'ಸೈನಿಕ'ನಿಗೆ ಖುಷಿ ಕೊಡಲಿಲ್ಲವೇ ಬಸವರಾಜ ಬೊಮ್ಮಾಯಿ ಆಯ್ಕೆ!?
ಬೆಂಗಳೂರು, ಜುಲೈ 27: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಧ್ವನಿ ಎತ್ತಿದ್ದ ಸಿ ಪಿ ಯೋಗೇಶ್ವರ್, ಬಸವರಾಜ ಬೊಮ್ಮಾಯಿ ಆಯ್ಕೆ ನಂತರದಲ್ಲೂ ಅಸಮಾಧಾನಗೊಂಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
Recommended Video
ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಶಾಸಕಾಂಗ ಸಭೆಯಲ್ಲಿ ಬಸವರಾಯ ಬೊಮ್ಮಾಯಿ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಲಾಗಿಯಿತು. ಬಿಜೆಪಿ ಶಾಸಕರ ಸಭೆಯಲ್ಲಿ ಹೊರಬಿದ್ದ ಘೋಷಣೆ ನಂತರ ಸಿ ಪಿ ಯೋಗೇಶ್ವರ್ ಮತ್ತೊಮ್ಮೆ ಬೇಸರಗೊಂಡಂತೆ ಗೋಚರಿಸುತ್ತಿತ್ತು.
Breaking News: ಬಿಜೆಪಿ ಶಾಸಕಾಂಗ ಸಭೆಯಲ್ಲಿ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆ
ಶಾಸಕಾಂಗ ಸಭೆಯಿಂದ ಹೊರ ಬಂದ ಸಿ ಪಿ ಯೋಗೇಶ್ವರ್ ಮಾಧ್ಯಮಗಳ ಕೈಗೆ ಸಿಗದೇ ಜೂಟ್ ಆದರು. ಅವಸರದಲ್ಲೇ ಕಾರಿನತ್ತ ತೆರಳಿದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಕ್ಕೂ ಸಿದ್ಧವಿರಲಿಲ್ಲ. ಮಂಗಳವಾರ ಮಾಧ್ಯಮಗಳ ಎದುರು ಅವರು ತೋರಿದ ವರ್ತನೆ ಹಲವು ಅನುಮಾನಗಳನ್ನು ಹುಟ್ಟು ಹಾಕುವಂತಿತ್ತು. ಈ ವರ್ತನೆಗೆ ಹಲವು ಕಾರಣಗಳಿರುಬಹುದು ಎಂತಲೂ ವಿಶ್ಲೇಷಿಸಲಾಗುತ್ತಿದೆ.
ಯಡಿಯೂರಪ್ಪ ವಿರುದ್ಧ ಸೈನಿಕನ ಸಮರ
ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಸಮರ ಸಾರಿದ್ದ ಸಿ ಪಿ ಯೋಗೇಶ್ವರ್ ನಾಯಕತ್ವ ಬದಲಾವಣೆಗೆ ಶತಪ್ರಯತ್ನ ಮಾಡಿದ್ದರು. ಹೈಕಮಾಂಡ್ ಮಟ್ಟದಲ್ಲಿ ನಾಯಕರನ್ನು ಆಗಾಗ ಭೇಟಿ ಮಾಡುತ್ತಾ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪ್ರಸ್ತಾವನೆ ಸಲ್ಲಿಸುತ್ತಿದ್ದರು ಎಂತಲೂ ಹೇಳಲಾಗುತ್ತಿತ್ತು. ಅದೆಷ್ಟೋ ಬಾರಿ ಬಿಎಸ್ ವೈ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಸ್ವತಃ ಸಿಪಿ ಯೋಗೇಶ್ವರ್ ಅಸಮಾಧಾನ ಹೊರ ಹಾಕಿದ್ದರು. ಕುಟುಂಬದ ಹಸ್ತಕ್ಷೇಪ ಹೆಚ್ಚಾಗುತ್ತಿರುವ ಬಗ್ಗೆ ಬಹಿರಂಗವಾಗಿ ಆರೋಪಿಸಿದ್ದರು. ಅಂಬಾರಿಯನ್ನು ಎಲ್ಲರೂ ಹೊರುವುದಕ್ಕೆ ಸಾಧ್ಯವಿಲ್ಲ ಎನ್ನುವ ಹೇಳಿಕೆ ಮೂಲಕ ಬಹಿರಂಗ ವಾಗ್ದಾಳಿ ನಡೆಸಿದ್ದರು.
