ಇಂದಿರಾನಗರ 100 ಅಡಿ ರಸ್ತೆ ಲೋಪದೋಷ: 'ಕೂ' ಮೂಲಕ ಸಾರ್ವಜನಿಕರ ಅಕ್ರೋಶ
ಬೆಂಗಳೂರು ಅಕ್ಟೋಬರ್ 22: ಮೊಬೈಲ್ ನೋಡಿಕೊಂಡು ಅತ್ತಿತ್ತ ಕಣ್ಣು ಹಾಯಿಸುತ್ತಾ ಗಮನ ಬೇರೆಡೆಗೆ ಹರಿಸಿಬಿಟ್ರೆ ಮಾತ್ರ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುವುದಿಲ್ಲ. ಬದಲಿಗೆ ರಸ್ತೆ ನೋಡಿಕೊಂಡು ವಾಹನ ಸವಾರಿ ಮಾಡಿದರೂ ಅಪಘಾತಕ್ಕೊಳಗಾಗುವ ಭೀತಿ ಇದೆ. ಹೀಗೆ ಪ್ರಾಣ ಪಕ್ಷಿಯನ್ನು ಕೈಯಲ್ಲಿ ಹಿಡಿದುಕೊಂಡು ಈ ರಸ್ತೆಯಲ್ಲಿ ಹೋಗಬೇಕಾದಂತ ಸ್ಥಿತಿ ಇದೆ. ಸಿಲಿಕಾನ್ ಸಿಟಿಯ ಐಷಾರಾಮಿ ಪ್ರದೇಶಗಳಲ್ಲಿ ಒಂದಾಗಿರುವ ಇಂದಿರಾನಗರದ 100 ಅಡಿ ರಸ್ತೆ ಗುಂಡಿಗಳಿಂದ ತುಂಬಿ ಹೋಗಿದ್ದು ಸಮಸ್ಯೆಗಳ ಸರಮಾಲೆಗಳಿಂದ ತುಂಬಿದೆ. ಇಲ್ಲಿನ ರಸ್ತೆಯ ಬಗ್ಗೆ ಜನ ಆಕ್ರೋಶ ಹೊರ ಹಾಕಿದ್ದಾರೆ.
ಇಂದಿರಾನಗರದ 100 ಅಡಿ ರಸ್ತೆಯ ಗುಂಡಿಗಳ ಬಗ್ಗೆ ಸಾರ್ವಜನಿಕರು ಸರಣಿ ಕೂ (ಕೂ ಕನ್ನಡ ಅಪ್ಲಿಕೇಷನ್) ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಇದು ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆ ಜೊತೆ ಹಳೆ ಮದ್ರಾಸ್ ರಸ್ತೆ ಸಂಪರ್ಕಿಸುತ್ತದೆ. ಒಂದು ಕೊನೆಯಲ್ಲಿ ಮಧ್ಯಂತರ ವರ್ತುಲ ರಸ್ತೆ ಫ್ಲೈಓವರ್ ಜಂಕ್ಷನ್ (ದೊಮ್ಮಲೂರು ಜಂಕ್ಷನ್), ಮತ್ತೊಂದು ಕೊನೆಯಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆ ಇದೆ. ಹೀಗಾಗಿ ಈ ಪ್ರದೇಶದಲ್ಲಿ ದಿನ ಬೆಳಗಾದರೆ ಅಧಿಕ ವಾಹನ ದಟ್ಟಣೆ ಎದುರಾಗುತ್ತದೆ. ಅಂದುಕೊಂಡ ಸ್ಥಳಕ್ಕೆ ತಲುಪಬೇಕು ಅಂದ್ರೆ ಗಂಟೆಗಳಷ್ಟು ಕಾಯಬೇಕು. ಇದಕ್ಕೆ ಕಾರಣ ಗುಂಡಿಗಳು. ಪಾತಾಳಕ್ಕಿದಂತೆ ಭಾಸವಾಗುವ ರಸ್ತೆ ಗುಂಡಿಗಳ ಬಗ್ಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಈ ರಸ್ತೆಯಲ್ಲಿ ಹಾದು ಹೋಗಲು ಯಮಯಾತನೆಯ ಅನುಭವವಾಗುತ್ತದೆ ಎಂದು ದೂರಿದ್ದಾರೆ. ಹೀಗೆ ಸರದಿಯಲ್ಲಿ ಜನ ಟ್ವೀಟ್ ಮಾಡಿ ರಸ್ಸತೆಯ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಕೂ ಮಾಡಿದ ಸುನೀಲ್ ಎನ್ ಜಿ - 'ಐಟಿ ಕಂಪೆನಿಗಳೇ ಸಾಲು ಸಾಲು ಚಕ್ಕಳ ಮಕ್ಕಳ ಹಾಕಿ ಕೂತಂತಿರುವ ಇಂದಿರಾನಗರದ ರೋಡು ಮೈಕೈ ತೂತು ಮಾಡಿಕೊಂಡು ಸೊರಗಿ ಸತ್ತು ಹೋಗಿದೆ.. ಅದರ ಅವಸ್ಥೆ ನೋಡಿದರೆ ಆ ರೋಡಿಗೆ ಜನ್ಮವಿತ್ತವರ ಮುಖ ನೋಡ್ಬೇಕಲ್ಲ ಅನ್ಸತ್ತೆ, ಅದನ್ನ ಏನಾದ್ರು ಮಾಡ್ರಿ ರೀ ಶ್ರೀಮಾನ್ ಬೆಂಗಳೂರನವ್ರೆ! ಪಾಪ ಕೆಂಪೇಗೌಡ್ರು!' ಎಂದು ಬರೆದಿದ್ದಾರೆ.
'ಕಷ್ಟಕಷ್ಟ. .ಬೆಂಗಳೂರಿನ ಇಂದಿರಾನಗರದ 100 ಅಡಿ ವರ್ತುಲ ರಸ್ತೆಯಲ್ಲಿ ಪ್ರಯಾಣ ದೇವರಿಗೂ ಬೇಡ. ಬಿಬಿಎಂಪಿ ರಸ್ತೆ ರಿಪೇರಿ ಮಾಡೋದಾದ್ರೂ ಯಾವಾಗ?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಗಣೇಶ್ .
'ಇಂದಿರಾ ನಗರದ 100 ಅಡಿ ವರ್ತುಲ ರಸ್ತೆಯಲ್ಲಿ ಸಾಗುವುದು ಜೀವ ಪಣಕ್ಕಿಟ್ಟು ನಡೆಸುವ ಯಾವುದೇ ಸಾಹಸಮಯ ಪ್ರದರ್ಶನ ನೀಡುವ ಸ್ಟಂಟ್ಗಳಿಗೆ ಹೋಲಿಸಿದರೆ ಅದಕ್ಕಿಂತ ಕಡಿಮೆ ಅನುಭವನ್ನಂತೂ ನೀಡಲಾರದು. ನೀವೂ ಈ ಮಾರ್ಗದಲ್ಲಿ ಸಂಚರಿಸಿದ್ದರೆ ನಿಮ್ಮ ಅನಿಸಿಕೆ ಏನು?' ಎಂದು ನರೇಶ್ ಕೂ ಮಾಡಿದ್ದಾರೆ.
ಬಿಬಿಎಂಪಿ ಹೇಳುವುದೇನು?
ರಸ್ತೆಗಳ ಗುಂಡಿಗೆ ಹವಾಮಾನ ವೈಪರೀತ್ಯ ಕಾರಣವಾಗಿದೆ. ಒಂದೆಡೆ ಗುಂಡಿ ಮುಚ್ಚುವ ಕೆಲಸಗಳು ನಡೆಸುತ್ತಿದೆ. ಮತ್ತೊಂದೆಡೆ ಮಳೆ ಸುರಿಯುತ್ತಿರುವುದರಿಂದ ಕೆಲಸಗಳು ವಿಫಲವಾಗುವಂತೆ ಮಾಡುತ್ತಿದೆ ಎಂದು ಬಿಬಿಎಂಪಿ ಇಂಜಿನಿಯರ್ ಗಳು ಹೇಳಿದ್ದಾರೆ. ಗುಂಡಿ ಮುಚ್ಚಲು ಜಲ್ಲಿಕಲ್ಲುಗಳನ್ನು ಹಾಕುತ್ತಿದ್ದೇವೆ ಆದರೆ, ಮಳೆ ಎಡೆಬಿಡದೆ ಸುರಿಯುತ್ತಿರುವುದು ಮತ್ತೆ ಮತ್ತೆ ಗುಂಡಿ ಬೀಳುವಂತೆ ಮಾಡುತ್ತಿದೆ ಎಂದು ಬಿಬಿಎಂಪಿ ಎಂಜಿನಿಯರ್ ಹೇಳುತ್ತಾರೆ.
