ಕುತೂಹಲ ಮೂಡಿಸಿದ ವಿಜಯೇಂದ್ರ, ಸಿದ್ದರಾಮಯ್ಯ ಭೇಟಿ!
Recommended Video
ಬೆಂಗಳೂರು, ಫೆ. 22: ಮಂತ್ರಿಸ್ಥಾನ ಸಿಗದ ಅತೃಪ್ತ ಬಿಜೆಪಿ ಶಾಸಕರು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು ಎಂಬುದರ ಬೆನ್ನಲ್ಲೆ ಸಿಎಂ ಪುತ್ರ ವಿಜಯೇಂದ್ರ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ. ಹೌದು, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದು ಬಿಜೆಪಿ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಮತ್ತೆ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿದ ಸಿಎಂ ಪುತ್ರ ವಿಜಯೇಂದ್ರ
ಮೊನ್ನೆ ಸಚಿವ ಸಂಪುಟ ವಿಸ್ತರಣೆ ಹಿಂದಿನ ದಿನವೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ವಿಜಯೇಂದ್ರ ಅವರು ಭೇಟಿ ಮಾಡಿದ್ದರು ಎಂಬ ಮಾತು ಬಿಜೆಪಿ ವಲಯದಲ್ಲಿಯೇ ಹರಿದಾಡಿತ್ತು. ಇದೀಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದ ಅಭಿನಂದನಾ ಕಾರ್ಯಕ್ರಮಕ್ಕೆ ಆಹ್ವಾನಿಸುವ ನೆಪದಲ್ಲಿ ಸಿದ್ದರಾಮಯ್ಯ ಅವರನ್ನು ವಿಜಯೇಂದ್ರ ಅವರು ಭೇಟಿ ಮಾಡಿರುವುದು ಬೇರೆಯದ್ದೇ ಮುನ್ಸೂಚನೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಸರ್ಕಾರಕ್ಕೆ ಸಂಕಷ್ಟ ಬಂದರೆ ಸಿದ್ದರಾಮಯ್ಯ ಅವರು ತಟಸ್ಥರಾಗಿ ಉಳಿಯುತ್ತಾರೆ. ಯಾವುದೇ ಕಾರಣಕ್ಕೂ ಜೆಡಿಎಸ್ಗೆ ನಿಲುವಿಗೆ ಬೆಂಬಲ ಕೊಡಲ್ಲ ಎನ್ನುವುದು ಇದಕ್ಕೆ ಕಾರಣ.
ಮಾಜಿ ಸಿಎಂ ಎಚ್ ಡಿ ಕೆ ಭೇಟಿ ಮಾಡಿದ್ದ ಬಿಜೆಪಿ ಅತೃಪ್ತ ಶಾಸಕರು?
ರಾಜ್ಯ ಸಂಪುಟ ವಿಸ್ತರಣೆ ಬೆನ್ನಲ್ಲೆ ಮಂತ್ರಿಸ್ಥಾನ ಸಿಗದ ಬಿಜೆಪಿ ಹಿರಿಯ ಶಾಸಕರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಸೇರಿದಂತೆ ಹಲವರು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಆದರೆ ಸರ್ಕಾರ ಕೆಡವಲು ನನ್ನನ್ನು ಕರೆಯಬೇಡಿ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿತ್ತು.
ಅಸಮಾಧಾನಗೊಂಡಿರುವ ಬಿಜೆಪಿ ಹಿರಿಯ ಶಾಸಕರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ವಿಜಯೇಂದ್ರ ಮೂಲಕ ಅಭಯ ಹಸ್ತ ಚಾಚಿದ್ದಾರೆ.
ಕುಮಾರಕೃಪಾ ರಸ್ತೆಯ ನಿವಾಸದಲ್ಲಿ ಸಿದ್ದರಾಮಯ್ಯ ಭೇಟಿ ಮಾಡಿದ ವಿಜಯೇಂದ್ರ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬ ಇದೇ ಫೆಬ್ರವರಿ 27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಇದೇ ಸಮಾರಂಭಕ್ಕೆ ಆಹ್ವಾನಿಸಲು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ವಿಜಯೇಂದ್ರ ಭೇಟಿ ಮಾಡಿದ್ದಾರೆ. ಜೊತೆಗೆ ಸರ್ಕಾರದ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ಬಿಜೆಪಿ ಅತೃಪ್ತ ಅಸಮಾಧಿನಿತ ಶಾಸಕರು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು. ಸರ್ಕಾರ ಕೆಡವಲು ನನ್ನ ಸಹಾಯ ಕೇಳಬೇಡಿ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದರು ಎನ್ನಲಾಗಿತ್ತು. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗು ವಿಜಯೇಂದ್ರ ಅವರ ಭೇಟಿಗೆ ಮಹತ್ವ ಬಂದಿದೆ.
ಅರ್ಧ ಸಂಪುಟ ನಿಮ್ಮದೆ ಬಿಡಿ ಎಂದಿದ್ದ ಬಿಜೆಪಿ ಶಾಸಕ ಯತ್ನಾಳ್
ಇನ್ನು ವಿಧಾನಸಭೆಯಲ್ಲಿ ನೂತನ ಸಚಿವರನ್ನು ಸಿಎಂ ಯಡಿಯೂರಪ್ಪ ಸದನಕ್ಕೆ ಪರಿಚಯ ಮಾಡಿಕೊಡುತ್ತಿದ್ದಾಗ, ಸಿದ್ದರಾಮಯ್ಯ ಅವರು ಅವರೆಲ್ಲ ಇಲ್ಲಿದ್ದವರೇ ಬಿಡಿ ಎಂದಿದ್ದರು.
ಆಗ ಮಂತ್ರಿಸ್ಥಾನದ ಪ್ರಬಲ ಆಕಾಂಕ್ಷಿ, ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅರ್ಧ ಸಂಪುಟ ನಿಮ್ಮದೆ ಇದೇ ಬಿಡಿ ಎಂದು ಸಿದ್ಧರಾಮಯ್ಯ ಆಪ್ತರೇ ಸಂಪುಟದಲ್ಲಿ ತುಂಬಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದರು.
'ದಣಿವರಿಯದ ಧೀಮಂತ ನಾಯಕ' ಯಡಿಯೂರಪ್ಪ
ಇದೇ ಫೆಬ್ರವರಿ 27ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 78ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 'ದಣಿವರಿಯದ ಧಿಮಂತ ನಾಯಕ' ಎಂಬ ಹೆಸರಿನಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಈ ಸಮಾರಂಭಕ್ಕೆ ಅಧಿಕೃತವಾಗಿ ಸಿದ್ಧರಾಮಯ್ಯ ಅವರನ್ನು ಆಹ್ವಾನಿಸಲು ವಿಜಯೇಂದ್ರ ಭೇಟಿ ಮಾಡಿದ್ದಾರೆ.
ಯಡಿಯೂರಪ್ಪ @ 78 ಕಾರ್ಯಕ್ರಮವನ್ನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದು, ಮಾಜಿ ಸಿಎಂ ಎಸ್ ಎಂ ಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ.