ಸಿನಿಮಾ ಡೈಲಾಗ್ಗಳೊಂದಿಗೆ ಮತ ಯಾಚಿಸಿದ ಜಗ್ಗೇಶ್
ಬೆಂಗಳೂರು, ನವೆಂಬರ್ 28: ಸಿನಿಮೀಯ ರೀತಿಯಲ್ಲಿ ನಟ ಜಗ್ಗೇಶ್ ಮತ ಯಾಚನೆ ಮಾಡಿದ್ದಾರೆ. ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ಟಿ ಸೋಮಶೇಖರ್ ಅವರ ಪರವಾಗಿ ಜಗ್ಗೇಶ್ ಮತ ಯಾಚನೆ ಮಾಡಿದರು.
''ಸೋಂಬೇರಿತನ ಬಿಟ್ಟು ಡಿಸೆಂಬರ್ ಐದರಂದು ಮತಗಟ್ಟೆಗೆ ಬನ್ನಿ. ಸೋಮಶೇಖರ್ ಗೆ ಕಮಲದ ಗುರ್ತಿಗೆ ಮತ ನೀಡಿ'' ಎಂದು ಮತಯಾಚನೆ ಮಾಡಿದ್ದಾರೆ.
ಯಶವಂತಪುರದಲ್ಲಿ ಉಪಚುನಾವಣಾ ಪ್ರಚಾರಕ್ಕಿಳಿದ ಜಗ್ಗೇಶ್
ಈ ಕ್ಷೇತ್ರ ಬಿಜೆಪಿಯ ಕ್ಷೇತ್ರವಾಗಿದ್ದಾಗ ಎಲ್ಲರಿಗೂ ಖುಷಿ ಇತ್ತು. ಆಮೇಲೆ ಎಲ್ಲರಿಗೂ ವೇದನೆಯಾಗಿತ್ತು.ನಿಮ್ಮ ನೋವು ದೇವರಿಗೆ ಮುಟ್ಟಿದೆ.ಹಾಗಾಗಿ ಸೋಮಶೇಖರ್ ನಮ್ಮ ಜೊತೆಗೆ ಬಂದಿದ್ದಾರೆ ಎಲ್ಲ ಒಗ್ಗಟ್ಟಾಗಿದ್ದೇವೆ ಎಂದರು.
ಜೆಡಿಎಸ್ ನ ಜವರಾಯಿಗೌಡಗೆ ವಯಸ್ಸಾಗಿದೆ, ಯಾರೋ ಹೇಳಿಕೊಟ್ಟರು ಅಂತಾ ಇದ್ದಕ್ಕಿದ್ದಂತೆ ರೋಷಾವೇಶ ಬಂದು ಸೋಮಶೇಖರ್ ವಿರುದ್ದ ಡೈಲಾಗ್ ಹೊಡೆದಿದ್ದಾರೆ.
ಅತ್ತು ಸೆಂಟಿಮೆಂಟ್ ಕ್ರಿಯೇಟ್ ಮಾಡುತ್ತಿದ್ದಾರೆ.ಅಳುವವರನ್ನು ಕಂಡ್ರೆ ಜನ ಇಷ್ಟ ಪಡಲ್ಲ.ಜನರಿಗೆ ನಗಿಸುವವರು ಬೇಕು.ಕಣ್ಣೀರು ಒರೆಸುವವರು ಬೇಕು.ಆ ಕೆಲಸ ಯಡಿಯೂರಪ್ಪ ಮಾಡುತ್ತಾರೆ.
ಜನ ಯಾವುದೇ ಸೋಮಾರಿತನ ಇಲ್ಲದೇ ಮತ ಚಲಾಯಿಸಿ,ತಂದೆ ಸಮಾನರಾದ ಯಡಿಯೂರಪ್ಪ ಸರ್ಕಾರ ಬಲಿಷ್ಟವಾಗಬೇಕು,ಯಶವಂತಪುರ ಕ್ಷೇತ್ರದಲ್ಲಿ ಹಿಂದೆ ಬಿಜೆಪಿ ಇತ್ತು.ಆದರೆ ಜನರಿಗೆ ಬಿಜೆಪಿ ಇಲ್ಲ ಅನ್ನೋ ವೇದನೆ ಇತ್ತು.ಆ ವೇದನೆ ದೇವರಿಗೆ ತಲುಪಿದೆ, ಅದಕ್ಕಾಗಿ ಚುನಾವಣೆ ಬಂದಿದೆ.
ಜೆಡಿಎಸ್ ಜವರಾಯಗೌಡ ಚುನಾವಣೆ ಇದ್ದಾಗ ಬರ್ತಾರೆ,ಕೆಲವರು ರೋಷ ತುಂಬಿ ಕಳಿಸಿದರೆ ಮತ್ತೆ ಕಾಣಿಸಿಕೊಳ್ತಾರೆ ಅಷ್ಟೇ ಎಂದು ಹೇಳಿದರು.