ಜಲ್ಲಿಕಲ್ಲು ಕೊರತೆ
ರಸ್ತೆ ಗುಂಡಿಗಳನ್ನು ಮುಚ್ಚಲು ಜಲ್ಲಿಕಲ್ಲು ಕೊರತೆಯಾಗಿದೆ ಎಂದು ಹೇಳಲಾಗುತ್ತಿದೆ. ರಸ್ತೆಗಳ ಕಾಮಗಾರಿಗಾಗಿ ಬಹುತೇಕ ಜಲ್ಲಿಕಲ್ಲುಗಳನ್ನು ಗುತ್ತಿಗೆದಾರರು ಬಳಕೆ ಮಾಡಿಕೊಳ್ಳುತ್ತಿರುವುದಿಂದ ಗುಂಡಿಗಳ ಮುಚ್ಚಲು ಜಲ್ಲಿಕಲ್ಲುಗಳ ಕೊರತೆ ಎದುರಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ನಗರದ ರಸ್ತೆಗಳ ಗುಂಡಿ ಮುಚ್ಚಲು 60 ಲೋಡ್ ಜಲ್ಲಿಕಲ್ಲುಗಳ ಅಗತ್ಯವಿದೆ. ಆದರೆ, ಪಾಲಿಕೆ ಎಂಜಿನಿಯರ್ ಗಳಿಗೆ ಅಗತ್ಯವಿರುವಷ್ಟು ಪ್ರಮಾಣದ ಜಲ್ಲಿಕಲ್ಲುಗಳು ಸಿಗುತ್ತಿಲ್ಲ. ಹೀಗಾಗಿ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಕೆಲ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಮಾಡಲಾಗಿದೆ. ಆದರೆ, ಇನ್ನು ಕೆಲ ಡಾಂಬರು ಹಾಕಲಾಗಿದ್ದು, ಮಳೆ ಸತತವಾಗಿ ಬರುತ್ತಿರುವುದಿಂದ ಈ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಡಾಂಬರು ಹಾಕುತ್ತಿದ್ದಂತೆಯೇ ಮಳೆ ಬರುತ್ತಿದೆ. ಇದರಿಂದ ಎಲ್ಲವೂ ಕೊಚ್ಚಿ ಹೋಗುತ್ತಿದೆ. ಬಳಿಕ ಗುಂಡಿಗಳು ಬೀಳುತ್ತಿವೆ. ಈ ನಡುವೆ ಬಿಡಬ್ಲ್ಯೂಎಸ್ಎಸ್'ಬಿ ಕೂಡ ತನ್ನ ಕೆಲಸವನ್ನು ಆರಂಭಿಸಿದ್ದು, ಇದೂ ಕೂಡ ನಮ್ಮ ಕೆಲ ತಡವಾಗುವಂತೆ ಮಾಡುತ್ತಿದೆ ಎಂದು ಪೂರ್ವ ವಲಯದ ಬಿಬಿಎಂಪಿ ಎಂಜಿನಿಯರ್ ಹೇಳಿದ್ದಾರೆ.
ಗುಂಡಿಗಳಿವೆ ಎಚ್ಚರಿಕೆ
Recommended Video
ಹೀಗೆ ಗುಂಡಿ ಮುಚ್ಚಲು ಬಿಬಿಎಂಪಿಗೂ ಸಮಸ್ಯೆಗಳಿವೆ ಎಂದು ಇಂಜಿನಿಯರ್ಗಳು ಹೇಳಿಕೊಳ್ಳುತ್ತಾರೆ. ಹೀಗಾಗಿ ಪರ್ಯಾಯ ಮಾರ್ಗವಾಗಿ ಕೆಲವೆಡೆ ರಸ್ತೆ ಗುಂಡಿ ಬಿದ್ದಿರುವ ಸ್ಥಳಗಳಲ್ಲಿ, ಬೋರ್ಡ್, ಪೋಸ್ಟರ್ ಹಾಗೂ ಬ್ಯಾನರ್ಗಳನ್ನು ಹಾಕಲು ನಿರ್ಧರಿಸಿದೆ. ಈಗಾಗಲೇ ರಿಂಗ್ ರಸ್ತೆ ಹೊರವರ್ತುಲ (ಹೊರಮಾವು-ಹೆಣ್ಣೂರು)ದ ರಸ್ತೆಯಲ್ಲಿ ಬೋರ್ಡ್ಗಳನ್ನು ಹಾಕಿದ್ದು, ಗುಂಡಿಗಳಿರುವುದರಿಂದ ಜಾಗ್ರತೆಯಿಂದ ವಾಹನ ಚಲಾಯಿಸುವಂತೆ ಮನವಿ ಮಾಡಿಕೊಂಡಿದೆ.