ಬೆಂಗಳೂರಿನ ಮಕ್ಕಳೂ ಆರೋಗ್ಯವಂತರಲ್ಲ: ಯಾಕೆ ಗೊತ್ತಾ?
ಬೆಂಗಳೂರು,ಜು.7: ಬೆಂಗಳೂರಿನಲ್ಲಿ ಕಳೆದ 4-5 ವರ್ಷಗಳಿಂದ ಅಪೌಷ್ಟಿಕತೆ, ಬೊಜ್ಜು, ರಕ್ತಹೀನತೆ ಅಥವಾ ಸಮರ್ಪಕ ರಕ್ತದ ಕೊರತೆ ಇರುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
"ಜನರು ಕಡಿಮೆ ಪೌಷ್ಠಿಕಾಂಶದ ಮೌಲ್ಯ ಮತ್ತು ಹೆಚ್ಚಿನ ಕ್ಯಾಲೋರಿ ಹೊಂದಿರುವ ಆಹಾರ ಸೇವನೆಯಿಂದ ಬೊಜ್ಜು ಹೆಚ್ಚುತ್ತಿದೆ. ಜನರು ಬೊಜ್ಜು ಹೊಂದಿದ್ದರೂ ಅವರು ಇನ್ನೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಏಕೆಂದರೆ ಅವರು ಸಮತೋಲಿತ ಆಹಾರದಲ್ಲಿ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಅಷ್ಟೇನೂ ಸೇವಿಸುವುದಿಲ್ಲ," ಎಂದು ರೈಸಿಂಗ್ ಎಗೇನೆಸ್ಟ್ ಹಂಗರ್ ಇಂಡಿಯಾ ಫೌಂಡೇಶನ್ನ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಮೊಹರ್ ಬ್ಯಾನರ್ಜಿ ಹೇಳಿದರು ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಭಾರತದ ಮೊದಲ ವೀಲ್ಚೇರ್ ಆಹಾರ ವಿತರಣಾ ವ್ಯಕ್ತಿ: ಹೃದಯಸ್ಪರ್ಶಿ ಕಥೆ ಕೇಳಿ
ಕಡಿಮೆ ತೂಕ ಅಥವಾ ಸ್ಥೂಲಕಾಯತೆಯಿಂದ ವ್ಯಕ್ತಿಯ ಆರೋಗ್ಯವು ತೀವ್ರವಾಗಿ ಪರಿಣಾಮ ಬೀರುತ್ತದೆ. ಏಕೆಂದರೆ ಎರಡೂ ದೇಹದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ ಎಂದು ಐಬಿಎಸ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಡಾ. ಸಿಮ್ಮಿ ಡ್ಯಾಂಗ್ ಹೇಳಿದ್ದಾರೆ. ಅಧಿಕ ತೂಕವು ಪಾರ್ಶ್ವವಾಯು, ಅಧಿಕ ರಕ್ತದೊತ್ತಡ ಮುಂತಾದ ಬಹುತೇಕ ಎಲ್ಲಾ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಕಡಿಮೆ ತೂಕವು ವಿವಿಧ ಚರ್ಮ, ಕೂದಲು, ಮೂಳೆ ರೋಗಗಳು, ರಕ್ತಹೀನತೆ, ಮಹಿಳೆಯರಲ್ಲಿ ಅನಿಯಮಿತ ಅವಧಿಗಳು ಮತ್ತು ಎಲ್ಲಾ ಸಮಯದಲ್ಲೂ ಅನಾರೋಗ್ಯದ ಭಾವನೆಯನ್ನು ಉಂಟುಮಾಡುತ್ತದೆ.
ಕರ್ನಾಟಕದಲ್ಲಿ ವಿವಿಧ ಯೋಜನೆ ಆರಂಭ
2013ರಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆಯ ನಿವಾರಣೆಗಾಗಿ ಸಂಯೋಜಿತ ಯೋಜನೆಯಾಗಿ ಕ್ಷೀರ ಭಾಗ್ಯ ಯೋಜನೆ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೂರಕ ಪೋಷಣೆ ಮತ್ತು ಗರ್ಭಿಣಿಯರಿಗೆ ಆರೋಗ್ಯ ತಪಾಸಣೆಯಂತಹ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕರ್ನಾಟಕದಲ್ಲಿ ವಿವಿಧ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಆರು ತಿಂಗಳಿಂದ ಆರು ವರ್ಷದ ಮಕ್ಕಳಿಗೆ ದಿನಕ್ಕೆ 150 ಮಿಲಿ ಹಾಲು ನೀಡುತ್ತಿದೆ.
