ಅಕ್ರಮ ಪಿಸ್ತೂಲು ಜಾಲ: ಕೆ.ಆರ್. ಮಾರ್ಕೆಟ್ ಪೊಲೀಸರ ಸೀಕ್ರೆಟ್ ಆಪರೇಷನ್
ಬೆಂಗಳೂರು, ಮಾರ್ಚ್ 01 : ವ್ಯಕ್ತಿಯೊಬ್ಬ ಹೊಂದಿದ್ದ ಅಕ್ರಮ ಪಿಸ್ತೂಲಿನ ಜಾಡು ಹಿಡಿದು ತನಿಖೆ ನಡೆಸಿದ ಕೆ.ಆರ್. ಮಾರ್ಕೆಟ್ ಠಾಣೆ ಪೊಲೀಸರು ಸತತು ಒಂದೂವರೆ ತಿಂಗಳಲ್ಲಿ ಮಾರು ವೇಷದ ಕಾರ್ಯಚರಣೆ ನಡೆಸಿ ಐದು ರಾಜ್ಯಗಳ ನಡುವೆ ಹಬ್ಬಿರುವ ಅಕ್ರಮ ಪಿಸ್ತೂಲು ಮಾರಾಟ ಜಾಲ ಬಯಲಿಗೆ ಎಳೆದಿದ್ದಾರೆ.
ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಜೀವಂತವಾಗಿರುವ ಅಕ್ರಮ ಪಿಸ್ತೂಲು ಡೀಲಿಂಗ್ ಲಿಂಕ್ ನ್ನು ಹೊರಗೆಳೆದಿದ್ದಾರೆ. ಎಂಟು ಮಂದಿ ಆರೋಪಿಗಳನ್ನು ಬಂಧಿಸಿ ಹದಿಮೂರು ಪಿಸ್ತೂಲು ವಶಪಡಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೂ, ಪಿಸ್ತೂಲ್ ಡೀಲಿಂಗ್ ಲಿಂಕ್ ಇರುವ ಆಘಾತಕಾರಿ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಿಗೆ ಬಂದಿದೆ.
ಹೋಟೆಲ್ ಕೋನಾರ್ಕ್ ನಲ್ಲಿ ಯುವಕನೊಬ್ಬ ಅಕ್ರಮವಾಗಿ ಪಿಸ್ತೂಲು ಡೀಲಿಂಗ್ ಮಾಡುತ್ತಿದ್ದಾನೆ ಎಂಬ ಸುಳಿವು ಕೆ.ಆರ್. ಮಾರ್ಕೆಟ್ ಠಾಣೆ ಪೊಲೀಸರಿಗೆ ಸಿಕ್ಕಿತ್ತು. ಮಾಹಿತಿ ಆಧರಿಸಿ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಬಿ.ಜಿ. ಕುಮಾರಸ್ವಾಮಿ ತಂಡ ಮಾರುವೇಶದ ಕಾರ್ಯಾಚರಣೆಗೆ ಇಳಿದಿತ್ತು. ಮುಂದೆ ಓದಿ...
ಸಣ್ಣ ಸುಳಿವು ಮೇಲೆ ಕಾರ್ಯಾಚರಣೆ:
ಆರ್.ಕೆ. ಹೆಗ್ಡೆ ನಗರದ ನಿವಾಸಿ ಕದೀರ್ ಖಾನ್ ಎಂಬಾತನ ಬಳಿ ಪಿಸ್ತೂಲು ಖರೀದಿಸುವ ಸೋಗಿನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎರಡು ಅಕ್ರಮ ಪಿಸ್ತೂಲು ಹೊಂದಿರುವ ಸಂಗತಿ ಬೆಳಕಿಗೆ ಬಂದಿತ್ತು. ಆತನಿಂದ ಎರಡು ಪಿಸ್ತೂಲು ಹಾಗೂ ಎಂಟು ಜೀವಂತ ಗುಂಡು ವಶಪಡಿಸಿಕೊಂಡಿದ್ದರು. ಕದೀರ್ ಖಾನ್ ನೀಡಿದ ಮಾಹಿತಿ ಪೊಲೀಸರನ್ನೇ ಬೆಚ್ಚಿ ಬೀಳಿಸಿತ್ತು.
