IPS ನಿಶಾ ಜೇಮ್ಸ್ ಖಡಕ್ ನೀತಿಗೆ ಬೆಂಗಳೂರು ಪೊಲೀಸರು ಫುಲ್ ಖುಷ್
ಬೆಂಗಳೂರು, ಮೇ. 24 : ಯಾರ ಶಿಫಾರಸು ಪತ್ರಕ್ಕೂ ಸೊಪ್ಪು ಹಾಕಲ್ಲ! ರೂಲ್ ಏನು ಹೇಳುತ್ತೋ ಅದೇ ಫೈನಲ್. ಅಪ್ಪಿ ತಪ್ಪಿ ಜನ ಪ್ರತಿನಿಧಿಗಳಿಂದಲೂ, ಬೇರೆ ಪ್ರಭಾವಿಗಳಿಂದ ಶಿಫಾರಸು ಮಾಡಿಸಿದರೆ ಆ ಕೆಲಸ ಖಂಡಿತ ಆಗಲ್ಲ! ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ಅವರ ಖಡಕ್ ನೀತಿಯಿಂದಾಗಿ ಬೆಂಗಳೂರು ಸಿಟಿ ಪೊಲೀಸರು ಫುಲ್ ಖುಷಿಯಾಗಿದ್ದಾರೆ.
ಬೆಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಆಡಳಿತ ವಿಭಾಗದ ಎಸ್ಪಿಯಾಗಿರುವ ನಿಜಾ ಜೇಮ್ಸ್ ದಕ್ಷ ಆಡಳಿತ ನೀತಿಯಿಂದಾಗಿ ಪೊಲೀಸ್ ಸಿಬ್ಬಂದಿ ಸಂತಸದಲ್ಲಿ ತೇಲಾಡುತ್ತಿದ್ದಾರೆ. ಬಡ್ತಿಗಾಗಿ ಪರದಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಇದೀಗ ಒಂದು ದಿನವೂ ತಡವಾಗದಂತೆ ಬಡ್ತಿ ಪಡೆದುಕೊಳ್ಳುತ್ತಿದ್ದಾರೆ. ಸರ್ವರು ಸಮಾನರು ಎಂಬ ತತ್ವದಡಿ ಪೋಸ್ಟಿಂಗ್. ನಿಶಾ ಜೇಮ್ಸ್ ಆಡಳಿತ ವಿಭಾಗದ ಎಸ್ಪಿಯಾಗಿ ಬಂದಾಗಿನಿಂತ ನೂರಾರು ಪೊಲೀಸ್ ಕಾನ್ಸ್ಟೇಬಲ್ ಒಂದು ದಿನವೂ ತಡವಾಗದಂತೆ ಬಡ್ತಿ ಪಡೆದುಕೊಂಡಿದ್ದಾರೆ. ಬಡ್ತಿ ಪಡೆದವರು ನ್ಯಾಯ ಸಮ್ಮತ ಪೋಸ್ಟಿಂಗ್ ಪಡೆದುಕೊಳುತ್ತಿದ್ದಾರೆ. ಈ ವಿಷಯ ಇದೀಗ ಪೊಲೀಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ನಮ್ಮ ಇಲಾಖೆ ಗೊತ್ತು ಅಲ್ವಾ ಸರ್. ಯಾರದ್ದೋ ಶಿಫಾರಸು ಪತ್ರ ತೆಗೆದುಕೊಂಡು ಹೋದವರಿಗೆ ಬೇಗ ಬಡ್ತಿ ಸಿಗುತ್ತದೆ. ಬಯಸಿದರೆ ಅದೇ ಪೊಲೀಸ್ ಠಾಣೆಯಲ್ಲಿಯೇ ಕೆಲಸ ಮುಂದುವರಸುತ್ತಾರೆ. ಇನ್ನೂ ಕೆಲವರಿಗೆ ಬಡ್ತಿ ಅವಧಿ ಮುಗಿದರೂ ಆದೇಶದ ಪ್ರತಿ ಸಿಗುತ್ತಿರಲಿಲ್ಲ. ಆದರೆ ನಿಜಾ ಜೇಮ್ಸ್ ಬಂದ ಮೇಲೆ ಒಂದು ದಿನವೂ ತಡವಾಗುತ್ತಿಲ್ಲ. ಬಹುಶಃ ನನ್ನ ಅರಿವಿಗೆ ಬಂದಹಾಗೆ 500 ಪೊಲೀಸ್ ಸಿಬ್ಬಂದಿಗೆ ಬಡ್ತಿ ಆದೇಶ ನೀಡಿರಬಹುದು. ಬಡ್ತಿ ಪಡೆಯಬೇಕು, ಒಬ್ಬೇ ಒಬ್ಬ ಪೊಲೀಸ್ ಕಾನ್ ಸ್ಟೇಬಲ್ ಕೂಡ ಅದೇ ಪೊಲೀಸ್ ಸ್ಟೇಷನ್ನಲ್ಲಿ ಇರಲಿಕ್ಕೆ ಅವಕಾಶ ಕೊಡುವುದಿಲ್ಲ. ಅವರ ಪ್ರಾಮಾಣಿಕ ಮತ್ತು ದಕ್ಷ ಕಾರ್ಯಶೈಲಿಯಿಂದಾಗಿ ಪೊಲೀಸ್ ಕಮೀನಷರೇಟ್ ವ್ಯಾಪ್ತಿಯಲ್ಲಿ ಇದೇ ಮೊದಲ ಭಾರಿಗೆ ಪೊಲೀಸ್ ಸಿಬ್ಬಂದಿಗೆ ತ್ವರಿತ ಬಡ್ತಿ ಸಿಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಹೆಡ್ ಕಾನ್ ಸ್ಟೇಬಲ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಎಲ್ಲದಕ್ಕೂ ಕಡಿವಾಣ: