ನಿಮಗಾಗಿ ಕಾಯುತ್ತಿದ್ದಾರೆ ವಿದ್ಯಾರ್ಥಿಗಳು ಸರ್, ಎಂದು ಬರುತ್ತೀರಿ?
ಕೆಲವರು ನಮ್ಮ ಜೀವನದಲ್ಲಿ ಅಚಾನಕ್ಕಾಗಿ ಪ್ರವೇಶಿಸಿ ನಮ್ಮನ್ನು ಬೆಳಗಿ ಇದ್ದಕ್ಕಿದ್ದಂತೆ ಮಾಯವಾಗಿಬಿಡುತ್ತಾರೆ. ಬದುಕು ಶಾಶ್ವತ, ನಮ್ಮ ಆಪ್ತರು ಸದಾ ನಮ್ಮೊಂದಿಗಿರುತ್ತಾರೆ ಎಂಬ ಭ್ರಮೆಯ ಬೆಲೂನಿಗೆ ಸೂಜಿ ಚುಚ್ಚಿದಂತಾದಾಗ ಶೂನ್ಯ ಆವರಿಸಿಬಿಡುತ್ತದೆ. ವಿಜ್ಞಾನಿ ಹರೀಶ್ ಭಟ್ ಅವರ ನೆನಪಿನಲ್ಲಿ ಮಲ್ಲಿಕಾರ್ಜುನ ಡಿ.ಜಿ ಅವರ ಬರಹ ಇಲ್ಲಿದೆ...
ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಹರೀಶ್.ಆರ್.ಭಟ್ ನಮ್ಮನ್ನು ಅಗಲಿದ್ದಾರೆ. ಸಾವೆಂಬ ಕಟುಕನಿಗೆ ಕನಿಕರವಿಲ್ಲವೆ ಎಂಬ ಭಾವ ಕಾಡುತ್ತಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ವಿಜ್ಞಾನದ ರುಚಿ ಹತ್ತಿಸಿದ್ದರು. ಮೂಡಿಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಉಪನ್ಯಾಸ ನೀಡುವಾಗಲೇ ಕುಸಿದು ಬ್ರೇನ್ ಹೆಮೊರೇಜ್ ಆಗಿ ಮೃತಪಟ್ಟಿದ್ದು ಅತ್ಯಂತ ದುಃಖಕರ ಸಂಗತಿ.
ಈಗ ಎಸ್.ಎಸ್.ಎಲ್.ಸಿ ಓದುತ್ತಿರುವ ನನ್ನ ಮಗ ಓಂ, ಹರೀಶ್.ಆರ್.ಭಟ್ ಅವರ ಉಪನ್ಯಾಸವನ್ನು ಕೇಳಿ, ಅವರೊಂದಿಗೆ ಮಾತನಾಡಿ ತಾನೂ ಭಾರತೀಯ ವಿಜ್ಞಾನ ಸಂಸ್ಥೆ ಸೇರಬೇಕು ಎನ್ನಲು ಪ್ರಾರಂಭಿಸಿದ. ನಮ್ಮ ಮನೆಗೆ ಒಮ್ಮೆ ಬಂದಿದ್ದ ಅವರನ್ನು ಭಾರತೀಯ ವಿಜ್ಞಾನ ಸಂಸ್ಥೆ ಸೇರಲು ಏನೇನು ಓದಬೇಕು ಎಂಬುದಾಗಿ ಕೇಳಿ ಮಾಹಿತಿ ಪಡೆದಿದ್ದ. ಅವರ ಉಪನ್ಯಾಸಗಳು ವಿಜ್ಞಾನದೆಡೆಗೆ ಮಕ್ಕಳನ್ನು ಆಕರ್ಷಿಸಲು ಸಹಕಾರಿಯಾಗಿದ್ದವು.
ಶಿಡ್ಲಘಟ್ಟಕ್ಕೆ ಹರೀಶ್.ಆರ್.ಭಟ್ ಮೂರು ಬಾರಿ ಬಂದಿದ್ದರು. ಮೊದಲ ಬಾರಿ ಬಂದಾಗ ಅವರ ಪರಿಚಯವಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷರಾಗಿ ಬಿ.ಆರ್ .ಅನಂತಕೃಷ್ಣ ಅವರು ಆಯ್ಕೆಯಾಗಿ ಪದಗ್ರಹಣ ಸಮಾರಂಭವನ್ನು ನಡೆಸಿದಾಗ (2016 ರ ಮೇ 22 ರಂದು) ಹರೀಶ್.ಆರ್.ಭಟ್ ಅವರು ಕುಟುಂಬ ಸಮೇತರಾಗಿ ಬಂದಿದ್ದರು.