ಮುಖ್ಯಮಂತ್ರಿ ಆಯ್ಕೆಯಲ್ಲಿ ಬಿಎಸ್ ವೈ ಮೇಲುಗೈ
ಹೈಕಮಾಂಡ್ ಮಟ್ಟದಲ್ಲಿ ಬಿ ಎಸ್ ಯಡಿಯೂರಪ್ಪ ವೈಫಲ್ಯ ಮತ್ತು ಪುತ್ರ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ನೀಡಿದ ದೂರು ಸಿಎಂ ಬದಲಾವಣೆಗೆ ನಾಂದಿ ಹಾಡಲಾಗಿತ್ತು. ಆದರೆ ಇತ್ತೀಚಿಗೆ ನಡೆದ ಬೆಳವಣಿಗೆಗಳಲ್ಲಿ ಬಿಎಸ್ ವೈ ಮತ್ತೊಮ್ಮೆ ಮೇಲುಗೈ ಸಾಧಿಸಿದರು. ತಮ್ಮ ಆಪ್ತ ಬಳಗದಲ್ಲೇ ಗುರುತಿಸಿಕೊಂಡಿದ್ದ ಬಸವರಾಜ ಬೊಮ್ಮಾಯಿಗೆ ಪಟ್ಟ ಕಟ್ಟುವಲ್ಲಿ ಯಶಸ್ವಿಯಾದರು. ಅಲ್ಲಿಗೆ ಮತ್ತೊಮ್ಮೆ ಬಿಎಸ್ ವೈ ಬಣ ತಮ್ಮ ಹಿಡಿತವನ್ನು ಸಾಧಿಸಿತು. ಈ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಆಯ್ಕೆಯು ವಿರೋಧ ಬಣಕ್ಕೆ ತೃಪ್ತಿ ನೀಡಲಿಲ್ಲವೇ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ. ಇಂದು ಸಿ ಪಿ ಯೋಗೇಶ್ವರ್ ತೋರಿದ ವರ್ತನೆ ಈ ಆರೋಪಕ್ಕೆ ಪುಷ್ಟಿ ತುಂಬುವಂತಿದೆ.
ಮಾಧ್ಯಮಗಳಿಗೆ ಕೈ ಮುಗಿದು ಹೊರಟ ಸೈನಿಕ
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆ ಕುರಿತು ಅಧಿಕೃತ ಘೋಷಣೆ ಹೊರ ಬೀಳುತ್ತಿದ್ದಂತೆ ಶಾಸಕರು ಸಭೆ ಮುಗಿದಿ ಹೊರ ಬರುತ್ತಿದ್ದರು. ಈ ವೇಳೆ ಮಾಧ್ಯಮಗಳ ಪ್ರತಿಕ್ರಿಯೆಗೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದ ಸಿ ಪಿ ಯೋಗೇಶ್ವರ್, ಕೆಲವೇ ಕೆಲವು ಕ್ಷಣಗಳಲ್ಲಿ ತಮ್ಮ ಅಸಮಾಧಾನವನ್ನು ತಮ್ಮದೇ ಮಾತುಗಳಲ್ಲಿ ಹೊರ ಹಾಕಿದಂತೆ ಕಾಣುತ್ತಿತ್ತು. ಬಸವರಾಜ ಬೊಮ್ಮಾಯಿ ಆಯ್ಕೆ ತೃಪ್ತಿದಾಯಕವಾಗಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ, "ಆಯ್ತು.. ಆಯ್ತು.. ಖುಷಿ ಕೊಟ್ಟಿದೆ," ಎಂದು ಹೇಳುತ್ತಲೇ ಮಾಧ್ಯಮಗಳಿಗೆ ಕೈ ಮುಗಿದು ಯೋಗೇಶ್ವರ್ ಹೊರಟು ಬಿಟ್ಟರು.
ರಾಜ್ಯದ 20ನೇ ಮುಖ್ಯಮಂತ್ರಿ ಆದ ಬಸವರಾಜ ಬೊಮ್ಮಾಯಿ
ಬಿ ಎಸ್ ಯಡಿಯೂರಪ್ಪ ನಂತರ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ರಾಜ್ಯದ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಸವರಾಜ ಬೊಮ್ಮಾಯಿರನ್ನು ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಹ್ವಾನಿಸಿದ್ದಾರೆ. ಕರ್ನಾಟಕ ರಾಜ್ಯದ 20ನೇ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಜುಲೈ 28ರ ಬೆಳಗ್ಗೆ 11 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಿಎಂ ಆಯ್ಕೆ ದಿನವೇ ರಾಜ್ಯದಲ್ಲಿ ಮೂವರು ಉಪ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲಾಗಿದೆ. ಗೋವಿಂದ ಕಾರಜೋಳ, ಆರ್ ಅಶೋಕ್ ಹಾಗೂ ಶ್ರೀರಾಮುಲುರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿದೆ.