47 ದಿನದಲ್ಲೇ ವರ್ಗಾವಣೆ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲಿರುವ ಅಲೋಕ್ ಕುಮಾರ್
ಬೆಂಗಳೂರು, ಆಗಸ್ಟ್ 02: ಬೆಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ನೇಮಕವಾದ ಕೇವಲ 47 ದಿನದಲ್ಲೇ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಸರ್ಕಾರದ ಕ್ರಮದ ವಿರುದ್ಧ ಕೋರ್ಟ್ ಮೆಟ್ಟಿಲೇರುವ ನಿರ್ಣಯವನ್ನು ಅವರು ಮಾಡಿದ್ದಾರೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಅಲೋಕ್ ಕುಮಾರ್ ಅವರಿಗೆ ಬಡ್ತಿ ನೀಡಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ನೇಮಕ ಮಾಡಲಾಗಿತ್ತು. ಆದರೆ ಈಗ ಯಡಿಯೂರಪ್ಪ ಅವರ ಸರ್ಕಾರ ಬಂದಿದ್ದು, ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ವಾರದ ಒಳಗೆ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಐಪಿಎಸ್ ಅಧಿಕಾರಿಗಳ ಮೇಲೆ ಮತ್ತೆ ಸರ್ಕಾರದ ಕಣ್ಣು: 6 ಮಂದಿ ವರ್ಗಾವಣೆ
ಐಪಿಎಸ್ ಅಧಿಕಾರಿಗಳನ್ನು ಕನಿಷ್ಟ ಒಂದು ವರ್ಷ ನಿಖರ ಕಾರಣ ಇಲ್ಲದೆ ವರ್ಗಾವಣೆ ಮಾಡುವಂತಿಲ್ಲ ಎಂದು ನಿಯಮಗಳು ಹೇಳುತ್ತವೆ, ಹಾಗಾಗಿ ತಮ್ಮ ವರ್ಗಾವಣೆಯನ್ನು ಖಂಡಿಸಿ ಅಲೋಕ್ ಕುಮಾರ್ ಅವರು ಸಿಎಟಿ ಗೆ ಅರ್ಜಿ ಹಾಕಲು ಚಿಂತಿಸಿದ್ದಾರೆ.
ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರ ಆಡಳಿತದಲ್ಲಿದ್ದಾಗ, ಹಾಸನ ಡಿಸಿ ಆಗಿದ್ದ ರೋಹಿಣಿ ಸಿಂಧೂರಿ ಅವರನ್ನು ಅವಧಿಗೆ ಮುನ್ನಾ ವರ್ಗಾವಣೆ ಮಾಡಿದ್ದಾಗ ಅವರೂ ಸಹ ಸಿಎಟಿಗೆ ಮೊರೆ ಹೋಗಿ ಜಯಶೀಲರಾಗಿದ್ದರು. ಈಗ ಅಲೋಕ್ ಕುಮಾರ್ ಅವರೂ ಸಹ ಅದೇ ಹಾದಿ ಹಿಡಿಯಲಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಗಾವಣೆ
ಅಲೋಕ್ ಕುಮಾರ್ ಅವರನ್ನು ಕಮೀಷನರ್ ಸ್ಥಾನಕ್ಕೆ ನೇಮಿಸಿದಾಗ, 'ಬಡ್ತಿ ನೀಡಿದ ತಕ್ಷಣ ಮಹತ್ವದ ಹುದ್ದೆಗೆ ನೇಮಕ ಮಾಡುವ ಪರಿಪಾಠ ಇಲ್ಲವೆಂದು' ಹಿರಿಯ ಐಪಿಎಸ್ ಅಧಿಕಾರಿಗಳಾದ ಭಾಸ್ಕರ ರಾವ್ ಮತ್ತು ಅಲೋಕ್ ಮೋಹನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಇದೇ ಭಾಸ್ಕರ್ ರಾವ್ ಅವರು ಅಲೋಕ್ ಕುಮಾರ್ ಅವರ ಸ್ಥಾನಕ್ಕೆ ನೇಮಕವಾಗಿದ್ದಾರೆ.