ಶಾಸಕ ಶರತ್ ಬಚ್ಚೇಗೌಡ ಪಕ್ಷ ಸೇರ್ಪಡೆಗೆ ಕೊನೆಗೂ ಮುಹೂರ್ತ ಫಿಕ್ಸ್!
ಬೆಂಗಳೂರು, ಅ. 10: ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ರಾಷ್ಟ್ರೀಯ ಪಕ್ಷ ಸೇರಲು ಮುಹೂರ್ತ ಫಿಕ್ಸ್ ಆಗಿದೆ. ಈಗಾಗಲೇ ಅಂತಿಮ ಹಂತದ ಮಾತುಕತೆಯೂ ಮುಗಿದಿದ್ದು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸರಳವಾಗಿ ಪಕ್ಷ ಸೇರಲು ತಯಾರಿ ನಡೆದಿದೆ ಎನ್ನಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಿ.ಎನ್. ಬಚ್ಚೇಗೌಡ ಅವರು ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹೊಸಕೋಟೆ ಕ್ಷೇತ್ರದ ಶಾಸಕರಾಗಿದ್ದ ಎಂಟಿಬಿ ನಾಗರಾಜ್ ಅವರು ಬಿಜೆಪಿ ಸೇರಿದ್ದರು. ಹೀಗಾಗಿ ಆ ಬಳಿಕ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಶರತ್ ಬಚ್ಚೇಗೌಡ ಅವರ ಬದಲಿಗೆ ಎಂಟಿಬಿ ನಾಗರಾಜ್ ಅವರಿಗೆ ಬಿಜೆಪಿ ಟಿಕೆಟ್ ಕೊಡಲಾಗಿತ್ತು.
ಕಳೆದ ಅಕ್ಟೋಬರ್ 2019 ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಅವರು ಎಂಟಿಬಿ ನಾಗರಾಜ್ ಅವರನ್ನು ಸೋಲಿಸಿದ್ದರು. ಆದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರಿಂದ ಬಿಜೆಪಿ ಅವರನ್ನು ತಾಂತ್ರಿಕವಾಗಿ ಪಕ್ಷದಿಂದ ಉಚ್ಚಾಟನೆ ಮಾಡಿತ್ತು.
ಜೆಡಿಎಸ್ ಸೇರುವ ವಿಚಾರವಾಗಿಯೂ ಶರತ್ ಅವರು ಕಳೆದ ಜುಲೈ 4ರಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ ಅಂತಿಮವಾಗಿ ರಾಷ್ಟ್ರೀಯ ಪಕ್ಷ ಸೇರಲು ತೀರ್ಮಾನ ಮಾಡಿದ್ದಾರೆ. ಅವರು ಯಾವಾಗ? ಯಾರ ಸಮ್ಮುಖದಲ್ಲಿ ಯಾವ ಪಕ್ಷ ಸೇರಲಿದ್ದಾರೆ? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಜಯದಶಮಿಯಂದು ಪಕ್ಷ ಸೇರ್ಪಡೆ
ಹೊಸಕೋಟೆ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಬಳಿಕ ಶರತ್ ಬಚ್ಚೇಗೌಡ ಅವರು ಮೂರು ಪಕ್ಷಗಳ ಬಾಗಿಲು ಬಡಿದಿದ್ದರು. ಆದರೆ ಅಂತಿಮವಾಗಿ ಇದೀಗ ಕಾಂಗ್ರೆಸ್ ಪಕ್ಷ ಸೇರಲು ವೇದಿಕೆ ರೆಡಿಯಾಗಿದೆ.
ಶರತ್ ಅವರು ಇದೇ ಅಕ್ಟೋಬರ್ 25 ರಂದು ಭಾನುವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ. ವಿಜಯದಶಮಿಯ ಶುಭ ಮುಹೂರ್ತದಲ್ಲಿ ಪಕ್ಷೇತರ ಶಾಸಕ 'ಕೈ' ಹಿಡಿಯಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರು ಶರತ್ ಬಚ್ಚೇಗೌಡ ಅವರೊಂದಿಗೆ ಮಾತುಕತೆ ನಡೆಸಿದ್ದರು. ಇದೀಗ ಕಾಂಗ್ರೆಸ್ ಸೇರಲು ಶರತ್ ಒಪ್ಪಿದ್ದಾರೆ ಎಂದು ಮಾಜಿ ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಸೇರುವ ಪ್ರಯತ್ನ
ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ಮಾತೃ ಪಕ್ಷ ಸೇರಲು ಶರತ್ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ ಎಂಬಿಟಿ ನಾಗರಾಜ್ ಅವರ ವಿರೋಧದಿಂದಾಗಿ ಬಿಜೆಪಿ ಸೇರುವ ಅವರ ಪ್ರಯತ್ನ ಕೈಗೂಡಲಿಲ್ಲ. ಜೊತೆಗೆ ಬೆಂಗಳೂರಿನ ಕೆಲ ಒಕ್ಕಲಿಗ ಬಿಜೆಪಿ ನಾಯಕರಿಗೂ ಕೂಡ ಶರತ್ ಅವರು ಬಿಜೆಪಿಗೆ ಬರುವುದು ಇಷ್ಟವಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ಅವರ ಜನಪ್ರಿಯತೆ.
ಶರತ್ ಅವರು ಬಿಜೆಪಿಗೆ ಸೇರಿದರೆ ಸ್ವಜಾತಿ ನಾಯಕನೊಬ್ಬನನ್ನು ಹುಟ್ಟು ಹಾಕಿದಂತಾಗುತ್ತದೆ ಎಂದು ಬೆಂಗಳೂರಿನ ಒಕ್ಕಲಿಗ ಸಮುದಾಯದ ನಾಯಕರು ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿದ್ದರು.
ಸಂಸದ ಬಿ.ಎನ್. ಬಚ್ಚೇಗೌಡ ನಿಲುವು
ಪುತ್ರ ಹಾಗೂ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಸೇರುವ ಬಗ್ಗೆ ಕಳೆದ ತಿಂಗಳೇ ಪ್ರತಿಕ್ರಿಯೆ ನೀಡಿದ್ದ ಚಿಕ್ಕಬಳ್ಳಾಪುರ ಸಂಸದ ಬಿ.ಎನ್. ಬಚ್ಚೇಗೌಡ ಅವರು, ಕಾಂಗ್ರೆಸ್ ಸೇರುವುದು ಅಥವಾ ಬಿಡುವುದು ಅವನಿಗೆ ಬಿಟ್ಟ ವಿಚಾರ. ನಾನು ಬಿಜೆಪಿ ಸಂಸದನಾಗಿದ್ದೇನೆ. ಅವನ ರಾಜಕೀಯದ ಭವಿಷ್ಯವನ್ನು ಅವನೇ ರೂಪಿಸಿಕೊಳ್ಳುತ್ತಾನೆ ಎಂದು ಹೇಳಿದ್ದರು.
Recommended Video
ಡಿಕೆಶಿ ರಿವರ್ಸ್ ಆಪರೇಶನ್!
ಆಪರೇಶನ್ ಕಮಲಕ್ಕೆ ಒಳಗಾಗಿ ಹಾಗೂ ವಿವಿಧ ಕಾರಣಗಳಿಂದ ಕಾಂಗ್ರೆಸ್ ತೊರೆದು ಹೋದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಯತ್ನ ಆರಂಭಿಸಿದ್ದಾರೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿರುವ 17 ವಿಧಾನಸಭಾ ಕ್ಷೇತ್ರಗಳಲ್ಲಿ ಪರ್ಯಾಯ ನಾಯಕರನ್ನು ಬೆಳೆಸಲು, ಅವಕಾಶ ಕೊಡಲು ಡಿಕೆಶಿ ಪ್ಲಾನ್ ಮಾಡಿದ್ದಾರೆ.
ಅದೇ ಹಿನ್ನೆಲೆಯಲ್ಲಿ ಇದೀಗ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಹೀಗಾಗಿ ಡಿಕೆಶಿ ಆರಂಭಿಸಿರುವ ರಿವರ್ಸ್ ಆಪರೇಶನ್ ಕಮಲ ಭರ್ಜರಿಯಾಗಿಯೇ ಶುರುವಾಗಿದೆ.