ಭಾರಿ ನಷ್ಟದಿಂದ ಸದ್ದಿಲ್ಲದೇ ಬಾಗಿಲು ಮುಚ್ಚಿದ ದೇಶದ ಮೊದಲ ಸುರಂಗ ಅಕ್ವೇರಿಯಂ
ಬೆಂಗಳೂರು, ಜುಲೈ 14: ದೇಶದ ಮೊದಲ ಸುರಂಗ ಅಕ್ವೇರಿಯಂ ಎಂದು ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಆರಂಭವಾಗಿದ್ದ ಸುರಂಗ ಅಕ್ವೇರಿಯಂ ಭಾರಿ ನಷ್ಟದಿಂದಾಗಿ ಸದ್ದಿಲ್ಲದೆ ಬಾಗಿಲು ಮುಚ್ಚಿದೆ. ಇದು ಕಳೆದ ಜುಲೈ 1 ರಂದು ಆರಂಭವಾಗಿದ್ದು, ಕೇವಲ ಒಂದು ವರ್ಷದಲ್ಲಿಯೇ ಸ್ಥಗಿತಗೊಂಡಿದೆ.
ಭಾರತೀಯ ರೈಲ್ವೆ ಅಭಿವೃದ್ಧಿ ನಿಗಮ ಹಾಗೂ ಎಚ್ಎನ್ಐ ಎಂಟರ್ಪ್ರೈಸಸ್ ಜಂಟಿಯಾಗಿ ಸುರಂಗ ಅಕ್ವೇರಿಯಂ ಯೋಜನೆ ರೂಪಿಸಿದ್ದವು. ಕೊರೊನಾ ಕಾರಣವಾಗಿ ಯೋಜನೆ ವಿಳಂಬವಾಗಿತ್ತು. ಆದರೆ ಕಳೆದ ಜುಲೈ ಜುಲೈ 1 ರಂದು ಆರಂಭವಾಗಿತ್ತು. ಅಗಿನ ಒಪ್ಪಂದದಂತೆ ಇದನ್ನು ಮೂರು ವರ್ಷಗಳವರೆಗೆ ವಿಸ್ತರಿಸಲು ಅನುಮತಿ ನೀಡಲಾಗಿತ್ತು. ಆದರೆ ಮಾಲೀಕರು ಒಂದು ವರ್ಷದಲ್ಲಿಯೇ ಸುರಂಗ ಅಕ್ವೇರಿಯಂ ಅನ್ನು ಮುಚ್ಚಿದ್ದಾರೆ.
ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಅಕ್ವೇರಿಯಂ ತೆರೆದಿರುತ್ತಿತ್ತು. 25 ರೂ ಪ್ರವೇಶ ಶುಲ್ಕ ವಿಧಿಸಿ, ಅಕ್ವೇರಿಯಂ ಬಳಿ ಸೆಲ್ಫೀ ಪಾಯಿಂಟ್ಗಳನ್ನೂ ರೂಪಿಸಲಾಗಿತ್ತು. ಈ ಅಕ್ವೇರಿಯಂ ಕುರಿತು ಭಾರಿ ನಿರೀಕ್ಷೆ ಇಡಲಾಗಿತ್ತು. ಪ್ರತಿದಿನ 500 ರಿಂದ 600 ಪ್ರಯಾಣಿಕರು ಮತ್ತು ವಾರಾಂತ್ಯದಲ್ಲಿ 4,000 ಜನರು ಭೇಟಿ ನೀಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆರ್ಥಿಕ ನಷ್ಟದ ಕಾರಣದಿಂದ ಇದನ್ನು ಮುಚ್ಚಿರುವುದಾಗಿ ಮಾಲೀಕರು ಮಾಹಿತಿ ನೀಡಿದ್ದಾರೆ.
ಇನ್ನು, ಸುರಂಗ ಅಕ್ವೇರಿಯಂ ಅನ್ನು ಮುಚ್ಚುವ ಬಗ್ಗೆ ಬೆಂಗಳೂರು ರೈಲ್ವೆ ವಿಭಾಗವು ಯಾವುದೇ ಸೂಚನೆ ನೀಡದ ಕಾರಣ ರೈಲ್ವೆ ನಿಲ್ದಾಣಕ್ಕೆ ಬಂದು ಅಕ್ವೇರಿಯಂ ಕಡೆಗೆ ತೆರಳುತ್ತಿದ್ದ ಪ್ರಯಾಣಿಕರು ಮುಚ್ಚಿದ' ಬೋರ್ಡ್ ನೋಡಿ ಹಿಂತಿರುಗುತ್ತಿದ್ದರು.
ಈ ಸುರಂಗ ಅಕ್ವೇರಿಯಂ ಪ್ರಾರಂಭದ ದಿನಗಳಲ್ಲಿ ಪ್ರಯಾಣಿಕರಿಂದ ಉತ್ತಮ ವಿಮರ್ಶೆಗಳನ್ನು ಗಳಿಸಿತ್ತು. ಕೇವಲ 25 ರೂಪಾಯಿಗೆ ಮತ್ಸ್ಯಲೋಕದ ವಿಭಿನ್ನ ಜಗತ್ತಿನ ಪರಿಚಯ ನೀಡುತ್ತಿತ್ತು. ಬ್ಲಾಕ್ ಡೈಮೆಂಡ್, ಸ್ಟಿಂಗ್ ರೇ ಮತ್ತು ಹೈ ಫಿನ್ ಶಾರ್ಕ್ಗಳು ಸೇರಿದಂತೆ ಸುರಂಗ ಅಕ್ವೇರಿಯಂನಲ್ಲಿ ವಿದೇಶದ ಹಲವು ಅಪರೂಪದ ಮೀನುಗಳು ಕಾಣಸಿಗುತ್ತಿದ್ದವು. ಅಮೆಜಾನ್ ಮಳೆಕಾಡಿನ ಮಾದರಿಯಲ್ಲಿ ಭೂಮಿಯ ಸಸ್ಯಗಳು, ಜಲ ಸಸ್ಯಗಳು ಮತ್ತು ಜೀವ ರೂಪಗಳ ಅಕ್ವೇರಿಯಂ ಇಲ್ಲಿ ದೊಡ್ಡ ಆಕರ್ಷಣೆಯಾಗಿತ್ತು. ಸೆಲ್ಫಿ ಪಾಯಿಂಟ್ಗಳು ಮತ್ತು ಮಕ್ಕಳ ವಲಯವೂ ಇತ್ತು.
ಪ್ರತಿದಿನ ನೂರಾರು ಜನ ಓಡಾಡುವ ಜಾಗದಲ್ಲಿದ್ದ ಈ ಸುರಂಗ ಅಕ್ವೇರಿಯಂ ಅನ್ನು ಪ್ರಸಿದ್ಧ ಪಡಿಸಲು ಇಲಾಖೆ ಮತ್ತಷ್ಟು ಕೆಲಸ ಮಾಡಬಹುದಿತ್ತು ಎಂಬ ಮಾತುಗಳು ಪ್ರಯಾಣಿಕರಿಂದ ಕೇಳಿ ಬಂದಿವೆ.
Recommended Video