ಭಾರತೀಯ ಸಂವಿಧಾನ ಕೇವಲ ವಕೀಲರ ದಾಖಲೆಯಲ್ಲ, ಮಕ್ಕಳೂ ಓದಿಕೊಳ್ಳಬೇಕು: ಸಚಿವ ಡಾ.ಸುಧಾಕರ್
ಬೆಂಗಳೂರು, ಜನವರಿ 26: ಭಾರತೀಯ ಸಂವಿಧಾನವು ಕೇವಲ ವಕೀಲರು ಓದಿಕೊಳ್ಳುವ ದಾಖಲೆ ಆಗಬಾರದು, ಇದನ್ನು ದೇಶದ ಪ್ರತಿಯೊಬ್ಬ ಮಕ್ಕಳು ಅಧ್ಯಯನ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಿವಿಮಾತು ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದ 73ನೇ ಗಣರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಭಾರತದ ಸರ್ವಶ್ರೇಷ್ಠ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದ ದಿನವಿದು. ಇಡೀ ವಿಶ್ವದಲ್ಲಿ ನಮ್ಮ ಸಂವಿಧಾನ ಅತಿದೊಡ್ಡ ಲಿಖಿತ ಸಂವಿಧಾನ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ತಂಡವನ್ನು ನಾವಿಂದು ಸ್ಮರಿಸಬೇಕಿದೆ ಎಂದರು.
Republic Day Parade Live: ದೆಹಲಿಯ ರಾಜ್ಪಥ್ನಲ್ಲಿ ಪಥಸಂಚಲನ ಅಂತ್ಯ
ಸಮಾಜದ ಅಸಮಾನತೆ ನಿವಾರಿಸಿ, ಸಹಬಾಳ್ವೆ, ಸಾಮಾಜಿಕ ಸಮಾನತೆ, ಸೋದರತೆಯನ್ನು ಒಳಗೊಂಡ ಸಂವಿಧಾನವನ್ನು ನೀಡಿದ ಮಹನೀಯರಿಗೆ ಕೋಟಿ ನಮನಗಳನ್ನು ಅರ್ಪಿಸಬೇಕಿದೆ. ಇದರ ಜೊತೆಗೆ ಪ್ರತಿ ಭಾರತೀಯನು ಈ ಸಂವಿಧಾನವನ್ನು ಅಧ್ಯಯನ ಮಾಡಿಕೊಳ್ಳಬೇಕಾಗಿದೆ. ಮಕ್ಕಳು ಸಹ ಇದನ್ನು ಅಧ್ಯಯನ ಮಾಡಲು ಪ್ರೇರೇಪಿಸಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.
ಜಗತ್ತು ಹೆಮ್ಮೆ ಪಡುವ ಸಂವಿಧಾನ ರಚಿಸಿದ ಭಾರತ
ಬ್ರಿಟಿಷರು ದೇಶದ ಬಿಟ್ಟು ಹೋಗುವ ಸಂದರ್ಭದಲ್ಲಿ ತಾವೇ ಸಂವಿಧಾನವನ್ನು ರಚಿಸಿ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಅದನ್ನು ನಿರಾಕರಿಸುವ ಮಹಾತ್ಮ ಗಾಂಧೀಜಿಯವರು ನಮಗೆ ಆ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವಿದೆ ಎಂದು ಹೇಳಿದ್ದರು. ತದನಂತರ ವಿಶ್ವವೇ ಹೆಮ್ಮೆ ಪಡುವ ಸಂವಿಧಾನ ರಚನೆಯಾಗುತ್ತದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಹಂಚಿಹೋದ ರಾಜ್ಯಗಳನ್ನು ಒಂದುಗೂಡಿಸಿ ಐಕ್ಯತೆ ಮೂಡಿಸಿದ್ದರು. ಆದರೆ ಅವರಿಗೆ ಸೂಕ್ತವಾದ ಮಾನ್ಯತೆ ಮತ್ತು ಗೌರವಗಳು ಸಿಕ್ಕಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಲೋಪವನ್ನು ಸರಿಪಡಿಸಿದೆ. ವಲ್ಲಭ ಭಾಯಿ ಪಟೇಲರ ಪ್ರತಿಮೆ ನಿರ್ಮಿಸಿದೆ ಎಂದರು.
