎಲ್ಲಾ ಪಾರಿವಾಳಗಳು ಆಹಾರ ಸೇವಿಸಿ ಗೂಡುಗಳಿಗೆ ಮರಳುತ್ತವೆ. ಇಲ್ಲವೇ ರೆಕ್ಕೆ ಬಡಿದುಕೊಂಡು ವಿಹರಿಸುತ್ತವೆ. ಈ ಹೃದಯ ಕಲುಕುವ ಸೇವೆಯ ದೃಶ್ಯಗಳು ಒನ್ ಇಂಡಿಯಾ ಕನ್ನಡ ಕ್ಯಾಮರಾದಲ್ಲಿ ಸೆರೆಯಾದವು. ಈ ಕುರಿತು ವಿಡಿಯೋ ಲಿಂಕ್ ಇಲ್ಲಿದೆ ನೋಡಿ.
ಮಂಕಿಗಳಿಗೂ ಹಾಲು
ಬೆಂಗಳೂರಿನಲ್ಲಿ ಕೋತಿಗಳು ಜೀವನ ಉಸಿರಾಡುವುದೇ ಕಷ್ಟಕರ. ಎಲ್ಲಿ ಹೋದರೂ ಕಾಂಕ್ರಿಟ್ ಕಟ್ಟಡಗಳೇ. ಯಾವುದೇ ಅಂಗಡಿಗೆ ಹೋಗಿ ಕದ್ದು ತಿನ್ನಲು ಕಷ್ಟದ ಸ್ಥಿತಿ. ಇನ್ನು ಕಬ್ಬನ್ ಪಾರ್ಕ್ ನಲ್ಲಿ ಯಾವ ಹಣ್ಣು- ಆಹಾರ ಸಿಗುವುದಿಲ್ಲ. ಈ ಮಂಗಗಳು ಜೈನ್ ಅನಿಮಲ್ ಕೇರ್ ಕಣ್ಣಿಗೆ ಬಿದ್ದೇ, ಅವುಗಳಿಗೂ ದಿನ ನಿತ್ಯ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಜೈನ್ ಅನಿಮಲ್ ಕೇರ್ ತಂಡ ಬರುವುದನ್ನೇ ಕಾದು ಕುಳಿತಿರುತ್ತವೆ.
ಅಂತೂ ಮನುಷ್ಯ ದಿನ ಪೂರ್ತಿ ದುಡಿದರೂ ಈ ಬೆಂಗಳೂರಿನಲ್ಲಿ ಜೀವನ ಮಾಡುವುದೇ ಕಷ್ಟ. ಇಂತಹ ಕಷ್ಟ ಸ್ಥಿತಿಯಲ್ಲಿ ಜೈನ್ ಅನಿಮಲ್ ಕೇರ್ ತಂಡ ದಶಕದಿಂದ ಮೂಕ ಪ್ರಾಣಿಗಳ ವೇದನೆಗೆ ಸ್ಪಂದಿಸಿದೆ. ಸದ್ದಿಲ್ಲದೇ ನಗರದ ಹೃದಯ ಭಾಗದಲ್ಲಿರುವ ಪ್ರಾಣಿ ಪಕ್ಷಿಗಳ ಸೇವೆ ಮಾಡುತ್ತಿದ್ದಾರೆ. ಮಾನವೀಯತೆ ಕಳೆದು ಹೋಗಿರುವ ಈ ದಿನಗಳಲ್ಲಿ ಇಂತಹ ಮೂಕ ಪ್ರಾಣಿಗಳ ಸೇವೆ ಮಾಡುತ್ತಿರುವ ಜೈನ್ ಅನಿಮಲ್ ಕೇರ್ ಸೇವೆ ಅಮೂಲ್ಯವಾದುದು ಅಲ್ಲವೇ ?