ರೋಷನ್ ಬೇಗ್ ಬಾಯಿ ಮುಚ್ಚಿಸಲು ಬಯಲಿಗೆ ಬಿತ್ತಾ IMA ಜ್ಯುವೆಲ್ಲರಿ ಹಗರಣ?
ಬೆಂಗಳೂರು, ಜೂನ್ 10: IMA ಜ್ಯುವೆಲ್ಲರಿ ಮಾಲೀಕ ಮನ್ಸೂರ್ ಖಾನ್ ನಾಪತ್ತೆ ಹಾಗೂ ನೂರಾರು ಕೋಟಿಯ ವಂಚನೆ ಪ್ರಕರಣ ಬಯಲಾಗುತ್ತಿದ್ದಂತೆ ಎರಡು ಸಾವಿರಕ್ಕೂ ಹೆಚ್ಚು ದೂರುಗಳು ಸೋಮವಾರ ಪೊಲೀಸರಿಗೆ ಬಂದಿದೆ. ಆದರೆ ಮೇಲ್ನೋಟಕ್ಕೆ ಕಾಣುವಂತೆ ಇದು ಕೇವಲ ವಂಚನೆ ಪ್ರಕರಣದಂತೆ ಅನ್ನಿಸುತ್ತಿಲ್ಲ. ಏಕೆಂದರೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಸಹ ಇಂದಿನ ಸ್ಥಿತಿಯ ಹಿಂದಿದೆ ಎನ್ನಲಾಗುತ್ತಿದೆ.
ಸದ್ಯಕ್ಕೆ ಸುಳಿದಾಡುತ್ತಿರುವ ಆ ಸುದ್ದಿ ಏನು? ರಾಜ್ಯ ಸರಕಾರ ಹಾಗೂ ಸಿದ್ದರಾಮಯ್ಯ ವಿರುದ್ಧ ಶಿವಾಜಿ ನಗರದ ಶಾಸಕರೂ ಆದ ಮಾಜಿ ಸಚಿವ ರೋಷನ್ ಬೇಗ್ ಅಸಮಾಧಾನ ವ್ಯಕ್ತಪಡಿಸಿ, ಆಕ್ರೋಶ ಹೊರಹಾಕಿದ್ದರು. ಆದರ ಬೆನ್ನಿಗೇ ರಾಮಲಿಂಗಾ ರೆಡ್ಡಿ ಅವರು ತಮ್ಮ ಅಸಮಾಧಾನವನ್ನು ಹೇಳಿಕೊಂಡಿದ್ದರು.
IMA ಜ್ಯುವೆಲ್ಲರಿ ಮಾಲೀಕ ಮನ್ಸೂರ್ ಖಾನ್ ನಾಪತ್ತೆ; 400 ಕೋಟಿ ಕಥೆ ಏನಂತೆ?
ಆದರೆ, ರಾಜ್ಯ ಸಚಿವ ಸಂಪುಟಕ್ಕೆ ರಾಮಲಿಂಗಾ ರೆಡ್ಡಿ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಎಲ್ಲ ಸಿದ್ಧತೆ ಆಗಿದೆ. ಆದರೆ ಸಂಪುಟ ಸೇರಲು ಸುತಾರಾಂ ಸಾಧ್ಯವಿಲ್ಲ ಎಂದು ಹಠ ಹಿಡಿದು ಕುಳಿತು, ಸಿಟ್ಟು ಮುಂದುವರಿಸಿದ್ದವರು ರೋಷನ್ ಬೇಗ್. ಇನ್ನೇನು ಈ ವ್ಯಕ್ತಿ ಮಾತು ಕೇಳುವುದಿಲ್ಲ ಅಂತಾದಾಗ 'IMA ಜ್ಯುವೆಲ್ಲರಿ ಮಾಲೀಕ ಮನ್ಸೂರ್ ಖಾನ್ ನಾಪತ್ತೆ' ಪ್ರಕರಣ ನಡೆದಿದೆಯಾ ಎಂಬ ಬಲವಾದ ಗುಮಾನಿ ಎದ್ದಿದೆ.
ರೋಷನ್ ಬೇಗ್ ರ ಬಾಯಿ ಮುಚ್ಚಿಸುವ ಯತ್ನವೆ?
