1ತಿಂಗಳಲ್ಲಿ ಎಲ್ಲಿ ಇರ್ತೀರಾ ನೋಡಿ: ಅಲೋಕ್ ಕುಮಾರ್ ಗೆ ಚಾಲೆಂಜ್ ಹಾಕಿದ್ದ ರೇಣುಕಾಚಾರ್ಯ
ಬೆಂಗಳೂರು, ಆ 3: ಸುಮಾರು ಒಂದುವರೆ ತಿಂಗಳ ಹಿಂದೆ ಬೆಂಗಳೂರು ನಗರದ ಪೊಲೀಸ್ ಅಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದ ಅಲೋಕ್ ಕುಮಾರ್ ಅವರ ವರ್ಗಾವಣೆಯಾಗಿದೆ. ಭಾಸ್ಕರ್ ರಾವ್ ನೂತನ ಆಯುಕ್ತರಾಗಿ ಶುಕ್ರವಾರ (ಆ 2) ಅಧಿಕಾರ ಸ್ವೀಕರಿಸಿದ್ದಾರೆ.
ಅಂದು ಬಿಜೆಪಿ ಮುಖಂಡ ಎಂ ಪಿ ರೇಣುಕಾಚಾರ್ಯ, ಅಲೋಕ್ ಕುಮಾರ್ ಗೆ ಹಾಕಿದ್ದ ಸವಾಲಿಗೂ, ಈಗ ಅಲೋಕ್ ವರ್ಗಾವಣೆ ಆಗಿರುವುದಕ್ಕೂ ಒಂದಕ್ಕೊಂದು ಕಾಕತಾಳೀಯವೋ ಅಥವಾ ಉದ್ದೇಶಪೂರ್ವಕವೋ, ಒಟ್ಟಿನಲ್ಲಿ ಅಂದಿನ ಘಟನೆಯನ್ನು ಈಗ ಮೆಲುಕು ಹಾಕುವಂತಾಗಿದೆ.
ಕಳೆದ ಜುಲೈ ಹತ್ತರಂದು ವಿಧಾನಸೌಧ ಭಾರೀ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಶಾಸಕರು ಸಾಲುಸಾಲು ರಾಜೀನಾಮೆ ನೀಡುತ್ತಿದ್ದರು, ಅದಾಗಲೇ ಹದಿನಾಲ್ಕು ಶಾಸಕರು ಸ್ಪೀಕರ್ ಕಚೇರಿಯಲ್ಲಿ ತಮ್ಮ ರಾಜೀನಾಮೆಯನ್ನು ನೀಡಿಯಾಗಿತ್ತು.
ಬೆಂಗಳೂರು ನೂತನ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಪ್ರೊಫೈಲ್
ಆ ವೇಳೆ, ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಮತ್ತು ಚಿಕ್ಕಬಳ್ಳಾಪುರದ ಶಾಸಕ ಡಾ. ಸುಧಾಕರ್ ಕೂಡಾ ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಗೆ ಬಂದಿದ್ದರು. ಸುಧಾಕರ್, ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ನೀಡಿ ಹೊರಬಂದಾಗ ಭಾರೀ ಗದ್ದಲವೇ ನಡೆದು ಹೋಯಿತು.
ಒಂದೆಡೆ ಕಾಂಗ್ರೆಸ್, ಇನ್ನೊಂದೆಡೆ ಬಿಜೆಪಿ
ರಾಜೀನಾಮೆ ನೀಡದಂತೆ ತಮ್ಮ ಶಾಸಕರನ್ನು ತಡೆಯಲು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಒಂದೆಡೆ, ಇನ್ನೊಂದೆಡೆ, ರಾಜೀನಾಮೆ ನೀಡಲು ಬಂದ ಶಾಸಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಬಿಜೆಪಿ ಮುಖಂಡರು ಅಲ್ಲಿ ಜಮಾಯಿಸಿದ್ದರು. ರಾಜ್ಯದ ಶಕ್ತಿಕೇಂದ್ರದಲ್ಲಿ ಏನಾಗುತ್ತಿದೆ ಎಂದು ಇಡೀ ರಾಜ್ಯ ಕುತೂಹಲದಿಂದ ವೀಕ್ಷಿಸುತ್ತಿತ್ತು.
