ಜಿಹಾದಿ ಗ್ಯಾಂಗ್ ಸೆರೆ: ಐಸಿಸ್ ಕಮಾಂಡರ್ ವಿದೇಶಕ್ಕೆ ಪರಾರಿ?
ಬೆಂಗಳೂರು, ಜನವರಿ 14: ಜಿಹಾದಿ ಗ್ಯಾಂಗ್ ಬಂಧನದ ಬೆನ್ನಲ್ಲೇ ಭಾವಿ ಐಸಿಸ್ ಕಮಾಂಡರ್ ವಿದೇಶಕ್ಕೆ ಪರಾರಿಯಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಐಸಿಸ್ ಸೇನೆ ಕಟ್ಟುವ ತಂಡದ ಕಮಾಂಡರ್ ಎನ್ನಲಾದ ಬೆಂಗಳೂರಿನ ಸದ್ದುಗುಂಟೆಪಾಳ್ಯದ ಮೆಹಬೂಬ್ ಪಾಷ ಪತ್ತೆಗೆ ಸಿಸಿಬಿ ತನ್ನ ಕಾರ್ಯಾಚರಣೆ ತೀವ್ರಗೊಳಿಸಿದೆ. ಆತ ದೇಶದ ಗಡಿ ದಾಟಿರುವ ಬಗ್ಗೆ ಬಲವಾದ ಅನುಮಾನ ವ್ಯಕ್ತವಾಗಿದೆ.
ದೆಹಲಿ ಮತ್ತು ಬೆಂಗಳೂರಿನಲ್ಲಿದ್ದ ಜಿಹಾದಿಗಳು ಸೆರೆ
ದೆಹಲಿಯಲ್ಲಿ ತಮಿಳುನಾಡು ಮೂಲದ ಜಿಹಾದಿ ಗ್ಯಾಂಗ್ ಪ್ರಮುಖ ನಾಯಕ ಖಾಜಾಮೊಹಿದ್ದೀನ್ ಹಾಗೂ ಬೆಂಗಳೂರಿನಲ್ಲಿ ಆತನ ಸಹಚರರು ಸೆರೆಯಾಗಿದ್ದರು.ಈ ವಿಚಾರಣೆ ವೇಳೆ ಕರ್ನಾಟಕದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಹೊಸ ಸದಸ್ಯರ ನೇಮಕಾತಿ ಹೊಣೆಗಾರಿಕೆಯನ್ನು ಮೆಹಬೂಬ್ ಪಾಷ ಹೊತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.
ಉಗ್ರರ ಜೊತೆ ಸಿಕ್ಕಿಬಿದ್ದ ಡಿವೈಎಸ್ಪಿ: ಕೆಲವು ಆತಂಕಕಾರಿ ಮಾಹಿತಿ
ಸಹಚರರ ಬಂಧನ ವಿಷಯ ತಿಳಿದು ಪರಾರಿ
ತನ್ನ ಸಹಚರರ ಬಂಧನ ವಿಷಯ ತಿಳಿದ ತಕ್ಷಣವೇ ಬೆಂಗಳೂರು ತೊರೆದಿರುವ ಆತನಿಗಾಗಿ ಹೊರ ರಾಜ್ಯಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಗೊತ್ತಾಗಿದೆ. ಕೇಂದ್ರ ಗುಪ್ತಚರ , ತಮಿಳುನಾಡು ಹಾಗೂ ಸಿಸಿಬಿ ಪೊಲೀಸರು, ಮೆಹಬೂಬ್ ಪಾಷ ಬೆನ್ನು ಹತ್ತಿದ್ದಾರೆ.
ಮೆಹಬೂಬ್ ಪಾಷಾ ಪ್ರಮುಖ ನೇತಾರ
ಜಿಹಾದಿ ಗ್ಯಾಂಗ್ನಲ್ಲಿ ಖಾಜಾ ಮೊಹಿದ್ದೀನ್ ಬಳಿಕ ಮೆಹಬೂಬ್ ಪಾಷಾ ಪ್ರಮುಖ ನೇತಾರನಾಗಿದ್ದು, ಆತನಿಗೆ ಬೆಂಗಳೂರು ಮಾತ್ರವಲ್ಲದೆ ಚಾಮರಾಜನಗರ, ಕೋಲಾರ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಸಂಪರ್ಕ ಜಾಲವಿದೆ. ಖಾಜಾ ಬಂಧನದ ವಿಷಯ ತಿಳಿದ ಬಳಿಕ ಜಾಗ್ರತನಾಗಿರುವ ಮೆಹಬೂಬ್ , ಐಸಿಸ್ ಹಿತೈಷಿಗಳ ಸಹಕಾರ ಪಡೆದು ದೇಶದ ಗಡಿ ದಾಟಿರಬಹುದು ಎಂದು ಹೇಳಲಾಗುತ್ತಿದೆ.
ಬೆಂಗಳೂರಲ್ಲಿ ಇಬ್ಬರು ವಶಕ್ಕೆ
ಬೆಂಗಳೂರಲ್ಲಿ ಮತ್ತೆ ಮೆಹಬೂಬ್ ಪಾಷಾ ಇಬ್ಬರು ಸಹಚರನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೆಹಬೂಬ್ ಪಾಷಾ ಜೊತೆ ಅವರು ನಿರಂತರ ಸಂಪರ್ಕದಲ್ಲಿದ್ದರು. ಹಾಗೆಯೇ ಪಾಷ ನೇತೃತ್ವದಲ್ಲಿ ನಡೆದ ಸಭೆಗಳಲ್ಲಿ ಕೂಡ ಇಬ್ಬರು ಪಾಲ್ಗೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸದ್ದುಗುಂಟೆ ಪಾಳ್ಯ ಸಮೀಪ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.