ಪೋಷಣ್ ಅಭಿಯಾನ ಎಲ್ಲರಿಗೂ ತಲುಪುತಿಲ್ಲ
ಸರ್ಕಾರದ ಯೋಜನೆಗಳು ಎಲ್ಲರಿಗೂ ಒಂದೇ ಮಾದರಿ ವಿಧಾನವನ್ನು ಹೊಂದಿದ್ದು, ಅದು ಪ್ರಾಯೋಗಿಕವಾಗಿ ಕಂಡು ಬಂದಿಲ್ಲ. ಪೋಷಣ್ ಅಭಿಯಾನ ಮತ್ತು ಅಂಗನವಾಡಿಗಳಂತಹ ಯೋಜನೆಗಳು ಎಲ್ಲರಿಗೂ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಬ್ಯಾನರ್ಜಿ ಹೇಳಿದರು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಒದಗಿಸುವುದಕ್ಕಿಂತ ಹೆಚ್ಚಾಗಿ ಅಗತ್ಯವಿರುವ ಕ್ಯಾಲೋರಿ ಸೇವನೆಯನ್ನು ಒದಗಿಸುವುದೇ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಶೇಕಡಾ 59ರಷ್ಟು ರಕ್ತಹೀನತೆ
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2020 ವರದಿ ಪ್ರಕಾರ ಪ್ರಸ್ತುತ ಬೆಂಗಳೂರು ನಗರದಲ್ಲಿ ಶೇಕಡಾ 31ರಷ್ಟು ಮಕ್ಕಳು ಬೆಳವಣಿಗೆಯಲ್ಲಿ ಕುಂಠಿತರಾಗಿದ್ದಾರೆ. ಶೇಕಡಾ 28ರಷ್ಟು ಅಪೌಷ್ಟಿಕತೆ, ಶೇಕಡಾ 59ರಷ್ಟು ರಕ್ತಹೀನತೆ ಮತ್ತು ಶೇಕಡಾ 4.5ರಷ್ಟು ಬೊಜ್ಜು ಹೊಂದಿದ್ದಾರೆ ಎಂದು ಹೇಳಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಅಂಗನವಾಡಿ ಮುಚ್ಚಲಾಗಿತ್ತು. ಇದು ನವೆಂಬರ್ 2021ರ ಎರಡನೇ ವಾರದಲ್ಲಿ ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಮಕ್ಕಳಿಗೆ ಮತ್ತೆ ಆಹಾರ ಪ್ಯಾಕೆಟ್ಗಳನ್ನು ವಿತರಿಸಲು ಪ್ರಾರಂಭಿಸಲಾಯಿತು ಎಂದು ಹೆಸರು ಹೇಳಲಿಚ್ಛಿಸದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯೊಬ್ಬರು ಹೇಳಿದರು.
ಗ್ಲೋಬಲ್ ಹಂಗರ್ ಇಂಡೆಕ್ಸ್ನಲ್ಲಿ ಭಾರತಕ್ಕೆ 101ನೇ ಸ್ಥಾನ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಎಲ್ಲಾ ಮಕ್ಕಳಿಗೆ ಸಹಾಯ ಮಾಡಲು ಕೆಲವು ಅಂಗನವಾಡಿಗಳು ತಮ್ಮ ವ್ಯಾಪ್ತಿಯನ್ನು ಸೀಮಿತಗೊಳಿಸಿರುವ ಸಮಸ್ಯೆಯನ್ನು ಈ ಹಿಂದೆ ತಿಳಿಸಿದ್ದರು. ಮೂಲ ಮಟ್ಟದಲ್ಲಿ ಪರಿಸ್ಥಿತಿಗಳನ್ನು ಸುಧಾರಿಸಲು ಎನ್ಜಿಒಗಳೊಂದಿಗೆ ಕೈಜೋಡಿಸಿ ನಂತರ ಪರಿಹಾರಗಳನ್ನು ರೂಪಿಸಲಾಗುವುದು ಎಂದು ಅವರು ಹೇಳಿದ್ದರು. ಗ್ಲೋಬಲ್ ಹಂಗರ್ ಇಂಡೆಕ್ಸ್ ಸೂಚಕ 2021ರಲ್ಲಿ ಭಾರತವು 116 ದೇಶಗಳಲ್ಲಿ 101ನೇ ಸ್ಥಾನದಲ್ಲಿದೆ. ಸೂಚಕಗಳಲ್ಲಿ ಭಾರತದ ಸ್ಕೋರ್ 27.5 ಆಗಿದೆ. ಇದು ಭಾರತವು ಹಸಿವಿನ ಗಂಭೀರ ಮಟ್ಟವನ್ನು ಹೊಂದಿದೆ ಎಂದು ತೋರಿಸಿದೆ.