ಮೂಢನಂಬಿಕೆ ಮುರಿದು ಚಾಮರಾಜನಗರಕ್ಕೆ ಭೇಟಿ ನೀಡುತ್ತಾರಾ ಬಸವರಾಜ ಬೊಮ್ಮಾಯಿ?
ಬೆಂಗಳೂರು ಅ.2, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅ.7ರಂದು ಚಾಮರಾಜನಗರಕ್ಕೆ ಭೇಟಿ ನೀಡಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡುತ್ತಾರೋ ಅಥವಾ ಇಲ್ಲವೋ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳಿಗೆ ಚಾಮರಾಜನಗರ ಜಿಲ್ಲೆಯ ಭೇಟಿ ಯಾವಾಗಲೂ ನುಂಗಲಾರದ ಬಿಸಿತುಪ್ಪವೇ ಆಗಿರುತ್ತದೆ. ಚಾಮರಾನಗರಕ್ಕೆ ಭೇಟಿ ನೀಡದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೂಢನಂಬಿಕೆಯೋ ಆಥವಾ ಕಾಕತಾಳೀಯವೋ ಗೊತ್ತಿಲ್ಲ. ಮೊದಲಿನಿಂದಲೂ ಸಹ ಮುಖ್ಯಮಂತ್ರಿಗಳು ಚಾಮರಾಜನಗರ ಜಿಲ್ಲಾ ಭೇಟಿ ಎಂದರೆ ಒಂದು ಬಾರಿ ಯೋಚಿಸುತ್ತಾರೆ. ಆದರೆ, ಈ ಮಾತು ಸಿದ್ದರಾಮಯ್ಯ ಅವರಿಗೆ ಅನ್ವಯಿಸದು. ಅವರು ಅಧಿಕಾರದಲ್ಲಿದ್ದಾಗ ಹಲವು ಭಾರಿ ಭೇಟಿ ನೀಡಿದ್ದಾರೆ. ಆದರೆ, ಉಳಿದ ಮುಖ್ಯಮಂತ್ರಿಗಳು ಎಂತಹ ಪ್ರಸಂಗ ಬಂದರೂ ಸಹ ಅದೊಂದು ಪ್ರವಾಸದಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನೇ ಮಾಡುತ್ತಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಅ.6ರಿಂದ 8ರವರೆಗೆ ಮೂರು ದಿನಗಳ ರಾಜ್ಯಪ್ರವಾಸಕ್ಕೆ ಬರುತ್ತಿದ್ದಾರೆ. ಅ.6 ರಂದು ರಾಜಭವನದಲ್ಲಿ ಸಂಜೆ ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಅವರ ಕುಟುಂಬಸ್ಥರೊಂದಿಗೆ ಚಹಾಕೂಟದಲ್ಲಿ ಪಾಲ್ಗೊಳ್ಳತ್ತಾರೆ. ಅ7ರಂದು ಬೆಳಿಗ್ಗೆ 11.40ಕ್ಕೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ ಮಧ್ಯಾಹ್ನ 3.30ರಿಂದ ಸಂಜೆ 4.40ರವರೆಗೆ ಚಾಮರಾಜನಗರ ಮೆಡಿಕಲ್ ಕಾಲೇಜಿನ 450 ಹಾಸಿಗೆಗಳ ಆಸ್ಪತ್ರೆ ಉದ್ಘಾಟಿಸಲಿದ್ದಾರೆ. ಬಳಿಕ ಅ.8ರಂದು ಬೆಳಿಗ್ಗೆ 11.50ಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಧಿಕೃತ ಪ್ರವಾಸದ ಪಟ್ಟಿ ತಿಳಿಸಿದೆ.
ರಾಷ್ಟ್ರಪತಿಯವರು ಚಾಮರಾಜನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಿಷ್ಟಾಚಾರದ ಪ್ರಕಾರ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳೂ ಸಹ ಹಾಜರಿರಬೇಕಾಗುತ್ತದೆ. ಅಲ್ಲದೆ, ರಾಜ್ಯ ಸರ್ಕಾರದ ಮೆಡಿಕಲ್ ಕಾಲೇಜು ಆಗಿರುವುದರಿಂದ ರಾಜ್ಯ ಸರ್ಕಾರವೇ ಕಾರ್ಯಕ್ರಮ ಆಯೋಜಿಸಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಮತ್ತೊಂದೆಡೆ ಸಚಿವ ಎಸ್.ಟಿ. ಸೋಮಶೇಖರ್ ಶನಿವಾರ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮರಾಜನಗರಕ್ಕೆ ರಾಷ್ಟ್ರಪತಿ ಅವರೊಂದಿಗೆ ಭೇಟಿ ನೀಡುತ್ತಾರೆ ಎಂದು ಹೇಳಿದ್ದಾರೆ.
ಎಸ್.ಆರ್. ಬೊಮ್ಮಾಯಿ ಅವರು 1988 ಆಗಸ್ಟ್ನಿಂದ 1989ರ ಏಪ್ರಿಲ್ ವರೆಗೆ ಮುಖ್ಯಮಂತ್ರಿಯಾಗಿದ್ದರು. ಈ ಅವಧಿಯಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿ ಮಿನಿ ವಿಧಾನಸೌಧ, ಸಾರ್ವಜನಿಕ ಆಸ್ಪತ್ರೆ ಉದ್ಘಾಟಿಸಿದ್ದರು. ಆದಾದ ಕೆಲವೇ ತಿಂಗಳ ಬಳಿಕ ಅಧಿಕಾರ ಕಳೆದುಕೊಳ್ಳಬೇಕಾಯಿತು. ಹೀಗಾಗಿ ಈಗ ಮುಖ್ಯಮಂತ್ರಿ ಸ್ಥಾನದಲ್ಲಿರುವ ಅವರ ಮಗ ಬಸವರಾಜ ಬೊಮ್ಮಾಯಿ ಮೂಢನಂಬಿಕೆಗೆ ಸೆಡ್ಡು ಹೊಡೆಯುತ್ತಾರೆಯೇ ನಿರೀಕ್ಷೆ ಎಲ್ಲರನ್ನೂ ಕಾಡುತ್ತಿದೆ.
