ಹೊಸಗುಡ್ಡದಹಳ್ಳಿಯ ಕಾರ್ಖಾನೆ ಬೆಂಕಿ ಅನಾಹುತಕ್ಕೆ ಸ್ಯಾನಿಟೈಜರ್ ಕಾರಣವೇ?
ಬೆಂಗಳೂರು, ನವೆಂಬರ್ 12: ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯ ಕಾರ್ಖಾನೆಯಲ್ಲಿ ಕಾನೂನು ಬಾಹಿರವಾಗಿ ರಾಸಾಯನಿಕ ದಾಸ್ತಾನು ಮಾಡಿದ್ದು, ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದ ಕಾರ್ಖಾನೆಯ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಡಾ.ಕೆ.ಸುಧಾಕರ್, ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
"ಬೆಂಕಿ ಅಪಘಾತಕ್ಕೆ ಬಿಬಿಎಂಪಿ ಅಧಿಕಾರಿಗಳ ಭ್ರಷ್ಟಾಚಾರವೇ ಕಾರಣ''
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, "ಇಲ್ಲಿ ಕಾನೂನು ಬಾಹಿರವಾಗಿ ಸ್ಯಾನಿಟೈಜರ್ ಸೇರಿದಂತೆ ರಾಸಾಯನಿಕ ಸಂಗ್ರಹಿಸಲಾಗಿತ್ತು ಎಂಬ ದೂರು ಇದೆ. ಆಲ್ಕೋಹಾಲ್ ಗೆ ಸಂಬಂಧಿಸಿದ ರಾಸಾಯನಿಕ ಕೂಡ ಇಲ್ಲಿತ್ತು. ಸ್ಯಾನಿಟೈಜರ್ ಸಂಗ್ರಹಿಸಲು ಆರೋಗ್ಯ ಇಲಾಖೆಯಡಿ ಡ್ರಗ್ ಕಂಟ್ರೋಲರ್ ಕಡೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಕಾನೂನು ಬಾಹಿರವಾಗಿ ರಾಸಾಯನಿಕ ಸಂಗ್ರಹ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.
"ಈ ರಾಸಾಯನಿಕವನ್ನು ಬೇರೆ ಕಂಪನಿಗಳು ಖರೀದಿಸಿದರೂ, ಅದು ಕಾನೂನು ಉಲ್ಲಂಘನೆಯಾಗುತ್ತದೆ. ಯಾವುದೇ ದೊಡ್ಡ ಕಂಪನಿಯಾದರೂ ಕ್ರಮ ಜರುಗಿಸಲಾಗುವುದು. ಜೊತೆಗೆ ನಮ್ಮ ಡ್ರಗ್ ಕಂಟ್ರೋಲರ್ ಗಳು ಏಕೆ ಪರಿಶೀಲನೆ ನಡೆಸಿಲ್ಲ ಎಂದು ವಿಚಾರಿಸಿ, ಅಧಿಕಾರಿಗಳ ತಪ್ಪಿದ್ದರೆ ಅವರ ಮೇಲೂ ಕ್ರಮ ಜರುಗಿಸಲಾಗುವುದು" ಎಂದು ಹೇಳಿದರು.
"ಜನವಸತಿ ಪ್ರದೇಶಗಳಲ್ಲಿರುವ ಕಾರ್ಖಾನೆಗಳನ್ನು ಗುರುತಿಸಿ ಸ್ಥಳಾಂತರಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಲ ಮನೆ, ಸಾಮಗ್ರಿಗಳಿಗೆ ಹಾನಿಯಾಗಿವೆ. ನಷ್ಟದ ಪ್ರಮಾಣದ ಬಗ್ಗೆ ಬಿಬಿಎಂಪಿ ಜಂಟಿ ಆಯುಕ್ತರು ವರದಿ ನೀಡಲಿದ್ದು, ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ, ಪರಿಹಾರ ನೀಡುವ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು" ಎಂದು ವಿವರಿಸಿದರು.