ಪರಪ್ಪನ ಜೈಲಲ್ಲಿ 'ಗಣ್ಯ'ರ ದಂಡು ಸೇರಿದ ಜಯಾ!
ಬೆಂಗಳೂರು, ಸೆ. 27 : ಹದಿನೆಂಟು ವರ್ಷಗಳ ಕಾನೂನು ಹೋರಾಟ ಕಂಡ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಅಂತೂ ಒಂದು ಹಂತ ಕಂಡಿದೆ. ಸಿಬಿಐ ವಿಶೇಷ ನ್ಯಾಯಾಲಯ ಅವರಿಗೆ ನಾಲ್ಕು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿರುವುದರಿಂದ ಅವರು ನಾಲ್ಕು ವರ್ಷಗಳ ಕಾಲ ಪರಪ್ಪನ ಅಗ್ರಹಾರದ ಕಂಬಿ ಎಣಿಸುವುದು ಗ್ಯಾರಂಟಿ.
ಮುದ್ದೆಗೆ ಹೆಸರಾಗಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ 1948ರಲ್ಲಿ ಜನಿಸಿದ ಜಯಲಲಿತಾ ಅವರು ಈಗ ಪರಪ್ಪನ ಅಗ್ರಹಾರದಲ್ಲಿ ರಾಗಿ ಬೀಸಬೇಕಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಅದಕ್ಕಿಂತಲೂ ಹೆಚ್ಚಿನ ವಿಪರ್ಯಾಸದ ಸಂಗತಿಯೆಂದರೆ, ಹಲವಾರು ಕುಖ್ಯಾತ ಅಪರಾಧಿಗಳೊಂದಿಗೆ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯಬೇಕಿರುವುದು.
ಜೈಲಧಿಕಾರಿಯಾದ ವಾಸು ಅವರು ಜಯಲಲಿತಾ ಅವರನ್ನು ಜೈಲಲ್ಲಿರುವ ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ. ಸಂಜೆ 7.30ಕ್ಕೆ ಅವರಿಗೆ ಕೈದಿ ನಂಬರ್ ನೀಡಲಾಗುವುದು. ಅವರನ್ನು ಎಲ್ಲರಂತೆ ಸಾಮಾನ್ಯ ಬಂದಿಖಾನೆಯಲ್ಲಿ ಇಡುವ ಬದಲು, ವಿಶೇಷ ಖಾನೆಯಲ್ಲಿ ಇಡಲಾಗುವುದು.
ಅವರು ಯಾವ್ಯಾವ ಕುಖ್ಯಾತ ಕ್ರಿಮಿನಲ್ ಗಳೊಂದಿಗೆ ಜಯಲಲಿತಾ ಪರಪ್ಪನ ಅಗ್ರಹಾರದ ಗಾಳಿ, ನೀರು ಕುಡಿದು ಮುದ್ದೆ ನುಂಗಬಹುದು ಮುಂದಿನ ಸ್ಲೈಡುಗಳಲ್ಲಿ ನೋಡಿರಿ. [ಜಯಾ ವಿರುದ್ಧದ ತೀರ್ಪು, ಸಂಪೂರ್ಣ ವರದಿ]
ಎಐಎಡಿಎಂಕೆ ಅಧಿನಾಯಕಿ ಜಯಲಲಿತಾ ಜಯರಾಂ
1991ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಕೇವಲ 3 ಕೋಟಿ ರು. ಆಸ್ತಿಯ ವಾರಸುದಾರರಾಗಿದ್ದ ಜಯಲಲಿತಾ 1996ರ ಹೊತ್ತಿಗೆ 66 ಕೋಟಿ 66 ಲಕ್ಷ ರು. ಆಸ್ತಿಯ ಒಡತಿಯಾಗಿದ್ದರು. ಆಗ ಅವರು ಪಡೆಯುತ್ತಿದ್ದುದು ಕೇವಲ 1 ರು. ಸಂಬಳ. ಇದೆಲ್ಲ ಅಕ್ರಮವಾಗಿ ಸಂಪಾದಿಸಿದ ಆಸ್ತಿ ಎಂದು ಸಾಬೀತಾದ ಕಾರಣ ಈಗ ಜೈಲು ಸೇರುವಂತಾಗಿದೆ.