ಮೊದಲಿನಿಂದಲೂ ಇದೆ ಪ್ರತೀತಿ:
ಚಾಮರಾಜನಗರಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ. ಬಹಳಷ್ಟು ವೈಚಾರಿಕವಾಗಿದ್ದ ಜೆ.ಎಚ್. ಪಟೇಲ್ ಅವರೂ ಸಹ ಅಧಿಕಾರಾವಧಿಯಲ್ಲಿ ಒಂದು ಬಾರಿಯೂ ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದರಾದರೂ ಚಾಮರಾಜನಗರಕ್ಕೆ ಹೋಗಲಿಲ್ಲ.
ಇನ್ನು ಕಳೆದ ಮೇನಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತವಾಗಿ 24 ಮಂದಿ ಕೋವಿಡ್ ರೋಗಿಗಳು ಮೃತಪಟ್ಟಿದ್ದು ರಾಜ್ಯದ ಬಹುದೊಡ್ಡ ದುರ್ಘಟನೆಗಳಲ್ಲಿ ಒಂದು. ಆದರೂ ಸಹ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಚಾಮರಾಜನಗರಕ್ಕೆ ಭೇಟಿ ನೀಡುವ ಮನಸ್ಸು ಮಾಡಲಿಲ್ಲ. ಅವರು ಈ ಹಿಂದೆ ಕೇವಲ ಮಲೆಮಹದೇಶ್ವರ ಬೆಟ್ಟಕ್ಕೆ ಮಾತ್ರ ಭೇಟಿ ನೀಡಿ ವಾಪಸ್ಸಾದ ಉದಾಹರಣೆ ಇದೆ.
ವಿದೇಶದಲ್ಲಿ ಪದವಿ ಪಡೆದು ಬಂದು ಸಂಸದರಾಗಿ, ಕೇಂದ್ರ ಸಚಿವರಾಗಿ, ರಾಜ್ಯದಲ್ಲಿ 1999-2004 ರವರೆಗೆ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರೂ ಸಹ ಚಾಮರಾಜನಗರಕ್ಕೆ ಹೋಗುವಂತಹ ಧೈರ್ಯ ಮಾಡಲಿಲ್ಲ. ಅದೇ ರೀತಿ ಎಚ್.ಡಿ. ದೇವೇಗೌಡ, ವೀರಪ್ಪ ಮೊಯಿಲಿ, ಧರ್ಮಸಿಂಗ್, ಡಿ.ವಿ. ಸದಾನಂದಗೌಡ ಅವರ ಜಿಲ್ಲೆಯತ್ತ ಸುಳಿಯಲೇ ಇಲ್ಲ. 2012ರ ಜುಲೈನಿಂದ 2013ರ ಮೇ ವರೆಗೆ ಅಧಿಕಾರ ನಡೆಸಿದ ಜಗದೀಶ ಶೆಟ್ಟರ್ ಒಂದು ಬಾರಿ ಚಾಮರಾಜನಗರಕ್ಕೆ ಒಂದು ಬಾರಿ ಭೇಟಿ ನೀಡಿದರಾದರೂ ಕೆಲವೇ ತಿಂಗಳಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರ ಕಳೆದುಕೊಂಡಿತು. 2018ರಲ್ಲಿ ಅಧಿಕಾರಕ್ಕೆ ಬಂದ ಎಚ್.ಡಿ. ಕುಮಾರಸ್ವಾಮಿ ಅವರು 14 ತಿಂಗಳು ಅಧಿಕಾರ ನಡೆಸಿದರೂ ಚಾಮರಾಜನಗರಕ್ಕೆ ಹೋಗಿರಲಿಲ್ಲ.
ಸಿದ್ದರಾಮಯ್ಯ ಅಪವಾದ:
ಹೀಗೆ ಚಾಮರಾಜನಗರಕ್ಕೆ ಭೇಟಿ ನೀಡದ ಮುಖ್ಯಮಂತ್ರಿಗಳ ಸಾಲಿನಲ್ಲಿ ಸಿದ್ದರಾಮಯ್ಯ ಇದಕ್ಕೆ ಅಪವಾದ ಎಂದೇ ಹೇಳಬಹುದು. ಅವರು ಅಧಿಕಾರ ನಡೆಸಿದ 2013ರ ಮೇನಿಂದ 2018ರ ಮೇ ವರೆಗೆ ಒಟ್ಟು 10 ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಮನಸ್ಸಿನಲ್ಲಿ ಯಾವುದೇ ಮೂಢನಂಬಿಕೆ ಇಟ್ಟುಕೊಳ್ಳದೆ ಇಲ್ಲಿಗೆ ಬರುತ್ತಿದ್ದೇನೆ ಎಂದು ಹೇಳುತ್ತಿದ್ದರು. ಆದರೆ, ದುರಾದೃಷ್ಟ ಎಂಬಂತೆ 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದರು.
Recommended Video