ಬೀದಿಗೆ ಬಂದ ಐಪಿಎಸ್ ಅಧಿಕಾರಿ ದಂಪತಿ ಕಲಹ, ಪತ್ನಿ ಮನೆ ಮುಂದೆ ಧರಣಿ: ವಿಡಿಯೋ
Recommended Video
ಬೆಂಗಳೂರು, ಫೆಬ್ರವರಿ 10: ಪ್ರೀತಿಸಿ ಮದುವೆಯಾದ ಐಪಿಎಸ್ ಅಧಿಕಾರಿ ದಂಪತಿಯ ಕೌಟುಂಬಿಕ ಕಲಹ ಬೀದಿಗೆ ಬಂದಿದೆ. ಮಗಳನ್ನು ನೋಡಲು ಅವಕಾಶ ನೀಡದ ಐಪಿಎಸ್ ಅಧಿಕಾರಿ ಪತ್ನಿಯ ಮನೆ ಎದುರೇ ವಿರುದ್ಧ ಐಪಿಎಸ್ ಅಧಿಕಾರಿ ಪತಿ ಪ್ರತಿಭಟನೆ ನಡೆಸಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ವಿವಿಐಪಿ ಭದ್ರತಾ ಡಿಸಿಪಿಯಾಗಿರುವ ಇಲಾಕಿಯಾ ಕರುಣಾಕರನ್ ಮತ್ತು ಕಲಬುರಗಿ ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಎಸ್ಪಿಯಾಗಿರುವ ಅರುಣ್ ರಂಗರಾಜನ್ ಪ್ರೀತಿಸಿ ಮದುವೆಯಾಗಿದ್ದರು. ಪತ್ನಿ ಇಲಕಿಯಾ ಅವರ ಮನೆಯ ಮುಂದೆ ಭಾನುವಾರ ಸಂಜೆ ಧರಣಿ ಕುಳಿತ ಅರುಣ್ ರಂಗರಾಜನ್, ಮಗಳನ್ನು ನೋಡಲು ತಮಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನೂತನ ಡಿಜಿ & ಐಜಿಪಿಯಾಗಿ ಪ್ರವೀಣ್ ಸೂದ್ ಅಧಿಕಾರ ಸ್ವೀಕಾರ
ಐಪಿಎಸ್ ಅಧಿಕಾರಿ ದಂಪತಿ ಸಂಬಂಧ ಈ ಹಿಂದೆಯೂ ಹಳಸಿತ್ತು. ಇಬ್ಬರೂ ವೈವಾಹಿಕ ಸಂಬಂಧ ಕಡಿದುಕೊಂಡಿದ್ದರು. ಆದರೆ ಮತ್ತೆ ಒಂದಾಗಿದ್ದರು. ಬಳಿಕ ಇಬ್ಬರಿಗೂ ಹೆಣ್ಣುಮಗು ಜನಿಸಿತ್ತು. ಇದರ ನಂತರ ಅವರ ನಡುವೆ ಮತ್ತೆ ವೈಮನಸ್ಸು ಮೂಡಿದೆ ಎನ್ನಲಾಗಿದ್ದು, ಮಗಳನ್ನು ನೋಡಲು ಪತ್ನಿ ಬಿಡುತ್ತಿಲ್ಲ ಎಂದು ಅರುಣ್ ಪ್ರತಿಭಟನೆ ನಡೆಸಿದ್ದಾರೆ.
