ದರ್ಶನ್ ಮನೆಯೂ ಸೇರಿ 194 ಕಟ್ಟಡ ಜಿಲ್ಲಾಡಳಿತ ವಶಕ್ಕೆ!
ಬೆಂಗಳೂರು, ಸೆಪ್ಟೆಂಬರ್ 22: ಬೆಂಗಳೂರಿನ ಪ್ರತಿಷ್ಠಿತ ರಾಜರಾಜೇಶ್ವರಿ ನಗರದಲ್ಲಿರುವ ಐಡಿಯಲ್ ಹೋಮ್ಸ್ ನ 194 ಮನೆಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆಯಲಿದೆ. ಅದರಲ್ಲಿ ನಟ ದರ್ಶನ್ ಮನೆ, ಶಾಮನೂರು ಶಿವಶಂಕರಪ್ಪ ಅವರ ಎಸ್ ಎಸ್ ಆಸ್ಪತ್ರೆಯೂ ಸೇರಿದೆ ಎಂಬ ಸುದ್ದಿ ಹೊರಬಿದ್ದಿದೆ.
ದೊಡ್ಡವರಿಗೆ ಒಂದು ನ್ಯಾಯ ನಮಗೊಂದು ನ್ಯಾಯವಾ? ಎಂದು ಆಕ್ರೋಶದಿಂದ ಪ್ರಶ್ನಿಸುತ್ತಿದ್ದವರಿಗೆ ಈ ಸುದ್ದಿ ಖಂಡಿತಾ ಅಚ್ಚರಿ, ಗಾಬರಿ ಮೂಡಿಸುವುಂಥದ್ದು.[ರಾಜ ಕಾಲುವೆ ಒತ್ತುವರಿಯಾಗಿದ್ದರೆ ನಾನೇ ಅಗೆದುಕೊಡ್ತೀನಿ: ನಟ ದರ್ಶನ್]
ಬಿಬಿಎಂಪಿ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾದ ನಂತರದಲ್ಲಿ ಆಗುತ್ತಿರುವ ಹೈ ಪ್ರೊಫೈಲ್ ಲೇಔಟ್ ತೆರವು ಇದು. ಐಡಿಯಲ್ ಹೋಮ್ಸ್ ನ ಏಳು ಎಕರೆ ಮೂವತ್ತೊಂದು ಗುಂಟೆ ಜಾಗ ಒತ್ತುವರಿ ಪ್ರದೇಶ ಎಂದು ಗುರುತಿಸಲಾಗಿದೆ. ಆ ಬಡಾವಣೆಯ ಜಾಗ ಬಿ ಖರಾಬು ಭೂಮಿ ಎಂದು ಖಾತ್ರಿಯಾಗಿದೆ. ಅಲ್ಲಿನ ಎಲ್ಲ ಕಟ್ಟಡ ವಶಕ್ಕೆ ಪಡೆಯುತ್ತೇವೆ ಎಂದು ಜಿಲ್ಲಾಧಿಕಾರಿ ವಿ.ಶಂಕರ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಬಿ ಖರಾಬು ಭೂಮಿಯಲ್ಲಿ ಯಾವ ನಿರ್ಮಾಣ ಕಾಮಗಾರಿಯೂ ಕೈಗೊಳ್ಳುವ ಹಾಗಿಲ್ಲ. ಈಗ ಪ್ರಕರಣವನ್ನು ದಾಖಲಿಸಿ, ಒತ್ತುವರಿ ತೆರವು ಮಾಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ. ಭೂ ದಾಖಲೆಗಳ ಇಲಾಖೆಯ ಜಂಟಿ ಇಲಾಖೆ ನಿರ್ದೇಶಕ ಇತ್ತೀಚೆಗೆ ಮಾಡಿದ್ದ ಸರ್ವೇ ವರದಿಯನ್ನು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಗೆ ನೀಡಿದ್ದರು.[ರಾಜಕಾಲುವೆ ಜಾಗದಲ್ಲೇ ದರ್ಶನ್ ತೂಗುದೀಪ ಅವರ ಮನೆ!]
ನಟ ದರ್ಶನ್ ಮನೆ, ಎಸ್ ಎಸ್ ಆಸ್ಪತ್ರೆ ಸೇರಿ ಹಲವು ಕಟ್ಟಡಗಳಿಂದ 7 ಎಕರೆ 31 ಗುಂಟೆಯಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಎಲ್ಲ ಕಟ್ಟಡಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೋರ್ಟ್ ಸೂಚಿಸಿದ್ದರಿಂದ ಎಲ್ಲ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಕಳಿಸುತ್ತೇವೆ ಎಂದು ಬಿಬಿಎಂಪಿ ಕಮಿಷನರ್ ಹೇಳಿದ್ದರು.
ಬಿಬಿಎಂಯಿಂದ ಯಾವುದೇ ದಾಖಲೆ ಬಂದಿಲ್ಲ ಎಂದಿರುವ ಶಂಕರ್, ಆದರೆ ಕಂದಾಯ ಇಲಾಖೆ ದಾಖಲೆ ಪ್ರಕಾರ ಒತ್ತುವರಿ ಆಗಿರುವುದು ಖಾತ್ರಿ ಎಂದಿದ್ದಾರೆ. ಐಡಿಯಲ್ ಹೋಮ್ಸ್ ಬಡಾವಣೆಗೆ ಬೆಂಗಳೂರು ಸುಧಾರಣಾ ಟ್ರಸ್ಟ್ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದಲೂ ಅನುಮತಿ ಸಿಕ್ಕಿತ್ತು.[ಒತ್ತುವರಿ ತೆರವು, ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ: ಸಿಎಂ]
ಬಿ ಖರಾಬು ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಬಡಾವಣೆ ನಿರ್ಮಾಣದ ಅನುಮತಿ ರದ್ದುಗೊಳಿಸಬೇಕು ಎಂದು ಹೈಕೋರ್ಟ್ ನಲ್ಲಿ ದಾವೆ ಹೂಡಲಾಗಿತ್ತು.