ಐಎಂಎ ಹಗರಣ: ರೋಷನ್ ಬೇಗ್ ಗೆ ರಾಜ್ಯಪಾಲ ವಜುಭಾಯಿ ರಕ್ಷಣೆ?
ಬೆಂಗಳೂರು, ಸೆ. 15: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮನ್ಸೂರ್ ಖಾನ್ ಹೆಸರಿಸಿರುವ ಮಾಜಿ ಸಚಿವ, ಶಿವಾಜಿನಗರ ಶಾಸಕ ರೋಷನ್ ಬೇಗ್ ರಕ್ಷಣೆಗೆ ರಾಜ್ಯಪಾಲರು ನಿಂತಿದ್ದಾರೆಯೇ? ಎಂಬ ಪ್ರಶ್ನೆ ಕೇಳಿ ಬಂದಿದೆ.
ಸದರಿ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ರಕ್ಷಣೆ ನೀಡುವಂತೆ ಎಸ್ಐಟಿ ತಂಡ ಮುಖ್ಯಸ್ಥ ರವಿಕಾಂತೇಗೌಡರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಬರೆದಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ರಾಜ್ಯಪಾಲರಿಂದ ಎಸ್ಐಟಿ ಮುಖ್ಯಸ್ಥ ಬಿ.ಆರ್ ರವಿಕಾಂತೇಗೌಡರಿಗೆ ಪತ್ರದ ಮೂಲಕ ಸೂಚನೆ ಸಿಕ್ಕಿರುವುದರಿಂದ ಬೇಗ್ ವಿಚಾರಣೆ, ಬಂಧನ ಸಾಧ್ಯವಾಗಿಲ್ಲ ಎನ್ನಲಾಗಿದೆ.
ರೋಷನ್ ಬೇಗ್ ಪಾಲಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲಾ ಬಂದ್!
ಪತ್ರದಲ್ಲಿದ್ದೇನಿದೆ?: ಮಾಜಿ ಸಚಿವ ರೋಷನ್ ಬೇಗ್ ಸ್ವಾತಂತ್ರ್ಯ ಮತ್ತು ಮುಕ್ತ ಓಡಾಟಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜುಲೈ 17ರಂದು ರವಿಕಾಂತೇಗೌಡರಿಗೆ ಸೂಚಿಸಲಾಗಿದೆ. ಜುಲೈ 16ರಂದು ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶಿವಾಜಿನಗರ ಶಾಸಕ ರೋಷನ್ ಬೇಗ್ ರನ್ನು ಎಸ್ಐಟಿ ಡಿಸಿಪಿ ಗಿರೀಶ್ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಇದಾದ ಮರುದಿನವೇ ರಾಜ್ಯಪಾಲರಿಂದ ಎಸ್ ಐಟಿಗೆ ಪತ್ರ ಬಂದಿದೆ. ಸದ್ಯ ಸಿಬಿಐ ತನಿಖೆಗೆ ನಡೆಸುತ್ತಿದ್ದು, ಪ್ರಮುಖ ಆರೋಪಿ ಮನ್ಸೂರ್ ಖಾನ್ ಕೂಡಾ ಸಿಬಿಐ ಕಸ್ಟಡಿಯಲ್ಲಿ ವಿಚಾರಣೆಗೊಳಪಟ್ಟಿದ್ದಾನೆ.
ರೋಷನ್ ಬೇಗ್ ಅವರು ಈ ಐಎಂಎ ಸಂಸ್ಥೆಯಿಂದ 400 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ಮನ್ಸೂರ್ ಖಾನ್ ಬಂಧನಕ್ಕೂ ಮುನ್ನ ಹೊರ ಹಾಕಿದ್ದ ಸರಣಿ ವಿಡಿಯೋದಲ್ಲಿ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕಾಂಗ್ರೆಸ್ಸಿನಿಂದ ಅಮಾನತುಗೊಂಡ ಬಳಿಕ ರೋಷನ್ ಬೇಗ್ ಅವರು ಬಿಜೆಪಿಯತ್ತ ವಾಲಿದ್ದಾರೆ. ಆದರೆ, ಬೇಗ್ ಅವರು ಬಿಜೆಪಿ ಸೇರ್ಪಡೆಯಾಗುವುದಕ್ಕೆ ಬಿಜೆಪಿಯಲ್ಲಿ ವಿರೋಧವಿದೆ.
ಸಂಚಲನ ಮೂಡಿಸಿದ ಮನ್ಸೂರ್ ಆಡಿಯೋ
ಮನ್ಸೂರ್ ಖಾನ್ ದಿನಾಂಕ 9/06/2019 ರಂದು ತಾನು ಬಿಡುಗಡೆ ಮಾಡಿ ಅಂದಿನ ಪೊಲೀಸ್ ಆಯುಕ್ತರಾದ ಟಿ ಸುನೀಲ್ ಕುಮಾರ್ ಅವರಿಗೆ ಕಳುಹಿಸಿದ ಮೊದಲ ಆಡಿಯೋದಲ್ಲಿ ಶಿವಾಜಿನಗರದ ಎಂಎಲ್ಎ ರೋಷನ್ ಬೇಗ್ ಅವರಿಗೆ 400 ಕೋಟಿ ರೂಪಾಯಿಗಳಷ್ಟು ಹಣ ನೀಡಿದ್ದು ಹಣ ವಾಪಾಸ್ ನೀಡಲು ಕೇಳಿದಾಗ ಇದೇ ರೋಷನ್ ಬೇಗ್ ಲೋಕಲ್ ರೌಡಿಗಳನ್ನು ಬಿಟ್ಟು ಮನ್ಸೂರ್ ಖಾನ್ ಗೆ ಜೀವ ಬೆದರಿಕೆ ಹಾಕಿದ್ದರಿಂದ ಇದೇ ಮನ್ಸೂರ್ ಖಾನ್ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಇದೇ ಆಡಿಯೋದಲ್ಲಿ ಉಲ್ಲೇಖಿಸಿದೆ.
