ಐಟಿ ಕಾರಿಡಾರ್ ಯೋಜನೆ ಅಕ್ರಮ: ಮೂರು ಪಕ್ಷದ ನಾಯಕರಿಗೆ ಆಪತ್ತು ಕಟ್ಟಿಟ್ಟ ಬುತ್ತಿ!
ಬೆಂಗಳೂರು, ಜು. 06: ದೇವರ ಬಿಸನಹಳ್ಳಿ - ಬೆಳ್ಳಂದೂರು ನಡುವೆ ತಲೆಯೆತ್ತಿರುವ ಐಟಿ ಕಾರಿಡಾರ್ ಅಕ್ರಮ ಸಮರ್ಥ ತನಿಖೆ ನಡೆದಿದ್ದೇ ಆದಲ್ಲಿ ರಾಜ್ಯದ ಹಲವು ಜನ ಪ್ರತಿನಿಧಿಗಳ ಪಾಲಿಗೆ ಮಗ್ಗುಲ ಮುಳ್ಳಾಗಲಿದೆ. ಕೇವಲ ಬಿ.ಎಸ್. ಯಡಿಯೂರಪ್ಪ ಮಾತ್ರವಲ್ಲ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕಟ್ಟಾ ಸುಬ್ರಮಣ್ಯನಾಯ್ಡು, ಆರ್.ವಿ. ದೇಶಪಾಂಡೆ, ಮಾಜಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಕೆಐಎಡಿಬಿ ಅಧಿಕಾರಿಗಳಿಗೆ ಉರುಳಾಗಲಿದೆ.
ಐಟಿ ಕಾರಿಡಾರ್ ಯೋಜನೆ ಡಿ- ನೋಟಿಫಿಕೇಷನ್ ಅಕ್ರಮಕ್ಕೆ ಸಂಬಂಧಿಸಿಂತೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಸಿ. ವರದಿಯನ್ನು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಅಸಮರ್ಥ, ಲೋಪ ಇರುವ ಸಿ. ವರದಿಯನ್ನು ತಿಸ್ಕರಿಸಿರುವ ನ್ಯಾಯಾಲಯ ಪ್ರಕರಣ ಕುರಿತು ಸಮರ್ಥ ತನಿಖೆ ನಡೆಸುವಂತೆ ಆದೇಶಿಸಿದೆ. ಈ ಆದೇಶದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ದೂರುದಾರ ವಾಸುದೇವರೆಡ್ಡಿ ಈ ಡಿ ನೋಟಿಪಿಕೇಷನ್ ಪ್ರಕರಣವನ್ನು ನಿಷ್ಠಾವಂತ ಹಿರಿಯ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್ ಅವರಿಂದ ನಡೆಸುವಂತೆ ಒತ್ತಾಯಿಸಿದ್ದಾರೆ.
ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಇದೀಗ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ಅವರ ಡಿ ನೋಟಿಫಿಕೇಷನ್ ಅಕ್ರಮ ಕುರಿತು ಮರು ತನಿಖೆ ನಡೆಸಬೇಕಾಗಿದೆ. ಈ ಹಿಂದೆ ತನಿಖೆ ನಡೆಸಿ ಹತ್ತು ಸಾವಿರ ಪುಟಗಳ ಸಿ ವರದಿಯನ್ನು ತನಿಖೆ ನಡೆಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಮುಂದೆ ಓದಿ...
ಸೋನಿಯಾ ನಾರಂಗ್ರಿಂದ ತನಿಖೆ ನಡೆಸಿ
ಈ ಪ್ರಕರಣ ಯಡಿಯೂರಪ್ಪ ಪಾಲಿಗೆ ಮಾತ್ರವಲ್ಲ, ಮೂರು ಪಕ್ಷದ ರಾಜಕೀಯ ನಾಯಕರಿಗೆ ಕಂಟಕವಾಗಲಿದೆ. ಈ ಕುರಿತು ಒನ್ಇಂಡಿಯಾ ಕನ್ನಡ ಜತೆ ಮಾತನಾಡಿದ ದೂರುದಾರ ವಿ.ಕೆ. ವಾಸುದೇವರೆಡ್ಡಿ ಅವರು, ಲೋಕಾಯುಕ್ತ ಪೊಲೀಸರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಕ್ಷ ಅಧಿಕಾರಿಯನ್ನು ನೇಮಿಸಿ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೆ ಇದೇ ರೀತಿಯ ನಿರುಪಯುಕ್ತ ವರದಿಯನ್ನು ಸಲ್ಲಿಸಿದರೆ, ನಾನು ಕೋರ್ಟ್ ಮೊರೆ ಹೋಗುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ರಿಯಲ್ ಎಸ್ಟೇಟ್ ವಹಿವಾಟು
ಬೆಳ್ಳಂದೂರು- ದೇವರಬಿಸನಹಳ್ಳಿ ಸುತ್ತಮುತ್ತಲಿನ ರೈತರ ಭೂಮಿಯನ್ನು ಐಟಿ ಕಾರಿಡಾರ್ ನಿರ್ಮಾಣಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಭೂ ಸ್ವಾಧೀನ ಪಡಿಸಿಕೊಂಡಿತ್ತು. 650 ಎಕರೆ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದ ಕೆಐಎಡಿಬಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳಗಿ 150 ಎಕರೆಯನ್ನು ಸ್ವಾಧೀನದಿಂದ ಆರಂಭದಲ್ಲಿಯೇ ಕೈ ಬಿಟ್ಟಿದ್ದರು. ಆನಂತರ 434 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.
ಈ ಭೂಮಿಯನ್ನು ಐಟಿ ಕಂಪನಿಗಳ ನಿರ್ಮಾಣಕ್ಕೆ ಇನ್ಫೋಸಿಸ್ ಸೇರಿದಂತೆ 20 ಕಂಪನಿಗಳಿಗೆ ಭೂ ಮಂಜೂರು ಮಾಡಿತ್ತು. ಇನ್ಫೋಸಿಸ್ ಸಂಸ್ಥೆಯವರು ಲಂಚ ಕೊಡಲಿಲ್ಲ ಎಂಬ ಕಾರಣಕ್ಕೆ ಮಂಜೂರಾಗಿದ್ದ 126 ಜಮೀನಿನ ಪೈಕಿ 17 ಎಕರೆಯನ್ನು ರೈತರ ಹೆಸರಿನಲ್ಲಿ ಅರ್ಜಿ ಸಲ್ಲಿಸಿ ಡಿ ನೋಟಿಫೈ ಮಾಡಲಾಗಿತ್ತು. ವಿಶೇಷ ವೆಂದರೆ ಡಿ ನೋಟಿಫೈ ಮಾಡಿದ ಭೂಮಿಯಲ್ಲಿ ರೈತರೇ ಪ್ರಾಜೆಕ್ಟ್ ಮಾಡಲು ಕೆಐಎಡಿಬಿ ಭೂ ಮಂಜೂರಾತಿ ಮಾಡಿದ್ದು, ಈ ಜಾಗದಲ್ಲಿ ಇದೀಗ ಬೇರೆ ಪ್ರತಿಷ್ಠಿತ ಕಂಪನಿ ತಲೆಯೆತ್ತಿದೆ. ರೈತರ ಹೆಸರಿನಲ್ಲಿ ಸುಳ್ಳು ಅರ್ಜಿ ಸ್ವೀಕರಿಸಿ ಅಂತಿಮ ಅಧಿಸೂಚನೆಗೆ ಒಳಪಟ್ಟಿದ್ದ ಭೂಮಿಯನ್ನು ಡಿ ನೋಟಿಫೈ ಮಾಡಿ ಸ್ವಂತ ಲಾಭ ಮಾಡಿಕೊಂಡಿದ್ದಾರೆ ಎಂದು ದೂರುದಾರ ವಾಸುದೇವ ರೆಡ್ಡಿ "ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ರದ್ದು ಕೊರಿದ್ದ ಅರ್ಜಿ ವಜಾ ಮಾಡಿದ್ದ ಹೈಕೋರ್ಟ್
ಐಟಿ ಕಾರಿಡಾರ್ ಯೋಜನೆ ಸಂಬಂಧ ಯಡಿಯೂರಪ್ಪ ಅವರ ವಿರುದ್ಧ ಡಿ ನೋಟಿಫಿಕೇಷನ್ ಅಕ್ರಮ ಸಂಬಂಧ ವಾಸುದೇವ ರೆಡ್ಡಿ 2013 ರಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಈ ಕುರಿತು ತನಿಖೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಆದೇಶಿಸಿತ್ತು. ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶದಂತೆ 2015 ರಲ್ಲಿ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಪ್ರಕರಣದ ರದ್ದು ಕೋರಿ ಯಡಿಯೂರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು. ಯಡಿಯೂರಪ್ಪ ಅವರ ಅರ್ಜಿ ತಿರಸ್ಕರಿಸಿದ್ದ ಹೈಕೋರ್ಟ್, ವಿಶೇಷ ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸುವಂತೆ ಆದೇಶಿಸಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, 10 ಸಾವಿರ ಪುಟಗಳ ಸಿ ವರದಿಯನ್ನು ಸಲ್ಲಿಸಿದ್ದರು. ಲೋಕಾಯುಕ್ತ ಪೊಲೀಸರ ತನಿಖಾ ವರದಿಯನ್ನು ಪ್ರಶ್ನಿಸಿ ವಾಸುದೇವರೆಡ್ಡಿ ಅವರು ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಹಿರಿಯ ವಕೀಲ ಕೆ.ವಿ. ಧನಂಜಯ್ ವಾದ ಮಂಡಿಸಿದ್ದರು. ವಾದ ಆಲಿಸಿದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮರು ತನಿಖೆಗೆ ಆದೇಶಿಸಿದೆ. ಹೀಗಾಗಿ ಮರು ತನಿಖೆಯನ್ನು ಸಮರ್ಥ ತನಿಖಾಧಿಕಾರಿಯಿಂದ ನಡೆಸಬೇಕು ಎಂದು ದೂರುದಾರ ವಾಸುದೇವರೆಡ್ಡಿ ಮನವಿ ಮಾಡಿದ್ದಾರೆ.
Recommended Video
ಎಲ್ಲಾ ಮಿಕಗಳು ಸಿಗುತ್ತವೆ
ಐಟಿ ಕಾರಿಡಾರ್ ಎಂಬುದು ನೆಪಕ್ಕೆ ಪಾತ್ರ. ಮೂರು ಪಾರ್ಟಿಯ ರಾಜಕಾರಣಿಗಳು ಕೆಐಎಡಿಬಿ ಹೆಸರಿನಲ್ಲಿ ರೈತರ ಜಮೀನು ಕಸಿದುಕೊಂಡು ಉನ್ನತ ಕಂಪನಿಗಳಿಗೆ ಮಾರಾಟ ಮಾಡಿದ ರಿಯಲ್ ಎಸ್ಟೇಟ್ ಕಾರಿಡಾರ್ ಯೋಜನೆ. ಐಟಿ ಕಾರಿಡಾರ್ ಯೋಜನೆ ಡಿ ನೋಟಿಫಿಕೇಷನ್ ಅಕ್ರಮವನ್ನು ಸಮರ್ಥವಾಗಿ ತನಿಖೆ ನಡೆಸಿದರೆ, ಯಡಿಯೂರಪ್ಪ ಮಾತ್ರವಲ್ಲ, ಆರ್.ವಿ. ದೇಶಪಾಂಡೆ, ಕಟ್ಟಾ ಸುಬ್ರಮಣ್ಯನಾಯ್ಡು, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಕೆ.ಜೆ. ಜಾರ್ಜ್ ಅನೇಕರ ಪಾಲಿಗೆ ಉರುಳಾಗಲಿದೆ. ಮೂರು ಪಕ್ಷದ ನಾಯಕರು ಐಟಿ ಕಾರಿಡಾರ್ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ದೂರುದಾರ ವಾಸುದೇವರೆಡ್ಡಿ ಆರೋಪಿಸಿದ್ದಾರೆ.
430 ಎಕರೆ ಭೂ ಸ್ವಾಧೀನ ಪ್ರಾಥಮಿಕ ಅಧಿಸೂಚನೆಯಿಂದ ಹಿಡಿದು ಅಂತಿಮ ಅಧಿಸೂಚನೆ ಹೊರಗೆ ಸಾಕಷ್ಟು ಅಕ್ರಮಗಳು ನಡೆದಿವೆ. ಸುಪ್ರೀಂ ಬಿಲ್ಡ್ ಕ್ಯಾಪ್ ಗೆ ಸೇಲ್ ಡೀಡ್ ಬರುವ ಮೊದಲೇ 17 ಎಕರೆಯನ್ನು 200 ಕೋಟಿಗೆ ಮಾರಾಟ ಮಾಡಿದ್ದಾರೆ. ರಾಯಲ್ ಪ್ರಾಗ್ನೆನ್ಸ್, ವಿಕಾಸ್ ಟೆಲಿಕಾಂ ಕಂಪನಿಗಳು ಐಟಿ ಕಾರಿಡಾರ್ ಯೋಜನೆ ಹೆಸರಿನಲ್ಲಿ ಸಚಿವರು ಮತ್ತು ಮಾಜಿ ಸಿಎಂಗಳು ರಿಯಲ್ ಎಸ್ಟೇಟ್ ದಂಧೆ ಮಾಡಿಕೊಂಡಿದ್ದಾರೆ. ಭೂಮಿ ಪಡೆದ ಇಪ್ಪತ್ತು ಕಂಪನಿಗಳ ಪೈಕಿ ಇನ್ಫೋಸಿಸ್ ಬಿಟ್ಟರೆ ಒಂದೇ ಒಂದು ಕಂಪನಿ ಕೂಡ ಐಟಿ ಕೆಲಸ ಮಾಡುತ್ತಿಲ್ಲ. ಎಲ್ಲವೂ ಲೀಸ್, ಸಬ್ ಲೀಸ್ಗೆ ಕೊಟ್ಟು ಕೈ ಬದಲಾವಣೆ ಮಾಡಿಕೊಂಡಿದ್ದಾರೆ. ಈ ಕುರಿತು ಸಮರ್ಥ ತನಿಖೆ ಮಾಡಿದರೆ ಮೂರು ಪಕ್ಷಗಳ ಪ್ರಭಾವಿ ನಾಯಕರಿಗೆ ಕಂಟಕವಾಗಲಿದೆ ಎಂದು ವಾಸುದೇವರೆಡ್ಡಿ ತಿಳಿಸಿದ್ದಾರೆ.