ಬಿಬಿಎಂಪಿ ಆಯುಕ್ತರ ಯಲಹಂಕ ರೌಂಡ್ಸ್, ಕಾಮಗಾರಿ ಪೂರ್ಣಗೊಳಿಸಲು ಗಡುವು
ಬೆಂಗಳೂರು, ಜೂನ್ 28: ಬೆಂಗಳೂರು ನಗರದ ಯಲಹಂಕ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ವಿವಿಧ ಸ್ಥಳಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಕ್ಕೂರು ಕ್ರಾಸ್ನಿಂದ ಕೃಷ್ಣ ಸಾಗರ್ ಹೋಟೆಲ್ ರವರೆಗೆ ಮತ್ತು ಕೃಷ್ಣ ಸಾಗರ್ ಹೋಟೆಲ್ನಿಂದ ಕೆಂಪೇಗೌಡ ವೃತ್ತದವರೆಗಿನ ರಸ್ತೆ ಅಭಿವೃದ್ದಿಯನ್ನು ಕೈಗೊಂಡಿದ್ದು, ಚರಂಡಿ, ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಿ 3 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
BREAKING: ಜಕ್ಕೂರು ಏರೊಡ್ರಮ್ನಲ್ಲಿ ಏರ್ ಕ್ರಾಫ್ಟ್ ಲ್ಯಾಂಡಿಂಗ್, ಪಾರ್ಕಿಂಗ್ ದರ ಪರಿಷ್ಕರಣೆ
ಎಂ.ಇ.ಹೆಚ್.ಸಿ.ಎಸ್ ಬಡಾವಣೆಯಲ್ಲಿರುವ ಉದ್ಯಾನವನ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಬೇಕು. ಜೊತೆಗೆ ಎಂ.ಇ.ಹೆಚ್.ಸಿ.ಎಸ್ ಬಡಾವಣೆಯಿಂದ ಕೆಂಪೇಗೌಡ ವೃತ್ತವರೆಗಿನ ಅರ್ಕಾವತಿ ಬಿಡಿಎ ಬಡಾವಣೆಯಲ್ಲಿರುವ ರಸ್ತೆಯಲ್ಲಿರುವ ರಸ್ತೆ ಗುಂಡಿಗಳಿದ್ದು, ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು, ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭಿಸಿ, ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಕ್ಕೂರು ರೈಲ್ವೆ ಮೇಲು ಸೇತುವೆ ಕಾಮಗಾರಿಯು ಭೂಸ್ವಾಧೀನ ಪ್ರಕ್ರಿಯೆಯಿಂದ ವಿಳಂಬವಾಗಿದ್ದು, ಕಾಮಗಾರಿಗೆ ಅವಶ್ಯವಿರುವ ಒಟ್ಟು 48 ಸ್ವತ್ತುಗಳ ಜಾಗದ ಪೈಕಿ 38 ಸ್ವತ್ತುಗಳನ್ನು ಪಾಲಿಕೆಯ ಸ್ವಾಧೀನಕ್ಕೆ ಪಡೆದಿದ್ದು, ಉಳಿಕೆ 10 ಸ್ವತ್ತುಗಳನ್ನು ಭೂಸ್ವಾಧೀನ ಕಾಯ್ದೆಯಂತೆ ಶೀಘ್ರವೇ ಸ್ವಾಧೀನಪಡಿಸಿಕೊಂಡು ಮೇಲುಸೇತುವೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೇಲು ಸೇತುವೆಯಲ್ಲಿ ಪಾದಚಾರಿ ಸಬ್ವೇ ನಿರ್ಮಿಸಿದ್ದು, ಇದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಇದೇ ವೇಳೆ ಸೂಚಿಸಿದರು.
