ಭಾರತದಾದ್ಯಂತ ರಕ್ಷಾ ಬಂಧನಕ್ಕೆ ಭಾರೀ ತಯಾರಿ
ಬೆಂಗಳೂರು, ಆಗಸ್ಟ್, 28 : ನಮ್ಮ ನಾಡಿನಲ್ಲಿ ಎಲ್ಲಾ ಹಬ್ಬಗಳಿಗಿಂತ ರಕ್ಷಾ ಬಂಧನಕ್ಕೆ ವಿಶೇಷ ಪ್ರಾಧಾನ್ಯತೆ. ಏಕೆಂದರೆ ಇದು ಎಲ್ಲಾ ಜಾತಿ, ವರ್ಗ, ವರ್ಣ, ಧರ್ಮ, ಅಧಿಕಾರ, ಅಂತಸ್ತುಗಳ ಎಲ್ಲೆಯನ್ನು ಮೀರಿ ನಿಲ್ಲುತ್ತದೆ.
ಶ್ರಾವಣ ಮಾಸದಲ್ಲಿ ವರ ಮಹಾಲಕ್ಷ್ಮೀ ಹಬ್ಬದ ತರುವಾಯ ಬರುವುದೇ ರಕ್ಷಾ ಬಂಧನ. ಆ ದಿನ ಸೋದರಿಯರು ತಮ್ಮ ಸೋದರರಿಗೆ ರಾಖಿ ಕಟ್ಟಿ, ಆರತಿ ಬೆಳಗಿ, ಸೋದರರಿಂದ ಆಶೀರ್ವಾದ ಪಡೆಯುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಇದಾಗಿದೆ.[ಪ್ರಧಾನಿ ಮೋದಿಗೆ ಲಕ್ಷಾಂತರ ರಾಖಿ ರವಾನೆ!
ಈ ಹಬ್ಬದ ಮತ್ತೊಂದು ವಿಶೇಷವೆಂದರೆ ಹೆಂಗಳೆಯರು ಯಾರನ್ನು ಮನಸ್ಪೂರ್ವಕವಾಗಿ ಅಣ್ಣ ಅಥವಾ ತಮ್ಮ ಎಂದು ಸ್ವೀಕರಿಸಲು ಇಚ್ಛಿಸುತ್ತಾರೋ ಅಂತಹವರು ಆ ವ್ಯಕ್ತಿಗೆ ರಾಖಿಯನ್ನು ಕಟ್ಟಿ ಅಣ್ಣನ ಪ್ರೀತಿ ಬಾಂಧವ್ಯವನ್ನು ಪಡೆಯುತ್ತಾರೆ. ಒಟ್ಟಿನಲ್ಲಿ ಅಣ್ಣ ತಮ್ಮಂದಿರಾಗಲು ರಕ್ತ ಸಂಬಂಧವೇ ಆಗಬೇಕಿಲ್ಲ ಎಂಬ ದಿವ್ಯ ಸಂದೇಶವೂ ಇದರಲ್ಲಿದೆ.
ಬನ್ನಿ ಆಗಸ್ಟ್ 29 ರ ಶನಿವಾರದಂದು ಇರುವ ರಕ್ಷಾ ಬಂಧನ ಹಬ್ಬಕ್ಕೆ ರಾಖಿ ಖರೀದಿಯಲ್ಲಿ ತೊಡಗಿರುವ ಮಹಿಳೆಯರು ಎಂತಹ ರಾಖಿಗಳನ್ನು ಖರೀದಿಸುತ್ತಾರೆ, ತಯಾರಿಸಿದ್ದಾರೆ ಎಂದು ಪಿಟಿಐ ಚಿತ್ರಗಳ ಮೂಲಕ ನೋಡಿಕೊಂಡು ಬರೋಣ....