ಕರ್ನಾಟಕ ಅಸೆಂಬ್ಲಿ ಉಪಚುನಾವಣೆ: ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು
ಅಲೋಕ್ ಕುಮಾರ್ ರಂಗಪ್ರವೇಶ
ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು, ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ವಿಧಾನಸೌಧಕ್ಕೆ ಆಗಮಿಸಿದರು. ಭಾರೀ ಸಂಖ್ಯೆಯಲ್ಲಿ ಪೊಲೀಸರೂ ಜಮಾಯಿಸಿದ್ದರು. ಅದೇ ವೇಳೆ, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಸ್ಪೀಕರ್ ಕಚೇರಿಯಿಂದ ಹೊರಬರುತ್ತಿದ್ದಂತೆಯೇ, ಕಾಂಗ್ರೆಸ್ ಮುಖಂಡರಾದ ರಿಜ್ವಾನ್ ಅರ್ಷದ್ ಮತ್ತು ಪ್ರಿಯಾಂಕ ಖರ್ಗೆ ಅವರನ್ನು ರಾಜೀನಾಮೆ ವಾಪಸ್ ಪಡೆಯುವಂತೆ ಎಳೆದಾಡಿದರು.
ಬಿಜೆಪಿ ಮುಖಂಡ ರೇಣುಕಾಚಾರ್ಯ
ಎಲ್ಲಾ ವಿದ್ಯಮಾನಗಳು ನೇರ ಪ್ರಸಾರವಾಗುತ್ತಿತ್ತು. ಅಷ್ಟೊತ್ತಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ವಿಧಾನಸೌಧಕ್ಕೆ ಆಗಮಿಸಿದರು. ಸುಧಾಕರ್ ಅವರನ್ನು ಕಾಂಗ್ರೆಸ್ ಮುಖಂಡರಿಂದ ಬಚಾವ್ ಮಾಡಲು, ಬಿಜೆಪಿ ಮುಖಂಡ ರೇಣುಕಾಚಾರ್ಯ ಆಗ ಅಲ್ಲಿಗೆ ಹೋಗಲು ಪ್ರಯತ್ನಿಸಿದಾಗ, ಅವರನ್ನು ಪೊಲೀಸರು ತಡೆದರು. ಪೊಲೀಸರ ಜೊತೆ ವಾಗ್ವಾದಕ್ಕೆ ರೇಣುಕಾಚಾರ್ಯ ಇಳಿದಾಗ, ಕ್ರಮ ತೆಗೆದುಕೂಳ್ಳುವುದಾಗಿ ಕಮಿಷನರ್ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದರು.
ನೀವು ಹಿಂದಿನ ಅಲೋಕ್ ಕುಮಾರ್ ಅಲ್ಲ. ಇನ್ನೊಂದು ತಿಂಗಳಲ್ಲಿ ನೀವೆಲ್ಲಿಇರುತ್ತೀರಾ ನೋಡಿ
ಆಗ ಸಿಟ್ಟಿನಲ್ಲಿ, 'ನೀವು ಹಿಂದಿನ ಅಲೋಕ್ ಕುಮಾರ್ ಅಲ್ಲ. ಇನ್ನೊಂದು ತಿಂಗಳಲ್ಲಿ ನೀವೆಲ್ಲಿ ಇರುತ್ತೀರಾ ನೋಡಿ' ಎಂದು ರೇಣುಕಾಚಾರ್ಯ, ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತೆ ಎನ್ನುವ ಖಚಿತ ವಿಶ್ವಾಸದಲ್ಲಿ ರೇಗಾಡಿದ್ದರು. ಪೊಲೀಸರು ಶಾಂತ ರೀತಿಯಿಂದ ಪರಿಸ್ಥಿತಿಯನ್ನು ಕೊನೆಗೂ ತಿಳಿಗೊಳಿಸಿದರು.
ರಾಜ್ಯಪಾಲರ ಸೂಚನೆಯಂತೆ, ಡಾ. ಸುಧಾಕರ್ ರಾಜಭವನಕ್ಕೆ
ರಾಜ್ಯಪಾಲರ ಸೂಚನೆಯಂತೆ, ಡಾ. ಸುಧಾಕರ್ ಅವರನ್ನು ಅಲೋಕ್ ಕುಮಾರ್, ರಾಜಭವನಕ್ಕೆ ಕರೆದುಕೊಂಡು ಹೋದರು. ಆ ಘಟನೆ ನಡೆದದ್ದು ಜುಲೈ ಹತ್ತು, ಅಲೋಕ್ ಕುಮಾರ್ ವರ್ಗಾವಣೆಯಾಗಿದ್ದು ಆಗಸ್ಟ್ 2ರಂದು, ಒಂದು ತಿಂಗಳೂ ಆಗಿಲ್ಲ. ಅಲೋಕ್ ಕುಮಾರ್ ವರ್ಗಾವಣೆ ಮತ್ತು ರೇಣುಕಾಚಾರ್ಯ ಚಾಲೆಂಜಿಗೆ ಒಂದಕ್ಕೊಂದು ಸಂಬಂಧವಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ವರ್ಗಾವಣೆ ಎನ್ನುವ ಭೂತ ಅಧಿಕಾರಿಗಳನ್ನು ಕಾಡುತ್ತಿರುವುದಂತೂ ಹೌದು.