ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ : ಲಾಭದ ಹಳಿಗೆ ಮರಳಿದ ಬಿಎಂಆರ್ಸಿಎಲ್
ಬೆಂಗಳೂರು, ಆಗಸ್ಟ್ 14: ಕೊರೊನಾ ಸಾಂಕ್ರಾಮಿಕದ ಹೊಡೆತಕ್ಕೆ ಹಲವು ಉದ್ಯಮಗಳು ತತ್ತರಿಸಿವೆ. ಕೊರೊನಾ ಸಮಯದಲ್ಲಿ ಆದ ನಷ್ಟದಿಂದ ಹೊರ ಬರಲು ಇನ್ನೂ ಹೆಣಗಾಡುತ್ತಿವೆ. ಸಾಂಕ್ರಾಮಿಕಕ್ಕೂ ಮೊದಲು ಲಾಭದಲ್ಲಿದ್ದ ನಮ್ಮ ಮೆಟ್ರೋ ಕೊರೊನಾ ನಂತರ ತೀವ್ರ ಪ್ರಯಾಣಿಕರ ಕೊರತೆಯನ್ನು ಎದುರಿಸಿತ್ತು.
ಆದರೆ, ದಿನಕಳೆದಂತೆ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗುತ್ತಿರುವುದು ಮೆಟ್ರೋ ನಷ್ಟದ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬಂದಿತ್ತು. ಕೋವಿಡ್ ಲಾಕ್ಡೌನ್ ನಂತರ ಈಗ ಇದೇ ಮೊದಲ ಬಾರಿಗೆ ಮೆಟ್ರೋ ಲಾಭ ಗಳಿಸಿರುವುದಾಗಿ ಮಾಹಿತಿ ನೀಡಿದೆ.
ಫಲಪುಷ್ಪ ಪ್ರದರ್ಶನ: 3 ದಿನ ಪೇಪರ್ ಟಿಕೆಟ್ ನೀಡಲಿದೆ ನಮ್ಮ ಮೆಟ್ರೋ
ಕಳೆದ ಕೆಲವು ತಿಂಗಳುಗಳಲ್ಲಿ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾದ ಕಾರಣ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಲಾಭ ಕಂಡಿದೆ. 2022-2023 ರ ಮೊದಲ ತ್ರೈಮಾಸಿಕದ ಅವಧಿಯಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ 12 ಲಕ್ಷ ರುಪಾಯಿಗೂ ಅಧಿಕ ಲಾಭವನ್ನು ಗಳಿಸಿದೆ.
2022-23ರ ಹಣಕಾಸು ವರ್ಷದ ಜೂನ್ 30 ಕ್ಕೆ ಕೊನೆಗೊಳ್ಳುವ ತ್ರೈಮಾಸಿಕಕ್ಕೆ ಬಿಎಂಆರ್ಸಿಎಲ್ ಲೆಕ್ಕಪರಿಶೋಧನೆಯಿಲ್ಲದ ಹಣಕಾಸು ಫಲಿತಾಂಶಗಳನ್ನು ಗುರುವಾರ ಅದರ ಮಂಡಳಿಯ ಸಭೆಯಲ್ಲಿ ಮಂಡಿಸಲಾಯಿತು ಮತ್ತು ಅನುಮೋದಿಸಲಾಗಿದೆ.
12 ಲಕ್ಷ ರುಪಾಯಿ ಆದಾಯ ಗಳಿಸಿದ ಬಿಎಂಆರ್ಸಿಎಲ್
ಬ್ಯಾಲೆನ್ಸ್ ಶೀಟ್ ಪ್ರಕಾರ, ಕಾರ್ಯಾಚರಣೆಗಳ ಒಟ್ಟು ಆದಾಯವು 98.85 ಕೋಟಿ ರುಪಾಯಿಗಳಷ್ಟಿದ್ದರೆ, ಅದರ ವೆಚ್ಚವು 17.83 ಕೋಟಿ ರೂಪಾಯಿಗಳು. "ಒಟ್ಟಾರೆ ಖರ್ಚುಗಳನ್ನು ಕಡಿತಗೊಳಿಸಿದ ನಂತರ, ಒಟ್ಟು ಲಾಭವು 12 ಲಕ್ಷ ರುಪಾಯಿಯಾಗಿದೆ" ಎಂದು ಉನ್ನತ ಅಧಿಕಾರಿಯೊಬ್ಬರು ವಿವರಿಸಿದರು.