ಸರಕಾರದಲ್ಲೇ ಇರುವ ಸಚಿವರೊಬ್ಬರು ಈ ಪ್ರಕರಣದ ರೂವಾರಿ. ಅಂದರೆ ರೋಷನ್ ಬೇಗ್ ರ ಬಾಯಿ ಮುಚ್ಚಿಸುವ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂಬುದು ಹರಿದಾಡುತ್ತಿರುವ ಸುದ್ದಿ. ಈ ಬಗ್ಗೆ ಸತ್ಯಾಸತ್ಯತೆಯನ್ನು ಖಚಿತ ಪಡಿಸಿಕೊಳ್ಳಬೇಕು ಅಂದರೆ ಮನ್ಸೂರ್ ಖಾನ್ ಸಿಕ್ಕಿ ಹಾಕಿಕೊಳ್ಳಬೇಕು. ಹೂಡಿಕೆದಾರರ ಹಣವನ್ನು ಹಿಂತಿರುಗಿಸಲು ಸಾಧ್ಯವಿದ್ದರೂ 'ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂದು ಮನ್ಸೂರ್ ಆಡಿಯೋ ಮಾಡಿಟ್ಟಿದ್ದು ಏಕೆ? ಒಂದು ವಿಧಾನಸಭಾ ಕ್ಷೇತ್ರದ ಶಾಸಕರಿಗೆ ನಾನೂರು ಕೋಟಿ ರುಪಾಯಿಯನ್ನು ಮನ್ಸೂರ್ ನೀಡಿದ್ದು ಏಕೆ? ಅಷ್ಟು ಹಣಕ್ಕೆ ಪ್ರತಿಯಾಗಿ ಅಡಮಾನ, ದಾಖಲೆಗಳು ಏನನ್ನೂ ಪಡೆದಿರಲಿಲ್ಲವೆ?
ಅಧಿಕಾರಿಗಳು, ರಾಜಕಾರಣಿಗಳಿಗೆ ಲಂಚ ಏಕೆ?
ತನಗೂ ಹಾಗೂ ತನ್ನ ಕುಟುಂಬಕ್ಕೂ ಜೀವ ಬೆದರಿಕೆ ಇದೆ ಎಂದು ಆಡಿಯೋದಲ್ಲಿ ಹೇಳಿರುವ ಅವರು, ಈ ಬಗ್ಗೆ ಪೊಲೀಸರಿಗೆ ಏಕೆ ದೂರನ್ನು ನೀಡಿಲ್ಲ? ರಾಜಕಾರಣಿಗಳು, ಅಧಿಕಾರಿಗಳಿಗೆ ಲಂಚ ಕೊಟ್ಟು ಬೇಸತ್ತಿದ್ದೇನೆ ಎಂದಿರುವ ಅವರು, ಏತಕ್ಕಾಗಿ ಲಂಚ ಕೊಡಬೇಕಾಯಿತು? ಅಂಥ ಸನ್ನಿವೇಶವಾದರೂ ಏನು?
ರೋಷನ್ ಬೇಗ್ ವಿರುದ್ಧ ಹೈಕಮಾಂಡಿಗೆ ದೂರು ಸಲ್ಲಿಸಿದ ಕೆಪಿಸಿಸಿ
ಹಣ ಹಿಂತಿರುಗಿಸುವ ಶಕ್ತಿ ಇದ್ದರೂ ನಾಪತ್ತೆ ಏಕೆ?
ಬೆಂಗಳೂರು ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಜನರು ಮನ್ಸೂರ್ ಖಾನ್ ಬಳಿ ಹೂಡಿಕೆ ಮಾಡಿದ್ದಾರೆ. ಅಷ್ಟೇ ಏಕೆ, ಈಗ ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಪ್ರಕಾರ ಅವರದೇ ಮಳಿಗೆಯಲ್ಲಿ ಕೆಲಸ ಮಾಡುವವರೂ ಹಣ ಹೂಡಿದ್ದಾರೆ. ಅಂದರೆ ಒಂದು ನಂಬಿಕೆಯಂತೂ ಇತ್ತು. ನಂಬಿಕೆ ಹಾಗೂ ಹೂಡಿಕೆದಾರರಿಗೆ ಹಿಂತಿರುಗಿಸುವಷ್ಟು ಆಸ್ತಿ, ಚಿನ್ನಾಭರಣ, ವಜ್ರ ಎಲ್ಲ ಇದ್ದಾಗಲೂ ಮನ್ಸೂರ್ ಹೀಗೆ ನಾಪತ್ತೆಯಾಗಿ, ಆತ್ಮಹತ್ಯೆ ಮಾಡಿಕೊಳ್ಳುವ ಮಾತನಾಡಿರುವುದೇಕೆ?
