ಮಸಿ ಬಳಿದ ಕೇಸ್: ವಕೀಲೆ ಮೀರಾ ವಿರುದ್ಧ ಪ್ರಕರಣ, FIR ದಾಖಲಿಸಿದ ಭಗವಾನ್
ಬೆಂಗಳೂರು, ಫೆಬ್ರವರಿ 4: ಹಿರಿಯ ಸಾಹಿತಿ, ಚಿಂತಕ ಕೆ. ಎಸ್. ಭಗವಾನ್ ಮುಖಕ್ಕೆ ನ್ಯಾಯಾಲಯದ ಆವರಣದಲ್ಲಿ ಮಸಿ ಬಳಿದ ವಕೀಲೆ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ 2ನೇ ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿ ಗುರುವಾರ ಮಧ್ಯಾಹ್ನ ನಡೆದ ಈ ಘಟನೆಯ ಬಳಿಕ ನೇರ ಹಲಸೂರು ಗೇಟ್ ಠಾಣೆಗೆ ತೆರಳಿದ ಪ್ರೊ ಭಗವಾನ್ ಅವರು ವಕೀಲೆ ಮೀರಾ ರಾಘವೇಂದ್ರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿರುವ ಠಾಣಾಧಿಕಾರಿಗಳು ಮೀರಾ ವಿರುದ್ಧ ಐಪಿಸಿ ಸೆಕ್ಷನ್ 504(ಉದ್ದೇಶ ಪೂರ್ವಕವಾಗಿ ಅವಮಾನ), 506(ಜೀವ ಬೆದರಿಕೆ ಹಲ್ಲೆ), 341 (ಉದ್ದೇಶ ಪೂರ್ವಕವಾಗಿ ಅಡ್ಡಗಟ್ಟುವುದು), 323(ಸ್ವಯಂ ಪ್ರೇರಣೆಯಿಂದ ತಡೆಯೊಡ್ಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಸಿ ಬಳಿದಿದ್ದನ್ನು ಸಮರ್ಥಿಸಿಕೊಂಡ ಮೀರಾ:
ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಗೆ ಗ್ರಾಸವಾಗುತ್ತಿದ್ದ ಸಾಹಿತಿ ಪೊ ಕೆ ಎಸ್ ಭಗವಾನ್ ಅವರು ಹಿಂದೂ ಧರ್ಮದ ವಿರುದ್ಧ ಸದಾಕಾಲ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ''ಹಿಂದೂ ಧರ್ಮವೆಂಬುದೇ ಇಲ್ಲ ಹಿಂದೂ ಧರ್ಮ ಅವಮಾನಕರ, ಮಾನ ಮರ್ಯಾದೆ ಇರುವವರು ಹಿಂದು ಶಬ್ದ ಬಳಸಬಾರದು'' ಎಂದು ಹೇಳಿದ್ದರು. ಈ ಹೇಳಿಕೆ ವಿರುದ್ಧ ಐಪಿಸಿ ಸೆಕ್ಷನ್ 298, 505 ಅಡಿಯಲ್ಲಿ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೆ.
ಆದರೆ, ಈ ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಹಾಕಿದ್ದ ಪ್ರೊ ಭಗವಾನ್ ಅವರು ಮೈಸೂರಿನಿಂದ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನಂತರ ಜಾಮೀನು ಪಡೆದುಕೊಂಡು ಹೊರ ಬಂದರು. ನಾನು ಕಪ್ಪು ಮಸಿ ಬಳಿದು ತಕ್ಕಶಾಸ್ತ್ರಿ ಮಾಡಿದ್ದೇನೆ ಎಂದು ಮೀರಾ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ
''ನನ್ನನ್ನು ಬಂಧಿಸಿ ಏನು ಬೇಕಾದರೂ ಮಾಡಿ. ಐಯಂ ರೆಡಿ ಫಾರ್ ಎವೆರಿ ಥಿಂಗ್. (ನಾನು ಎಲ್ಲಕ್ಕೂ ಸಿದ್ಧಳಾಗಿದ್ದೇನೆ). ನಾನು ಜೈಲಿಗೆ ಹೋಗಲು ಕೂಡ ರೆಡಿ. ಏನ್ಸಾರ್ ಇಷ್ಟು ವಯಸ್ಸಾಗಿದೆ. ಇನ್ನೂ ದೇವರ ಬಗ್ಗೆ ರಾಮನ ಬಗ್ಗೆ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತೀರಿ ನಾಚಿಕೆಯಾಗುವುದಿಲ್ಲವೇ ನಿಮಗೆ'' ಎಂದು ವಕೀಲೆ ಆಕ್ರೋಶದಿಂದ ಪ್ರಶ್ನಿಸಿದರು.
ಮೈಸೂರಿನಲ್ಲಿ ಭಗವಾನ್ ಮುಖಕ್ಕೆ ಮಸಿ ಎರಚಿದ ವಕೀಲೆ#Mysuru #Bhagwan pic.twitter.com/aaz0mfcu4E
— oneindiakannada (@OneindiaKannada) February 4, 2021
ನಂತರ ಭಗವಾನ್ ಅವರನ್ನು ಗನ್ ಮ್ಯಾನ್, ಕೆಲ ವಕೀಲರು ಹಾಗೂ ಪೊಲೀಸರು ಕೋರ್ಟ್ ಆವರಣದಿಂದ ಕರೆದುಕೊಂಡು ಹೋದರು.
ಸಾಹಿತಿ ಕೆ. ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ
Recommended Video
''ನ್ಯಾಯದೇಗುಲದಲ್ಲಿ ಪ್ರಕರಣ ನಡೆಯಬಾರದಿತ್ತು. ಏನೇ ಇದ್ದರೂ ಕಾನೂನಿನ ಚೌಕಟ್ಟಿನಡಿ ಬಗೆಹರಿಸಿಕೊಳ್ಳಬೇಕು. ಇದು ಕ್ಷಮೆ ಕೋರಬೇಕಾದ ಘಟನೆ'' ಎಂದು ಫೇಸ್ಬುಕ್ ಲೈವ್ನಲ್ಲಿ ನ್ಯಾಯವಾದಿ ಜಗದೀಶ್ ಕೆ ಎನ್ ಮಹದೇವ್ ಅವರು ಬಾರ್ ಅಂಡ್ ಬೆಂಚ್ ತಾಣಕ್ಕೆ ತಿಳಿಸಿದ್ದಾರೆ. ಟ್ವಿಟ್ಟರಲ್ಲೂ ಪರ ವಿರೋಧ ಚರ್ಚೆ ನಡೆದಿದೆ.