ವಸಂತಪುರದ 'ಕಲ್ಯಾಣಿ' ಚೆಂದ ಮಾಡಿ, ಸರ್ಕಾರಕ್ಕೆ ಕೊಟ್ಟ ಇನ್ಫೋಸಿಸ್
ಬೆಂಗಳೂರು, ಸೆಪ್ಟೆಂಬರ್ 24: ಬೆಂಗಳೂರು ದಕ್ಷಿಣದ ಉತ್ತರಹಳ್ಳಿ ಹೋಬಳಿಯ ವಸಂತಪುರದ ವಸಂತ ವಲ್ಲಭರಾಯ ಸ್ವಾಮಿ ದೇಗುಲದ ಕಲ್ಯಾಣಿಯನ್ನು ಪುನರುಜ್ಜೀವನಗೊಳಿಸಲಾಗಿದೆ.
ಈ ಕಲ್ಯಾಣಿಯನ್ನು ಚೆಂದ ಕಾಣಿಸಿದ ಇನ್ಫೋಸಿಸ್ ಫೌಂಡೇಶನ್, ಇಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಮುಜರಾಯಿ ಇಲಾಖೆಗೆ ಹಸ್ತಾಂತರಿಸಲಾಯಿತು.
ತ್ರಿವಳಿ ಕೆರೆಗಳ ಸೌಂದರ್ಯಾಭಿವೃದ್ದಿಗೆ ಕ್ರಮ: ರೋಹಿಣಿ ಸಿಂಧೂರಿ
ಉತ್ತರಹಳ್ಳಿ ಮುಖ್ಯರಸ್ತೆ ಸರ್ವೇ 21ರಲ್ಲಿರುವ ವಸಂತ ವಲ್ಲಭರಾಯ ಸ್ವಾಮಿ ದೇವಸ್ಥಾನದ ಶಿಥಿಲಾವಸ್ಥೆಯಲ್ಲಿತ್ತು. ಚೋಳರ ಕಾಲದ ಈ ಐತಿಹಾಸಿಕ ಕಲ್ಯಾಣಿಗೆ ಹೊಸರೂಪ ನೀಡುವಲ್ಲಿ ಇನ್ಫೋಸಿಸ್ ಫೌಂಡೇಶನ್ ಕೊಡುಗೆ ಅಪಾರ. ಆದರೆ, ಈಗ ಮುಜರಾಯಿ ಇಲಾಖೆಯು ಇನ್ಮುಂದೆ ಈ ಕಲ್ಯಾಣಿಯನ್ನು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕಿದೆ.
ಇನ್ಫೋಸಿಸ್ ಮೈಸೂರು ಕ್ಯಾಂಪಸ್ಗೆ ಅಮೆರಿಕದ ಗ್ರೀನ್ ಪ್ರಶಸ್ತಿ
1980ರ ತನಕ ಕಲ್ಯಾಣಿಯ ನೀರು ಅಕ್ಕಪಕ್ಕದ ಗ್ರಾಮಸ್ಥರಿಗೆ, ದನ ಕರು, ಜಾನುವಾರುಗಳಿಗೆ ಆಸರೆಯಾಗಿತ್ತು. ಇದೆ ಕಲ್ಯಾಣಿಯ ನೀರನ್ನು ಬಳಸಿ ವಸಂತ ವಲ್ಲಭ ಸ್ವಾಮಿ, ಪಕ್ಕದಲ್ಲಿರುವ ಶಿವ, ಆಜಂನೇಯ ದೇಗುಲದ ಅಭಿಷೇಕ, ಇತರೆ ಧಾರ್ಮಿಕ ಕಾರ್ಯಗಳಿಗೆ ಬಳಸಲಾಗುತ್ತಿತ್ತು. ಆದರೆ, ನಗರ ಬೆಳೆದಂತೆ ಈ ಭಾಗದಲ್ಲಿ ವಸತಿ ಸಮುಚ್ಚಯ, ಕೈಗಾರಿಕಾ ಘಟಕಗಳು ಹೆಚ್ಚಾಗಿ, ಕಲ್ಯಾಣಿಯ ನೀರು ಹಾಳಾಗಿತ್ತು.
ವಸಂತಪುರ ಸ್ಥಳ ಪುರಾಣ ಹಿನ್ನಲೆ
ಮಾರ್ಕಂಡೇಯ ಋಷಿಗಳು ಇಲ್ಲಿನ ದೇಗುಲ ಹಾಗೂ ಕಲ್ಯಾಣಿಯನ್ನು ಕಟ್ಟಿಸಿದರು ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.
