ಅಕ್ರಮ ಗಣಿಗಾರಿಕೆ: ಎಸ್ ಐಟಿಗೆ ವಹಿಸಲು ಸಂಪುಟ ತೀರ್ಮಾನ
ಬೆಂಗಳೂರು, ಜನವರಿ 18 : ಕಬ್ಬಿಣದ ಅದಿರು ಅಕ್ರಮ ರಫ್ತು ಪ್ರಕರಣವನ್ನು ರಾಜ್ಯದ ವಿಶೇಷ ತನಿಖಾ ತಂಡಕ್ಕೆ ವಹಿಸಿ ತನಿಖೆ ನಡೆಸುವಂತೆ ಸೂಚಸಿಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ ಬಿ ಜಯಚಂದ್ರ ತಿಳಿಸಿದರು.
ಗೋವಾ ರಾಜ್ಯದ ಮರ್ಮ ಗೋವಾ ಹಾಗೂ ಪಣಜಿ ಬಂದರು ಮೂಲಕ ಕಬ್ಬಿಣದ ಅದಿರು ಸಾಗಣೆಯಾಗಿರುವ ಕುರಿತಂತೆ ಮೇಲ್ನೋಟಕ್ಕೆ ಯಾವುದೇ ದಾಖಲೆಗಳು ಕಂಡು ಬರುತ್ತಿಲ್ಲ ಎಂಬ ಕೇಂದ್ರ ತನಿಖಾ ತಂಡದ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿದ ರಾಜ್ಯ ಸಚಿವ ಸಂಪುಟವು ಗೋವಾ ರಾಜ್ಯದ ಈ ಎರಡೂ ಪ್ರದೇಶಗಳೂ ಹಾಗೂ ರಾಜ್ಯದ ನವ ಮಂಗಳೂರು ಮತ್ತು ಕಾರವಾರದ ಬೇಲಿಕೇರಿ ಬಂದರು ಮೂಲಕ ಅವ್ಯಾಹತವಾಗಿ ನಡೆದಿದೆ ಎನ್ನುವುದನ್ನು ತಿಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಹಾಗೂ ಕಬ್ಬಿಣದ ಅದಿರು ಸಾಗಣೆ ಕುರಿತಂತೆ ಕರ್ನಾಟಕ ಲೋಕಾಯುಕ್ತ ಸಲ್ಲಿಸಿದ ಎರಡು ವರದಿಗಳನ್ನು ಆಧರಿಸಿ, ಕರ್ನಾಟಕ, ಗೋವಾ, ಆಂಧ್ರ ಪ್ರದೇಶ ಹಾಗೂ ತಮಿಳು ನಾಡು ರಾಜ್ಯಗಳ ವಿವಿಧ ಬಂದರುಗಳ ಮೂಲಕ ರಾಜ್ಯದ 50,000 ಲಕ್ಷಕ್ಕೂ ಹೆಚ್ಚು ಮೆಟ್ರಿಕ್ ಟನ್ ಕಬ್ಬಿಣದ ಅದಿರು ಲೂಟಿಯಾಗಿದೆ ಎಂಬ ಆರೋಪ ಕುರಿತಂತೆ ತನಿಖೆ ನಡೆಸಲು ಲೋಕಾಯುಕ್ತ ವರದಿಯಲ್ಲಿನ ದಾಖಲೆಗಳನ್ನು ಆಧರಿಸಿ ಭಾರತ ಸರ್ವೋಚ್ಛ ನ್ಯಾಯಾಲಯವು ಪ್ರಕರಣವನ್ನು ಸಿ ಬಿ ಐ ಗೆ ವಹಿಸಿತ್ತು.
ಲೋಕಾಯುಕ್ತ ವರದಿಯಲ್ಲಿಯೇ ದಾಖಲೆಗಳು ನಮೂದಾಗಿದ್ದರೂ, ಗೋವಾ ರಾಜ್ಯದ ಬಂದರುಗಳಲ್ಲಿ ತನಿಖೆ ನಡೆಸಿದ ಸಿ ಬಿ ಐ ಮೇಲ್ನೋಟಕ್ಕೆ ದಾಖಲೆಗಳಿಲ್ಲ ಎಂದು ಹೇಳಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ತನಿಖೆ ನಡೆಸಲು ರಾಜ್ಯದ ಎಸ್ ಐ ಟಿ ಗೆ ವಹಿಸಲು ಸಂಪುಟ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದರು.