ಬೆಂಗಳೂರು ಪಶ್ಚಿಮ ವಲಯದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರ ರೌಂಡ್ಸ್- ಪ್ರಗತಿ ಪರಿಶೀಲನೆ
ಬೆಂಗಳೂರು, ಮೇ17: ಬೃಹತ್ ಬೆಂಗಳೂರು ಮಹಾನಗರ (ಬಿಬಿಎಂಪಿ) ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದರು.
ಓಕಳಿಪುರ ಅಷ್ಟಪಥ ಕಾರಿಡಾರ್ಗೆ ಬಳಿ ತುಮಕೂರು ಕಡೆಗೆ ಹೋಗುವ ರೈಲ್ವೆ ಟ್ರಾಕ್ ಅಡಿ ರೈಲ್ವೆ ಇಲಾಖೆ ವತಿಯಿಂದ ಬಾಕ್ಸ್ ಪುಶಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ವಾಹನ ಸಂಚಾರಕ್ಕೆ ಬಳಕೆಯಾಗದಿರುವ ರಸ್ತೆಯನ್ನು ಕೂಡಲೆ ವಾಹನ ಸಂಚಾರ ಓಡಾಟಕ್ಕೆ ಅನುವು ಮಾಡಿಕೊಡಬೇಕು ಹಾಗೂ ರಸ್ತೆ ಭಾಗದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಸೂಚಿಸಿದರು.
ಬೆಂಗಳೂರು ಹಳೇ ಮೈಸೂರು ರಸ್ತೆ(ಮಾಗಡಿ ರಸ್ತೆ) ಹಾಗೂ ವಾಟಾಳ್ ನಾಗರಾಜ್ ರಸ್ತೆ(ಸುಜಾತ ಟಾಕೀಸ್) "ವೈ" ಜಂಕ್ಷನ್ನಲ್ಲಿ ಗ್ರೇಡ್ ಸೆಪರೇಟರ್ ಯೋಜನೆಯು 30 ಕೋಟಿ ರೂ. ವೆಚ್ಚದಲ್ಲಿ ಸರ್ಕಾರವು ಸನ್ಮಾನ್ಯ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ ಅನುದಾನದಲ್ಲಿ ಕೈಗೆತ್ತಿಕೊಂಡಿದ್ದು, ಮುಖ್ಯ ಆಯುಕ್ತರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೈ ಜಂಕ್ಷನ್ ವಾಟಾಳ್ ನಾಗರಾಜ್ ರಸ್ತೆಯು ತುಮಕೂರು ರಸ್ತೆ ಮತ್ತು ಡಾ. ರಾಜ್ಕುಮಾರ್ ರಸ್ತೆಗೆ ಲಿಂಕ್ ರಸ್ತೆಯಾಗಿದ್ದು, ಇದು ಹೊರ ಪ್ರದೇಶಕ್ಕೆ ಹೋಗುವ ಪ್ರಮುಖ ರಸ್ತೆಯಾಗಿರುತ್ತದೆ. ಮೆಜೆಸ್ಟಿಕ್ ಮತ್ತು ರಾಜಾಜಿನಗರ ಕಡೆಯಿಂದ ಬರುವ ವಾಹನಗಳು ಸದರಿ ಜಂಕ್ಷನ್ನಲ್ಲಿ ಹಾಲಿ ಸಿಗ್ನಲ್ ಇರುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಆದ್ದರಿಂದ ಈ ಜಂಕ್ಷನ್ ಅನ್ನು ಸಿಗ್ನಲ್ ಮುಕ್ತ ಮಾಡುವ ಸಲುವಾಗಿ ಗ್ರೇಡ್ ಸೆಪರೇಟರ್ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಮೆಜೆಸ್ಟಿಕ್ ಕಡೆಯಿಂದ ರಾಜಾಜಿನಗರ ಕಡೆ ಹೋಗುವ ಕೆಳಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಈಗಾಗಲೇ ವಾಹನ ಸಂಚಾರಕ್ಕೆ ಅನುಮಾಡಿಕೊಡಲಾಗಿದೆ. ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮೇಲುಸೇತುವೆ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮಂತ್ರಿ ಸ್ಕ್ವೇರ್ ಮುಂಭಾಗ ರಾಜಕಾಲುವೆ ಪರಿಶೀಲನೆ:
ಸುಭಾಷ್ ನಗರ ವಾರ್ಡ್ ವ್ಯಾಪ್ತಿಯ ಪ್ಲಾಟ್ ಫಾರ್ಮ್ ರಸ್ತೆ (ಮೆಜೆಸ್ಟಿಕ್ ನಿಂದ ಮಲ್ಲೇಶ್ವರ ಕಡೆಗೆ ಹೋಗುವ ರಸ್ತೆ) ಬದಿ ನೀರು ನಿಂತಿರುವುದನ್ನು ಕಂಡು ಇದರಿಂದ ವಾಹನಗಳಿಗೆ ಸಾಕಷ್ಟು ಸಮಸ್ಯೆ ಆಗಲಿದೆ. ಆದ್ದರಿಂದ ಎಲ್ಲಿ ನೀರು ನಿಲ್ಲುತ್ತದೆ ಎಂಬುದನ್ನು ಪರಿಶೀಲಿಸಿ ರಸ್ತೆ ಬದಿ ಪೈಪ್ ಅಳವಡಿಸಿ ರಾಜಕಾಲುವೆಗೆ ನೀರು ಹರಿದು ಹೋಗುವಂತೆ ಮಾಡಿ. ರಸ್ತೆ ಬದಿ ಕಸದ ಕಾಂಪ್ಯಾಕ್ಟರ್ ನಿಂತಿರುವುದನ್ನು ಕಂಡು ರಸ್ತೆ ಬದಿ ಯಾವುದೇ ವಾಹನಗಳನ್ನು ನಿಲ್ಲಿದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸ್ಥಳದಲ್ಲಿ ಬಿ.ಎಂ.ಆರ್.ಸಿ.ಎಲ್ ನ ಖಾಲಿ ಸ್ಥಳವನ್ನು ಗಮನಿಸಿ ಕೂಡಲೆ ಇಲಾಖೆಯ ಜೊತೆ ಮಾತನಾಡಿ ಖಾಲಿ ಸ್ಥಳವನ್ನು ಘನತ್ಯಾಜ್ಯ ಕೆಲಸಕ್ಕೆ ಬಳಸಿಕೊಳ್ಳಲು ಸೂಚಿಸಿದರು. ಬಳಿಕ ರೈಲ್ವೆ ಇಲಾಖೆಯ ಸ್ಥಳವನ್ನು ಪಾಲಿಕೆಗೆ ನೀಡಿದರೆ ರಸ್ತೆ ನಿರ್ಮಿಸಿ ಈ ಭಾಗದ ಬಹುತೇಕ ಸಂಚಾರ ದಟ್ಟಣೆ ನಿವಾರಣೆ ಮಾಡಬಹುದಾಗಿರುತ್ತದೆ. ಈ ಪೈಕಿ ರೈಲ್ವೆ ಇಲಾಖೆಯ ಜೊತೆ ಮಾತನಾಡಿ ಸ್ಥಳವನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಂಡು ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮಂತ್ರಿಸ್ಕ್ವೇರ್ ಮುಂಭಾಗ ಮಳೆಗಾಲದ ವೇಳೆ ಪ್ರತಿ ಬಾರಿಯೂ ಜಲಾವೃತವಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ರಾಜಕಾಲುವೆಯ ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಅರ್ಧ ಭಾಗದ ಕಾಮಗಾರಿಯನ್ನು ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನುಳಿದರ್ಧ ಭಾಗದ ಕಾಮಗಾರಿಯನ್ನು ಶೀಘ್ರ ಮುಗಿಸಬೇಕು ಹಾಗೂ ಇನ್ನು ಮುಂದೆ ಈ ಸ್ಥಳದಲ್ಲಿ ನೀರು ನಿಂತರೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದೆಂದು ಸೂಚನೆ ನೀಡಿದರು.
