ಇಸ್ರೋ ವಿಜ್ಞಾನಿ ನಂದಿನಿಹರಿನಾಥ್ ಗೆ ಮಹಿಳಾ ರತ್ನ ಪ್ರಶಸ್ತಿ
ಇಸ್ರೋದ ವಿಜ್ಞಾನಿ ನಂದಿನಿಹರಿನಾಥ್ ಅವರನ್ನು ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಮಹಿಳಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಬೆಂಗಳೂರು, ಏಪ್ರಿಲ್ 13: ಇಸ್ರೋದ ಮಂಗಳಯಾನ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿ ನಂದಿನಿ ಹರಿನಾಥ್ ಅವರನ್ನು ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ನಿಂದ ಸನ್ಮಾನಿಸಲಾಯಿತು. ಮಹಿಳಾ ರತ್ನ ಪ್ರಶಸ್ತಿ ನೀಡಿ, ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪರಿಷತ್ ಅಧ್ಯಕ್ಷ ಮಾಯಣ್ಣ, ಕರ್ನಾಟಕದ ಹೆಮ್ಮೆ ವಿಜ್ಞಾನಿ ನಂದಿನಿಹರಿನಾಥ್ ಅವರ ಸಾಧನೆಯ ಬಗ್ಗೆ ಕೊಂಡಾಡಿದರು. ಇಸ್ರೋದ ಮಂಗಳಯಾನ ಯೋಜನೆಯಲ್ಲಿ ಆಕೆ ವಹಿಸಿದ ಪಾತ್ರ ಮಹತ್ತರವಾದದ್ದು. ಅಂಥವರಿಗೆ ಮಹಿಳಾ ರತ್ನ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.[ಇಸ್ರೋ ವಿಶ್ವದಾಖಲೆ ಹಿಂದೆ ಇರುವ 8 ಮಹಿಳೆಯರಿಗೊಂದು ಸಲಾಂ]
ಝಾನ್ಸಿರಾಣಿ ಲಕ್ಷ್ಮಿ ಬಾಯಿ, ಓಬವ್ವ ಹೀಗೆ ದೇಶಕ್ಕೆ ಸೇವೆ ಸಲ್ಲಿಸಿದ ಹಲವು ಮಹಿಳೆಯರ ನಿದರ್ಶನ ನಮ್ಮ ಮುಂದಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತವಾದ ಸೇವೆ ಸಲ್ಲಿಸುವ ಮೂಲಕ ಇತರರಿಗೆ ಮಾದರಿಯಾಗಿರುವ ನಂದಿನಿ ಅವರನ್ನು ಸನ್ಮಾನಿಸುತ್ತಿರುವುದು ನನ್ನ ಪುಣ್ಯ ಎಂದು ಅವರು ಹೇಳಿದರು.
ಕುಟುಂಬ ಹಾಗೂ ಉದ್ಯೋಗ ಎರಡನ್ನೂ ಸಂಭಾಳಿಸಬೇಕಾದ ಸವಾಲನ್ನು ಎದುರಿಸಿ ಗೆದ್ದ ನಂದಿನಿ ಅಂಥವರ ಅಗತ್ಯ ಈ ಸಮಾಜಕ್ಕೆ ಇದೆ. ಈ ರೀತಿ ಸಾಧನೆಗೆ ಮುಂದಾಗುವ ಮಹಿಳೆಯರ ಬೆಂಬಲಕ್ಕೆ ನಾವು ಸದಾ ಇರುತ್ತೇವೆ ಎಂದರು.