ರಾಜ್ಯ ಮಟ್ಟದಲ್ಲಿ ಕನ್ನಡ, ರಾಷ್ಟ್ರಮಟ್ಟದಲ್ಲಿ ಹಿಂದಿ ಎಂದ ಅಶ್ವತ್ಥನಾರಾಯಣ
ಬೆಂಗಳೂರು, ಏಪ್ರಿಲ್ 28: "ರಾಜ್ಯದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಇರಲಿದ್ದು, ರಾಷ್ಟ್ರ ಮಟ್ಟದಲ್ಲಿ ಹಿಂದಿ ಸಂಪರ್ಕ ಭಾಷೆಯಾಗುವ ಅಗತ್ಯವಿದೆ. ನಮ್ಮ ಭಾಷೆಯನ್ನು ಗಟ್ಟಿಗೊಳಿಸಲು ನಾವು ಬೇರೆ ಭಾಷೆಯನ್ನು ದ್ವೇಷಿಸಬೇಕಾಗಿಲ್ಲ," ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಗುರುವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಡಾ.ಸಿ.ಎನ್. ಅಶ್ವತ್ಥ ನಾರಾಯಣ, "ಕನ್ನಡವನ್ನು ನಾವು ಬೆಳೆಸಲು ಏನೇನು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಬಹುದೋ ಅದನ್ನು ಮಾಡಬೇಕು. ದೇಶದಲ್ಲಿ ಇಂಗ್ಲಿಷಿಗೆ ವಿಪರೀತ ಒತ್ತು ಕೊಡುವ ನಾವು ಭಾರತೀಯ ಭಾಷೆಯಾದ ಹಿಂದಿಯನ್ನು ಬಳಸುವುದರಲ್ಲಿ ತಪ್ಪೇನಿಲ್ಲ," ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿಂದಿ ಭಾಷೆ ಹೇರಿಕೆ ಸಾಮಾಜಿಕ ಪಿಡುಗು ಆಗುತ್ತಿದೆ: ಕರವೇ ನಾರಯಣಗೌಡ ಕಿಡಿ
"ನಮ್ಮ ಸರಕಾರ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಲು ಸಂಕಲ್ಪ ಮಾಡಿದೆ. ಬೇರಾರೂ ಇಂತಹ ಕ್ರಮವನ್ನು ಅನುಸರಿಸಿಲ್ಲ. ಇದಕ್ಕೆ ಈಗ ಅಡಚಣೆ ಎದುರಾಗಿದೆ, ನಿಜ. ಆದರೆ ಭವಿಷ್ಯದಲ್ಲಿ ಕನ್ನಡ ಕಲಿಕೆ ಅನಿವಾರ್ಯ ಆಗಲಿದೆ," ಎಂದು ತಿಳಿಸಿದ್ದಾರೆ.
"ರಾಜ್ಯದಲ್ಲಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಬೋಧನೆಯನ್ನು ಸಹ ಇಂಗ್ಲಿಷಿನ ಜತೆಗೆ ಕನ್ನಡದಲ್ಲಿ ಕೂಡ ಮಾಡುವಂತೆ ಸೂಚಿಸಲಾಗಿದೆ. ನಾವು ಕನ್ನಡವನ್ನು ಬರೀ ಹೇಳಿಕೆಗಳಲ್ಲಿ ಅಲ್ಲದೆ, ಉತ್ತಮ ಕೆಲಸಗಳ ಮೂಲಕ ಸಶಕ್ತಗೊಳಿಸಿ ಪ್ರಪಂಚಕ್ಕೇ ಸಲ್ಲುವ ಭಾಷೆಯಾಗಿಸಬೇಕು," ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಕನ್ನಡ-ಹಿಂದಿ ಭಾಷೆ ವಿವಾದ
ಹಿಂದಿ ರಾಷ್ಟ್ರೀಯ ಭಾಷೆಯ ವಿಚಾರವಾಗಿ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಟ್ವಿಟ್ ಸಮರ ನಡೆದಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಕನ್ನಡ ಪರವಾದ, ಹಿಂದಿ ಹೇರಿಕೆಯ ವಿರುದ್ಧದ ಧನಿ ಎದ್ದಿದೆ. ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಸುದೀಪ್ ಹೇಳಿದ್ದಕ್ಕೆ, ನೀವೇಕೆ ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಬಿಡುತ್ತೀರಿ ಎಂದು ಅಜಯ್ ದೇವಗನ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು. ಈ ಬೆನ್ನಲ್ಲೇ ಇಬ್ಬರು ಸ್ಟಾರ್ಗಳ ನಡುವೆ ಟ್ವಿಟ್ಟರ್ನಲ್ಲೇ ಪ್ರಶ್ನೋತ್ತರ ನಡೆದಿತ್ತು.
