ನಿರ್ಭಯ ಕೇಸ್: ಕೊಟ್ಟ ಮಾತು ಉಳಿಸಿಕೊಂಡ ಜಗ್ಗೇಶ್
''ಆ ಪಾಪಿಗಳ ನೇಣಿಗೇರಿಸಿದರೆ, ನಾನು ಕಲೆಯಿಂದ ದುಡಿದ 1 ಲಕ್ಷ ರೂಪಾಯಿಯನ್ನು ನಿಮಗೆ ದೇಣಿಗೆಯಾಗಿ ನೀಡುವೆ'' - ಹೀಗೆಂದು ಮೂರು ತಿಂಗಳ ಹಿಂದೆಯಷ್ಟೇ ನಟ ಜಗ್ಗೇಶ್ ಹೇಳಿದ್ದರು.
ಇಂದು (ಮಾರ್ಚ್ 20) ಬೆಳಗ್ಗೆ 5.30ಕ್ಕೆ ನಿರ್ಭಯ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲಾಗಿದೆ. ಪ್ರಕರಣದ ಅಪರಾಧಿಗಳಾದ ಮುಕೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಕುಮಾರ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ನನ್ನು ನೇಣಿಗೇರಿಸಲಾಯಿತು.
ಬಡತನಕ್ಕೆ ಮಿಡಿದ ನವರಸನಾಯಕನ ಮನ: ಹ್ಯಾಂಗ್ ಮ್ಯಾನ್ ಗೆ 1 ಲಕ್ಷ ನೆರವು
ನಿರ್ಭಯ ಪ್ರಕರಣದ ಅಪರಾಧಿಗಳನ್ನು ಗಲ್ಲುಗಂಬಕ್ಕೇರಿಸಿದ ಹ್ಯಾಂಗ್ ಮ್ಯಾನ್ ಉತ್ತರ ಪ್ರದೇಶ ಮೀರತ್ ಮೂಲದ ಪವನ್ ಜಲ್ಲಾದ್ ಗೆ ಬಿಜೆಪಿ ಮುಖಂಡ, ಕನ್ನಡ ಚಲನಚಿತ್ರ ನಟ, ನವರಸ ನಾಯಕ ಜಗ್ಗೇಶ್ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
|
ಇಂದು ಟ್ವೀಟ್ ಮಾಡಿದ್ದಾರೆ ಜಗ್ಗೇಶ್
''ಕೊಟ್ಟ ಮಾತಿನಂತೆ 1 ಲಕ್ಷ ರೂಪಾಯಿ ನಿರ್ಭಯ ಹಂತಕರ ಹ್ಯಾಂಗ್ ಮ್ಯಾನ್ ಗೆ ನನ್ನ ದೇಣಿಗೆ. ದೇವನೊಬ್ಬನಿರುವ ಅವ ಎಲ್ಲ ನೋಡುತ್ತಿರುವ! ಸತ್ಯದ ಹಾದಿಯಲ್ಲಿ ನಡೆದವಗೆ ಭಯವಿಲ್ಲಾ! ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪೊಲ್ಲಾ! ಈ ದಿನಕ್ಕೆ ಹಲ್ಲುಕಚ್ಚಿ ಎಂದು ಅಂತ್ಯ ದುಷ್ಟ ಕ್ರಿಮಿಗಳಿಗೆ ಎಂದು ಕಾಯುತ್ತಿದ್ದೆ! ಸುದ್ಧಿಕೇಳಲು ನಿದ್ರೆಮಾಡದೆ ಕಾದೆ!'' ಎಂದು ಜಗ್ಗೇಶ್ ಇವತ್ತು ಟ್ವೀಟ್ ಮಾಡಿದ್ದಾರೆ.
ಹ್ಯಾಂಗ್ ಮ್ಯಾನ್ ಗೆ ಜಗ್ಗೇಶ್ ನೆರವು
ಬಡತನದಲ್ಲಿ ಬೆಳೆದಿರುವ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್ ಗೆ ಜಗ್ಗೇಶ್ ಸಹಾಯ ಹಸ್ತ ಚಾಚಿದ್ದಾರೆ. ''ಅಪರಾಧಿಗಳನ್ನು ಗಲ್ಲಿಗೇರಿಸುವುದರಿಂದ ಸಿಗುವ ದುಡ್ಡಲ್ಲಿ ಮಗಳ ಮದುವೆ ಮಾಡುತ್ತೇನೆ'' ಎಂದು ಈ ಹಿಂದೆ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್ ಹೇಳಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ, ಪವನ್ ಜಲ್ಲಾದ್ ನೆರವಿಗೆ ಜಗ್ಗೇಶ್ ಧಾವಿಸಿದ್ದರು.
ಅಂದು ಟ್ವೀಟ್ ಮಾಡಿದ್ದ ಜಗ್ಗೇಶ್
''ಮಾನ್ಯರೇ ರಾಕ್ಷಸರ ಸಂಹಾರ ದೇವರ ನಿಯಮ! ಆ ಕಾರ್ಯದಿಂದ ಬರುವ ಹಣದಲ್ಲಿ ಮಗಳ ಮದುವೆ ಮಾಡುವೆ ಎಂದ ನಿಮ್ಮ ಅನಿಸಿಕೆ ಕೇಳಿ ಭಾವುಕನಾದೆ. ನೀವೆ ಆ ಪಾಪಿಗಳ ನೇಣಿಗೇರಿಸಿದರೆ, ನಾನು ಕಲೆಯಿಂದ ದುಡಿದ 1ಲಕ್ಷ ರೂ, ನಿಮಗೆ ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ. ಇಂದೆ ಆ ಹಣ ನಿಮಗಾಗಿ ಮೀಸಲಿಟ್ಟೆ. ಇದು ದುರುಳ ನಿಗ್ರಹ ದೇವರ ಸೇವೆ. ಹರಿಓಂ. ಎಂದು'' ಮೂರು ತಿಂಗಳ ಹಿಂದೆ ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದರು. ಕೊಟ್ಟ ಮಾತಿನಂತೆ ಇವತ್ತು ಜಗ್ಗೇಶ್ ನಡೆದುಕೊಂಡಿದ್ದಾರೆ.
ಹ್ಯಾಂಗ್ ಮ್ಯಾನ್ ಗೆ ಸಂಭಾವನೆ
ಒಬ್ಬ ಅಪರಾಧಿಗೆ 20 ಸಾವಿರ ರೂಪಾಯಿಯಂತೆ ನಾಲ್ವರು ಅಪರಾಧಿಗಳನ್ನು ಹ್ಯಾಂಗ್ ಮಾಡಿದ್ದಕ್ಕೆ ಸಂಭಾವನೆಯಾಗಿ ಪವನ್ ಜಲ್ಲಾದ್ ಗೆ 80 ಸಾವಿರ ರೂಪಾಯಿ ಸಿಗಲಿದೆ.