ಇಸ್ರೋದ ಚಂದ್ರಯಾನ-3ರಿಂದ ಯೋಜನಾ ನಿರ್ದೇಶಕಿ ಹೊರಕ್ಕೆ
ಬೆಂಗಳೂರು, ಡಿಸೆಂಬರ್ 18: ಚಂದ್ರಯಾನ-2ರ ನಿರೀಕ್ಷಿತ ಯೋಜನೆಗಳು ಕೈಗೂಡದೆ ಇಸ್ರೋ ನಿರಾಶೆ ಅನುಭವಿಸಿದ ಬೆನ್ನಲ್ಲೇ, ಯೋಜನೆಯ ನಿರ್ದೇಶಕಿ ಎಂ. ವನಿತಾ ಅವರನ್ನು ಮುಂದಿನ ಚಂದ್ರಯಾನ ಯೋಜನೆಯಿಂದ ಕೈಬಿಡಲಾಗಿದೆ.
ಚಂದ್ರಯಾನ-2ರ ಸಂಪೂರ್ಣ ವ್ಯವಸ್ಥೆಗಳ ಜವಾಬ್ದಾರಿ ವಹಿಸಿದ್ದ ಎಂ. ವನಿತಾ ಅವರ ಜಾಗಕ್ಕೆ ಇಸ್ರೋ ಕೇಂದ್ರ ಕಚೇರಿಯ ವೀರಮುತ್ತುವೇಲು ಅವರ ಸ್ಥಾನಕ್ಕೆ ನಿಯೋಜನೆ ಮಾಡಲಾಗಿದೆ. ಚಂದ್ರಯಾನ ಯೋಜನೆಯ ಮುಖ್ಯಸ್ಥರಾಗಿ ರಿತು ಕರಿಧಾಲ್ ಮುಂದುವರಿಯಲಿದ್ದಾರೆ.
ಐದು ವರ್ಷದಲ್ಲಿ 1,245 ಕೋಟಿ ರೂ. ಆದಾಯ ಸಂಗ್ರಹಿಸಿದ ಇಸ್ರೋ
ವನಿತಾ ಅವರನ್ನು ಪೇಲೋಡ್ ಡೇಟಾ ಮ್ಯಾನೇಜ್ಮೆಂಟ್ ಆಂಡ್ ಸ್ಪೇಸ್ ಅಸ್ಟ್ರಾಲಜಿ ಏರಿಯಾ (ಪಿಡಿಎಂಎಸ್ಎ) ಉಪ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಈ ಬದಲಾವಣೆಗೆ ಇಸ್ರೋ ಕಾರಣ ತಿಳಿಸಿಲ್ಲ. ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ -3 ಮುಂದಿನ ವರ್ಷ ನವೆಂಬರ್ ತಿಂಗಳಿನಲ್ಲಿ ಉಡಾವಣೆಯಾಗುವ ನಿರೀಕ್ಷೆಯಿದೆ. ಅದರ ಪ್ರಕ್ರಿಯೆಯನ್ನು ನ.14ರಿಂದ ಪ್ರಾರಂಭಿಸಲಾಗಿದೆ. ಈ ಪ್ರಕ್ರಿಯೆ ಶುರುವಾದ ನಂತರ ವನಿತಾ ಅವರ ವರ್ಗಾವಣೆ ಆದೇಶ ಹೊರಡಿಸಲಾಗಿದೆ.
ವೀರಮುತ್ತುವೇಲು ಅವರನ್ನು ಯೋಜನಾ ನಿರ್ವಹಣೆ ತಂಡದ ಮುಖ್ಯಸ್ಥರನ್ನಾಗಿ ಸಹ ನಿಯೋಜನೆ ಮಾಡಲಾಗಿದೆ. ಯೋಜನೆಯ ಎಲ್ಲ ಉಪ ನಿರ್ದೇಶಕರು ಇದರ ಸದಸ್ಯರಾಗಿರುತ್ತಾರೆ.
10 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ-ಸಿ 48 ಉಡಾವಣೆ ಯಶಸ್ವಿ
ಇಸ್ರೋದ ಚಂದ್ರಯಾನ -2 ಯೋಜನೆ ಭಾಗಶಃ ಯಶಸ್ವಿಯಾಗಿತ್ತು. ಅದರ ಆರ್ಬಿಟರ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಅಧ್ಯಯನ ನಡೆಸಬೇಕಿದ್ದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕೊನೆಯ ಹಂತದಲ್ಲಿ ಸಂಪರ್ಕ ಕಳೆದುಕೊಂಡು ಮೇಲ್ಮೈಗೆ ಅಪ್ಪಳಿಸಿತ್ತು.