ದತ್ತಾತ್ರೆಯ ದೇವಸ್ಥಾನದ ಬಳಿ ಸೇತುವೆ ಕಾಮಗಾರಿ
ದತ್ತಾತ್ರೆಯ ದೇವಸ್ಥಾನದ ಬಳಿ ರಾಜಕಾಲುವೆಯ ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ರಾಜಕಾಲುವೆ ಕೆಳಭಾಗದಲ್ಲಿ ಜಲಮಂಡಳಿ ಸೀವೇಜ್ ಲೈನ್ ಕಾಮಗಾರಿ ಮುಗಿಸಿದ ಬಳಿಕ ರಾಜಕಾಲುವೆಯಲ್ಲಿ ಹರಿಯುವ ನೀರನ್ನು ಡೈವರ್ಷನ್ ಮಾಡಿ ಸೇತುವೆ ಕಾಮಗಾರಿಯನ್ನು ಮಾಡಲಾಗುತ್ತಿದೆ. ಈ ಪೈಕಿ ಜೂನ್ ಅಂತ್ಯದೊಳಗೆ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚಿಸಿದರು.
ಅರಮನೆ ನಗರ ವಾರ್ಡ್ ವ್ಯಾಪ್ತಿಯಲ್ಲಿರುವ ಸ್ಯಾಂಕಿ ಟ್ಯಾಂಕ್ 46 ಎಕರೆ ಪ್ರದೇಶದಲ್ಲಿದ್ದು, ವಾಯುವಿಹಾರ ಮಾರ್ಗ, ಜಾಗಿಂಗ್ ಟ್ರ್ಯಾಕ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದರು.
ಯಶವಂತಪುರ ಮಾರುಕಟ್ಟೆ ಕಟ್ಟಡ ಪರಿಶೀಲನೆ:
ಮಲ್ಲೇಶ್ವರ ವಾರ್ಡ್ ವ್ಯಾಪ್ತಿಯಲ್ಲಿ 5.6 ಕೋಟಿ ರೂ. ವೆಚ್ಚದಲ್ಲಿ ಯಶವಂತಪುರ ಮಾರುಕಟ್ಟೆ ಕಾಮಗಾರಿ ಪ್ರಗತಿಯಲ್ಲಿದ್ದು, ಸದರಿ ಕಟ್ಟಡವು ತಳ ಮಹಡಿ, ನೆಲ ಮಹಡಿ ಹಾಗೂ ಮೊದಲ ಮಹಡಿ ಬರಲಿದ್ದು, 43 ಮಳಿಗೆಗಳು ಬರಲಿವೆ. ತಳಮಹಡಿಯಲ್ಲಿ ಮೆಕಾನಿಕಲ್ ಪಾರ್ಕಿಂಗ್ ವ್ಯವಸ್ಥೆ, ಸುತ್ತಲೂ ರಿಟೈನಿಂಗ್ ವಾಲ್ ಬರಲಿದೆ. ಇದಲ್ಲದೆ ಪ್ರಸಕ್ತ ಸಾಲಿನ ಅಮೃತ ನಗರೋತ್ಥಾನ ಅನುದಾನದಲ್ಲಿ 10 ಕೋಟಿ ರೂ. ಮೀಸಲಿಡಲಾಗಿದ್ದು, ಇನ್ನೂ ಹೆಚ್ಚಿನ ಮಳಿಗೆಗಳು, ಕಟ್ಟಡದ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲು ಯೋಜಿಸಲಾಗಿದೆ ಎಂದು ಕಾರ್ಯಪಾಲಕ ಇಂಜಿನಿಯರ್ ಮಾಹಿತಿ ನೀಡಿದರು.
ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಪರಿಶೀಲನೆ:
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾರಪ್ಪನ ಪಾಳ್ಯ ವಾರ್ಡ್ ವ್ಯಾಪ್ತಿಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ನಿರ್ಮಿಸಲಾಗಿದ್ದು, ಉದ್ಘಾಟನೆ ಮಾಡುವುದು ಬಾಕಿಯಿದೆ. ಸದರಿ ಕಟ್ಟಡವು ತಳ ಮಹಡಿ, ನೆಲ ಮಹಡಿ ಹಾಗೂ ಮೂರು ಅಂತಸ್ತಿದ್ದು, ಸಮುದಾಯ ಭವನ ಬಳಕೆ ಮಾಡಲು ಕೂಡಲೆ ದರ ನಿಗದಿಪಡಿಸಬೇಕು. ಜೊತೆಗೆ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.
ಕಮಲಾ ನಗರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪರಿಶೀಲನೆ:
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಕ್ತಿ ಗಣಪತಿ ನಗರ ವಾರ್ಡ್ ಕಮಲಾ ನಗರದಲ್ಲಿ 8.70 ಕೋಟಿ ರೂ. ವೆಚ್ಚದಲ್ಲಿ ನೆಲ ಮಹಡಿ ಸೇರಿದಂತೆ ಮೂರು ಅಂತಸ್ತಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದ್ದು, ಔಷಧ ಮಳಿಗೆ, ಚಿಕಿತ್ಸಾ ಕೋಣೆ, ಪ್ರಯೋಗಾಲಯ, ಕ್ಷ-ಕಿರಣ, ಎನ್.ಐ.ಸಿ.ಯು ವಾರ್ಡ್, ಐಸಿಯು ವಾರ್ಡ್ ಡಯಾಲಿಸಿಸ್ ಕೇಂದ್ರ, ಆಪರೇಷನ್ ರೂಮ್, ಸಾಮಾನ್ಯ ವಾರ್ಡ್, ಹೆರಿಗೆಗಾಗಿ 30 ಹಾಸಿಗೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು, ಆಸ್ಪತ್ರೆಗೆ ಅವಶ್ಯಕತೆಯಿರುವ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ಕೂಡಲೆ ಆಸ್ಪತ್ರೆಯನ್ನು ಕಾರ್ಯಾರಂಭ ಮಾಡಲು ಸೂಚಿಸಿದರು.ಪಕ್ಕದಲ್ಲಿಯೇ 9.70 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ಪ್ರೌಡಶಾಲೆ ಮತ್ತು ಪದವಿ ಪೂರ್ವ ಕಾಲೇಜು ನಿರ್ಮಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಕೆಲ ಕಾಲ ಮಾತನಾಡಿದರು.
ಹೊಸಹಳ್ಳಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪರಿಶೀಲನೆ:
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಅಗ್ರಹಾರ ದಾಸರಹಳ್ಳಿ ವಾರ್ಡ್ ಹೊಸಹಳ್ಳಿ ವ್ಯಾಪ್ತಿಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಆಸ್ಪತ್ರೆಯಲ್ಲಿ ಓಪಿಡಿ ಬ್ಲಾಕ್, ಲ್ಯಾಬ್, ಫಾರ್ಮಸಿ, ತುರ್ತು ಚಿಕಿತ್ಸೆ, ಒಳರೋಗಿ ವಿಭಾಗ, ಐಸಿಯು, ಓಟಿ, ಡಯಾಲಿಸಿಸ್ ಸೆಂಟರ್, ಎಕ್ಸ್ರೇ ವಿಭಾಗ, ಕ್ಯಾಂಟೀನ್ ಹಾಗೂ ಜನರಲ್/ಸ್ಪೆಷಲ್ ವಾರ್ಡ್ಗಳು ಇತ್ಯಾದಿಗಳನ್ನು ಒಳಗೊಂಡಿರುವುದನ್ನು ಪರಿಶೀಲಿಸಿದರು.
