999 ಮುಖ್ಯ ಪೇದೆಗಳ ವರ್ಗಾವಣೆ: ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ಖಡಕ್ ಆದೇಶ ಮಾಡಿದ್ದು ಯಾಕೆ ?
ಬೆಂಗಳೂರು, ಜು. 24: ಖಡಕ್ ನೀತಿಗಳಿಂದಲೇ ಪೊಲೀಸ್ ಇಲಾಖೆಯಲ್ಲಿ ಸದ್ದು ಮಾಡುತ್ತಿರುವ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಮತ್ತೆ ಸುದ್ದಿಯಾಗಿದ್ದಾರೆ. ಐದು ವರ್ಷದಿಂದ ಇಚ್ಛೆ ಬಂದ ಪೊಲೀಸ್ ಠಾಣೆಗಳಲ್ಲಿ ಠಿಕಾಣಿ ಹೂಡಿದ್ದ 999 ಮುಖ್ಯ ಪೇದೆಗಳ್ನು ಎತ್ತಂಗಡಿ ಮಾಡಿ ಆದೇಶ ಮಾಡಿದ್ದಾರೆ. ಮುಂದಿನ ಎರಡು ದಿನದಲ್ಲಿ ಸೂಚಿತ ಠಾಣೆಗಳಲ್ಲಿ ಕರ್ತವ್ಯಕ್ಕೆ ವರದಿಯಾಗಲು ಸೂಚಿಸಿದ್ದಾರೆ.
ಕಾಲಮಿತಿಯಲ್ಲಿ ಬಡ್ತಿ ಕೊಟ್ಟು ಪೊಲೀಸ್ ಇಲಾಖೆಯಲ್ಲಿ ಫೇಮಸ್
ಬೆಂಗಳೂರಿನಲ್ಲಿ 110 ಕಾನೂನು ಸುವ್ಯವಸ್ಥೆ ಹಾಗೂ 40 ಸಂಚಾರ ವಿಭಾಗದ ಪೊಲೀಸ್ ಠಾಣೆಗಳಿವೆ. ಬಹುತೇಕ ಪೊಲೀಸ್ ಸಿಬ್ಬಂದಿಗೆ ಕಾಲಮಿತಿಯಲ್ಲಿ ಬಡ್ತಿ ಸಿಗದೇ ನರಕ ಅನುಭವಿಸುತ್ತಿದ್ದರು. ಮಿಗಿಲಾಗಿ ಶಿಸ್ತಿನ ಇಲಾಖೆ ಕಾರಣಕ್ಕೆ ಅನ್ಯಾಯವನ್ನು ಯಾರೂ ಕೇಳುವಂತಿರಲಿಲ್ಲ. ಬಡ್ತಿ ಅವಧಿ ಮೀರಿ ವರ್ಷಗಳು ಕಳೆದರೂ ಪೊಲೀಸ್ ಕಾನ್ ಸ್ಟೇಬಲ್ ಗಳಿಗೆ ಬಡ್ತಿ ಸಿಗುತ್ತಿರಲಿಲ್ಲ. ಈ ಅನ್ಯಾಯದ ವಿರುದ್ಧ ಪೊಲೀಸರು ಧ್ವನಿಯೆತ್ತುವ ಸ್ಥಿತಿಯಲ್ಲಿ ಇರಲಿಲ್ಲ. ದಕ್ಷ ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ಆಡಳಿತ ವಿಭಾಗದ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದೇ ಒಂದು ದಿನವೂ ತಡವಾಗದಂತೆ ಬಡ್ತಿ ನೀಡಿದ್ದರು. ಶಿಸ್ತುಬದ್ಧವಾಗಿ ವರ್ಗಾವಣೆ ಮಾಡುತ್ತದ್ದರು. ಪ್ರಭಾವಿಗಳ ಶಿಫಾರಸು ಪತ್ರಗಳಿಗೆ ಹಾಗೂ ಹಿರಿಯ ಅಧಿಕಾರಿಗಳ ಶಿಫಾರಸುಗಳಿಗೆ ಸೊಪ್ಪು ಹಾಕುತ್ತಿರಲಿಲ್ಲ. ಬಡ್ತಿಗಾಗಿ ಪರದಾಡುತ್ತಿದ್ದ ಪೊಲೀಸ್ ವಲಯದಲ್ಲಿ ನಿಜಾ ಜೇಮ್ಸ್ ಬಗ್ಗೆ ದೊಡ್ಡ ಚರ್ಚೆಗೆ ನಾಂದಿ ಹಾಡಿತು.