ಸಂಧಾನದ ಬಳಿಕ ಮತ್ತೆ ಜಗಳ
ಪ್ರೀತಿಸಿ ಮದುವೆಯಾಗಿದ್ದರೂ ಕೌಟುಂಬಿಕ ಕಲಹದ ಕಾರಣ ಈ ದಂಪತಿ ಬೇರೆಯಾಗಿದ್ದರು. ನ್ಯಾಯಾಲಯದ ಮೆಟ್ಟಿಲೇರಿ ವಿಚ್ಛೇದನ ಕೂಡ ಪಡೆದುಕೊಂಡಿದ್ದರು. ನಂತರ ಕೆಲವು ಸಮಯ ದೂರವಾಗಿದ್ದ ಅವರು, ಕುಟುಂಬದ ಹಿರಿಯರು ನಡೆಸಿದ ಸಂಧಾನದ ಬಳಿಕ ಒಂದಾಗಿ ಜತೆಯಲ್ಲಿ ವಾಸವಾಗಿದ್ದರು. ಈ ನಡುವೆ ಅವರಿಗೆ ಹೆಣ್ಣು ಮಗು ಜನಿಸಿತ್ತು. ಆದರೆ ಇಬ್ಬರ ನಡುವಿನ ಜಗಳ ಈಗ ಮತ್ತೆ ಬೀದಿಗೆ ಬಂದಿದೆ.
ಮಗಳನ್ನು ನೋಡಲು ಬಂದಿದ್ದರು
ಕೆಲವು ತಿಂಗಳ ಹಿಂದಷ್ಟೇ ಅರುಣ್ ಅವರನ್ನು ಕಲಬುರಗಿಗೆ ವರ್ಗಾವಣೆ ಮಾಡಲಾಗಿತ್ತು. ಭಾನುವಾರ ಕರ್ತವ್ಯಕ್ಕೆ ರಜೆ ಇದ್ದಿದ್ದರಿಂದ ಅವರು ಮಗಳನ್ನು ನೋಡಲು ಬೆಂಗಳೂರಿನ ವಸಂತ ನಗರದಲ್ಲಿರುವ ಪತ್ನಿ ಇಲಾಕಿಯಾ ಮನೆಗೆ ಹೋಗಿದ್ದರು. ಆದರೆ ಅವರನ್ನು ಒಳಗೆ ಸೇರಿಸದೆ ಬಾಗಿಲು ಹಾಕಿಕೊಳ್ಳಲಾಗಿತ್ತು ಎನ್ನಲಾಗಿದೆ. ಇದರಿಂದ ಬೇಸರಗೊಂಡ ಅರುಣ್, ಮನೆ ಎದುರಿನ ಫುಟ್ಪಾತ್ ಮೇಲೆಯೇ ಧರಣಿ ಕುಳಿತಿದ್ದರು.
ಕರ್ನಾಟಕ: 2020ರಲ್ಲಿ ನಿವೃತ್ತರಾಗಲಿರುವ 12 ಐಪಿಎಸ್ ಅಧಿಕಾರಿಗಳು
ಛತ್ತೀಸಗಡದಿಂದ ವರ್ಗಾವಣೆಗೆ ಪ್ರಯತ್ನ
'ನಾವಿಬ್ಬರೂ ಛತ್ತೀಸಗಡದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಪ್ರೀತಿಸಿ ಮದುವೆಯಾಗಿದ್ದೆವು. ಆದರೆ ಅಲ್ಲಿ ಆಕೆಗೆ ಕೆಲಸ ಮಾಡಲು ಇಷ್ಟವಿರಲಿಲ್ಲ. ಕರ್ನಾಟಕಕ್ಕೆ ವರ್ಗಾವಣೆ ಮಾಡಿಕೊಳ್ಳೋಣ ಎಂದು ಹೇಳಿದ್ದಳು. ಅದರೆ ನನಗೆ ಅದು ಇಷ್ಟವಿರಲಿಲ್ಲ. ಅಲ್ಲಿನ ಸರ್ಕಾರಕ್ಕೆ ನನ್ನ ಹೆಸರಿನಲ್ಲಿಯೇ ಪತ್ರ ಬರೆದು, ತಾನೇ ಸಹಿ ಮಾಡಿ ಕಳುಹಿಸಿದ್ದಳು. ಆದರೆ ಸರ್ಕಾರ ವರ್ಗಾವಣೆ ಸಾಧ್ಯವಿಲ್ಲ ಎಂದು ತಿಳಿಸಿತ್ತು. ಈ ವಿಚಾರವಾಗಿ ನಮ್ಮ ನಡುವೆ ಜಗಳ ಶುರುವಾಗಿತ್ತು. ಆ ಜಗಳವೇ ನನ್ನನ್ನು ಈಗ ಬೀದಿಗೆ ತಂದು ನಿಲ್ಲಿಸಿದೆ' ಎಂದು ಅರುಣ್ ಅಳಲು ತೋಡಿಕೊಂಡರು.
