ನರಭಕ್ಷಕ ಹುಲಿ ಕಾಡಿಗೆ ಬಿಟ್ಟಿದ್ದು ಏಕೆ : ಶೆಟ್ಟರ್ ಗರಂ
ಬೆಂಗಳೂರು, ಡಿ. 27: ಬೆಳಗಾವಿಯಲ್ಲಿ ಗೃಹಿಣಿಯೋರ್ವಳನ್ನು ಬಲಿ ಪಡೆದಿರುವ ಹುಲಿಯನ್ನು ಜನವಸತಿ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟಿರುವುದಕ್ಕೆ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹುಲಿ ಆಗಲೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲ್ಲಂದೂರು ಅರಣ್ಯ ಪ್ರದೇಶದಲ್ಲಿ ಓರ್ವ ಮಹಿಳೆಯನ್ನು ಹತ್ಯೆ ಮಾಡಿತ್ತು. ಆಗ ಹುಲಿ ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಖಾನಾಪುರ ಅರಣ್ಯಕ್ಕೆ ತಂದು ಬಿಟ್ಟರು. ಇದರಿಂದ ಮತ್ತೋರ್ವ ಮಹಿಳೆ ಬಲಿಯಾಗಬೇಕಾಯಿತು ಎಂದು ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. [ಚಿಕ್ಕಮಗಳೂರು ಹುಲಿಗೆ ಬೆಳಗಾವಿ ಮಹಿಳೆ ಬಲಿ]
ಈ ಹುಲಿಗೆ ರೇಡಿಯೋ ಕಾಲರ್ ಐಡಿ ಹಾಕಲಾಗಿತ್ತು ಎಂದು ಅರಣ್ಯ ಇಲಾಖೆ ತಿಳಿಸಿದೆ. ಆದರೆ, ಈಗ ರೇಡಿಯೋ ಕಾಲರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಹುಲಿ ಪತ್ತೆ ಶೀಘ್ರ ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದೆ. ಆದ್ದರಿಂದ ಇಲ್ಲಿ ತಪ್ಪು ಯಾರದ್ದು ಎಂಬುದರ ಕುರಿತು ಸಿಐಡಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆ ಕ್ರಮ ಸರಿಯಲ್ಲ : ನರಭಕ್ಷಕ ಹುಲಿಯನ್ನು ಬೆಳಗಾವಿಗೆ ಸ್ಥಳಾಂತರಿಸಿದ್ದೇ ಸರಿಯಲ್ಲ ಎಂದು ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್ ಆರೋಪಿಸಿದ್ದಾರೆ. [ನರಭಕ್ಷಕ ಹುಲಿ ಇನ್ನೂ ಸಿಕ್ಕಿಲ್ಲ]
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹುಲಿಗೆ ಮನುಷ್ಯರ ಭಯವಿರಲಿಲ್ಲ. ಇಂತಹ ಹುಲಿಯನ್ನು ಪುನಃ ಕಾಡಿಗೆ ಬಿಟ್ಟಿದ್ದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಈ ಹುಲಿ ತಾಯಿಯಿಂದ ಬೇಟೆ ವಿದ್ಯೆ ಕಲಿತಿಲ್ಲ. ಆದ್ದರಿಂದ ಕೇವಲ 2 ವರ್ಷ ವಯಸ್ಸಿನಲ್ಲಿಯೇ ಜಾನುವಾರು ಹಾಗೂ ಮನುಷ್ಯರ ಮೇಲೆ ದಾಳಿ ನಡೆಸುತ್ತಿದೆ. ಆದ್ದರಿಂದ ಈ ಹುಲಿಯನ್ನು ಹತ್ಯೆ ಮಾಡುವುದೇ ಸರಿಯಾದ ಮಾರ್ಗ ಎಂದು ಉಲ್ಲಾಸ್ ಕಾರಂತ್ ಹೇಳಿದ್ದಾರೆ.