ಆನ್ಲೈನ್ ಆಪ್ ಜಾಲ: ಮೂವರು ಕಿರಾಕತರನ್ನು ಬಂಧಿಸಿದ ಸಿಸಿಬಿ !
ಬೆಂಗಳೂರು, ಡಿಸೆಂಬರ್ 28: ಮೂರು ಕಾಸು ಸಾಲ ಕೊಟ್ಟು ಸಾಮಾಜಿಕ ಜಾಲ ತಾಣದಲ್ಲಿ ಮಾನ ಹರಾಜು ಹಾಕುವ ಆನ್ಲೈನ್ ಸಾಲ ಆಪ್ ಗಳ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಆನ್ಲೈನ್ ನಲ್ಲಿ ಸಾಲ ಕೊಟ್ಟು ಬಡ್ಡಿ, ಚಕ್ರಬಡ್ಡಿ ವಸೂಲಿ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೊಸಗುಡ್ಡದ ಹಳ್ಳಿ ನಿವಾಸಿ ಸಯ್ಯದ್ ಅಹಮದ್, ಬಿಟಿಎಂ ಲೇಔಟ್ ನಿವಾಸಿ ಸಯ್ಯದ್ ಇರ್ಫಾನ್, ವರ್ತೂರಿನ ರಾಮಗೊಂಡನಹಳ್ಳಿ ನಿವಾಸಿ ಆದಿತ್ಯಾ ಸೇನಾಪತಿ ಬಂಧಿತರು. ಇವರಿಂದ 35 ಲ್ಯಾಪ್ಟಾಪ್, ನೋಕಿಯಾ ಕಂಪನಿಯ 200 ಬೇಸಿಕ್ ಪೋನ್, ವಿವಿಧ ಕಂಪನಿಗಳಿಗೆ ಸೇರಿದ 30 ಸಿಮ್ ಕಾರ್ಡ್ ಗಳು ಹಾಗೂ ಕಂಪನಿಗೆ ಸೇರಿದ ಸೀಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಆನ್ಲೈನ್ ತುರ್ತು ಸಾಲಕ್ಕೆ ಕೈ ಹಾಕಿ ಬದುಕು ತೂತು ಮಾಡಿಕೊಳ್ಳಬೇಡಿ!
ಆರೋಪಿಗಳು ಕೋರಮಂಗಲದಲ್ಲಿ ಏಸ್ ಪರ್ಲ್ ಸರ್ವೀಸ್ ಪ್ರೆ. ಲಿ. ಎಂಬ ಸಾಲ ಕಂಪನಿ ನಡೆಸುತ್ತಿದ್ದು, ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಅಂಜನ್ ಕುಮಾರ್, ಹರೀಶ್ ಒಳಗೊಂಡ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಇದೇ ವಿಳಾಸದಲ್ಲಿ ಇಜಿಕಿ ಸರ್ವೀಸ್ ಪ್ರೆ. ಲಿ, ಎಕ್ಸೀಡ್ವೆಲ್ ಸರ್ವೀಸ್ ಪ್ರೆ. ಲಿ. ಮಾಸ್ಕಸ್ಟರ್ ಸರ್ವೀಸ್ ಪ್ರೆ.ಲಿ. ಕಂಪನಿಗಳು ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಇಷ್ಟೂ ಕಂಪನಿಗಳು ವಿದೇಶಿ ಮೂಲದ ಆನ್ಲೈನ್ ಲೋನ್ ಆಪ್ ಬಳಿಸಿ ಸಾಲ ನೀಡಿ ಚಕ್ರಬಡ್ಡಿ ವಸೂಲಿ ಮಾಡುತ್ತಿದ್ದರು ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.
ಬಂಧಿತರಲ್ಲಿ ಚೀನಾ ಮೂಲದ ಇಬ್ಬರು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಸುತ್ತಿದ್ದೇವೆ. ಬಂಧಿತರು ಆಪ್ ಮಾಲೀಕರ ಅಣತಿಯಂತೆ ಕಾರ್ಯ ನಿರ್ವಹಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು. ಎಲ್ಲಾ ಆಪ್ಗಳು ಆರ್ಬಿಐ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆನ್ಲೈನ್ ಆಪ್ ಗಳಲ್ಲಿ ಸಾಲ ಪಡೆಯದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
Recommended Video
ಮನೀ ಡೇ.. ಪೈಸಾ ಪೇ, ಲೋನ್ ಟೈಮ್, ರುಪೀ ಡೇ, ರುಪೀ ಕಾರ್ಟ್, ಇನ್ ಕ್ಯಾಷ್ ಮತ್ತಿತರ ಆಪ್ಗಳ ಮೂಲಕ ಸಾಲ ಅಗತ್ಯವಿರುವರಿಗೆ ಆನ್ಲೈನ್ ನಲ್ಲಿಯೇ ನೀಡುತ್ತಿದ್ದರು. ಮೂರು ಸಾವಿರ ಸಾಲ ಮಂಜೂರು ಮಾಡಿ, ಬಡ್ಡಿ ಮುರಿದು ಕೊಂಡು ಕೇವಲ 1800 ರೂ. ಕೊಡುತ್ತಾರೆ. ಬಳಿಕ ಒಂದು ವಾರದಲ್ಲಿ ಮೂರು ಸಾವಿರ ರೂಪಾಯಿಗಳನ್ನು ವಸೂಲಿ ಮಾಡುತ್ತಾರೆ. ಕಾಲ ಮಿತಿಯಲ್ಲಿ ಪಾವತಿಸದಿದ್ದರೆ, ಮೊಬೈಲ್ ಕರೆ ಮಾಡಿ ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿದ್ದರು. ಈ ಕುರಿತು ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಸೈಬರ್ ಠಾಣೆ ಪೊಲೀಸರು ಮೊದಲ ಹಂತದಲ್ಲಿಯೇ ಆನ್ಲೈನ್ ಲೋನ್ ಆಪ್ಗಳ ಎಡೆಮುರಿ ಕಟ್ಟುವಲ್ಲಿ ಮಗ್ನರಾಗಿದ್ದಾರೆ. ಮತ್ತಷ್ಟು ಆರೋಪಿಗಳ ಬಂಧನ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.