ಶಿಡ್ಲಘಟ್ಟಕ್ಕೆ ವಿಜ್ಞಾನಿ ಹರೀಶ್ ಭಟ್ ಮೊದಲ ಭೇಟಿ
ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಗೌರವ ಕಾರ್ಯದರ್ಶಿ ಅಮೃತ್ ಕುಮಾರ್ ಅವರು ಹರೀಶ್.ಆರ್.ಭಟ್ ಅವರನ್ನು ಕರೆದುಕೊಂಡು ಬಂದು ಅಂದು ನಮಗೆಲ್ಲಾ ಪರಿಚಯಿಸಿದ್ದರು. 'ಸಾಹಿತ್ಯದಲ್ಲಿ ವಿಜ್ಞಾನ' ಎಂಬ ವಿಷಯವಾಗಿ ಹರೀಶ್.ಆರ್.ಭಟ್ ಅಂದು ಮಾತನಾಡಿದ್ದರು.
ಬಿ.ಆರ್.ಅನಂತಕೃಷ್ಣ ಅವರು ಶಿಡ್ಲಘಟ್ಟದಲ್ಲಿ ಕಸಾಪ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಹಲವು ಕಾರ್ಯಕ್ರಮಗಳನ್ನು ನಡೆಸಿದರು. ಚಿತ್ರದಲ್ಲಿ ಮಲ್ಲಿಕಾರ್ಜುನ ಡಿ.ಜಿ ಕುಟುಂಬದ ಜತೆ ವಿಜ್ಞಾನಿ ಹರೀಶ್ ಭಟ್.‘ಸಾಧಕರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ
'ಸಾಧಕರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ' ಎಂಬ ಕಾರ್ಯಕ್ರಮದಡಿಯಲ್ಲಿ ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ಎರಡು ಶಾಲೆಗಳ ವಿದ್ಯಾರ್ಥಿಗಳನ್ನು ಸೇರಿಸಿ ವಿಜ್ಞಾನ ಲೇಖಕರಾದ ನಾಗೇಶ್ ಹೆಗಡೆ ಮತ್ತು ಹರೀಶ್.ಆರ್.ಭಟ್ ಅವರಿಂದ ಉಪನ್ಯಾಸ ಮತ್ತು ಸಂವಾದವನ್ನು ಆಯೋಜಿಸಿದ್ದರು.
ಪ್ರಕೃತಿಯ ವಿಸ್ಮಯಗಳು
ಹರೀಶ್.ಆರ್.ಭಟ್ ಅವರು, ಸ್ಲೈಡ್ ಷೋ ಮೂಲಕ ಚಿತ್ರಗಳನ್ನು ತೋರಿಸುತ್ತಾ 'ಪ್ರಕೃತಿಯ ವಿಸ್ಮಯಗಳು' ಎಂಬ ವಿಷಯವಾಗಿ ಉಪನ್ಯಾಸ ನೀಡಿದರು. ನನ್ನ ಮಗ ಸೇರಿದಂತೆ ಭಾಗವಹಿಸಿದ್ದ ವಿದ್ಯಾರ್ಥಿಗಳೆಲ್ಲ ಅವರ ಮತ್ತು ವಿಜ್ಞಾನದ ಫ್ಯಾನ್ ಆದರು. ವಿದ್ಯಾರ್ಥಿಗಳು ಸಂವಾದ ನಡೆಸಿ ಅನುಮಾನಗಳನ್ನು ಪರಿಹರಿಸಿಕೊಂಡರು.
ಆ ಕಾರ್ಯಕ್ರಮದ ನಂತರ ನಮ್ಮ ಮನೆಗೂ ಬಂದರು. ನನ್ನ ಮಗನ ಆಸಕ್ತಿ ಕಂಡು 'ಭಾರತೀಯ ವಿಜ್ಞಾನ ಸಂಸ್ಥೆ'ಗೆ ಒಮ್ಮೆ ಭೇಟಿ ನೀಡುವಂತೆ ತಿಳಿಸಿದರು.
ನಮ್ಮ ಸಂಪರ್ಕ ವ್ಯಾಟ್ಸಪ್ ಮೂಲಕ ಜಾರಿಯಲ್ಲಿತ್ತು
ನಂತರ ನಮ್ಮ ಸಂಪರ್ಕ ವ್ಯಾಟ್ಸಪ್ ಮೂಲಕ ಜಾರಿಯಲ್ಲಿತ್ತು. ನಾನು ಛಾಯಾಗ್ರಹಣ ಮಾಡುತ್ತಿದ್ದ ಕೀಟ, ಹುಳು, ಜೀರುಂಡೆ, ಚಿಟ್ಟೆ ಯಾವುದರ ಹೆಸರು ಬೇಕಿದ್ದರೂ ಅವರಿಂದ ಮಾಹಿತಿ ಸಿಗುತ್ತಿತ್ತು. ಈ ವಿಷಯದಲ್ಲಿ ನನಗೆ ಗುರುವಾಗಿದ್ದರು. ಫೇಸ್ ಬುಕ್ ಮೂಲಕವೂ ನಿಸರ್ಗದ ಕೌತುಕಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.
ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಬಂದರು
ಕಳೆದ ಜುಲೈ 21 ರಂದು ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಬಿ.ಆರ್.ಅನಂತಕೃಷ್ಣ ಅವರು ಹರೀಶ್.ಆರ್.ಭಟ್ ಅವರನ್ನು ಕರೆಸಿದ್ದರು. ಅಲ್ಲಿ 'ವಿಜ್ಞಾನದ ಬೆಳವಣಿಗೆ' ವಿಷಯವಾಗಿ ಅವರು ಉಪನ್ಯಾಸ ನೀಡಿದರು. ಅವರೊಂದಿಗೆ ಸಿದ್ದಾರ್ಥ್ ಪೈ ಎಂಬ ಅವರ ವಿದ್ಯಾರ್ಥಿಯೊಬ್ಬರನ್ನು ಕರೆದುಕೊಂಡು ಬಂದಿದ್ದರು.
ರೇಷ್ಮೆ ಹುಳು ಸಾಕಣೆಯ ಬಗ್ಗೆ ತಿಳಿದುಕೊಂಡರು
ಕಾರ್ಯಕ್ರಮ ಹಾಗೂ ಊಟದ ನಂತರ ನಡಿಪಿನಾಯಕನಹಳ್ಳಿಯಲ್ಲಿ ರೇಷ್ಮೆ ಹುಳು ಸಾಕಣೆಯ ವಿವಿಧ ಹಂತಗಳನ್ನು ನೋಡಿಕೊಂಡು ಫೋಟೋಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಹೊರಟರು. ಅಂದು ಕೂಡ ಅವರೊಂದಿಗೆ ಸಂವಾದ ನಡೆಸಿ ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಿ ಅಭಿನಂದಿಸಿದ್ದರು.
ಅಕ್ಟೋಬರ್ 28 ರಂದು ಅವರಿಗೆ ಫೋನ್ ಮಾಡಿದ್ದೆ
ಈಚೆಗೆ ಅಂದರೆ ಅಕ್ಟೋಬರ್ 28 ರಂದು ಅವರಿಗೆ ಫೋನ್ ಮಾಡಿದ್ದೆ. ಮೀಟಿಂಗ್ನಲ್ಲಿದ್ದ ಕಾರಣ ಅವರೇ ಸಂಜೆ ವಾಪಸ್ ಫೋನ್ ಮಾಡಿದರು. ನನ್ನ ಮಗನನ್ನು ಪಿಯುಸಿಗೆ ಎಲ್ಲಿ ಸೇರಿಸಿದರೆ ಉತ್ತಮ ಎಂದು ಅವರ ಸಲಹೆ ಕೇಳಿದೆ.
ನಮ್ಮಲ್ಲಿ ಸಾಕಷ್ಟು ಪ್ರಶ್ನಿಗಳಿವೆ ಸರ್
ಆಳ್ವಾಸ್ ಸಂಸ್ಥೆಯೊಂದಿಗೆ ಭಾರತೀಯ ವಿಜ್ಞಾನ ಸಂಸ್ಥೆ ಒಂದು ಒಡಂಬಡಿಕೆಯನ್ನು ಸಹಿ ಮಾಡಿದೆ. ಆ ಕಾರಣದಿಂದ ನಾನಲ್ಲಿಗೆ ಪ್ರತಿ ತಿಂಗಳು ಹೋಗುತ್ತೇನೆ. ಅವನ ಆಸಕ್ತಿಗೆ ಅದು ಸಹಾಯವಾಗಬಹುದು. ನವೆಂಬರ್ ಮೊದಲ ವಾರ ಅಲ್ಲಿರುತ್ತೇನೆ. ಬನ್ನಿ, ಅಲ್ಲಿ ನೋಡಿ ಎಂದು ಹೇಳಿದ್ದರು. ನಮ್ಮಲ್ಲಿ ಸಾಕಷ್ಟು ಪ್ರಶ್ನಿಗಳಿವೆ ಸರ್, ನಿಮ್ಮಿಂದ ಪ್ರೇರಣೆ ಹೊಂದಬೇಕಾದ ವಿದ್ಯಾರ್ಥಿಗಳು ನಿಮಗಾಗಿ ಕಾಯುತ್ತಿದ್ದಾರೆ ಸರ್, ಎಂದು ಬರುತ್ತೀರಿ?