ರಕ್ಷಾ ಬಂಧನಕ್ಕಿರುವ ವಿವಿಧ ಹೆಸರುಗಳು
ಶ್ರಾವಣ ಮಾಸದ ಹುಣ್ಣಿಮೆ ದಿನದಂದು ಬರುವ ಈ ಹಬ್ಬವನ್ನು ರಕ್ಷಾಬಂಧನ ಎಂದು ಕರೆದರೆ, ಇನ್ನು ಕೆಲವರು ಇದನ್ನು ಜನಿವಾರ ಹುಣ್ಣಿಮೆ, ಜನಿವಾರದ ಹಬ್ಬ ಎಂದು ಕರೆಯುತ್ತಾರೆ. ಮೊದಲು ಉತ್ತರ ಭಾರತದಲ್ಲಿ ಮಾತ್ರ ಪ್ರಖ್ಯಾತತೆ ಹೊಂದಿದ್ದ ಹಬ್ಬ ಇದೀಗ ಭಾರತದಾದ್ಯಂತ ಆಚರಿಸಲಾಗುತ್ತದೆ.
ಭಾರತದ ಬಹುದೊಡ್ಡ ರಾಖಿ
ಇಂದೋರ್ ನ ಯುವತಿಯೊಬ್ಬಳು ರಾಖಿ ಹಬ್ಬದ ಪ್ರಯುಕ್ತ ಬಹುದೊಡ್ಡ ರಾಖಿಯನ್ನು ಆಕೆಯೇ ಸ್ವತಃ ತಯಾರಿಸಿ ಪ್ರದರ್ಶನಕ್ಕಿಟ್ಟು, ಫೋಟೋಗೆ ಮುಖ ಮಾಡಿದ್ದು ಹೀಗೆ.
ಈ ರಾಖಿ ಚಂದ ಇದೆಯಾ ಮಾರಾಯ್ರೇ?
ಅಯ್ಯೋ ಒಂದಲ್ಲಾ ಹಲವಾರು ರಾಖಿ ನೋಡಿ ಆಯ್ತು ಮಾರಾಯ್ರೇ..ಯಾವುದು ತಗೋಬೇಕೋ ಗೊತ್ತಾಗ್ತಿಲ್ಲ. ಹೊಸ ಹೊಸ ಡಿಸೈನ್, ಲೇಟೆಸ್ಟ್ ರಾಖಿ ತೋರಿಸ್ರೀ ಎನ್ನುತ್ತಾ ಹೊಸದಾಗಿ ಮದುವೆ ಆದ ಹೆಣ್ಣು ಮಗಳು ತನ್ನ ಅಣ್ಣನಿಗೆ ಅಂದ ಚಂದದ ರಾಖಿ ಹುಡುಕಾಟದಲ್ಲಿ ತನ್ಮಯರಾಗಿರುವುದು.
ಕಮಲದ ರಾಖಿಯಲ್ಲಿ ನರೇಂದ್ರ ಮೋದಿ
ಪಾಟ್ನಾದ ಬಾಲಕಿಯೊಬ್ಬಳು ಕಮಲದ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾವಚಿತ್ರದ ರಾಖಿ ಕೊಂಡುಕೊಳ್ಳುತ್ತಿರುವುದು.
ನಾವು ಧನ್ಯರಾದೆವು, ಮಕ್ಕಳೇ
ಹಿಂದಿನಿಂದಲೂ ಗಡಿನಾಡ ಸೈನಿಕರಿಗೆ ರಾಖಿ ಕಟ್ಟುವುದು ನಡೆದುಕೊಂಡು ಬಂದ ಸಂಪ್ರದಾಯ. ಶಾಲಾ ಮಕ್ಕಳಿಂದ ರಾಖಿ ಕಟ್ಟಿಸಿಕೊಳ್ಳುತ್ತಾ, ಸಣ್ಣ ಮಕ್ಕಳ ಸಂತಸದಲ್ಲಿ ಪಾಲ್ಗೊಂಡ ಹರ್ಷಭಾವ ಪಡೆದ ಗಡಿನಾಡ ಸೈನಿಕರು.
ಎಷ್ಟಾದರೂ ಆಗಲಿ, ನನಗೆ ಇದೇ ಕೊಡಿ.
ಜಮ್ಮು ಕಾಶ್ಮೀರದಲ್ಲಿ ಮಹಿಳೆಯೊಬ್ಬರು ನೋಡಿ ಈ ರಾಖಿನೇ ಕೊಡಿ, ಇದಕ್ಕೆ ಎಷ್ಟಾದರೂ ಆಗಲಿ ಎಂದು ಕೇಳಿ ಪಡೆದುಕೊಳ್ಳುತ್ತಿರುವುದು.