ಡಬ್ಲು.ಬಿ. ಯೇಟ್ಸ್ ಕವಿಯ ಎಪ್ಪತ್ತು ಕವನಗಳು ಕೃತಿ ಬಿಡುಗಡೆ
ಬೆಂಗಳೂರು, ಜನವರಿ 05: ಡಬ್ಲು.ಬಿ. ಯೇಟ್ಸ್ ಕವಿಯ ಎಪ್ಪತ್ತು ಕವನಗಳು ಕೃತಿ ಲೋಕಾರ್ಪಣ ಸಮಾರಂಭವನ್ನು ಜನವರಿ 11 ಶನಿವಾರದಂದು 'ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು' -ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರೊ. ವಿ.ಕೃಷ್ಣಮೂರ್ತಿ ರಾವ್ ಅವರು ಅನುವಾದಿಸಿರುವ ಡಬ್ಲು.ಬಿ. ಯೇಟ್ಸ್ ಕವಿಯ ಎಪ್ಪತ್ತು ಕವನಗಳು ಕೃತಿ ಲೋಕಾರ್ಪಣ ಸಮಾರಂಭವನ್ನು ಉದಯ ಪ್ರಕಾಶನ, ರಾಜಾಜಿನಗರ, ಬೆಂಗಳೂರು ಮತ್ತು ಕೃಷ್ಣಮೂರ್ತಿರಾವ್ ಅಭಿಮಾನಿ ಬಳಗ, ಬೆಂಗಳೂರು ಆಯೋಜಿಸಿದೆ.
ಕೃತಿ ಲೋಕಾರ್ಪಣ ಸಮಾರಂಭವು ಸಂಜೆ 5.30 ಗಂಟೆಗೆ ನಡೆಯಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಕೇಂದ್ರಸಾಹಿತ್ಯ ಅಕಾದೆಮಿ ಅಧ್ಯಕ್ಷರಾದ ಡಾ. ಚಂದ್ರಶೇಖರ ಕಂಬಾರ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸುತ್ತಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕರು ಮತ್ತು ಪ್ರಸಿದ್ಧ ಅನುವಾದಕರಾದ ಪ್ರೊ. ಓ.ಎಲ್.ನಾಗಭೂಷಣ ಸ್ವಾಮಿ ಅವರು ಕೃತಿ ಲೋಕಾರ್ಪಣೆಯನ್ನು ಮಾಡಲಿದ್ದಾರೆ. ಖ್ಯಾತ ಅನುವಾದಕರಾದ ಜಯಪ್ರಕಾಶ ನಾರಾಯಣ (ಜೆ.ಪಿ) ಅವರು ಕೃತಿಯನ್ನು ಕುರಿತು ಮಾತನಾಡಲಿದ್ದಾರೆ. ಬಿ.ಆರ್.ಪರಮೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.
ಡಬ್ಲೂ ಬಿ. ಯೇಟ್ಸ್ ಆಧುನಿಕ ಇಂಗ್ಲಿಷ್ ಕಾವ್ಯದ ಚರಿತ್ರೆಯಲ್ಲಿ ಪ್ರಸಿದ್ಧಕವಿಯೆಂದು ಪ್ರತಿತನಾದವನು. ಇವನು ಕವಿಯೂ ಹೌದು; ವಿದ್ವಾಂಸನೂ ಹೌದು. ಇವನು ಬರೆದ ಕವಿತೆಗಳು ಕಳೆದ ನೂರು ವರ್ಷಗಳಿಂದ ಪ್ರಪಂಚದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ; ಈಗಲೂ ಅನುವಾದಗೊಳ್ಳುತ್ತಿವೆ. ಕನ್ನಡವು ಕಳೆದ ಅರ್ಧಶತಮಾನಕ್ಕಿಂತ ಹೆಚ್ಚಾಗಿ ಇವನ ಕವಿತೆಗಳನ್ನೂ ಕಾವ್ಯಭಾವಗಳನ್ನೂ ತನ್ನ ಸೊತ್ತಾಗಿ ಮಾಡಿಕೊಂಡಿದೆ. ಈಗಾಗಲೇ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಪ್ರೊ.ಎಚ್.ಎಸ್.ವೆಂಕಟೇಶ ಮೂರ್ತಿ ಮತ್ತು ಪ್ರೊ.ಯು.ಆರ್.ಅನಂತಮೂರ್ತಿ ಬಿಡಿಬಿಡಿಯಾಗಿ ತಮಗೆ ಇಷ್ಟವಾದ ಕವಿತೆಗಳನ್ನು ಆಯ್ದುಕೊಂಡು ಅನುವಾದಿಸಿದ್ದಾರೆ.