ಅಕ್ರಮ ಗಣಿಗಾರಿಕೆಯ ಧಣಿ ಜನಾರ್ದನ ರೆಡ್ಡಿ
ಕರ್ನಾಟಕ ಮತ್ತು ಆಂಧ್ರದ ಗಡಿಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಬಂಧಿತರಾಗಿರುವ ಓಬಳಾಪುರಂ ಮೈನಿಂಗ್ ಕಂಪನಿಯ ಒಡೆಯ, ಕರ್ನಾಟಕದ ಮಾಜಿ ಆರೋಗ್ಯ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಈಗ ಪರಪ್ಪನ ಅಗ್ರಹಾರದಲ್ಲಿ ದಿನದೂಡುತ್ತಿದ್ದಾರೆ. 2011ರ ಸೆಪ್ಟೆಂಬರ್ 5ರಂದು ಬಳ್ಳಾರಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಮೊದಲಿಗೆ ಅವರನ್ನು ಆಂಧ್ರದ ಚಂಚಲಗೂಡ ಜೈಲಿನಲ್ಲಿ ಇಡಲಾಗಿತ್ತು.
ಛಾಪಾ ಕಾಗದ ವಂಚಕ ಅಬ್ದುಲ್ ಕರೀಂ ತೆಲಗಿ
ಭಾರತ ಕಂಡ ಬಹುದೊಡ್ಡ ಹಗರಣಗಳಲ್ಲಿ ಒಂದಾಗಿರುವ ಬಹುಕೋಟಿ ಛಾಪಾ ಕಾಗದ ಹಗರಣದ ರೂವಾರಿ, ಬೆಳಗಾವಿ ಜಿಲ್ಲೆಯ ಖಾನಾಪುರದವನಾದ ಅಬ್ದುಲ್ ಕರೀಂ ತೆಲಗಿ ಈಗ ಪರಪ್ಪನ ಅಗ್ರಹಾರದಲ್ಲಿ ಜೀವನದ ಅಂತಿಮ ಕ್ಷಣಗಳನ್ನು ಕಳೆಯುತ್ತಿದ್ದಾನೆ.
ಸರಣಿ ಅತ್ಯಾಚಾರಿ, ವಿಕೃತ ಕಾಮಿ ಸೈಕೋ ಜೈಶಂಕರ್
ಕರ್ನಾಟಕ ಮತ್ತು ತಮಿಳುನಾಡಿನ ಹತ್ತೊಂಬತ್ತಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಕೊಂದುಹಾಕಿದ್ದ ಸೈಕೋ, ವಿಕೃತ ಕಾಮಿ ಜೈಶಂಕರ್ ಕೂಡ ಇದೇ ಜೈಲಿನಲ್ಲಿ ಹಿಟ್ಟು ರುಬ್ಬುತ್ತಿದ್ದಾನೆ. ಕಳೆದ ವರ್ಷ ಇದೇ ತಿಂಗಳು ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾಗಿ ಆತಂಕ ಮೂಡಿಸಿದ್ದ. ಆದರೆ, ವಾರದ ನಂತರ ಮತ್ತೆ ಜೈಲಿನ ಬಳಿಯೇ ಸಿಕ್ಕಿಬಿದ್ದಿದ್ದ.
ಬೆಂಗಳೂರು ಸರಣಿ ಸ್ಫೋಟ ರೂವಾರಿ ಅಬ್ದುಲ್ ಮದನಿ
2008ರ ಬೆಂಗಳೂರು ಸರಣಿ ಸ್ಫೋಟದ ರೂವಾರಿ ಎಂಬ ಆರೋಪ ಹೊತ್ತಿರುವ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿಯ ನಾಯಕ ಅಬ್ದುಲ್ ನಾಸಿರ್ ಮದನಿ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಸದ್ಯಕ್ಕೆ ತಾತ್ಕಾಲಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಜಾಮೀನು ಮುಗಿದ ನಂತರ ಮತ್ತೆ ಜೈಲಿಗೆ ಬರಲೇಬೇಕು. [ಅಬ್ದುಲ್ ನಾಸಿರ್ ಮದನಿ ಯಾರು?]