ಡಾ. ರಾಜ್ ಕುಮಾರ್ ವಾರ್ಡ್ ಬಸವೇಶ್ವರ ನಗರ 2ನೇ ಮುಖ್ಯ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಪರಿಶೀಲಿಸಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಮಸ್ಟರಿಂಗ್ ಪಾಯಿಂಟ್ ಗೆ ಭೇಟಿ:
ಗಾಂಧಿನಗರ ವಾರ್ಡ್ ಉಪ್ಪಾರಪೇಟೆ ಪೊಲೀಸ್ ಠಾಣೆಯ ಹಿಂಭಾಗ ಬಿಬಿಎಂಪಿ ಕಛೇರಿ ಬಳಿ ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್ ಗೆ ಭೇಟಿ ನೀಡಿ ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಮಸ್ಟರಿಂಗ್ ಪಾಯಿಂಟ್ ನಲ್ಲಿ 50 ಪೌರಕಾರ್ಮಿಕರರು ಕಾರ್ಯನಿರ್ವಹಿಸುತ್ತಿದ್ದು, 7.4 ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಸ್ವಚ್ಛ ಮಾಡಲಿದ್ದಾರೆ.ಎಲ್ಲಾ ಪೌರಕಾರ್ಮಿಕರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಬೇಕು. ಆರೋಗ್ಯ ಕಾರ್ಡ್ ಇಲ್ಲದವರಿಗೆ ಕೂಡಲೆ ಆರೋಗ್ಯ ಕಾರ್ಡ್ ನೀಡಿ ಇ.ಎಸ್.ಐ ಆಸ್ಪತ್ರೆ ಜೊತೆ ಸಮನ್ವಯ ಮಾಡಿ ಸರಿಯಾಗಿ ವೈದ್ಯಕೀಯ ಸೇವೆ ಸಿಗುವಂತೆ ಮಾಡಬೇಕು. ಮಸ್ಟರಿಂಗ್ ಪಾಯಿಂಟ್ ಬಳಿ ಶೌಚಾಲಯ ದುರಸ್ತಿಪಡಿಸಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜೊತೆಗೆ ವಿಶ್ರಾಂತಿ ಕೊಠಡಿಯಲ್ಲಿ ಬಟ್ಟೆ ಇಡಲು ಬಾಕ್ಸ್ ಅಳವಡಿಸಲು ಸೂಚನೆ ನೀಡಿದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಸ್ಥಳ ಪರಿಶೀಲನೆ:
ನಗರದ ಕ್ರಾಂತಿವಿರ ಸಂಗೊಳ್ಳಿ ರಾಯಣ್ಣ ವೃತ್ತ(ಕೆಂಪೇಗೌಡ ಬಸ್ ನಿಲ್ದಾಣದ ಬಳಿ)ದ ಬಳಿ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆ ಸ್ಥಳ ಪರಿಶೀಲಿಸಿ, ಪೈಪ್ ಲೀಕ್ ಆಗುತ್ತಿರುವುದನ್ನು ದುರಸ್ತಿಪಡಿಸಬೇಕು. ವೃತ್ತದಲ್ಲಿರುವ ಕಿರು ಉದ್ಯಾನದ ಸುತ್ತಲು ಅಳವಡಿಸಿರುವ ಕಲ್ಲಿನ ಕಂಬಗಳು ಹಾಳಾಗಿದ್ದು, ಅದನ್ನು ಹೊಸದಾಗಿ ಅಳವಡಿಸಬೇಕು. ಜೊತೆಗೆ ಟ್ರಾಫಿಕ್ ಕಿಯೊಸ್ಕ್ ಗೆ ದೀಪ ಅಳವಡಿಕೆ ಮಾಡಲು ಸೂಚಿಸಿದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪರಿಶೀಲನೆ ವೇಳೆ ಸಚಿವರಾದ ಕೆ.ಗೋಪಾಲಯ್ಯ, ವಲಯ ಆಯುಕ್ತರಾದ ಡಾ. ದೀಪಕ್, ವಲಯ ಜಂಟಿ ಆಯುಕ್ತರಾದ ಶ್ರೀನಿವಾಸ್, ಮುಖ್ಯ ಇಂಜಿನಿಯರ್ ಗಳಾದ ವಿಶ್ವನಾಥ್, ಪ್ರಹ್ಲಾದ್, ಸುಗುಣಾ, ಬಸವರಾಜ್ ಕಬಾಡೆ, ವಿಜಯ್ ಕುಮಾರ್ ಹರಿದಾಸ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Recommended Video