ಎಲ್ಲರಿಗೂ ನ್ಯಾಯ ಬದ್ಧವಾಗಿ ಇರುವ ಪೋಸ್ಟಿಂಗ್ ಆಯ್ಕೆ ಮಾಡಿಕೊಳ್ಳಬೇಕೇ ವಿನಃ, ಪೊಲೀಸ್ ಸಿಬ್ಬಂದಿ ಇಷ್ಟ ಪಟ್ಟು ಹೋಗುವುದು, ಪ್ರಭಾವಿಗಳಿಂದ ಶಿಫಾರಸು ತರುವುದಕ್ಕೆ ಬ್ರೇಕ್ ಬಿದ್ದಿದೆ. ನಿಶಾ ಜೇಮ್ಸ್ ಅವರ ಕಾರ್ಯ ಶೈಲಿ ನೋಡಿ ಶಿಫಾರಸು ಪತ್ರ ತರಲಿಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮುಜುಗರ. ನಿಯಮ ಬಿಟ್ಟು ಒಂದು ಕಡ್ಡಿಯಾಡಲೂ ಅವಕಾಶ ಕೊಡುತ್ತಿಲ್ಲ. ಯಾವ ಶಿಫಾರಸು ಪತ್ರಕ್ಕೂ ಸೊಪ್ಪು ಹಾಕುವುದಿಲ್ಲ. ಯಾವ ಹಿರಿಯ ಅಧಿಕಾರಿ ಹೇಳಿದರೂ ಕಾನೂನು ಮೀರಿ ಒಂದು ಸಣ್ಣ ಕೆಲಸವೂ ಅವರು ಮಾಡುವುದಿಲ್ಲ. ಪೊಲೀಸರ ವರ್ಗಾವಣೆ, ಬಡ್ತಿ ವಿಚಾರದಲ್ಲಿ ಒಂದು ದಿನವೂ ತಡವಾಗುವುದಿಲ್ಲ. ಕಾಲಮಿತಿಯೊಳಗೆ ಬಡ್ತಿ ಮತ್ತು ಪೋಸ್ಟಿಂಗ್ ಸಿಗುತ್ತಿರುವ ಕಾರಣಕ್ಕೆ ಪೊಲೀಸ್ ಸಿಬ್ಬಂದಿ ವಲಯದಲ್ಲಿ ನಿಶಾ ಜೇಮ್ಸ್ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.
ಈ ಹಿಂದೆ ವರ್ಷಾನುಗಟ್ಟಲೇ ಸೇವೆ ಸಲ್ಲಿಸಿದರೂ ಸೂಕ್ತ ಕಾಲಕ್ಕೆ ಬಡ್ತಿ ಸಿಗುತ್ತಿರಲಿಲ್ಲ. ಬಡ್ತಿ ಸಿಕ್ಕಿದರೂ ಪಾರದರ್ಶಕವಾಗಿ ನಿಯೋಜನೆ ಆಗುತ್ತಿರಲಿಲ್ಲ. ಯಾರದ್ದೋ ರಾಜಕಾರಣಿಯ ಮುಲಾಜಿಗೆ ಒಳಗಾಗಿ ಬಡ್ತಿ ಪಡೆದ ಪೊಲೀಸ್ ಸಿಬ್ಬಂದಿ ಅದೇ ಪೊಲೀಸ್ ಠಾಣೆಯಲ್ಲಿಯೇ ಕೆಲಸ ಮುಂದುವರೆಸುತ್ತಿದ್ದರು. ಇನ್ನು ಕೆಲವರು ಎಲ್ಲಿಗೂ ನಿಯೋಜನೆಗೊಳ್ಳುತ್ತಿದ್ದರು. ಈಗ ಬಡ್ತಿ ಪಡೆದವರ ಮುಂದೆ, ನಿಯೋಜನೆಯಾಗಬೇಕಿರುವ ಖಾಲಿ ಹುದ್ದೆಗಳ ಪಟ್ಟಿಯನ್ನು ತೋರಿಸಿ ಅದಕ್ಕೆ ಅನುಗುಣವಾಗಿ ಎಸ್ಪಿ ಆಡಳಿತ ಅವರೇ ನಿಯೋಜನೆ ಮಾಡುತ್ತಾರೆ. ನಿಶಾ ಜೇಮ್ಸ್ ಅವರ ಕಾರ್ಯಶೈಲಿ ಪೊಲೀಸ್ ವಲಯದಲ್ಲಿ ಸದ್ದಿಲ್ಲದೇ ಸಂಚಲನ ಮೂಡಿಸಿದ್ದಾರೆ .
Recommended Video
ಯಾರು ನಿಶಾ ಜೇಮ್ಸ್: ಕೇರಳ ಮೂಲದ ನಿಶಾ ಜೇಮ್ಸ್ 2013 ನೇ ಬ್ಯಾಚ್ ಐಪಿಎಸ್ ಅಧಿಕಾರಿ. ಚಿತ್ರದುರ್ಗ, ಶಿವಮೊಗ್ಗದಲ್ಲಿ ಅಡಿಷನಲ್ ಎಸ್ಪಿಯಾಗಿದ್ದ ನಿಶಾ ಜೇಮ್ಸ್ ಉಡುಪಿ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಆನಂತರ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿಯೂ ಸೇವೆ ಸಲ್ಲಿಸಿದ್ದರು. ಇದೀಗ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಆಡಳಿತ ವಿಭಾಗದ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಶಾ ಜೇಮ್ಸ್ ಅವರ ಖಡಕ್ ನೀತಿ ಪೊಲೀಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.