2,000 ಕೋಟಿ ವಂಚನೆ ಜಾಲಕ್ಕೆ ಸಿಲುಕಿಸಿದ ಮೊಹ್ಮದ್ ಮನ್ಸೂರ್ ಖಾನ್ ಯಾರು?
ಮನ್ಸೂರ್ ಖಾನ್ ವಿಡಿಯೋ
ನಂತರ ವಂಚಕ ಮನ್ಸೂರ್ ಖಾನ್ ದಿನಾಂಕ 22/06/2019 ರಂದು ಬಿಡುಗಡೆ ಮಾಡಿದ ವಿಡಿಯೋದಲ್ಲಿ ತಾನು ಭಾರತಕ್ಕೆ ಬರಲು ಸಿದ್ದನಿದ್ದು ಈಗ ದುಬೈನಲ್ಲಿ ನಲೆಸಿದ್ದೇನೆ. ಕಳೆದ 14 ನೇ ತಾರೀಖಿನಂದು ವಿಮಾನದ ಟಿಕೆಟ್ ನ್ನು ಬುಕ್ ಮಾಡಿ ಕಾರಣಾಂತರದಿಂದ ನಾನು ಭಾರತಕ್ಕೆ ಬರಲಾಗಲಿಲ್ಲಾ. ಆಡಿಯೋದಲ್ಲಿ ನೀಡಿದ್ದ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು ರೋಷನ್ ಬೇಗ್ ಅವರಿಗೆ 400 ಕೋಟಿ ರೂಪಾಯಿ ನೀಡಿರುವುದನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.
ಐಎಂಎ ಹಗರಣ : ಸಿಬಿಐನಿಂದ ಸಾವಿರ ಪುಟದ ಚಾರ್ಜ್ ಶೀಟ್
ಎಲ್ಲಾ ರಾಜಕಾರಣಿಗಳ ತನಿಖೆಯಾಗಲಿ
ಪ್ರಕರಣ ನಡೆದು ಇಷ್ಟು ದಿನಗಳಾದರೂ ಸಹ ಶಿವಾಜಿನಗರದ ಶಾಸಕರಾದ 400 ಕೋಟಿ ಆರೋಪಿತ ರೋಷನ್ ಬೇಗ್ ರವರನ್ನು ಇದುವರೆಗೂ ಯಾವುದೇ ರೀತಿಯ ತನಿಖೆ ಹಾಗೂ ವಿಚಾರಣೆ ಮಾಡದೆ ನಿರ್ಲಕ್ಷತೆ ವಹಿಸಿರುತ್ತಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಸರಕಾಋದ ಪ್ರಭಾವಿ ಸಚಿವರಾದ ಆರ್ ವಿ ದೇಶಪಾಂಡೆ ಅವರ ಹತ್ತಿರಕ್ಕೆ ರೋಷನ್ ಬೇಗ್, ಆರೋಪಿತ ಮನ್ಸೂರ್ ಖಾನ್ ನನ್ನು ಕರೆದುಕೊಂಡು ಹೋಗಿ ಆರ್ಬಿಐ ನಿಂದ 600 ಕೋಟಿ ರೂಪಾಯಿ ಸಾಲ ಪಡೆಯಲು ಸರಕಾರದಿಂತೆ ಕ್ಲೀನ್ ಚಿಟ್ ನೀಡಲು ಸಹಕರಿಸಿ ಎಂದು ಸಚಿವ ಆರ್ ವಿ ದೇಶಪಾಂಡೆ ರವರೇ ನುಡಿದಿದ್ದಾರೆ.
ಬಿಜೆಪಿ ಸೇರ್ಪಡೆಗೆ ತಡೆ
'ನಾನು ಶಾಸಕನಲ್ಲದಿದ್ದರೂ ನಾನು ಹಜ್ ಸಮಿತಿ ಅಧ್ಯಕ್ಷನಾಗಿದ್ದೇನೆ. ನಾನು ಪ್ರತಿದಿನ ಯಾತ್ರಾರ್ಥಿಗಳ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಿದೆ' ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ, ಸರಿಯಾದ ಮಾಹಿತಿಯಿಲ್ಲದ ಕಾರಣ ನಾನು ಪುಣೆಗೆ ತೆರಳುವಾಗ ನನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು ಎಂದು ತಮ್ಮ ವಿಚಾರಣೆ ಬಗ್ಗೆ ರೋಷನ್ ಬೇಗ್ ಪ್ರತಿಕ್ರಿಯಿಸಿದ್ದರು. ಬೆಂಗಳೂರಿನ ಶಾಸಕರ ಮೂಲಕ ಮಾಜಿ ಸಚಿವ ಎಂಜೆ ಅಕ್ಬರ್, ಮುಕ್ತಾರ್ ಅಬ್ಬಾಸ್ ನಖ್ವಿ ಸಂಪರ್ಕಿಸಿದ್ದ ಬೇಗ್ ಅವರು ಬಿಜೆಪಿ ಸೇರುವುದಕ್ಕೆ ಬೇಗ್ ಯತ್ನಿಸಿದ್ದರು. ಆದರೆ, ಬಹುಕೋಟಿ ಐಎಂಎ ಹಗರಣದಲ್ಲಿ ಬೇಗ್ ಹೆಸರು ಕೇಳಿ ಬಂದಿದ್ದರಿಂದ ಬೇಗ್ ಅವರಿಗೆ ಆರೆಸ್ಸೆಸ್ ತಡೆ ಬಲವಾಯಿತು.