ಥಣಿಸಂದ್ರ ರಸ್ತೆ, ಕೋಗಿಲು ರಸ್ತೆ ಪರಿಶೀಲನೆ
ಜಕ್ಕೂರು ಕೆರೆಯ ಪಕ್ಕದ ರಸ್ತೆಯು ಜಕ್ಕೂರು ಗ್ರಾಮ(ರೈಲ್ವೇ ಮೇಲು ಸೇತುವೆ)ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬಿಡಿಎ ವತಿಯಿಂದ ಅಭಿವೃದ್ಧಿಗೊಳಿಸಬೇಕಾಗಿದ್ದು, ಈ ಬಗ್ಗೆ ಬಿಡಿಎಯೊಂದಿಗೆ ಸಮನ್ವಯ ಸಾಧಿಸಿ ರಸ್ತೆ ಅಭಿವೃದ್ದಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಜಕ್ಕೂರು ಡಬಲ್ ರಸ್ತೆಯನ್ನು ಥಣಿಸಂದ್ರದವರೆಗೆ ಮತ್ತು ಶ್ರೀರಾಮಪುರ ರೈಲ್ವೇ ಕೆಳ ಸೇತುವೆಯಿಂದ ಸಂಪಿಗೆಹಳ್ಳಿ ರಸ್ತೆಯಿಂದ ಥಣಿಸಂದ್ರ ರಸ್ತೆ, ಕೋಗಿಲು ರಸ್ತೆಗಳನ್ನು ಪರಿಶೀಲಸಲಾಯಿತು. ಸದರಿ ರಸ್ತೆಗಳಲ್ಲಿನ ಚರಂಡಿ ಬದಿ ಕಸ, ಶೇಖರಣೆಗೊಂಡ ಡೆಬ್ರೀಸ್, ಮಿಡಿಯೇನ್ಗಳನ್ನು ಶುಚಿಗೊಳಿಸಿ, ಉತ್ತಮ ಗುಣಮಟ್ಟದಲ್ಲಿಡಲು ಸೂಚಿಸಿದರು.
ಚರಂಡಿಯ ಹೂಳನ್ನು ತೆಗೆಯಲು ಸೂಚನೆ
ಕೋಗಿಲು ಮುಖ್ಯರಸ್ತೆಯ ಕೋಗಿಲು ಕ್ರಾಸ್ ಬಳಿ ವಾಟರ್ ಲಾಗಿಂಗ್ ಪಾಯಿಂಟ್ ಪರಿಶೀಲಿಸಿ ರಸ್ತೆ ಬದಿಯ ಚರಂಡಿಯ ಹೂಳನ್ನು ತೆಗೆದು, ಮಳೆಗಾಲದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಗಾಗಿ ತಾತ್ಕಾಲಿಕವಾಗಿ ಪಂಪ್ ಅಳವಡಿಸಲು ಸೂಚಿಸಿದರು. ಬಾಗಲೂರು ಮುಖ್ಯರಸ್ತೆಯನ್ನು ಪರಿಶೀಲಿಸಿ, ರಸ್ತೆಯನ್ನು ಕೂಡಲೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮತ್ತು ರಸ್ತೆ ಬದಿಯ ಚರಂಡಿ ಮೇಲ್ಚಾವಣೆಯನ್ನು ತೆರವುಗೊಳಿಸಿ, ಚರಂಡಿಯ ಹೂಳನ್ನು ತೆಗೆದು ಹೊಸದಾಗಿ ಪ್ರೀಕ್ಯಾಸ್ಟ್ ಸ್ಲಾಬ್ಗಳನ್ನು ಅಳವಡಿಸಲು ಸೂಚಿಸಿದರು.
ಅಮೃತ ನಗರೋತ್ಥಾನ ಅಡಿಯಲ್ಲಿ ರಸ್ತೆ ಅಭಿವೃದ್ಧಿ
ಬಳ್ಳಾರಿ ಮುಖ್ಯರಸ್ತೆಯ(ಎನ್ಹೆಚ್-7) ಯಲಹಂಕದಿಂದ ಹೆಬ್ಬಾಳಕ್ಕೆ ಸಂಚಾರಿಸುವ ಹಾದಿಯಲ್ಲಿ ದಾಸರಹಳ್ಳಿ ಜಂಕ್ಷನ್ ಮುಂಚಿತವಾಗಿ ರಸ್ತೆ ಬದಿಯ ಚರಂಡಿಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ನಿರ್ಮಿಸದಿರುವುದರಿಂದ ರಸ್ತೆ ಮೇಲೆ ನೀರು ಹರಿಯುತ್ತಿದೆ. ಅಲ್ಲದೆ ರಸ್ತೆಯ ಪಕ್ಕದಲ್ಲಿರುವ ವಸತಿ ಸಮುಚ್ಛಯದವರು ಕೊಳಚೆ ನೀರನ್ನು ಹರಿಬಿಟ್ಟಿರುವುದನ್ನು ಜಲಮಂಡಳಿ ವತಿಯಿಂದ ಕ್ರಮವಹಿಸುವಂತೆ ಸಮನ್ವಯ ಸಾಧಿಸಲು ಅಧಿಕಾರಿಗಳಿಗೆ ಸೂಚಿಸಿದರು. ಬಳ್ಳಾರಿ ರಸ್ತೆಯ ದಾಸರಹಳ್ಳಿ ಮುಖ್ಯರಸ್ತೆ(ಅಮೃತನಗರ ಕಡೆ)ಯಲ್ಲಿ ವಾಟರ್ ಲಾಗಿಂಗ್ ಸ್ಥಳವನ್ನು ಪರಿಶೀಲಿಸಿ, ರಸ್ತೆ ಬದಿ ಚರಂಡಿಯಲ್ಲಿ ನೀರು ಸಾರಾಗವಾಗಿ ಹರಿಯಲು ಅಗತ್ಯ ಇಳಿಜಾರು ಇಲ್ಲದಿರುವುದರಿಂದ ತಾತ್ಕಾಲಿಕವಾಗಿ ಮಳೆಗಾಲದ ಸಂದರ್ಭದಲ್ಲಿ ವಾಟರ್ ಪಂಪ್ ಅಳವಡಿಸಲು ಸೂಚಿಸಿದರು. ರಸ್ತೆಯು ಅಮೃತ ನಗರೋತ್ಥಾನ ಅಡಿಯಲ್ಲಿ ರಸ್ತೆ ಅಭಿವೃದ್ಧಿ ಕೈಗೊಂಡಿದ್ದು, ಚರಂಡಿಯನ್ನು ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿ ಚರಂಡಿಗೆ ಸಂಪರ್ಕ ಕಲ್ಪಿಸಲು ಸೂಚಿಸಿದರು.
ಕೆ. ಆರ್. ಡಿ. ಸಿ. ಎಲ್ ಸಂಸ್ಥೆಯವರೊಂದಿಗೆ ಸಮನ್ವಯ
ಕಾಫಿಬೋರ್ಡ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಈಜುಕೊಳ ಹಾಗೂ ಒಳಾಂಗಣ ಕ್ರೀಡಾಂಗಣ ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಟಾಟಾನಗರದಲ್ಲಿನ ಆಧಾರ್ ಕಟ್ಟಡದ ಎದುರು ರಸ್ತೆಯಲ್ಲಿ ವಾಟರ್ ಲಾಗಿಂಗ್ ಪಾಯಿಂಟ್ ಬಳಿ ಬೃಹತ್ ನೀರುಗಾಲುವೆ ವತಿಯಿಂದ ನೀರುಗಾಲುವೆ ನಿರ್ಮಿಸಿರುವುದನ್ನು ಪರಿಶೀಲಿಸಿದರು. ಎಂ. ಎಸ್. ಪಾಳ್ಯ ವೃತ್ತದ ಬಿಎಂಟಿಸಿ ಬಸ್ ಡಿಪೊ ಹತ್ತಿರದ ವಾಟರ್ ಲಾಗಿಂಗ್ ಪಾಯಿಂಟ್ ಪರಿಶೀಲಿಸಿದ್ದು, ತಾತ್ಕಾಲಿಕವಾಗಿ ರಸ್ತೆ ಬದಿ ಚರಂಡಿಯನ್ನು ಶುಚಿಗೊಳಿಸಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಪುಟ್ಟೇನಹಳ್ಳಿ ಕೆರೆ ಬಳಿ ವಾಟರ್ ಲಾಗಿಂಗ್ ಪಾಯಿಂಟ್ ಪರಿಶೀಲಿಸಿ, ಸದರಿ ಭಾಗದಲ್ಲಿ ಚರಂಡಿ ನಿರ್ಮಿಸಲು ಕೆ. ಆರ್. ಡಿ. ಸಿ. ಎಲ್ ಸಂಸ್ಥೆಯವರೊಂದಿಗೆ ಸಮನ್ವಯ ಸಾಧಿಸಲು ಸೂಚಿಸಲಾಯಿತು. ಜೊತೆಗೆ ಜಲಮಂಡಳಿಯ ವತಿಯಿಂದ ಕೊಳಚೆ ನೀರು ಚರಂಡಿಗೆ ಹರಿಯದಂತೆ ತಡೆಗಟ್ಟಲು ಕ್ರಮವಹಿಸಲು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯ ಆಯುಕ್ತ ತುಷಾರ್ ಗಿರಿನಾತ್ ಯಲಹಂಕ ವಲಯ ಪರಿಶೀಲನೆಯ ವೇಳೆ ವಲಯ ಆಯುಕ್ತರಾದ ರಂಗಪ್ಪ, ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ಮುಖ್ಯ ಅಭಿಯಂತರರಾದ ರಂಗನಾಥ್, ಲೋಕೇಶ್, ಮೋಹನ್ ಕೃಷ್ಣಾ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.