50 ಲಕ್ಷ ರೂ.ಆನೆದಂತ, 45 ಲಕ್ಷ ರೂ.ಬ್ರೌನ್ ಶುಗರ್ ವಶ
ಬೆಂಗಳೂರು, ಜು.1: ಆನೆಯ ದಂತಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ತಮಿಳುನಾಡು ಮೂಲದ ಇಬ್ಬರು ದಂತಚೋರರನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಗಿರಿ ಡೆಂಕಣಿಕೋಟೆ ತಾಲೂಕಿನ ರಾಮದೊಡ್ಡಿ ಗ್ರಾಮದವರಾದ ಶಿವರಾಜು ಬಿನ್ ದ್ಯಾವಪ್ಪ(25), ಶಿವಸ್ವಾಮಿ ಅಲಿಯಾಸ್ ಸ್ವಾಮಿ ಬಿನ್ ರುದ್ರಪ್ಪ(28) ಬಂಧಿತ ಆರೋಪಿಗಳು. ಬಂಧಿತರಿಂದ 50 ಲಕ್ಷ ಬೆಲೆ ಬಾಳುವ ಎರಡು ಆನೆಯ ದಂತಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.[ವಶಪಡಿಸಿಕೊಂಡ ಆನೆ ದಂತವನ್ನು ಪೊಲೀಸರು ಏನು ಮಾಡುತ್ತಾರೆ?]
ಬನಶಂಕರಿ 3ನೇ ಹಂತದ ಆಂಜನೇಯ ನಗರದ ಬನಶಂಕರಿ ಸ್ಟೀಲ್ ಬಳಿ ಅಕ್ರಮವಾಗಿ ಆನೆಯ ದಂತಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಸುಳಿವನ್ನು ಆಧಾರಿಸಿ ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡು ಗೋಣಿಚಿಲದಲ್ಲಿ ಮಾರಾಟ ಮಾಡಲು ತಂದಿದ್ದ ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾರೆ.[ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಆನೆ ದಂತವನ್ನು ಏನು ಮಾಡುತ್ತದೆ?]
ಕೂಲಿ ಕಾರ್ಮಿಕರಾಗಿರುವ ಆರೋಪಿಗಳು ಒಂದು ತಿಂಗಳ ಹಿಂದೆ ತಮಿಳುನಾಡಿನ ಜೋಳಗೆರೆ ಅರಣ್ಯದಿಂದ ಆನೆಗಳಿಂದ ದಂತಗಳನ್ನು ಅಕ್ರಮವಾಗಿ ಕಿತ್ತುಕೊಂಡು ಬಂದು ಮಾರಾಟ ಮಾಡಲು ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಸಿ.ಕೆ. ಅಚ್ಚುಕಟ್ಟು ಪೊಲೀಸರು 45 ಲಕ್ಷ ರೂ. ಮೌಲ್ಯದ 450 ಗ್ರಾಂ ತೂಕದ ಬ್ರೌನ್ ಶುಗರ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯ ಆನಂದೂರು ಗ್ರಾಮದ ಪ್ರಸ್ತುತ ಗಿರಿನಗರದ ನಿವಾಸಿಯಾಗಿರುವ ಮಹೇಶ್ ಬಂಧಿತ ಆರೋಪಿ. ಬನಶಂಕರಿ 3ನೇ ಹಂತದ ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಬಳಿಯಿರುವ ಆಟೋ ಸ್ಟಾಂಡ್ನಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ಬ್ರೌನ್ ಶುಗರ್ ಅನ್ನು ಅಕ್ರಮವಾಗಿ ತಂದು ಮಾರಾಟ ಮಾಡುತ್ತಿದ್ದಾನೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಕುಮಾರ ಮತ್ತು ದಿಲೀಪ ಎಂಬವರಿಂದ ಬ್ರೌನ್ ಶುಗರನ್ನು ಖರೀದಿಸಿ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಗೆ ಮಹೇಶ್ ಮಾರಾಟ ಮಾಡುತ್ತಿದ್ದ. ಈ ಜಾಲದಲ್ಲಿ ಮತ್ತಷ್ಟು ಜನರು ಶಾಮೀಲಾಗಿರುವ ಶಂಕೆಯಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಬಿ.ಕೆ.ಶೇಖರ್ ನೇತೃತ್ವದ ಪೊಲೀಸರ ತಂಡ ಈ ಎರಡು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.