ಜನರ ಕಾಡುವ ಪ್ರಶ್ನೆ: ಲಸಿಕೆ ಹಾಕಿಸಿಕೊಂಡರೆ ಅಂಟುವುದಿಲ್ಲವೇ ಕೊರೊನಾ?
ಬೆಂಗಳೂರು, ಮಾರ್ಚ್ 18: ಭಾರತದಾದ್ಯಂತ ಕೊರೊನಾವೈರಸ್ ಲಸಿಕೆ ವಿತರಣೆಯನ್ನು ಶರವೇಗದಲ್ಲಿ ನಡೆಸಲಾಗುತ್ತಿದೆ. ಇನ್ನೊಂದು ಕಡೆಯಲ್ಲಿ ದೇಶಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ.
ರಾಜ್ಯದಲ್ಲೂ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿದೆ. ಸಕ್ರಿಯೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕವನ್ನು ಸೃಷ್ಟಿಸುತ್ತಿದೆ. ಕಳೆದ 24 ಗಂಟೆಗಳಲ್ಲೇ 1,275 ಮಂದಿಗೆ ಕೊವಿಡ್-19 ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 9,63,614ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆ 10,220ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕು ಏರಿಕೆ: ತಪ್ಪು ಆಗುತ್ತಿರುವುದು ಎಲ್ಲಿ?
ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡರೆ ಸೋಂಕು ಅಂಟಿಕೊಳ್ಳುವುದಿಲ್ಲವೇ. ಲಸಿಕೆ ಹಾಕಿಸಿಕೊಂಡು ನಿಯಮ ಮೀರಿದರೆ ಮುಂದೇನು ಗತಿ. ಕೊವಿಡ್-19 ಸೋಂಕಿನಿಂದ ಸುರಕ್ಷಿತವಾಗಿರಲು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ನೀಡುವ ಸಲಹೆಗಳೇನು ಎಂಬುದರ ಕುರಿತು ಒಂದು ವರದಿ ಇಲ್ಲಿದೆ.
ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಸೋಂಕು
ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡ ನಂತರದಲ್ಲೂ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿರುವ ಘಟನೆ ಇತ್ತೀಚಿಗೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಗರದ ಜಯದೇವ ಆಸ್ಪತ್ರೆಯಲ್ಲಿ ಎರಡು ಡೋಸ್ ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡ ಆರೋಗ್ಯ ಸಿಬ್ಬಂದಿಯಲ್ಲೇ ಸೋಂಕು ದೃಢಪಟ್ಟಿದೆ. ಒಂದೆರೆಡು ಸೋಂಕಿತ ಪ್ರಕರಣಗಳು ಪತ್ತೆಯಾದಲ್ಲಿ ಲಸಿಕೆಯ ಸುರಕ್ಷತೆಯನ್ನೇ ಪ್ರಶ್ನೆ ಮಾಡುವ ಹಾಗಿಲ್ಲ. ಲಸಿಕೆಯಿಂದ ಸೋಂಕು ಹರಡುವಿಲ್ಲ ಎಂದು ಹೇಳಲಾಗುವುದಿಲ್ಲ. ಬದಲಿಗೆ ಸೋಂಕು ಹರಡುವಿಕೆಯ ತೀವ್ರತೆ ಕಡಮೆಯಾಗುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆ ವಿತರಣೆ
ಕರ್ನಾಟಕದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯಲ್ಲಿ ಉತ್ಪಾದಿಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜನವರಿ 16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲು ಕೊರೊನಾವೈರಸ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಫೆಬ್ರವರಿ 2ರಿಂದ ಎರಡನೇ ಡೋಸ್ ಲಸಿಕೆಯ ವಿತರಣೆ ಕಾರ್ಯಾರಂಭ ಮಾಡಲಾಗಿತ್ತು. ಅದಾಗಿ ಮಾರ್ಚ್ 1 ರಿಂದ ದೇಶಾದ್ಯಂತ ಎರಡನೇ ಹಂತದ ಲಸಿಕೆ ವಿತರಣೆ ಕಾರ್ಯ ಆರಂಭಿಸಲಾಗಿದೆ.