ಭಾರತ ಎದೆಗುಂದಬೇಕಿಲ್ಲ
ಬಾಹ್ಯಾಕಾಶ ಯೋಜನೆಗಳು ವಿಫಲವಾಗುವುದು ಅನಿರೀಕ್ಷಿತವೇನಲ್ಲ. ಭಾರತದ ಚಂದ್ರಯಾನ-2ರ ಯೋಜನೆ ವಿಫಲವಾಗಿರುವುದರಿಂದ ಕಂಗೆಡಬೇಕಿಲ್ಲ ಎಂದು ನಾಸಾದ ಜೆಟ್ ಪ್ರೊಪುಲ್ಷನ್ ಲ್ಯಾಬೋರೇಟರಿಯ ಆವಿಷ್ಕಾರ ಮತ್ತು ತಂತ್ರಜ್ಞಾನ ಅಧಿಕಾರಿ ಟಾಮ್ ಸೊಡರ್ಸ್ಟಮ್ ಧೈರ್ಯ ತುಂಬಿದ್ದಾರೆ.
ಕಷ್ಟದಾಯಕ ಕೆಲಸ
ರೋವರ್ಅನ್ನು ಚಂದ್ರನ ಮೇಲೆ ಇಳಿಸುವುದು ಅತ್ಯಂತ ಕ್ಲಿಷ್ಟದಾಯಕ ಕೆಲಸ. ಈ ಸಂದರ್ಭದಲ್ಲಿ ಪ್ರತಿ ಕ್ಷಣದಲ್ಲಿಯೂ ನಾವು ಉದ್ವೇಗಕ್ಕೆ ಒಳಗಾಗುತ್ತೇವೆ. ಅದು ಅಲ್ಲಿ ನಾವು ಅಂದುಕೊಂಡಂತೆ ಕೆಲಸ ಮಾಡುತ್ತದೆಯೇ ಎಂಬುದು ನಮಗೆ ತಿಳಿದಿರುವುದಿಲ್ಲ. ಒಂದೇ ಒಂದು ಸಣ್ಣ ಸಂಗತಿ ತಪ್ಪಾದರೂ ಇಡೀ ಯೋಜನೆ ವಿಫಲವಾಗಿಬಿಡುತ್ತದೆ ಎಂದು ಹೇಳಿದರು.
ಗಗನಕ್ಕೇರಿದ ಕಾರ್ಟೋಸ್ಯಾಟ್-3 ಉಪಗ್ರಹ: ಇಸ್ರೋದ ಹೊಸ ದಾಖಲೆ
ಸೋತು ಸೋತು ಗೆದ್ದೆವು
ಚಂದ್ರಯಾನ-2 ಯೋಜನೆಯಲ್ಲಿನ ವೈಫಲ್ಯದ ಬಗ್ಗೆ ಭಾರತ ತೀರಾ ಬೇಸರಪಟ್ಟುಕೊಳ್ಳಬೇಕಿಲ್ಲ. ನಾಸಾ ಕೂಡ ಯಶಸ್ಸು ಕಾಣುವ ಮೊದಲು ಹಲವು ಸೋಲುಗಳನ್ನು ಕಂಡಿತ್ತು. ನಾವು ಒಂದೆರಡು ರೋವರ್ಗಳನ್ನು ಕಳೆದುಕೊಂಡ ಮಾತ್ರಕ್ಕೆ ಎದೆಗುಂದಿರಲಿಲ್ಲ. ಚಂದ್ರನಲ್ಲಿಗೆ ಹೋಗುವ ಪ್ರಯತ್ನದಲ್ಲಿ ಪದೇ ಪದೇ ಸೋಲು ಕಂಡಿದ್ದೆವು. ಆದರೆ ಕೊನೆಗೆ ಅದು ಸಫಲವಾಯಿತು ಎಂದು ಹೇಳಿದರು.
ನಾವು ಜತೆಗೂಡಿ ಕೆಲಸ ಮಾಡಬೇಕು
ವಿಜ್ಞಾನ ಮತ್ತು ತಂತ್ರಜ್ಞಾನ ಜಗತ್ತಿನಾದ್ಯಂತ ಇರುವ ನೈಜ ರಾಯಭಾರಿ. ಅಂತಿಮವಾಗಿ ಭೂಮಿ ನಮ್ಮದು. ಮತ್ತು ಒಂದು ದಿನ ನಾವು ಹೊಸ ಭೂಮಿಯನ್ನು ಕಂಡುಕೊಳ್ಳಬೇಕಾಗಬಹುದು. ಆ ಕಾರ್ಯವನ್ನು ಮಾಡಲು ಇಡೀ ಭೂಮಿಯ ಎಲ್ಲ ದೇಶಗಳು ಜತೆಯಾಗಿ ಸೇರಿಕೊಳ್ಳಬೇಕು. ಏಕೆಂದರೆ ಅದು ಅತಿ ದೊಡ್ಡ ಕೆಲಸ ಎಂದರು.