ವಿಷ್ಣುವಿನ ಅವತಾರವಾದ ವಲ್ಲಭರಾಯ ಸ್ವಾಮಿ ಲಕ್ಷ್ಮೀ ದೇವಿಯನ್ನು ವಿವಾಹವಾಗುವ ಮುನ್ನ ಇಲ್ಲಿನ ಎರಡು ತೀರ್ಥಗಳಲ್ಲಿ ಸ್ನಾನ ಮಾಡಿದ್ದರಿಂದ ಈ ತೀರ್ಥಗಳನ್ನು ಪವಿತ್ರ ತೀರ್ಥಗಳು ಎಂದು ನಂಬಲಾಗಿದೆ. ಸದ್ಯಕ್ಕೆ ಒಂದೇ ಒಂದು ಕಲ್ಯಾಣಿ ಇದ್ದು, ಈಗ ಸುಸ್ಥಿತಿಗೆ ಬಂದಿದೆ.
ಐತಿಹಾಸಿಕವಾಗಿ ವಸಂತಪುರದ ಕಲ್ಯಾಣಿ
ಚೋಳರ ಕಾಲದಲ್ಲಿ (1004-11116 ಕ್ರಿ.ಶ) ದಲ್ಲಿ ಕಟ್ಟಿರುವ ಈ ದೇವಸ್ಥಾನ ಹಾಗೂ ಕಲ್ಯಾಣಿ ಈ ಭಾಗದಲ್ಲಿ ನಿತ್ಯ ಬಳಕೆಗೆ ಯೋಗ್ಯವಾಗಿತ್ತು. ಇಲ್ಲಿ ಶಿವಾಜಿ ಅವರ ತಂದೆ ಶಾಜೀ ಬೋಂಸ್ಲೆ ಕೂಡಾ ತಂಗಿದ್ದ, ಕ್ರಿ.ಶ 1600ರ ನಂತರ ಬೆಂಗಳೂರಿನ ಮೇಲೆ ಅಧಿಪತ್ಯ ಸ್ಥಾಪಿಸಿದ ಮರಾಠರೇ ಈ ಕಲ್ಯಾಣಿಯನ್ನು ನಿರ್ಮಿಸಿದ್ದು ಎಂಬ ಇನ್ನೊಂದು ವಾದವಿದೆ.
ಕಲ್ಯಾಣಿಯ ವಿಸ್ತೀರ್ಣ, ಖರ್ಚು ವೆಚ್ಚ
7,075 ಚದರ ಮೀಟರ್ X 3,181 ಚದರ ಮೀ ಅಗಲ, 6 ಮೀ ಆಳದ ಈ ಕಲ್ಯಾಣಿ ಎಲ್ಲಾ ದಿಕ್ಕುಗಳಲ್ಲೂ ಮೆಟ್ಟಿಲುಗಳನ್ನು ಹೊಂದಿದ್ದು, ಅಕರ್ಷಕವಾಗಿದೆ. ಈ ಕಲ್ಯಾಣಿಯನ್ನು ಈಗಿನ ಸ್ಥಿತಿಗೆ ತರಲು ಸುಮಾರು 8 ಕೋಟಿ ರು ಖರ್ಚಾಗಿದೆ. ಉದ್ದೇಶಿತ ಬಜೆಟ್ ಗಿಂತ ಶೇ 60ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಹಣ ವ್ಯಯಿಸಲಾಗಿದೆ. ಮುಜರಾಯಿ ಇಲಾಖೆಯ ಗೊಂದಲವೇ ಇದಕ್ಕೆ ಕಾರಣ ಎಂದು ಇನ್ಫೋಸಿಸ್ ಫೌಂಡೇಶನ್ ಮೂಲಗಳು ಹೇಳಿವೆ.
ವಾಕಿಂಗ್ ಪಾಥ್ ಬೇಕು ಎಂದಿದ್ದು ಗೊಂದಲ ಮೂಡಿಸಿತ್ತು
ಸುಮಾರು 1 ಎಕರೆ 33 ಗುಂಟೆ ವಿಸ್ತೀರ್ಣದ ಕಲ್ಯಾಣಿಯ ಸುತ್ತಲೂ ವಾಕಿಂಗ್ ಪಾಥ್ ನಿರ್ಮಾಣಕ್ಕೆ ಇಲಾಖೆಯಿಂದ ಬೇಡಿಕೆ ಬಂದಿತ್ತು. ಆದರೆ, ಪುರಾತತ್ತ್ವ ಇಲಾಖೆ, ಸ್ಥಳೀಯರ ಪ್ರತಿರೋಧದಿಂದಾಗಿ ಹಳೆ ಯೋಜನೆಯಂತೆ ನಿರ್ಮಿಸಲಾಗಿದೆ. ಕಲ್ಯಾಣಿಯ ಜಾಗ ಒತ್ತುವರಿಯಾಗಿಲ್ಲ ಹಾಗೂ ಮೂಲ ಸ್ವರೂಪಕ್ಕೆ ಧಕ್ಕೆ ಉಂಟಾಗಿಲ್ಲ. ಕಲ್ಯಾಣಿ ಅಭಿವೃದ್ಧಿಯಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸ್ಪಷ್ಟಪಡಿಸಿದ್ದಾರೆ.