ನೇತಾಜಿ ಪ್ರತಿಮೆ ನಮ್ಮ ಹೆಮ್ಮೆಯ ಸಂಕೇತ
ಅಹಿಂಸೆಯ ಹೋರಾಟದಿಂದಲೇ ಬ್ರಿಟಿಷರು ದೇಶ ಬಿಟ್ಟು ಹೋದರು ಎಂಬುದು ಎಷ್ಟು ಸತ್ಯವೋ, ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಸೇನೆಯು ಬ್ರಿಟೀಷರ ಎದೆಯಲ್ಲಿ ಭಯ ಹುಟ್ಟಿಸಿದ್ದು ಕೂಡ ಅಷ್ಟೇ ಸತ್ಯ. ನೇತಾಜಿ ಸ್ಮರಣಾರ್ಥ ಇಂಡಿಯಾ ಗೇಟ್ ಬಳಿ ಕೇಂದ್ರ ಸರ್ಕಾರ ಪ್ರತಿಮೆ ಸ್ಥಾಪಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ಯುವಪೀಳಿಗೆ ನೇತಾಜಿಯವರ ಚರಿತ್ರೆಯನ್ನು ಸದಾ ಸ್ಮರಿಸುವಂತಾಗಲಿದೆ ಎಂದರು.
ನಾಡಪ್ರಭುವಿನ ಜಿಲ್ಲೆಯ ಉಸ್ತುವಾರಿ ನನ್ನ ಸೌಭಾಗ್ಯ
ಈ ಭಾಗದಲ್ಲಿ ಜನಪ್ರಿಯ ಆಡಳಿತಗಾರ ನಾಡಪ್ರಭು ಕೆಂಪೇಗೌಡರ ಇಡೀ ಜೀವನವನ್ನು ಉತ್ತಮ ಆಡಳಿತಕ್ಕಾಗಿ ಮೀಸಲಿಟ್ಟರು. 54 ಪೇಟೆಗಳನ್ನು ನಿರ್ಮಿಸಿ, ಕೆರೆಗಳನ್ನು ನಿರ್ಮಿಸಿ, ಅರಣ್ಯ ಬೆಳೆಸಿ, ಸಮ ಸಮಾಜ ಸೃಷ್ಟಿಸಿ ನಾಡಿನ ಅಭಿವೃದ್ಧಿ ಮಾಡಿದರು. ಅವರಿದ್ದ ಬೆಂಗಳೂರು ಗ್ರಾಮಾಂತರ ಪ್ರದೇಶದ ಉಸ್ತುವಾರಿ ಸಿಕ್ಕಿರುವುದು ನನ್ನ ಭಾಗ್ಯ ಎಂದು ಸಚಿವ ಸುಧಾಕರ್ ಹೇಳಿದರು. .