999 ಮುಖ್ಯ ಪೇದೆಗಳ ವರ್ಗಾವಣೆ
ಪೊಲೀಸ್ ಠಾಣೆಗಳಲ್ಲಿ ದೀರ್ಘಕಾಲ ಇರುವುದರಿಂದ ಪೊಲೀಸ್ ಸಿಬ್ಬಂದಿ ಅಪರಾಧ ಚಟುವಟಿಕೆಗಳಿಗೆ ಅವಕಾಶ ಕೊಟ್ಟು ಆದಾಯದ ಮೂಲ ಮಾಡಿಕೊಳ್ಳುವುದು ಸಾಮಾನ್ಯ. ಇದರಿಂದ ನ್ಯಾಯ ಸಮ್ಮತವಾಗಿ ಕೆಲಸ ಮಾಡಲು ಸಾಧ್ಯ. ಇತ್ತೀಚೆಗೆ ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳು ಜಾಸ್ತಿಯಾಗಿ ವರದಿಯಾದವು. ಅಪರಾಧ ಚಟುವಟಿಕೆ ನಿಯಂತ್ರಿಸಲು ಬೆಂಗಳೂರು ನಗರ ಪೊಲೀಸರು ಸರ್ಕಸ್ ಮಾಡುತ್ತಿದ್ದಾರೆ. ಇದೇ ಅವಧಿಯಲ್ಲಿ ಐದು ವರ್ಷದಿಂದ ಹೆಚ್ಚು ಕಾಲ ಒಂದೇ ಕಡೆ ಠಿಕಾಣಿ ಹೂಡಿದ್ದ 999 ಮುಖ್ಯ ಪೇದೆಗಳನ್ನು ಬೇರೆ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಎರಡು ದಿನದಲ್ಲಿ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಿದ್ದಾರೆ. ರಾಜಕಾರಣಿಗಳು, ಹಿರಿಯ ಅಧಿಕಾರಿಗಳ ಯಾರ ಪ್ರಭಾವ, ಶಿಫಾರಸು ಪತ್ರಗಳಿಗೂ ಕಿಮ್ಮತ್ತು ಇಲ್ಲ.
ಪೊಲೀಸರ ವರ್ಗಾವಣೆಯಿಂದ ಏನು ಪ್ರಯೋಜನ
ಒಂದೇ ಪೊಲೀಸ್ ಠಾಣೆಯಲ್ಲಿ ಪೇದೆಗಳು ಠಿಕಾಣಿ ಹೂಡುವುದರಿಂದ ಆ ಪ್ರದೇಶದಲ್ಲಿ ಜನರ ಸಂಪರ್ಕ ಬೆಳಸಿ ಒತ್ತಡಗಳಿಗೆ ಮಣಿಯುತ್ತಾರೆ. ಶಿಸ್ತು ಬದ್ಧವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಭ್ರಷ್ಟಾಚಾರಕ್ಕೆ ನಾಂದಿಗೆ ಕಾರಣವಾಗುತ್ತದೆ. ಮಿಗಿಲಾಗಿ ಬೇರೆ ಸಿಬ್ಬಂದಿಗೂ ಅನ್ಯಾಯವಾಗುತ್ತದೆ. ಸ್ಥಳೀಯ ರಾಜಕಾರಣ ಪ್ರಾಭಾವಕ್ಕೆ ಮಣಿಯುವುದು ಹೀಗೆ ನಾನಾ ಸಮಸ್ಯೆಗಳು ಎದುರಾಗುವುದು ಸಹಜ. ಹೀಗಾಗಿಯೇ ಬೆಂಗಳೂರಿನ ಠಾಣೆಗಳಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಯನ್ನು ಕನಿಷ್ಠ 1 ವರ್ಷ, ಗರಿಷ್ಠ 2 ವರ್ಷದೊಳಗೆ ಕಡ್ಡಾಯ ವರ್ಗಾವಣೆಯಾಗಬೇಕು. ಅದೇ ರೀತಿ ಇದೀಗ ಪೊಲೀಸ್ ಸಿಬ್ಬಂದಿಗೂ ಅನ್ವಯ ಆಗುವಂತೆ ವರ್ಗಾವಣೆ ಮಾಡಿ ಆದೇಶಿಸುವ ಮೂಲಕ ಪೊಲೀಸ್ ಠಾಣೆಗಳನ್ನು ಪ್ರಭಾವ ರಹಿತ ಠಾಣೆಗಳನ್ನಾಗಿ ಮಾಡಲು ವರ್ಗಾವಣೆ ಅನಿವಾರ್ಯ.
Recommended Video
ಯಾರು ಈ ನಿಶಾ ಜೇಮ್ಸ್
ತಪ್ಪು ಇದ್ದರೆ ಅದು ಯಾವುದೇ ಅಧಿಕಾರಿಯಿದ್ದರೂ ಅವರ ಮಾತು- ಶಿಫಾರಸುಗೆ ಬೆಲೆ ಕೊಡಲ್ಲ. ಕಾನೂನು ಚೌಕಟ್ಟು ಮೀರಿ ಒಂದು ಸಹಿ ಹಾಕಲ್ಲ. ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವಿಭಾದ ಆಡಳಿತಾತ್ಮಕ ವಿಭಾಗದಲ್ಲಿ ಡಿಸಿಪಿಯಾಗಿರುವ ನಿಜಾ ಜೇಮ್ಸ್ ಪೊಲೀಸ್ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಪ್ರಾಮಾಣಿಕತೆ ಹಾಗೂ ದಕ್ಷತೆ ಮೂಲಕ ಪೊಲೀಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಕೇರಳಾ ಮೂಲದ ನಿಶಾ ಜೇಮ್ಸ್ 2013 ನೇ ಬ್ಯಾಚ್ ಐಪಿಎಸ್ ಅಧಿಕಾರಿ. ಚಿತ್ರದುರ್ಗ , ಶಿವಮೊಗ್ಗದಲ್ಲಿ ಎಎಸ್ಪಿಯಾಗಿದ್ದ ನಿಶಾ ಅವರು ಉಡುಪಿ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಬೆಂಗಳೂರು ವೈರಲೆಸ್ ವಿಭಾಗದ ಎಸ್ಪಿಯಾಗಿ ಸೇವೆ ಸಲ್ಲಿಸಿ ಇದೀಗ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಆಡಳಿತ ವಿಭಾಗದ ಡಿಸಿಪಿಯಾಗಿ ಕಾರ್ಯ ನಿರ್ವ ಹಿಸುತ್ತಿದ್ದಾರೆ.