2022ರ ಜನವರಿ-ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ಕಾರ್ಯಾಚರಣೆಗಳ ಒಟ್ಟು ಆದಾಯವು 70 ಕೋಟಿ ರುಪಾಯಿಗಳಾಗಿತ್ತು. ನಂತರದ ದಿನಗಳಲ್ಲಿ ಪ್ರಯಾಣಿಕರ ಹೆಚ್ಚಳದಿಂದ ಅದು 98.85 ಕೋಟಿ ರುಪಾಯಿಗೆ ಹೆಚ್ಚಳವಾಗಿರುವುದನ್ನು ಗಮನಿಸಬಹುದು.
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹೃದಯ ಸ್ತಂಭನ ತುರ್ತು ಚಿಕಿತ್ಸಾ ಸಾಧನ
ಲಾಕ್ಡೌನ್ ಪರಿಣಾಮ ನಷ್ಟ ಅನುಭವಿಸಿದ್ದ ಬಿಎಂಆರ್ಸಿಎಲ್
ಕೋವಿಡ್ ಹೊಡೆತದಿಂದ ಬಿಎಂಆರ್ಸಿಎಲ್ ಹಿಂದಿನ ವರ್ಷದಲ್ಲಿ ಅಪಾರ ನಷ್ಟ ಅನುಭವಿಸಿತ್ತು. ಮಾರ್ಚ್ 2022ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಕಾರ್ಯಾಚರಣೆಗಳಿಂದ ಕೇವಲ 193 ಕೋಟಿ ರುಪಾಯಿಗಳನ್ನು ಗಳಿಸಿತ್ತು. ಆ ವರ್ಷದ ಒಟ್ಟಾರೆ ವೆಚ್ಚ 221.64 ಕೋಟಿ ರುಪಾಯಿಗಳಾಗಿತ್ತು.
ಬಿಎಂಆರ್ಸಿಎಲ್ ತನ್ನ ಸಾಲಗಳಿಗೆ ಪಾವತಿಸುತ್ತಿದ್ದ ಬಡ್ಡಿ ಮೊತ್ತದಲ್ಲಿ ಭಾರಿ ಕುಸಿತವಾಗಿರುವುದು ಸಮಾಧಾನಕರ ಅಂಶವಾಗಿದೆ. "ನಾವು ಪ್ರಸ್ತುತ ತ್ರೈಮಾಸಿಕದಲ್ಲಿ ಪಾವತಿಸಿದ ಬಡ್ಡಿಯು 17.83 ಕೋಟಿ ರುಪಾಯಿಗಳಿಷ್ಟಿತ್ತು, ಹಿಂದಿನ ತ್ರೈಮಾಸಿಕದಲ್ಲಿ ನಾವು 24.18 ಕೋಟಿ ರುಪಾಯಿ ಪಾವತಿಸಿದ್ದೆವು. ಬಡ್ಡಿ ಪಾವತಿಯಲ್ಲಿ ಗಣನೀಯ ಇಳಿಕೆಯಾಗಿದೆ. ಸಾಧ್ಯವಾದಾಗ ನಾವು ಬೃಹತ್ ಮೊತ್ತವನ್ನು ಮರುಪಾವತಿ ಮಾಡಿದ್ದೇವೆ" ಎಂದು ಬಿಎಂಆರ್ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜುಲೈ ತಿಂಗಳಲ್ಲಿ 1.46 ಕೋಟಿ ಪ್ರಯಾಣಿಕರು
"ರೈಲುಗಳು ಕಿಕ್ಕಿರಿದು ತುಂಬುತ್ತಿವೆ. ನಾವು ದಿನಕ್ಕೆ ಸರಾಸರಿ 4.7 ಲಕ್ಷ ಪ್ರಯಾಣಿಕರನ್ನು ಹೊಂದಿದ್ದೇವೆ ಮತ್ತು ಶನಿವಾರದಂದು ಮೂರು ಬಾರಿ ಪ್ರಯಾಣಿಕರ ಸಂಖ್ಯೆಯಲ್ಲಿ 5 ಲಕ್ಷ ದಾಟಿದ್ದೇವೆ. ಈ ಮೊದಲು ವಾರಾಂತ್ಯದಲ್ಲಿ ಸವಾರರ ಸಂಖ್ಯೆ ಇಳಿಮುಖವಾಗುತ್ತಿತ್ತು, ಆದರೆ ಈಗ ವಾರಾಂತ್ಯದ ದಿನಗಳಲ್ಲೂ ನಮಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಮುಂದಿನ ನಾಲ್ಕು ತಿಂಗಳಲ್ಲಿ, ಹಲವು ದಿನಗಳಲ್ಲಿ 5 ಲಕ್ಷದ ಪ್ರಯಾಣಿಕರ ಸಂಖ್ಯೆ ಮುಟ್ಟುವ ಭರವಸೆ ಇದೆ." ಎಂದು ಬಿಎಂಆರ್ಸಿಎಲ್ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎ. ಎಸ್. ಶಂಕರ್ ತಿಳಿಸಿದರು.
