2020ರಲ್ಲಿ ಮತ್ತಷ್ಟು ಸಾಧನೆ ಮಾಡಲಿದೆ ಇಸ್ರೋ: ಒಂದಲ್ಲಾ ಎರಡಲ್ಲಾ, 25 ಯೋಜನೆಗಳು!
Recommended Video
ಬೆಂಗಳೂರು, ಜನವರಿ 1: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) 2020ಕ್ಕೆ 25 ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಗಗನಯಾನ ಹಾಗೂ ಚಂದ್ರಯಾನ-3 ಕೂಡ ಸೇರಿವೆ.
2019ರಲ್ಲಿ ಚಂದ್ರಲೋಕದ ದಕ್ಷಿಣ ಧ್ರುವಕ್ಕೆ ನೌಕೆಯನ್ನು ಕಳುಹಿಸುವ ಮಹತ್ವದ ಯೋಜನೆಯಲ್ಲಿ ಭಾಗಶಃ ಯಶಸ್ವಿಯಾಗಿದ್ದ ಇಸ್ರೋ, ಒಂದು ವರ್ಷದ ಅಂತರದಲ್ಲಿಯೇ ಮತ್ತೊಂದು ನೌಕೆಯ ರವಾನೆಯ ಹೊಸ ಅಧ್ಯಾಯ ಆರಂಭಿಸಿದೆ. ಚಂದ್ರನ ಅಂಗಳದಲ್ಲಿ ಲ್ಯಾಂಡರ್ಅನ್ನು ಸುಗಮವಾಗಿ ಇಳಿಸುವ ಇನ್ನೊಂದು ಪ್ರಯತ್ನ ನಡೆಸಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಇಸ್ರೋ ಅಧ್ಯಕ್ಷ ಕೆ. ಶಿವನ್, 2020ರಲ್ಲಿ ಬಾಹ್ಯಾಕಾಶ ಕೇಂದ್ರ ನಡೆಸಲಿರುವ ಪ್ರಮುಖ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಈ ವರ್ಷ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಲಿದೆ ಎಂದು ವಿವರಿಸಿದರು.
ನಾಲ್ವರು ಗಗನಯಾನಿಗಳ ಆಯ್ಕೆ
ಭಾರತದ ಮೊದಲ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನ ಯೋಜನೆಗೆ ನಾಲ್ವರು ಗಗನಯಾನಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ. ಜನವರಿ ಮೂರನೇ ವಾರದಿಂದ ಅವರಿಗೆ ರಷ್ಯಾದಲ್ಲಿ ತರಬೇತಿ ಆರಂಭಿಸಲಾಗುತ್ತದೆ. ಈ ವರ್ಷವೇ ಗಗನಯಾನ ಯೋಜನೆಗೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. 2019ರಲ್ಲಿ ಗಗನಯಾನ ಯೋಜನೆಯ ಬಗ್ಗೆ ಉತ್ತಮ ಪ್ರಗತಿ ನಡೆದಿದೆ. ಅನೇಕ ವಿನ್ಯಾಸ ಪ್ರಕ್ರಿಯೆಗಳು ಮುಗಿದಿವೆ ಎಂದು ಕೆ. ಶಿವನ್ ತಿಳಿಸಿದರು.
ಇಸ್ರೋದ ಚಂದ್ರಯಾನ-3ರಿಂದ ಯೋಜನಾ ನಿರ್ದೇಶಕಿ ಹೊರಕ್ಕೆ
ಈ ವರ್ಷವೇ ಚಂದ್ರಯಾನ-3 ಅನುಮಾನ
ಚಂದ್ರನಲ್ಲಿಗೆ ನೌಕೆ ಕಳುಹಿಸುವ ಚಂದ್ರಯಾನ-3ಗೆ ಸರ್ಕಾರದಿಂದ ಅನುಮೋದನೆ ದೊರಕಿದೆ. ಅದಕ್ಕೆ ಸಿದ್ಧತೆ ಕೂಡ ನಡೆದಿದೆ. ಗಗನಯಾನ ಮತ್ತು ಚಂದ್ರಯಾನದ ಕಾರ್ಯಗಳು ಏಕಕಾಲಕ್ಕೆ ನಡೆಯಲಿದೆ. ಆದರೆ ನೌಕೆಯ ಉಡಾವಣೆ 2021ಕ್ಕೆ ಮುಂದೂಡುವ ಸಾಧ್ಯತೆ ಇದೆ. ಈ ಯೋಜನೆ ಕೂಡ ಒಂದು ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯುಲ್ ಅನ್ನು ಒಳಗೊಂಡಿರಲಿದೆ. ಈ ಯೋಜನೆಗೆ 250 ಕೋಟಿ ರೂ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ.
ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಚಿತ್ರ ಸೆರೆ ಹಿಡಿದ ನಾಸಾ
ವಿಕ್ರಂ ಲ್ಯಾಂಡರ್ ಚಿತ್ರ ಬಹಿರಂಗಪಡಿಸುವುದಿಲ್ಲ
ಚಂದ್ರಯಾನ-2 ಯೋಜನೆಯು ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುಗಮವಾಗಿ ಇಳಿಯುವಲ್ಲಿ ವಿಫಲವಾಗಿತ್ತು. ಚೆನ್ನೈನ ಟೆಕಿ ಷಣ್ಮುಗ ಸುಬ್ರಮಣಿಯನ್ ಸಹಾಯದಿಂದ ನಾಸಾ ಇತ್ತೀಚೆಗೆ ವಿಕ್ರಂ ಲ್ಯಾಂಡರ್ ಪತನಗೊಂಡ ಸ್ಥಳದ ಚಿತ್ರವನ್ನು ಪತ್ತೆಹಚ್ಚಿ ಅದರ ಅವಶೇಷಗಳ ಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಪತನಗೊಂಡ ಲ್ಯಾಂಡರ್ನ ಚಿತ್ರವನ್ನು ಬಿಡುಗಡೆ ಮಾಡದೆ ಇರುವುದು ಇಸ್ರೋದ ನೀತಿಗಳಲ್ಲಿ ಒಂದು ಎಂದ ಶಿವನ್, ಅದು ಪತನಗೊಂಡ ಸ್ಥಳ ಮತ್ತು ಅದು ಎಲ್ಲಿದೆ ಎಂಬುದು ನಮಗೆ ತಿಳಿದಿದೆ ಎಂದು ಹೇಳಿದರು.
ತೂತುಕುಡಿಯಲ್ಲಿ ಉಡಾವಣಾ ಕೇಂದ್ರ
ಇಸ್ರೋ ತನ್ನ ಮೂಲಸೌಕರ್ಯ ವ್ಯವಸ್ಥೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಅದಕ್ಕಾಗಿ ತಮಿಳುನಾಡಿನ ತೂತುಕುಡಿ ಸಮೀಪ ಹೊಸ ಉಡ್ಡಯನ ಕೇಂದ್ರ ಸ್ಥಾಪನೆಗೆ ತಯಾರಿ ನಡೆಸಿದೆ. ಜಾಗ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದ ಉಡ್ಡಯನ ಘಟಕದ ಜತೆಗೆ ಮತ್ತೊಂದು ಘಟಕವನ್ನು ತೂತುಕುಡಿಯಲ್ಲಿ ಆರಂಭಿಸಲಾಗುತ್ತಿದೆ. ಈ ಜಾಗದಿಂದ ಸಣ್ಣ ಉಪಗ್ರಹ ಉಡಾವಣಾ ವಾಹನಗಳನ್ನು ರವಾನಿಸಲು ಹೆಚ್ಚು ಅನುಕೂಲವಾಗಲಿದೆ. ಭವಿಷ್ಯದಲ್ಲಿ ಇಲ್ಲಿಂದ ಬೃಹತ್ ಯೋಜನೆಗಳು ಉಡಾವಣೆಗೊಳ್ಳಲಿವೆ ಎಂದರು.
ಈ ವರ್ಷ 25 ಯೋಜನೆಗಳು
ಈ ವರ್ಷ ಒಟ್ಟು 25 ಯೋಜನೆಗಳಿಗೆ ಇಸ್ರೋ ಉದ್ದೇಶಿಸಿದೆ. ಇವುಗಳಲ್ಲಿ ಕೆಲವು 2019ರಲ್ಲಿಯೇ ನಡೆಯಬೇಕಿತ್ತು. ಆದರೆ ಅವುಗಳ ಕಾರ್ಯ ಪೂರ್ಣಗೊಳ್ಳಲಿಲ್ಲ. ಈ ವರ್ಷದ ಮಾರ್ಚ್ ಅಂತ್ಯದೊಳಗೆ ಯೋಜನೆಗಳ ಕಾರ್ಯ ಮುಗಿಯಲಿದೆ ಎಂದು ಶಿವನ್ ತಿಳಿಸಿದರು. 2020-21ನೇ ಸಾಲಿಗೆ ಬಾಹ್ಯಾಕಾಶ ಯೋಜನೆಗಳಿಗಾಗಿ ಇಸ್ರೋ ಕೇಂದ್ರ ಸರ್ಕಾರದಿಂದ 14,000 ಕೋಟಿ ರೂ. ಬಜೆಟ್ ಅನುದಾನಕ್ಕೆ ಬೇಡಿಕೆ ಇರಿಸಿದೆ.