ರಾಜಕೀಯ ಮೇಲಾಟದಲ್ಲಿ ಪ್ರಕರಣ ಹಳ್ಳ ಹಿಡಿಯಬಾರದು
ಶಿವಾಜಿನಗರದ ಶಾಸಕ ರೋಷನ್ ಬೇಗ್ ರನ್ನು ಸುಮ್ಮನಾಗಿಸಲು ಮುಸ್ಲಿಂ ಸಮುದಾಯದ ಪ್ರಭಾವಿಯೇ ಹೀಗೆ ಮಾಡಿಸಿರುವುದಾಗಿ ಸುದ್ದಿ ಹರಿದಾಡುತ್ತಿದೆ. ರಾಜಕೀಯದ ಮೇಲಾಟದಲ್ಲಿ ಈ ಪ್ರಕರಣ ಹಳ್ಳ ಹಿಡಿಯಬಾರದು ಹಾಗೂ ಜನರಿಗೆ ಮೋಸ ಆಗಬಾರದು. ಇದರ ಜತೆಗೆ ಜನರ ಬಳಿ ಹೀಗೆ ಹೂಡಿಕೆ ಮಾಡಿಸಿ, ಆಗಿಂದಾಗ ಇಂಥ ವಂಚನೆಗಳನ್ನು ಮಾಡುವವರಿಂದ ಜನರನ್ನು ರಕ್ಷಿಸಲು ಕಾನೂನು ರಚಿಸಬೇಕು.
ಚೀಟಿ ಹಾಕುವ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು
ಯಾವುದೇ ಚಿನ್ನದ ವ್ಯಾಪಾರಿಗಳು ಹಾಲ್ ಮಾರ್ಕ್ ಆಭರಣವನ್ನು ಮೇಕಿಂಗ್ ಚಾರ್ಜ್ ಅಥವಾ ವೇಸ್ಟೇಜ್ ಎರಡೂ ಇಲ್ಲದೆ ಮಾರಾಟ ಮಾಡಲು ಸಾಧ್ಯವೇ ಇಲ್ಲ. ಚಿನ್ನದ ಆಭರಣ ಮಾಡುವಾಗ ಇಂಥಿಂಥ ಆಭರಣಕ್ಕೆ ಇಷ್ಟು ಚಿನ್ನ ವೇಸ್ಟ್ ಆಗುತ್ತದೆ. ಅದರ ವೆಚ್ಚ ನಾವು ಗ್ರಾಹಕರಿಂದ ಪಡೆಯಲೇ ಬೇಕಾಗುತ್ತದೆ. ಆದ್ದರಿಂದ ಚಿನ್ನ ಖರೀದಿ ಮಾಡುವಾಗ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಇನ್ನು ಚೀಟಿಯನ್ನು ನಡೆಸುವವರು ನ್ಯಾಯೋಚಿತವಾಗಿ ಮಾಡುತ್ತಿದ್ದಾರಾ ಎಂಬುದನ್ನೂ ಗಮನಿಸಬೇಕು. ಜನರ ಶ್ರಮದ ಹಣ ವಂಚಕರ ಕೈ ಸೇರುವಂತೆ ಆಗಬಾರದು. ನಾನು ಗಮನಿಸಿದಂತೆ ಐಎಂಎಯಲ್ಲಿ ತೀರಾ ಕಡಿಮೆ ಬೆಲೆಗೆ ಆಭರಣಗಳನ್ನು ಮಾರುತ್ತಿದ್ದರು. ಇದೀಗ ಇಂಥ ದೊಡ್ಡ ಮಟ್ಟದ ವಂಚನೆ ಆಗಿದೆ. ತುಂಬ ಬೇಸರ ಆಗುತ್ತದೆ ಎಂದು ಆರ್ಯ ವೈಶ್ಯ ನಿಗಮದ ಅಧ್ಯಕ್ಷರು ಹಾಗೂ ಸಾಯಿ ಗೋಲ್ಡ್ ಪ್ಯಾಲೆಸ್ ನ ಮಾಲೀಕರೂ ಆದ ಟಿ.ಎ.ಶರವಣ ತಮ್ಮ ಅಭಿಪ್ರಾಯವನ್ನು 'ಒನ್ ಇಂಡಿಯಾ' ಕನ್ನಡದ ಜತೆ ಹಂಚಿಕೊಂಡರು.