ಲಾಲ್ಬಾಗ್ನಲ್ಲಿ ಮೈಸೂರು ದಸರಾ ದರ್ಬಾರ್ ನೋಡ ಬನ್ನಿ
ಬೆಂಗಳೂರು, ಆಗಸ್ಟ್ 9: ಲಾಲ್ಬಾಗ್ನಲ್ಲಿ ಮೈಸೂರು ದಸರಾ ದರ್ಬಾರ್, ಜಯಚಾಮರಾಜ ವೃತ್ತ ಎಲ್ಲರ ಗಮನ ಸೆಳೆಯುತ್ತಿದೆ.
ಸಾಮಾನ್ಯವಾಗಿ ನೀವು ದಸರಾವನ್ನು ಮೈಸೂರಿನಲ್ಲಿ ಮಾತ್ರ ನೋಡಲು ಸಾಧ್ಯ, ಆದರೆ ಈಗ ಮೈಸೂರು ದರ್ಬಾರ್ ಬೆಂಗಳೂರಿಗೆ ಬಂದಿದೆ. ಎಲ್ಲರೂ ದೃಶ್ಯಗಳನ್ನು ಕಣ್ತುಂಬಿಕೊಳ್ಳಿ.
ಶಾಲಾ ಮಕ್ಕಳಿಗೆ ಫಲ ಪುಷ್ಪ ಪ್ರದರ್ಶನವನ್ನು ಉಚಿತವಾಗಿ ವೀಕ್ಷಿಸಲು ತೋಟಗಾರಿಕೆ ಇಲಾಖೆ ಅನುಕೂಲ ಕಲ್ಪಿಸಿ ಕೊಟ್ಟಿದೆ. ಆ.9,13,14,16 ಹಾಗೂ 17 ರಂದು ಖಾಸಗಿ ಮತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಆಯಾ ಶಾಲೆಯ ಗುರುತಿನ ಚೀಟಿಯೊಂದಿಗೆ ಆಗಮಿಸಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೂ ಫಲ ಪುಷ್ಪ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ. ಶಾಲಾ ಮಕ್ಕಳ ವಾಹನ ನಿಲುಗಡೆಗೆ ಲಾಲ್ಬಾಗ್ ವಾಹನ ನಿಲುಗಡೆ ತಾಣದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಪ್ರದರ್ಶನಕ್ಕೆ ಒಟ್ಟು 2 ಕೋಟಿ ರೂ ವೆಚ್ಚಮಾಡಲಾಗಿದೆ.
ಜಯಚಾಮರಾಜ ಒಡೆಯರ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನದಲ್ಲಿ ಅವರ ಸಾಧನೆ ಹಾಗೂ ನಾಡಿಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತಿದೆ.
ಲಕ್ಷಾಂತರ ಹೂವುಗಳನ್ನು ಬಳಿಸಿ ಒಡೆಯರ್ ಪುತ್ಥಳಿಗಳು, ಮೈಸೂರು ಜಯಚಾಮರಾಜೇಂದ್ರ ವೃತ್ತ, ಸಿಂಹಾಸನ, ಆನೆಗಳು, ದರ್ಬಾರ್ ಹಾಲ್, ಸಂಗೀತ ವಾದ್ಯಗಳನ್ನು ಸೇರಿದಂತೆ ವಿವಿಧ ಪ್ರತಿಕೃತಿಗಳನ್ನು ನಿರ್ಮಿಸಲಾಗುತ್ತಿದ್ದು, ಆ.9ರಿಂದ 18ರವರೆಗೆ 210ನೇ ಫಲಪುಷ್ಪ ಪ್ರದರ್ಶನ ಇದಾಗಿದೆ.
