IFS ಪತಿ ವಿರುದ್ಧ IPS ಅಧಿಕಾರಿ ವರ್ತಿಕಾ ಕಟಿಯಾರ್ ದೂರು ಆಧರಿಸಿ ಎಫ್ಐಆರ್
ಬೆಂಗಳೂರು, ಜೂ. 04: ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಹಾಗೂ ಐಎಫ್ಎಸ್ ಅಧಿಕಾರಿ ನಿತೀನ್ ಸುಭಾಶ್ ಯೊಲಾ ನಡುವಿನ ಕೌಟುಂಬಿಕ ಸಮರ ಮತ್ತೆ ಬೀದಿಗೆ ಬಂದಿದೆ. ತನ್ನ ಪತಿ ಆಸಿಡ್ ದಾಳಿ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆಸಿಡ್ ದಾಳಿ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಐಎಫ್ಎಸ್ ಅಧಿಕಾರಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಈ ಹಿಂದೆ ವರದಕ್ಷಿಣೆ ಕಿರುಕುಳ ಆರೋಪ ಮಾನಸಿಕ ಹಿಂಸೆಗೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ವಿರುದ್ಧ ವರ್ತಿಕಾ ಕಟಿಯಾರ್ ದೂರು ದಾಖಲಿಸಿದ್ದರು.
ಐಎಫ್ಎಸ್ vs ಐಪಿಎಸ್ ಜಗಳ
ದೆಹಲಿಯ ಕೇಂದ್ರ ಸೇವೆಯಲ್ಲಿರುವ ಮಹಾರಾಷ್ಟ್ರ ಮೂಲದ ನಿತೀನ್ ಸುಭಾಶ್ ಯೋಲಾ ಉತ್ತರ ಪ್ರದೇಶ ಮೂಲದ ವರ್ತಿಕಾ ಕಟಿಯಾರ್ ಅವರನ್ನು 2011 ರಲ್ಲಿ ವಿವಾಹ ಆಗಿದ್ದರು. ಐಎಫ್ಎಸ್ ಅಧಿಕಾರಿ ಆಗಿರುವ ನಿತೀಶ್ ಸುಭಾಷ್ ಹಾಗೂ ವರ್ತಿಕಾ ಕಟಿಯಾರ್ ದಂಪತಿಗೆ ಒಂದು ಗಂಡು ಮಗು ಕೂಡ ಇದೆ. ಕೆಲ ವರ್ಷದ ಹಿಂದೆ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಆನಂತರ ಪತಿ ವಿರುದ್ಧ ಗಂಡನ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಐಎಫ್ಎಸ್ ಅಧಿಕಾರಿ ಮತ್ತು ಕುಟುಂಬ ಸದಸ್ಯರ ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ವಿಚಾರಣೆ ವೇಳೆ ನಿತೀಶ್ ಪತ್ನಿ ಮಾಡಿದ್ದ ಆರೋಪ ನಿರಾಧಾರ ಎಂದು ಹೇಳಿಕೆ ನೀಡಿದ್ದರು. ತನ್ನ ಮಗನನ್ನು ನೋಡಲು ಅವಕಾಶ ಕೊಡುತ್ತಿಲ್ಲ ಎಂದು ಆಪಾದನೆ ಮಾಡಿದ್ದರು. ಇಬ್ಬರ ನಡುವಿನ ಕೌಟುಂಬಿಕ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆನಂತರದ ಬೆಳವಣಿಗೆ ಬಳಿಕ ವಿಚ್ಛೇಧನ ಕೋರಿ ವರ್ತಿಕಾ ಕಟಿಯಾರ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ವರ್ತಿಕಾ ಕಟಿಯಾರ್ ದೂರಿನಲ್ಲೇನಿದೆ