ದಿನಕ್ಕೆ ಸರಾಸರಿ 4.7 ಲಕ್ಷ ಪ್ರಯಾಣಿಕರಂತೆ ಜುಲೈ ತಿಂಗಳಲ್ಲಿ ಒಟ್ಟು 1 ಕೋಟಿ 46 ಲಕ್ಷ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಜೂನ್ ತಿಂಗಳಲ್ಲಿ ಪ್ರತಿ ದಿನ 4.6 ಲಕ್ಷ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಒಂದು ತಿಂಗಳ ಅವಧಿಯಲ್ಲಿ ಪ್ರತಿದಿನಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ 10000 ಹೆಚ್ಚಾಗಿದೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಲ್ಲಿ ಖಾದಿ ಪ್ರದರ್ಶನ
75ನೇ ವರ್ಷದ ಸ್ವಾತಂತ್ಯ್ರ ಸಂಭ್ರಮದ ಅಂಗವಾಗಿ ಕೈಮಗ್ಗ ಮತ್ತು ಖಾದಿ ಉತ್ಪನ್ನಗಳನ್ನು ಉತ್ತೇಜಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು 60 ಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಬೆಂಗಳೂರು ಸಂತೆ ಜಾಗದಲ್ಲಿ ತಮ್ಮ ಉತ್ಪನ್ನಗಳನ್ನು ಉಚಿತವಾಗಿ ಮಾರಾಟ ಮಾಡಲು ಅನುಮತಿ ನೀಡಿದೆ. 'ಕುಶಲಕರ್ಮಿಗಳೊಂದಿಗೆ ಖಾದಿ ಪ್ರದರ್ಶನ' ಆಗಸ್ಟ್ 15 ರಿಂದ 21 ರವರೆಗೆ ಒಂದು ವಾರ ನಡೆಯಲಿದೆ.
ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎ. ಎಸ್. ಶಂಕರ್ ಈ ಬಗ್ಗೆ ಮಾಹಿತಿ ನೀಡಿದ್ದು. "ಈಗಾಗಲೇ ಕರ್ನಾಟಕದಾದ್ಯಂತದ ಕುಶಲಕರ್ಮಿಗಳಿಂದ ಮಳಿಗೆಗಳನ್ನು ಕಾಯ್ದಿರಿಸಲಾಗಿದೆ. ಒಂದು ವಾರದವರೆಗೆ ನಮಗೆ ಯಾವುದೇ ಶುಲ್ಕವನ್ನು ಪಾವತಿಸದೆ ನಮ್ಮ ಜಾಗದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಅವರಿಗೆ ಅನುಮತಿ ನೀಡಲಾಗುವುದು. ನಾವು ರಾಜ್ಯದಲ್ಲಿ ಗುಡಿ ಕೈಗಾರಿಕೆಯನ್ನು ಉತ್ತೇಜಿಸಲು ಬಯಸುತ್ತೇವೆ. ಸಂತೆಯಲ್ಲಿ ಸಣ್ಣ ತಿನಿಸುಗಳಿಗೂ ಅನುಮತಿ ನೀಡಲಾಗುವುದು." ಎಂದು ತಿಳಿಸಿದರು.
ಖಾದಿ ವಸ್ತುಗಳು, ಕಲೆ ಮತ್ತು ಕರಕುಶಲ ವಸ್ತುಗಳು, ಬಟ್ಟೆ, ಗೃಹಾಲಂಕಾರ, ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಉಡುಪುಗಳು, ಸಾವಯವ ಉತ್ಪನ್ನಗಳು, ಆಭರಣಗಳು, ಸೀರೆಗಳು, ಪುರುಷರು, ಮಹಿಳೆಯರು ಮತ್ತು ಮಕ್ಕಳ ಉಡುಪುಗಳು ಮತ್ತು ಇತರ ಉತ್ಪನ್ನಗಳನ್ನ ಇಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗುವುದು ಎಂದು ಹೇಳಿದರು.