ಒತ್ತಡ ಹೇರಿ ವರ್ಗಾವಣೆ ಮಾಡಿಸಿದ್ದರು
'ವರ್ಗಾವಣೆ ವಿಚಾರವಾಗಿ ಸಂಬಂಧಿಕರು ಮತ್ತು ಸ್ನೇಹಿತರ ಮೂಲಕ ನನ್ನನ್ನು ಒಪ್ಪಿಸಿದ್ದಳು. ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಇಬ್ಬರನ್ನೂ ಕರ್ನಾಟಕಕ್ಕೆ ವರ್ಗಾವಣೆಯಾಗುವಂತೆ ಮಾಡಿದ್ದಳು. ಇಲ್ಲಿಗೆ ಬಂದ ಬಳಿಕ ಇಬ್ಬರಿಗೂ ವಿಚ್ಛೇದನವಾಗಿತ್ತು. ನಾವಿಬ್ಬರು ದೂರವಾದ ಸಂದರ್ಭದಲ್ಲಿ ನನ್ನ ಒಪ್ಪಿಗೆ ಇಲ್ಲದ ಗರ್ಭಪಾತ ಮಾಡಿಸಿಕೊಂಡಿದ್ದಳು. ಮತ್ತೆ ಒಂದಾದಾಗ ಮಗು ಮಾಡಿಕೊಂಡಿದ್ದೆವು' ಎಂದು ಅಲವತ್ತುಕೊಂಡರು.
'ಪತ್ನಿ ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾಳೆ. ಮಗಳನ್ನು ಸಹ ನೋಡಲು ಬಿಡುತ್ತಿಲ್ಲ. ಹಿರಿಯ ಅಧಿಕಾರಿಗಳಿಗೆ ಹೇಳಿ ಆಕೆಯೇ ನನ್ನನ್ನು ಕಲಬುರಗಿಗೆ ವರ್ಗಾವಣೆ ಮಾಡಿಸಿದ್ದಾಳೆ. ಇಂದು ಕೂಡ ನನ್ನನ್ನು ಮನೆ ಒಳಗೆ ಸೇರಿಸದೆ ಅವಮಾನ ಮಾಡಿದ್ದಾಳೆ' ಎಂದು ಆರೋಪಿಸಿದರು.
|
ತಡರಾತ್ರಿ ಧರಣಿ ಕೈಬಿಟ್ಟ ಅರುಣ್
ಅರುಣ್ ಅವರ ಮನವೊಲಿಸಲು ಹೈಗ್ರೌಂಡ್ಸ್ ಠಾಣೆ ಪೊಲೀಸರು ಪ್ರಯತ್ನಿಸಿದರೂ ಫಲಕೊಡಲಿಲ್ಲ. ರಸ್ತೆಯಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ, ಏಳಿ ಎಂದು ಮನವಿ ಮಾಡಿದರೂ ಅರುಣ್ ಜಗ್ಗಲಿಲ್ಲ. ನಾನು ಮಗಳನ್ನು ನೋಡಿಯೇ ವಾಪಸ್ ಹೋಗುವುದು. ಅದಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳಿದರು. ಅತ್ತ ಇಲಾಕಿಯಾ ಕೂಡ ಪೊಲೀಸರ ಮನವಿಗೆ ಸ್ಪಂದಿಸಲಿಲ್ಲ. ತಡರಾತ್ರಿವರೆಗೂ ಧರಣಿ ನಡೆಸಿದ ಅರುಣ್, ಕೊನೆಗೆ ಡಿಸಿಪಿ ಭೀಮಾಶಂಕ್ ಗೂಳೇದ ಅವರ ಮನವೊಲಿಕೆಯಿಂದ ಧರಣಿ ಕೈಬಿಟ್ಟರು.