ಎಚ್ಡಿಕೆ ಪರ ಸಿದ್ದರಾಮಯ್ಯ ಬೆಂಬಲಿಗರು ನಿಲ್ತಾರಾ?
ಬೆಂಗಳೂರು, ಜುಲೈ 13: ವಿಶ್ವಾಸ ಮತ ಯಾಚನೆಗೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಮುಂದಾಗಿದ್ದು ಅವರ ನಂಬಿಕೆಗೆ ಜಯ ಸಿಗುತ್ತದೆಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.
ಸಿದ್ದರಾಮಯ್ಯ ಬೆಂಬಲ ಇದ್ದರೆ ರಾಜೀನಾಮೆ ಕೊಟ್ಟ ಶಾಸಕರ ಪೈಕಿ ಕೆಲವರಾದರೂ ವಾಪಾಸ್ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದೇನೋ. ಇರುವ ಶಾಸಕರು ಕೈತಪ್ಪಿ ಹೋಗದಂತೆ ನೋಡಿಕೊಳ್ಳುವ ಸಾಮರ್ಥ್ಯ ಸಿದ್ದರಾಮಯ್ಯರಿಗಷ್ಟೇ ಇರುವುದು. ಆದ್ದರಿಂದ ಸಿಎಂ ವಿಶ್ವಾಸಮತ ಗೆಲುವು ಸಾಧ್ಯವಾಗಬೇಕಾದರೆ ಸಿದ್ದರಾಮಯ್ಯರ ವಿಶ್ವಾಸ ಗಳಿಸಿಕೊಳ್ಳಲೇ ಬೇಕಾಗಿದೆ ಎನ್ನಲಾಗಿದೆ.
ಇನ್ನೊಂದೆಡೆ ಆಡಳಿತ ಪಕ್ಷದ ಶಾಸಕರೇ ರಾಜೀನಾಮೆ ನೀಡಿರುವಂತಹ ಈ ಹದಗೆಟ್ಟ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗುವ ಬಯಕೆ ನನಗಿಲಲ್. ಯಾರೋ ದುರುದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ನನಗೆ ಈಗ ಮುಖ್ಯಮಂತ್ರಿಯಾಗುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ಭವಿಷ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಕಾಂಗ್ರೆಸ್ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದಾಗ ಅವಕಾಶ ಸಿಕ್ಕರೆ ನೋಡೋಣವೆಂದೂ ಹೇಳಿದ್ದಾರೆ.
ಹಾಗಾದರೆ ಸಿಎಂ ಕುಮಾರಸ್ವಾಮಿಗೆ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ಸಹಾಯ ಮಾಡಬಹುದು ಎಂಬ ವಿಶ್ವಾಸವೂ ಒಂದೆಡೆ ಮೂಡಿದೆ.
ಸಿಎಂ ಆತ್ಮವಿಶ್ವಾಸ ನಿಜವಾಗಬೇಕಾದರೆ ಮಾಜಿ ಸಿಎಂ ಅವರ ಬೆಂಬಲ ಬೇಕಾಗಿದೆ. ಸಿಎಂ ತಾವಾಗಿಯೇ ಬಹುಮತ ಸಾಬೀತು ಮಾಡುವ ಮಾತನ್ನ ಶುಕ್ರವಾರ ಸದನದಲ್ಲಿ ಆಡಿದ್ದಾರೆ.
ನಿಯಮದ ಪ್ರಕಾರ 14 ದಿನದ ಒಳಗೆ ಸ್ಪೀಕರ್ ಸಿಎಂಗೆ ಬಹುಮತ ಸಾಬೀತು ಮಾಡಲು ಸೂಚಿಸಬೇಕು. ಸಿಎಂ ಬಹುಮತ ಸಾಬೀತು ಮಾಡಬೇಕಾದರೆ ಮಾಜಿ ಸಿಎಂ ಸಿದ್ದರಾಮಯ್ಯರ ಬೆಂಬಲ ಬೇಕೆ ಬೇಕು ಎಂಬ ಮಾಹಿತಿ ಲಭ್ಯವಾಗಿದೆ.