ಪರಪ್ಪನ ಅಗ್ರಹಾರ ಜೈಲ್ ಲಿಂಕ್ :
ಖದೀರ್ ಖಾನ್ ನೀಡಿದ ಮಾಹಿತಿ ಪೊಲೀಸರನ್ನು ಬೆಚ್ಚಿ ಬೀಳಿಸಿತ್ತು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಫಯಾಜುಲ್ಲಾಖಾನ್ ಎಂಬಾತ ನನಗೆ ಪಿಸ್ತೂಲು ನೀಡಿದ್ದ ಎಂಬ ಸ್ಫೋಟಕ ಮಾಹಿತಿ ನೀಡಿದ್ದ. ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಫಯಾಜುಲ್ಲಾ ಖಾನ್ ಅಲ್ಲಿಂದಲೇ ಅಕ್ರಮ ಪಿಸ್ತೂಲು ದಂಧೆ ನಿರ್ವಹಣೆ ಮಾಡುತ್ತಿದ್ದ ಎನ್ನಲಾಗಿದೆ. ಆತನನ್ನು ವಶಕ್ಕೆ ಪಡೆದಿದ್ದ ಕೆ.ಆರ್. ಮಾರ್ಕೆಟ್ ಪೊಲೀಸರು ಸುದೀರ್ಘ ವಿಚಾರಣೆ ನಡೆಸಿದಾಗ ನಾಲ್ಕು ರಾಜ್ಯಗಳ ನಡುವಿನ ಅಕ್ರಮ ಪಿಸ್ತೂಲು ಡೀಲಿಂಗ್ ಸಂಗತಿಯನ್ನು ಬಾಯಿಬಿಟ್ಟಿದ್ದ. ಫಯಾಜುಲ್ಲಾ ಖಾನ್ ಮಾಹಿತಿ ಆಧರಿಸಿ ಹೊರ ರಾಜ್ಯದ ನಂಟು ಹೊಂದಿರುವ ಹೊರ ರಾಜ್ಯದ ಡೀಲರ್ಗಳ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದರು.
ಮಾರು ವೇಷದ ಕಾರ್ಯಾಚರಣೆ :
ರಾಜಸ್ಥಾನ, ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಸಿಗುವ ಅಕ್ರಮ ಪಿಸ್ತೂಲ್ ಗಳನ್ನು ಬೆಂಗಳೂರಿಗೆ ತಂದು ಮಾರಾಟ ಮಾಡುವ ಕಿರಾತಕರ ಮಾಹಿತಿ ಪಡೆದ ಕೆ.ಆರ್. ಮಾರ್ಕೆಟ್ ಪೊಲೀಸರು ಪಿಸ್ತೂಲು ಖರೀದಿಸುವ ಸೋಗಿನಲ್ಲಿ ಮಾರುವೇಷದ ಕಾರ್ಯಚರಣೆ ನಡೆಸಿದ್ದಾರೆ. ಸತತ ಒಂದೂ ವರೆ ತಿಂಗಳು ಕಾರ್ಯಾಚರಣೆ ನಡೆಸಿ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿರುವ ಪರಾಗ್ ಕುಮಾರ್ ನನ್ನು ಬಂಧಿಸಿದ್ದಾರೆ. ಈತನ ಸಂಪರ್ಕ ಇಟ್ಟುಕೊಂಡು ಗುಜರಾತ್ನ ಶಹನವಾಜ್, ಮಧ್ಯ ಪ್ರದೇಶ ಮೂಲದ ನಾಸಿರ್ ಶೇಖ್, ಸಲ್ಮಾನ್ ಖಾನ್, ಫಕ್ರುದ್ದೀನ್ ಎಂಬುವರನ್ನು ಬಂಧಿಸಿದ್ದಾರೆ. ಇದಲ್ಲದೇ ಚೆನ್ನೈನಲ್ಲಿ ಅಕ್ರಮ ಪಸ್ತೂಲು ಡೀಲಿಂಗ್ ಮಾಡುತ್ತಿದ್ದ ವಿನಯ್ ಎಂಬಾತನನ್ನು ಕೂಡ ಇದೇ ವೇಳೆ ಬಂಧಿಸಿದ್ದಾರೆ.
Recommended Video
ಒಂದೂವರೆ ತಿಂಗಳ ಕಾರ್ಯಾಚರಣೆ :
ಕೆ.ಆರ್. ಮಾರ್ಕೆಟ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಕುಮಾರಸ್ವಾಮಿ ಮತ್ತು ತಂಡ ಸತತ ಒಂದೂವರೆ ತಿಂಗಳ ಕಾಲ ಈ ಪ್ರಕರಣದ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಇದರಲ್ಲಿ ಪ್ರಮುಖ ಆರೋಪಿಯೊಬ್ಬ ಶಿರಡಿಯಲ್ಲಿ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ. ಎಂಟು ಮಂದಿ ಆರೋಪಿಗಳಿಂದ ಹದಿಮೂರು ಪಿಸ್ತೂಲು ವಶಪಡಿಸಿಕೊಂಡಿದ್ದಾರೆ. ಮಾರ್ಕೆಟ್ ಠಾಣೆ ಪೊಲೀಸರ ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಶ್ಲಾಘಿಸಿದರು. ಅಲ್ಲದೇ ಪ್ರಕರಣ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಬಂಧಿತರ ವಿರುದ್ಧ ಅಕ್ರಮ ಶಸ್ತ್ರಾಸ್ತ ಕಾಯ್ದೆ ಅಡಿ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.