ಉಗ್ರರ ತನಿಖೆ ವೇಳೆ ಬಯಲಾಯ್ತು 'ಬೆಂಗಳೂರು ಸ್ಫೋಟ' ಕುರಿತ ಮಾಹಿತಿ
ಬೆಂಗಳೂರು, ಜನವರಿ 14: ಬೆಂಗಳೂರು ಮತ್ತು ರಾಜ್ಯದಲ್ಲಿ ಸ್ಫೋಟ ನಡೆಸಲು ಉಗ್ರರು ಸಂಚು ರೂಪಿಸಿದ್ದರು ಎಂಬ ಆತಂಕಕಾರಿ ಮಾಹಿತಿ ಶಂಕಿತ ಉಗ್ರರ ವಿಚಾರಣೆ ವೇಳೆ ಬಹಿರಂಗಗೊಂಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಲಾಗಿತ್ತು. ಬಾಡಿಗೆ ಮನೆಯಲ್ಲೇ ಕುಳಿತು ಉಗ್ರರು ಸಂಚು ಮಾಡುತ್ತಿದ್ದರು.
ಜಿಹಾದಿ ಗ್ಯಾಂಗ್ ಸೆರೆ: ಐಸಿಸ್ ಕಮಾಂಡರ್ ವಿದೇಶಕ್ಕೆ ಪರಾರಿ?
ಸ್ಫೋಟಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದರು. 2019ರ ಜುಲೈನಿಂದ ಸಂಚು ನಡೆಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಮೆಹಬೂಬ್ ಪಾಷಾ, ಖ್ವಾಜಾ ಮೊಯಿದ್ದೀನ್ ವಿರುದ್ಧ ಎಸ್ಜಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆದರೆ ಪೊಲೀಸರ ಎಚ್ಚರಿಕೆಯಿಂದ ಬಹುದೊಡ್ಡ ಅನಾಹುತ ತಪ್ಪಿದೆ.
ದಕ್ಷಿಣ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಶಂಕಿತ ಉಗ್ರರಿಗಾಗಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಶೋಧ ಕಾರ್ಯಾಚರಣೆ ಈಗ ಕೋಲಾರಕ್ಕೂ ವಿಸ್ತರಣೆಯಾಗಿದೆ. ಐಸಿಸ್ ಜೊತೆ ನಂಟು ಹೊಂದಿದ್ದರೆನ್ನುವ ಆರೋಪದ ಮೇಲೆ ಕೋಲಾರದ ಇಬ್ಬರನ್ನು ಚೆನ್ನೈನ ಕ್ಯೂ ಬ್ರಾಂಚ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.