ಚಿತ್ರಗಳು : ಗಲಭೆ ಬಳಿಕ ಪಾದರಾಯನಪುರ ಕಂಡಿದ್ದು ಹೀಗೆ
ಬೆಂಗಳೂರು, ಏಪ್ರಿಲ್ 20 : ಕೊರೊನಾ ಹರಡದಂತೆ ತಡೆಯಲು 2ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಪಾದರಾಯನಪುರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಾದರಾಯನಪುರ ಪ್ರದೇಶವನ್ನು ಸಂಪೂರ್ಣವಾಗಿ ಪುನಃ ಸೀಲ್ ಡೌನ್ ಮಾಡಿದೆ. ಜನ ಮತ್ತು ವಾಹನಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ. ಭಾನುವಾರ ರಾತ್ರಿಯ ಗಲಭೆ ಬಳಿಕ ಪೊಲೀಸರು ಪ್ರದೇಶವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪಾದರಾಯನಪುರ ದಾಂಧಲೆ: ಪೊಲೀಸರಿಗೆ ಫ್ರೀ ಹ್ಯಾಂಡ್ ಘೋಷಿಸಿದ ಸಿಎಂ
ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ನಡೆದ ಗಲಭೆಯ ಪೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸೋಮವಾರ ಪ್ರದೇಶದ ಚಿತ್ರಣ ಸಂಪೂರ್ಣ ಬದಲಾಗಿದೆ. ಎಲ್ಲಾ ಕಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, 'ಗರುಡಾ' ಪಡೆಯನ್ನು ನಿಯೋಜನೆ ಮಾಡಲಾಗಿದೆ.
'ಪಾದರಾಯನಪುರ: ಮುಂದೆ ಮಾದರಿಯಾಗಲಿರುವ ಕಠಿಣಕ್ರಮ ಕೈಗೊಳ್ಳುತ್ತೇವೆ'
ಪಿಟಿಐ ಛಾಯಾಗ್ರಾಹಕರು ಸೆರೆ ಹಿಡಿದಿರುವ ಪಾದರಾಯನಪುರದ ಕೆಲವು ಚಿತ್ರಗಳು ಇಲ್ಲಿವೆ ನೋಡಿ. ಮೇ 3ರ ತನಕ ಲಾಕ್ ಡೌನ್ ಜಾರಿಯಲ್ಲಿರಲಿದ್ದು, ಕರ್ನಾಟಕ ಸರ್ಕಾರ ಯಾವುದೇ ನಿಯಮಗಳನ್ನು ಸಡಿಲಿಸುವುದಿಲ್ಲ ಎಂದು ಸೋಮವಾರ ಹೇಳಿದೆ.
ವೈರಲ್ ವಿಡಿಯೋ: ಉದ್ಯಾನ ನಗರಿ ಬೆಂಗಳೂರು ಎಷ್ಟು ಚೆಂದ
ಇಂದು ಎಲ್ಲವೂ ಸ್ತಬ್ಧ
ಭಾನುವಾರ ರಾತ್ರಿ ಗಲಾಟೆ ನಡೆದಿದ್ದ ಪಾದರಾಯನಪುರದಲ್ಲಿ ಇಂದು ಎಲ್ಲವೂ ಸ್ತಬ್ಧವಾಗಿದೆ. ವ್ಯಕ್ತಿಯೊಬ್ಬ ಖಾಲಿ ರೋಡ್ನಲ್ಲಿ ಸಿಲಿಂಡರ್ ಹೊತ್ತು ಸಾಗುತ್ತಿರುವುದು ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.
ಗೃಹ ಸಚಿವರ ಭೇಟಿ
ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪಾದರಾಯನಪುರದಲ್ಲಿ ಸೋಮವಾರ ಪ್ರದಕ್ಷಿಣೆ ನಡೆಸಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಜೊತೆಯಲ್ಲಿದ್ದರು. ಭದ್ರತೆ ಬಗ್ಗೆ ಸಚಿವರು ಪರಿಶೀಲಿಸಿದರು.
ಪ್ರದೇಶ ಪುನಃ ಸೀಲ್ ಡೌನ್
ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ಗಲಭೆ ನಡೆದಾಗ ಪೊಲೀಸರು ಹಾಕಿದ್ದ ತಡೆ ಗೋಡೆಗಳನ್ನು ಧ್ವಂಸಗೊಳಿಸಲಾಗಿತ್ತು. ಇಂದು ಪೊಲೀಸರು ಪ್ರದೇಶವನ್ನು ಪುನಃ ಸೀಲ್ ಡೌನ್ ಮಾಡಿದ್ದು, ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಪೊಲೀಸ್ ಭದ್ರತೆ ಹೆಚ್ಚಳ
ಭಾನುವಾರ ರಾತ್ರಿಯ ಗಲಭೆ ಬಳಿಕ ಪಾದರಾಯನಪುರದಲ್ಲಿ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದೆ. ಪೊಲೀಸರು ಪ್ರದೇಶವನ್ನು ವಶಕ್ಕೆ ಪಡೆದಿದ್ದು, ಭದ್ರತೆಗಾಗಿ 'ಗರುಡಾ' ಪಡೆಯನ್ನು ನಿಯೋಜನೆ ಮಾಡಲಾಗಿದೆ.