ಬೆಂಗಳೂರಿಗರೇ ಎಚ್ಚರ: ನಿಮ್ಮ ಸುತ್ತಮುತ್ತಲಿನಲ್ಲೇ ಅಡಗಿದೆ ಕೊರೊನಾ!
ದೇಹದಲ್ಲಿ ರೋಗ ನಿರೋಧಕ ಶಕ್ತಿಯ ವೃದ್ಧಿ
ಒಮ್ಮೆ ಕೊರೊನಾವೈರಸ್ ಲಸಿಕೆಯನ್ನು ಹಾಕಿಸಿಕೊಂಡ ಫಲಾನುಭವಿಗಳಲ್ಲಿ ರೋಗ ನಿರೋಧಕ ಶಕ್ತಿಯು ವೃದ್ಧಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಅದಾಗಿ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡರೆ ಕೊವಿಡ್-19 ರೋಗಾಣುಗಳನ್ನು ಕೊಲ್ಲುವಂಥ ಸಾಮರ್ಥ್ಯವನ್ನು ಲಸಿಕೆಯ ಅಂಶವು ಹೊಂದಿರುತ್ತದೆ. ಕೊರೊನಾವೈರಸ್ ಸೋಂಕಿನಿಂದ ಆ ವ್ಯಕ್ತಿಯನ್ನು ರಕ್ಷಿಸುತ್ತದೆ. ಇದರ ಮಧ್ಯೆ ಕೊರೊನಾವೈರಸ್ ಶಿಷ್ಟಾಚಾರಗಳನ್ನು ಸಾರ್ವಜನಿಕರು ಪಾಲನೆ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
Recommended Video
"ಕಾರಿನ ಸೀಟ್ ಬೆಲ್ಟ್, ಲಸಿಕೆ ಎರಡೂ ಒಂದೇ"
ಸಾರ್ವಜನಿಕರು ಕೊರೊನಾವೈರಸ್ ಲಸಿಕೆಯನ್ನು ಯಾವುದಕ್ಕಾಗಿ ಪಡೆಯಬೇಕು ಎಂಬುದರ ಬಗ್ಗೆ ಬೆಂಗಳೂರು ಜಯದೇವ ಆಸ್ಪತ್ರೆಯ ವೈದ್ಯ ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಡಾ. ಮಂಜುನಾಥ್ ಅವರು ವಿವರಿಸಿದ್ದಾರೆ. "ಜಯದೇವ ಆಸ್ಪತ್ರೆಯಲ್ಲೇ ಲಸಿಕೆ ಹಾಕಿಸಿಕೊಂಡ ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಲಸಿಕೆ ಎಂಬುದು ಕಾರಿನಲ್ಲಿ ನಾವು ಧರಿಸುವ ಸೀಟ್ ಬೆಲ್ಟ್ ಮತ್ತು ಏರ್ ಬ್ಯಾಗ್ ಇದ್ದಂತೆ. ಇವುಗಳಿಂದ ಅಪಘಾತವನ್ನು ತಪ್ಪಿಸುವುದಕ್ಕೆ ಆಗುವುದಿಲ್ಲ. ಬದಲಿಗೆ ಅಪಘಾತ ನಡೆದ ಸಂದರ್ಭದಲ್ಲಿ ಸಾವಿನ ಪ್ರಮಾಣವನ್ನು ತಗ್ಗಿಸುತ್ತದೆ. ಲಸಿಕೆಯೂ ಕೂಡಾ ಸಾರ್ವಜನಿಕರನ್ನು ಕೊರೊನಾವೈರಸ್ನಿಂದ ರಕ್ಷಿಸುವುದಿಲ್ಲ. ಅದರ ಬದಲು ವೈರಸ್ನಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ ಎಂದು ಹೇಳಿದ್ದಾರೆ.