ಬೆಂಗಳೂರು ಗ್ರಾಮಾಂತರಕ್ಕೆ ಹೊಸ ಜಿಲ್ಲಾಸ್ಪತ್ರೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೊಸ ಜಿಲ್ಲಾಸ್ಪತ್ರೆ ಬೇಕಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ. ಹೊಸಕೋಟೆಯಲ್ಲಿ ಹೊಸ ತಾಯಿ ಮತ್ತು ಶಿಶು ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರ ಚಾಲನೆ ದೊರೆಯಲಿದೆ. ನೆಲಮಂಗಲದಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಸುಸಜ್ಜಿತ ತಾಲೂಕು ನಿರ್ಮಿಸಲಾಗುವುದು. ಮೆಟ್ರೋ ರೈಲಿನ ಬೇಡಿಕೆ ಕೂಡಯಿದ್ದು, ಶೀಘ್ರದಲ್ಲೇ ಈ ಭಾಗದ ಜನಪ್ರತಿನಿಧಿಗಳ ಸಹಯೋಗದಲ್ಲಿ ಕಾಮಗಾರಿ ಆರಂಭಕ್ಕೆ ಯತ್ನಿಸಲಾಗುವುದು. ಈ ಭಾಗದ ರೈತರಿಂದ ರಾಗಿ ಪಡೆಯಲು ಒತ್ತಾಯವಿದ್ದು, ಸರ್ಕಾರ ಈ ಬಗ್ಗೆ ಉತ್ತಮ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ನಿವೇಶನ ರಹಿತರಿಗೂ ಮನೆ ನಿರ್ಮಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕೊರೊನಾವೈರಸ್ ನಿಯಂತ್ರಣ ಮತ್ತು ಲಸಿಕೆ:
ಕೊವಿಡ್-19 ಸಾಂಕ್ರಾಮಿಕ ಪಿಡುಗನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದ್ದು, ಮೂರನೇ ಅಲೆಯನ್ನೂ ನಿಯಂತ್ರಿಸಿ 162 ಕೋಟಿ ಲಸಿಕೆ ನೀಡಲಾಗಿದೆ. 2024ರವರೆಗೆ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ವಿರೋಧ ಪಕ್ಷಗಳು ರಾಜಕಾರಣ ಮಾಡಿದ್ದವು. ಆದರೆ ರಾಜ್ಯದಲ್ಲಿ ಶೇಕಡಾ 100ರಷ್ಟು ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ ಶೇ.86ರಷ್ಟು ಮಂದಿಗೆ ಎರಡನೇ ಡೋಸ್ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಉತ್ತಮವಾಗಿ ಕೊವಿಡ್ ಲಸಿಕೆ ವಿತರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಮೊದಲ ಹಾಗೂ ಎರಡನೇ ಡೋಸ್ 100% ಆಗಲಿದೆ ಎಂದರು.
ಸಚಿವ ಸುಧಾಕರ್ ಭಾಷಣದ ಪ್ರಮುಖ ಅಂಶಗಳು ಹೀಗಿವೆ
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ 750 ಪ್ರಾಥಮಿಕ ಆರೋಗ್ಯ ಕೇಂದ್ರದ ಉನ್ನತೀಕರಣ ಗ್ರಾಮ ಪಂಚಾಯಿತಿ, ಸ್ತ್ರೀ ಶಕ್ತಿ ಸಂಘಗಳು ಸೇರಿದಂತೆ ಅನೇಕ ಹೊಸ ಯೋಜನೆಗಳನ್ನು ತಂದಿದ್ದಾರೆ.
- 12ನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣ ಅನುಭವ ಮಂಟಪ ಆರಂಭಿಸಿ ಪ್ರಜಾಪ್ರಭುತ್ವದ ಆಶಯ ಜಾರಿ ಮಾಡಿದರು. ನಮ್ಮ ಸರ್ಕಾರ 500 ಕೋಟಿ ರೂ. ಖರ್ಚು ಮಾಡಿ ಹೊಸ ಅನುಭವ ಮಂಟಪ ನಿರ್ಮಿಸುತ್ತಿದೆ.
- ರಾಮರಾಜ್ಯದ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡುತ್ತಿದ್ದು, ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ.
- ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಿನಿಂದ ಜುಲೈವರೆಗೆ ಕುಟುಂಬಗಳಿಗೆ ತಲಾ 5 ಕೆ.ಜಿ. ಅಕ್ಕಿ ಉಚಿತ ವಿತರಣೆ.
- ಮಾತೃವಂದನ ಯೋಜನೆಯಡಿ 24,683 ಫಲಾನುಭವಿಗಳಿಗೆ ತಲಾ 5,000 ರೂ.ನಂತೆ 8.74 ಕೋಟಿ ಜಮೆ.
- ಸರ್ಕಾರಿ ಶಾಲೆಯ 50,512 ಮಕ್ಕಳಿಗೆ ಸಮವಸ್ತ್ರ ವಿತರಣೆ
- 23,182 ಕಟ್ಟಡ ಕಾರ್ಮಿಕರಿಗೆ ತಲಾ 3,000 ರೂ. ನೀಡಲಾಗುವುದು