ಇದೀಗ ಮೇ. 29 ರಂದು ಐಎಫ್ಎಸ್ ಅಧಿಕಾರಿ ನಿತೀನ್ ವಿರುದ್ಧ ಪತ್ನಿ ವರ್ತಿಕಾ ಕಟಿಯಾರ್ ಮತ್ತೊಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾಳೆ. ತನ್ನ ಗಂಡ ಆಸಿಡ್ ದಾಳಿ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನಗರ ಸಂಶೋಧಣೆ ಹಾಗೂ ತರಬೇತಿ ಕೇಂದ್ರದ ಡಿಸಿಪಿ ಆಗಿರುವ ವರ್ತಿಕಾ ಕಟಿಯಾರ್ ಕಳೆದ. ಮೇ. 28 ರಂದು ತನ್ನ ತಾಯಿ ಹಾಗೂ ಪುತ್ರನ ಜತೆ ವಿಡಿಯೋ ಕಾಲ್ ನಲ್ಲಿದ್ದಳು. ಈ ವೇಳೆ ಆಸಿಡ್ ಹಾಕಿ ಜೀವ ತೆಗೆಯುವುದಾಗಿ ನಿತಿನ್ ಯೋಲಾ ಜೀವ ಬೆದರಿಕೆ ಹಾಕಿದ್ದಾರೆ. ತಾನು ಹಾಕಿರುವ ದೂರುಗಳನ್ನು ವಾಪಸು ಪಡೆಯುವಂತೆ ಬೆದರಿಕೆ ಹಾಕಿ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ. ಮಾತ್ರವಲ್ಲದೇ, ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಮೇ. 29 ರಂದು ಬೆಂಗಳೂರು ನಗರಕ್ಕೆ ಬಂದಿದ್ದು, ಸಿಬ್ಬಂದಿ ಮೂಲಕ ತನ್ನ ಇರುವಿಕೆ ಬಗ್ಗೆ ತಿಳಿದುಕೊಂಡು ಜೀವ ಹಾನಿ ಮಾಡಲು ಯತ್ನಿಸಿರುತ್ತಾರೆ ಎಂದು ವರ್ತಿಕಾ ದೂರಿನಲ್ಲಿ ಆರೋಪಿಸಿದ್ದಾರೆ.
ಯಾವ ಸೆಕ್ಷನ್ ಅಡಿ ಕೇಸು
ನನಗೆ ಜೀವ ಹಾನಿ ಮಾಡುವ ಉದ್ದೇಶದಿಂದ ಬಂದಿರುವ ನಿತೀನ್ ಯೋಲಾ ತನ್ನ ಪೋಷಕರಿಗೆ ಕರೆ ಮಾಡಿ ನನ್ನ ವಿಳಾಸವನ್ನು ನೀಡುವಂತೆಯೂ ಬೆದರಿಕೆ ಹಾಕಿದ್ದಾನೆ. ಸರ್ಕಾರದ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ತನ್ನನ್ನು ಹಿಂಬಾಲಿಸಿಕೊಂಡು ಬಂದ ಪತಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ವಿಧಾನಸೌಧ ಪೊಲೀಸರು ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆ, ಜೀವ ಬೆದರಿಕೆ, ಮಹಿಳೆ ವಿರುದ್ಧ ದೌರ್ಜನ್ಯ ಆರೋಪದಡಿ ಕೇಸು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
Recommended Video
ಐಪಿಎಸ್ ಅಧಿಕಾರಿ ಕುಟುಂಬ ಜಗಳ ಬೀದಿಗೆ
ಈ ಹಿಂದೆ ವರ್ತಿಕಾ ಕಟಿಯಾರ್ ಪತಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರು ದೆಹಲಿ ಪೊಲೀಸರಿಗೆ ವರ್ಗಾವಣೆಯಾಗಿತ್ತು. ತನ್ನ ಮಗನನ್ನು ನೋಡಲು ಪತ್ನಿ ಅವಕಾಶ ನೀಡುತ್ತಿಲ್ಲ. ಈ ಮೂಲಕ ನನ್ನ ಹಕ್ಕುಗಳಿಗೆ ಉಲ್ಲಂಘನೆ ಮಾಡುತ್ತಿದ್ದಾಳೆ ಎಂದು ಆರೋಪಿಸಿ ನಿತೀನ್ ಯೋಲಾ ದೆಹಲಿಯಲ್ಲಿ ಮಾನವ ಹಕ್ಕು ಆಯೋಗದ ಮೊರೆ ಹೋಗಿದ್ದ. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ್ದ ಮಾನವ ಹಕ್ಕು ಆಯೋಗ ವರ್ತಿಕಾ ಕಟಿಯಾರ್ ವಿರುದ್ಧ ಕ್ರಮ ಜರುಗಿಸುವಂತೆ ಶಿಫಾರಸು ಮಾಡಿತ್ತು. ಇದರ ಬೆನ್ನಲ್ಲೇ ವರ್ತಿಕಾ ಕಟಿಯಾರ್ ಮತ್ತೊಂದು ಎಫ್ಐಆರ್ ದಾಖಲಿಸಿದ್ದಾಳೆ.