ಭಾಷೆ ವಿಚಾರದಲ್ಲಿ ಚರ್ಚೆಯ ಅಗತ್ಯ ಏನಿದೆ?: ಡಿ.ಕೆ. ಶಿವಕುಮಾರ್
ಈ ಬೆನ್ನಲ್ಲೇ ಹಲವಾರು ಮುಖಂಡರುಗಳು ಸುದೀಪ್ ಪರವಾಗಿ ಟ್ವೀಟ್ ಮಾಡಲು ಆರಂಭ ಮಾಡಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಸುದೀಪ್ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ. "ನಮ್ಮ ದೇಶದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಪ್ರತಿಯೊಂದು ಭಾಷೆಯು ತನ್ನದೇ ಆದ ಶ್ರೀಮಂತ ಇತಿಹಾಸವನ್ನು ಹೊಂದಿದೆ, ಅದರ ಬಗ್ಗೆ ಜನರು ಹೆಮ್ಮೆಪಡುತ್ತಾರೆ. ನಾನೊಬ್ಬ ಕನ್ನಡಿಗ ಎಂದು ಹೆಮ್ಮೆ ಪಡುತ್ತೇನೆ," ಎಂದು ಟ್ವೀಟ್ ಮಾಡುವ ಮೂಲಕ ಕಿಚ್ಚ ಸುದೀಪ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
ಇನ್ನು ಅಜಯ್ ದೇವಗನ್ ವಿರುದ್ಧ ಕನ್ನಡಪರ ಸಂಘಟನೆಗಳು ಇಂದು ಪ್ರತಿಭಟನೆಯನ್ನು ನಡೆದಿದೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಯಣಗೌಡ ಸರಣಿ ಟ್ವೀಟ್ ಮಾಡುವ ಮೂಲಕ ಹಿಂದಿ ಭಾಷೆ ಹೇರಿಕೆ ವಿರುದ್ದ ಕಿಡಿಕಾರಿದ್ದಾರೆ. "ಸಂವಿಧಾನದಲ್ಲಿ ಹಿಂದಿ ಭಾಷೆಗೆ ನೀಡಿರುವ ಹೆಚ್ಚುಗಾರಿಕೆಯಿಂದಲೇ ಕೆಲವು ಹಿಂದಿ ಭಾಷಿಕರು ಹಿಂದಿಯೇತರ ಭಾಷಿಕರ ಮೇಲೆ ಯಜಮಾನಿಕೆ ತೋರುತ್ತಾರೆ. ಹಿಂದಿ ಚಿತ್ರನಟ ಅಜಯ್ ದೇವಗನ್ ಅವರ ಹೇಳಿಕೆ ಹಿಂದಿ ಪಟ್ಟಭದ್ರರ ಯಜಮಾನಿಕೆಯ ಪ್ರದರ್ಶನ. ಹಿಂದಿಗೆ ಪ್ರಾಮುಖ್ಯತೆ ನೀಡುವ ಅಂಶಗಳನ್ನು ಸಂವಿಧಾನದಿಂದ ಕೈಬಿಡದ ಹೊರತು ಈ ಯಜಮಾನಿಕೆ ಪ್ರದರ್ಶನ ನಿಲ್ಲುವುದಿಲ್ಲ," ಎಂದಿದ್ದಾರೆ.
Recommended Video
ಮತ್ತೊಂದು ಟ್ವೀಟ್ ನಲ್ಲಿ "ಆಡಳಿತ, ವ್ಯವಹಾರ, ಉದ್ಯೋಗ, ಸಿನೆಮಾ ಹೀಗೆ ಭಾರತದಲ್ಲಿ ಎಲ್ಲೆಡೆ ತಮಗೆ ಬೇರೆಯವರಿಗಿಂದ ಹೆಚ್ಚು ಪ್ರಾಮುಖ್ಯತೆ ಸಿಗಬೇಕೆಂದು ಕೆಲವು ಹಿಂದಿ ಭಾಷಿಕರು ಅಪೇಕ್ಷಿಸುತ್ತಾರೆ, ಅವರ ಅಪೇಕ್ಷೆಯಂತೆ 70 ವರ್ಷದಿಂದಲೂ ಭಾರತ ಸರ್ಕಾರ ನಡೆದುಕೊಂಡು ಬಂದಿದೆ. ಇವರು ಭಾಷಾ ಹೇರಿಕೆ ಮಾಡುತ್ತಾ ಅಸಮಾನ ಭಾರತವನ್ನು ಸೃಷ್ಟಿಸಿದ್ದಾರೆ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.