ಇನ್ಫೋಸಿಸ್ ಮೂವರು ಉದ್ಯೋಗಿಗಳ ಬಂಧನ, ಏನು ಕಾರಣ?
ಬೆಂಗಳೂರು, ಮಾರ್ಚ್ 9: ಆದಾಯ ತೆರಿಗೆ ವಂಚನೆಗೆ ನೆರವು ನೀಡಿದ ಆರೋಪದ ಮೇಲೆ ಇನ್ಫೋಸಿಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂವರು ಉದ್ಯೋಗಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಆಂಧ್ರಪ್ರದೇಶ ಮೂಲದ ಕಲ್ಯಾಣ್ ಕುಮಾರ್, ದೇವೇಶ್ವರ್ ರೆಡ್ಡಿ ಹಾಗೂ ಪ್ರಕಾಶ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 3 ಲಕ್ಷ ರು ನಗದು, ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ. ಮೂವರು ಕೂಡಾ ಆದಾಯ ತೆರಿಗೆ ಇಲಾಖೆಯ ತೆರಿಗೆ ಸಂಗ್ರಹ ಪ್ರಾಜೆಕ್ಟ್ (ಸಿಪಿಸಿ)ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ತೆರಿಗೆ ವಂಚನೆ ಹೇಗೆ?: ತೆರಿಗೆ ಪಾವತಿದಾರರನ್ನು ಸಂಪರ್ಕಿಸಿ, ತೆರಿಗೆ ವಂಚಿಸಲು ನೆರವಾಗುತ್ತಿದ್ದರು. ಇದಕ್ಕಾಗಿ ಶೇ 4 ರಿಂದ 5ರಷ್ಟು ಕಮಿಷನ್ ಗಳಿಸುತ್ತಿದ್ದರು. ಐಟಿ ಅಧಿಕಾರಿಯೊಬ್ಬರಿಗೆ ಈ ಬಗ್ಗೆ ತಿಳಿದು ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಆದಾಯ ತೆರಿಗೆ ಇಲಾಖೆಯ ತೆರಿಗೆ ಸಂಗ್ರಹ ಪ್ರಾಜೆಕ್ಟ್ (ಸಿಪಿಸಿ)ಗೆ ಇನ್ಫೋಸಿಸ್ ಸಂಸ್ಥೆ ತಾಂತ್ರಿಕ ನೆರವು ಒದಗಿಸುತ್ತಿತ್ತು. ಇನ್ಫೋಸಿಸ್ ನಿಂದ ಐಟಿ ಇಲಾಖೆಗಾಗಿ ಈ ಮೂವರು ಕಾರ್ಯ ನಿರ್ವಹಿಸುತ್ತಿದ್ದರು.
ತೆರಿಗೆ ಮರುಪಾವತಿ ಪಡೆಯಲು ಏಳು ದಿನಗಳ ಕಾಲಾವಕಾಶ ಇರುವುದನ್ನು ಲಾಭಕ್ಕಾಗಿ ಬಳಸಿಕೊಂಡ ಈ ಮೂವರು, ತೆರಿಗೆದಾರರಿಂದ ಹಣ ಪಡೆದು ಸುಳ್ಳು ಮಾಹಿತಿ ನೀಡಿ, ಇಲಾಖೆಗೆ ವಂಚನೆ ಮಾಡುತ್ತಿದ್ದರು ಎಂದು ಐಟಿ ಇಲಾಖೆ ಅಧಿಕಾರಿ ಮ್ಯಾಥ್ಯೂ ಎಂಬುವರು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದರು.
ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ತೆರಿಗೆದಾರರೊಬ್ಬರು ಈ ಮೂವರಿಗೆ ಕಮಿಷನ್ ಮೊತ್ತ ನೀಡಲು ನಿರಾಕರಿಸಿದ್ದರು. ಈ ತಂಡದ ಜೊತೆ ನಡೆಸಿದ ಆಡಿಯೋ ಸಂಭಾಷಣೆಯನ್ನು ಹಂಚಿಕೊಂಡಿದ್ದರು. ಇದಕ್ಕೆ ಪೂರಕವಾಗಿ ಆಂತರಿಕ ತನಿಖೆಯಿಂದ ಮೂವರು ವಂಚನೆ ಮಾಡಿರುವುದು ದೃಢಪಟ್ಟ ಮೇಲೆ ಪೊಲೀಸರಿಗೆ ದೂರು ತಲುಪಿದೆ. ಈ ಮೂವರು ಸುಮಾರು 15 ಲಕ್ಷ ರುಗೂ ಅಧಿಕ ಮೊತ್ತ ವಂಚಿಸಿರಬಹುದು ಎಂದು ಅಂದಾಜಿಸಲಾಗಿದೆ.