ಡಿಕೆ ಶಿವಕುಮಾರ್ ವಿರುದ್ಧ ಹೈಕೋರ್ಟ್ ಮೊರೆ ಹೋದ ಆದಾಯ ತೆರಿಗೆ ಇಲಾಖೆ
ಬೆಂಗಳೂರು, ಮಾರ್ಚ್ 9: ಆದಾಯ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ ಹೈಕೋರ್ಟ್ ಮೊರೆ ಹೋಗಿದೆ.
ಡಿ.ಕೆ. ಶಿವಕುಮಾರ್ ಅವರ ವಿರುದ್ಧದ ತೆರಿಗೆ ವಂಚನೆಗಳಿಗೆ ಸಂಬಂಧಿಸಿ ಮೂರು ಪ್ರಕರಣಗಳನ್ನು ವಿಶೇಷ ನ್ಯಾಯಾಲಯ ಮೊನ್ನೆ ವಜಾಗೊಳಿಸಿದ ಬೆನ್ನಲ್ಲೇ ಕೆಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಐಟಿ ಇಲಾಖೆ ಹೈಕೋರ್ಟ್ ಮೊರೆ ಹೋಗಿದೆ.
ಐಟಿ ದಾಳಿ : ಮೂರು ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಖುಲಾಸೆ
ಐಟಿ ಇಲಾಖೆಯು ಸಚಿವ ಶಿವಕುಮಾರ್ ಅವರ ವಿರುದ್ಧ ಹೈಕೋರ್ಟ್ ನಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. 2019 ರ ಫೆಬ್ರವರಿ 28ರ ತೀರ್ಪಿನ ವಿರುದ್ಧ ಮೂರು ಪ್ರತ್ಯೇಕ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
ಐಟಿ ಅಧಿಕಾರಿಗಳು ಸಲ್ಲಿಸಿರುವ ದೂರಿನ ಅನುಸಾರ 2015-16ರ ಅವಧಿಗೆ 3.14 ಕೋಟಿ ರೂ ತೆರಿಗೆ ಮೌಲ್ಯಮಾಪನವನ್ನು ಡಿಕೆಶಿ ತಪ್ಪಿಸಿದ್ದಾರೆ ಎಂದು ಹೇಳಲಾಗಿದೆ. 2016-17ರಲ್ಲಿ ಅಂದಾಜು ವರ್ಷಕ್ಕೆ 2.56 ಕೋಟಿ ರೂ. , 2017-18ರ ಅಂದಾಜು 7.08 ಕೋಟಿ ರೂ. ತೆರಿಗೆ ಮೌಲ್ಯಮಾಪನ ತಪ್ಪಿಸಲಾಗಿದೆ ಎಂದೂ ಸೇರಿಸಲಾಗಿದೆ.