ಪ್ರೊ.ವಿ.ಕೃಷ್ಣಮೂರ್ತಿರಾವ್ ಇಂಗ್ಲಿಷ್ ಕಾವ್ಯದ ಶ್ರದ್ಧಾಳು ವಿದ್ಯಾರ್ಥಿ. ಅವರು ಇಂಗ್ಲಿಷ್ಕಾವ್ಯದ ಮರ್ಮವನ್ನು ಅರಿತವರು ಮಾತ್ರವಲ್ಲ; ಕನ್ನಡ ಕಾವ್ಯಭಾಷೆಯ ನೆಲೆ-ಬೆಲೆಯನ್ನು ಅರಿತವರು. ಅವರು ಈಗಾಗಲೇ ಐದು ಕನ್ನಡ ಕಾವ್ಯಸಂಕಲನಗಳನ್ನು ಹೊರತಂದು ನಮ್ಮ ನಡುವಿನ ಮುಖ್ಯ ಕವಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಕಳೆದ ನಾಲ್ಕು ವರ್ಷಗಳಿಂದ ಏಟ್ಸ್ ಮಹಾಕವಿಯನ್ನು ಧ್ಯಾನಿಸಿ, ಎಪ್ಪತ್ತು ಕವಿತೆಗಳನ್ನು ಅನುವಾದಿಸಿ ನಮಗೆ ನೀಡಿದ್ದಾರೆ. ಅವರು ಅನುವಾದಿಸಿದ ಕವಿತೆಗಳನ್ನು ಹತ್ತಾರು ಬಾರಿ ತಿದ್ದಿದ್ದಾರೆ. ಅವುಗಳೊಂದೊಂದಕ್ಕೂ ಟಿಪ್ಪಣಿಗಳನ್ನು ಕೊಟ್ಟಿದ್ದಾರೆ.
ಯೇಟ್ಸ್ ಕಾವ್ಯಸಂಕಲನದ ಚಾರಿತ್ರಿಕ ನೆಲೆಗಳನ್ನು ತಿಳಿಯುವಂತೆ ಪ್ರವೇಶಿಕೆಗಳನ್ನು ಬರೆದಿದ್ದಾರೆ. ಈ ಅನುವಾದಿತ ಸಂಕಲನವು ಇಂಗ್ಲಿಷ್ಮೂಲ, ಆಯಾ ಏಟ್ಸ್ ಸಂಕಲನಗಳಿಗೆ ಪ್ರವೇಶಿಕೆ, ಅನುವಾದ ಮತ್ತು ಟಿಪ್ಪಣಿಗಳಿಂದ ಕೂಡಿದೆ. ಪ್ರೊ.ವಿ.ಕೃಷ್ಣಮೂರ್ತಿರಾವ್ ಅವರ ಓದು, ಅಧ್ಯಯನ, ಅಭ್ಯಾಸ, ವಿಮರ್ಶಾ ವಿವೇಕ, ಅನುವಾದದ ರಮಣೀಯತೆ-ಈ ಸಂಕಲನದ ಪುಟಪುಟಗಳಲ್ಲಿಯೂ ಎದ್ದು ಕಾಣುತ್ತದೆ. ಇದೊಂದು ಸಾರ್ಥಕ ಮತ್ತು ಅನುಕರಣಿಯ ಅನುವಾದ.