ಒಡೆಯರ್ ಸಾಧನೆ
ಇದರ ಜತೆಗೆ ಮೈಸೂರುನ ಪ್ರಾಣಿ ಸಂಗ್ರಹಾಲಯ ಮಾದರಿ ಸಿದ್ಧಗೊಳ್ಳುತ್ತಿದೆ. ಜಯಚಾಮರಾಜ ಒಡೆಯರ್ ಅವರ ಬಾಲ್ಯ, ವಿದ್ಯಾಭ್ಯಾಸ, ಮದುವೆ, ದಸರಾ ಮೆರವಣಿಗೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಛಾಯಾಚಿತ್ರಗಳು, ಆರು ಹೂವಿನ ಪಿರಮಿಡ್ ಮೇಲೆ ಒಡೆಯರ್ ಚಿತ್ರಣ ಪ್ರದರ್ಶಿಸಲಾಗುತ್ತಿದೆ.
ದರ್ಬಾರ್ ಮಾದರಿಯ ಮುಂಭಾಗ ಅಂದಿನ ಕಾಲದಲ್ಲಿ ಜಯಚಾಮರಾಜ ಒಡೆಯರ್ ನೀರಾವರಿ ಯೋಜನೆ, ವಿದ್ಯುತ್ ಕ್ಷೇತ್ರಕ್ಕೆ ಕೊಡುಗೆ, ಪಂಚವಾರ್ಷಿಕ ಯೋಜನೆ, ಬೆಂಗಳೂರು ನಗರಕ್ಕೆ ಸಂಬಂಧಿಸಿದ ಅಭಿವೃದ್ಧಿ ಮಾಹಿತಿಯನ್ನು ಹೂವಿನ ಮಾದರಿಯಲ್ಲಿ ಪ್ರದರ್ಶಿಸಲಾಗುತ್ತಿದೆ.
ಗಾಜಿನ ಮನೆ ಬಳಿ ಆಕರ್ಷಕ ಪುಷ್ಪ ಜೋಡಣೆ
ಗಾಜಿನ ಮನೆಯ ಪ್ರವೇಶಿಸುತ್ತಿದ್ದಂತೆ ಇಂಡೋ-ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯ ಆಕರ್ಷಕ ಪುಷ್ಪ ಜೋಡನೆ ಮಾಡಲಾಗಿದೆ.
ಈ ಪುತ್ಥಳಿ ಜತೆಗೆ ಒಡೆಯರ್ ಇನ್ನು 5 ಪುತ್ಥಳಿಗಳು ಗಾಜಿನ ಮನೆ ಸುತ್ತಲು ಇರಲಿವೆ ಎಂದರು. ಹಾಗೆಯೇ ಜಯಚಾಮರಾಜ ಒಡೆಯರ್ ಅವರ ಪುತ್ಥಳಿ ಸ್ಥಾಪಿಸಲಾಗುತ್ತಿದ್ದು, ಅತಿಥಿಗಳು ಪುಷ್ಪಾರ್ಚನೆ ಮಾಡಿ ಪ್ರದರ್ಶನಕ್ಕೆ ಚಾಲನೆ ನೀಡಿದ್ದಾರೆ.
ಹೂಗಳಲ್ಲಿ ಜಯಚಾಮರಾಜ ವೃತ್ತ
ಈ ವೃತ್ತ ಮಾದರಿಯು 40/40 ಅಡಿ ಅಳತೆ ಇದ್ದು, 5 ಅಡಿ ಎತ್ತರದ ಮೆಟ್ಟಿಲುಗಳು, 10 ಅಡಿ ಎತ್ತರದ ಕಂಬಗಳು, 3 ಅಡಿ ಎತ್ತರದ ಮೇಲ್ಛಾವಣಿ 5 ಅಡಿ ಎತ್ತರದ ಸ್ವರ್ಣಮಯ ಗೋಪುರ ರಚಿಸಿ ಅದರ ಮೇಲೆ 2 ಅಡಿ ಎತ್ತರದ ಕಳಸವನ್ನು ಇಡಲಾಗುತ್ತಿದ್ದು, ಇದರ ಒಳಗೆ ಒಡೆಯರ್ ಅವರ ಶ್ವೇತವರ್ಣದ ಪ್ರತಿಮೆ ನಿಲ್ಲಿಸಲಾಗುತ್ತಿದೆ.
ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಮೈಸೂರು ಅರಮನೆಯ ಎಡಬದಿಯಲ್ಲಿರುವ ಜಯಚಾಮರಾಜ ಒಡೆಯರ್ ವೃತ್ತದ ಮಾದರಿಯನ್ನು ನಿರ್ಮಾಣ ಮಾಡಲಾಗಿದೆ.
ಈ ಮಾದರಿಯನ್ನು 15 ಜನ ಕಲಾವಿದರ ತಂಡವು ಸಿದ್ಧಪಡಿಸುತ್ತಿದ್ದು, ಇದಕ್ಕಾಗಿ ಒಂದೂವರೆ ಲಕ್ಷ ಕೆಂಪುಗುಲಾಬಿ, 50 ಸಾವಿರ ಬಿಳಿ ಗುಲಾಬಿ, 50 ಸಾವಿರ ಕಿತ್ತಲೆ ಬಣ್ಣದ ಗುಲಾಬಿ, 3,000 ಆರ್ಕಿಡ್ಸ್ ಹೂವುಗಳು, 4,500 ಎಲೆಗಳನ್ನು ಬಳಸಲಾಗುತ್ತಿದೆ. ಒಟ್ಟಾರೆ ಪ್ರದರ್ಶನದಲ್ಲಿ ಎರಡು ಬಾರಿ ಹೂವು ಬದಲಿಸುವ ಕಾರ್ಯವಾಗಲಿದೆ.
ಮೈಸೂರು ದಸರಾ ದರ್ಬಾರ್
5 ಅಡಿ ಅಗಲ ಹಾಗೂ 9 ಅಡಿ ಎತ್ತರದ ಎರಡು ಆನೆಗಳು ಇರಲಿದ್ದು, ಸಿಂಹಾಸನವನ್ನು ಮರ, ಫ್ಯಾಬ್ರಿಕ್, ಕುಷನ್ ಹಾಗೂ ಹೂವುಗಳ ಮೂಲಕ ಸಿದ್ಧಪಡಿಸಲಾಗುತ್ತಿದೆ.
ಗಾಜಿನ ಮನೆಯ ಹಿಂಬದಿಯಲ್ಲಿ ಮೈಸೂರು ಸಿಂಹಾಸನ, ಅಂಬಾರಿ ಹೊತ್ತ ಆನೆಗಳು, ಸೈನಿಕರು ಪ್ರತಿಕೃತಿ ಮೂಲಕ ದರ್ಬಾರ್ ಪರಿಕಲ್ಪನೆಯನ್ನು ಕಟ್ಟಿಕೊಡಲಾಗುತ್ತಿದೆ.
ಒಡೆಯರ್ಗೊಂದು ವಾದ್ಯ ನಮನ
ದೊಡ್ಡ ಗಾತ್ರದ ಪಿಯಾನೋ, ವೀಣೆ, ತಬಲ ಸೇರಿದಂತೆ ಇತರೆ ವಾದನಗಳನ್ನು ಕಲಾವಿದರು ಸಿದ್ಧಪಡೆಸುತ್ತಿದ್ದಾರೆ. ಪ್ರದರ್ಶನದ ವೇಳೆ ನಿತ್ಯ ಬ್ಯಾಂಡ್ ಸ್ಟಾಂಡ್ನಲ್ಲಿ ಬಿಎಸ್ಎಫ್ ಹಾಗೂ ಮದ್ರಾಸ್ ಎಂಜಿನಿಯರಿಂಗ್ ತಂಡವು ವಾದ್ಯಗೋಷ್ಠಿ ನಡೆಸಲಿದೆ.
ಜಯಚಾಮರಾಜ ಒಡೆಯರ್ ಸಂಗೀತ ಪ್ರಿಯರಾಗಿದ್ದು, ಗಾಯಕರು, ವಾದಕರೂ ಆಗಿದ್ದರು. ಜತೆಗೆ 90ಕ್ಕೂ ಅಧಿಕ ಕೃತಿಗಳನ್ನು ನಿರ್ಮಿಸಿದ್ದರು. ಹೀಗಾಗಿ ಗಾಜಿನ ಮನೆಯ ಒಂದು ಬದಿ ಹೂವಿನಲ್ಲಿ ಸಂಗೀತ ವಾದ್ಯಗಳ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ.