ಆಗಸ್ಟ್ 15ರಿಂದ ಇಂದಿರಾ ಕ್ಯಾಂಟೀನ್ ಬಾಗಿಲು ಓಪನ್: ಸಿದ್ದರಾಮಯ್ಯ
ಇಂದಿರಾ ಕ್ಯಾಂಟೀನ್ ಗೆ ಆಗಸ್ಟ್ 15ರಂದು ಚಾಲನೆ ನೀಡಲು ನಿರ್ಧರಿಸಲಾಗಿದ್ದು ಕ್ಯಾಂಟೀನ್ ಗಳ ನಿರ್ವಹಣಾ ಜವಾಬ್ದಾರಿಯನ್ನು ಬಿಬಿಎಂಪಿಗೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಬೆಂಗಳೂರು, ಏಪ್ರಿಲ್ 25 : ವಿಳಂಬದ ಹಾದಿ ಹಿಡಿದಿದ್ದ ಸಿದ್ದರಾಮಯ್ಯ ಸರಕಾರದ ಬಹುನಿರೀಕ್ಷಿತ 'ಇಂದಿರಾ ಕ್ಯಾಂಟೀನ್' ಕೊನೆಗೂ ಬಾಗಿಲು ತೆರೆಯಲು ಮುಹೂರ್ತ ಫಿಕ್ಸ್ ಆಗಿದೆ.
"ಬಿಬಿಎಂಪಿಯ 198 ವಾರ್ಡ್ ಗಳಲ್ಲಿ ಆಗಸ್ಟ್ 15ರಿಂದ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕ್ಯಾಂಟೀನ್ ಆರಂಭಿಸುವ ಸಂಬಂಧ ಮಂಗಳವಾರ ಹಣಕಾಸು ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, "ಕ್ಯಾಂಟೀನ್ ಆರಂಭಕ್ಕೆ 2-3 ತಿಂಗಳು ಸಿದ್ಧತೆ ನಡೆಸಬೇಕಾಗುತ್ತದೆ.
ಹೀಗಾಗಿ ಆಗಸ್ಟ್ 15ರಂದು ಚಾಲನೆ ನೀಡಲು ನಿರ್ಧರಿಸಲಾಗಿದ್ದು ಕ್ಯಾಂಟೀನ್ ಗಳ ನಿರ್ವಹಣಾ ಜವಾಬ್ದಾರಿಯನ್ನು ಬಿಬಿಎಂಪಿಗೆ ವಹಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ" ಎಂದರು. ['ಇಂದಿರಾ ಕ್ಯಾಂಟೀನ್'ಗೆ ಈರುಳ್ಳಿ-ಬೆಳ್ಳುಳ್ಳಿ ಸಂಕಟ]
ಈ ಇಂದಿರಾ ಕ್ಯಾಂಟೀನ್ 2017ರ ರಾಜ್ಯ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು. ಕ್ಯಾಂಟೀನ್ ಎಲ್ಲಿ, ಯಾರು ನಿರ್ವಹಿಸಲಿದ್ದಾರೆ ಎಂಬ ಮಾಹಿತಿಗೆ ಮುಂದೆ ಓದಿ.
198 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್
198 ವಾರ್ಡ್ ಗಳಲ್ಲಿ ತಲಾ 500 ಚದರ ಅಡಿ ಜಾಗದಲ್ಲಿ 7.50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡಗಳು ನಿರ್ಮಾಣ ಆಗಲಿದೆ. ನಿರ್ಮಾಣ ಜವಾಬ್ದಾರಿಯನ್ನು ಭೂ ಸೇನಾ ನಿಗಮಕ್ಕೆ ವಹಿಸಲಾಗುವುದು. ಇದರ ಒಟ್ಟು ವೆಚ್ಚ 15 ಕೋಟಿ ರು.ಗಳಾಗಲಿದೆ.
ಇಂದಿರಾ ಕ್ಯಾಂಟೀನ್ ಗೆ ಸಮಿತಿ ರಚನೆ
ಕ್ಯಾಂಟೀನ್ ಗಳ ಲಾಂಛನ, ಕಟ್ಟಡದ ವಿನ್ಯಾಸ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಸಚಿವ ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.
ಸಮಿತಿಯಲ್ಲಿ ಯಾರ್ಯಾರು?
ಬಿಬಿಎಂಪಿ ಮೇಯರ್, ಉಪ ಮೇಯರ್, ಆಯುಕ್ತರು, ಆಹಾರ ಸಚಿವರು, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗಳು ಸಮಿತಿಯಲ್ಲಿ ಇರುತ್ತಾರೆ ಎಂದು ಮುಖ್ಯಮಂತ್ರಿ ಗಳು ಹೇಳಿದರು.
ಆಹಾರದ ಗುಣಮಟ್ಟದಲ್ಲಿ ರಾಜಿ ಇಲ್ಲ
ಕ್ಯಾಂಟೀನ್ ಗಳಲ್ಲಿ 5 ರು.ಗೆ ಉಪಾಹಾರ, 10 ರು.ಗಳಿಗೆ ಮಧ್ಯಾಹ್ನ, ರಾತ್ರಿ ಊಟ ನೀಡಲಾಗುವುದು. ನಮ್ಮ ಅಧಿಕಾರಿಗಳು ತಮಿಳುನಾಡಿಗೆ ಹೋಗಿ ಅಮ್ಮ ಕ್ಯಾಂಟೀನ್ ಬಗ್ಗೆ ಅಧ್ಯಯನ ನಡೆಸಿ ಬರಲಿದ್ದಾರೆ. ಕ್ಯಾಂಟೀನ್ ಗಳಲ್ಲಿ ನೀಡುವ ಆಹಾರದ ಗುಣಮಟ್ಟದಲ್ಲಿ ರಾಜಿ ಇಲ್ಲ ಎಂದು ಹೇಳಿದರು.