ಐಎಂಎ ಒಡೆತನದ 4 ಫಾರ್ಮಸಿಗಳ ಮೇಲೆ ಎಸ್ಐಟಿ ದಾಳಿ
ಬೆಂಗಳೂರು, ಜುಲೈ 6: ಐಎಂಎ ಜ್ಯುವೆಲರಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಎಸ್ಐಟಿ ಬಂಧಿಸಿದೆ.
ಹಾಗೆಯೇ ಐಎಂಎ ಒಡೆತನದ ಫ್ರಂಟ್ ಲೈನ್ ಫಾರ್ಮಾ ಹೆಸರಿನ ನಾಲ್ಕು ಮಳಿಗೆಗಳ ಮೇಲೆ ದಾಳಿ ನಡೆಸಿ ಸುಮಾರು 1.20 ಕೋಟಿ ರೂ ಬೆಲೆಬಾಳುವ ಫಾರ್ಮಸಿ, ವಿದ್ಯುನ್ಮಾನ ಹಾಗೂ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜ್ಯ ಸರ್ಕಾರವು ಸಕ್ಷಮ ಪ್ರಾಧಿಕಾರಿಯನ್ನಾಗಿ ನೇಮಿಸಿದ್ದ ಬೆಂಗಳೂರು ಉತ್ತರ ವಿಭಾಗಾಧಿಕಾರಿ ಎಲ್ಸಿ ನಾಗರಾಜ್ ಸಂಸ್ಥೆಯ ಬಗ್ಗೆ ಸರಿಯಾಗಿ ವಿಚಾರಣೆ ಕೈಗೊಳ್ಳದೆ ನೈಜ ಸಂಗತಿಯನ್ನು ಮರೆಮಾಚಿ ಈ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ಗೆ ಅನುಕೂಲವಾಗುವಂತೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಇದಕ್ಕೆ ಪ್ರತಿಯಾಗಿ 4.5 ಕೋಟಿ ರೂಗಳನ್ನು ಲಂಚ ರೂಪದಲ್ಲಿ ಪಡೆದಿದ್ದಾರೆಂದು ತಿಳಿದುಬಂದಿದೆ.
ನಾಗರಾಜ್ನ ಈ ಕೃತ್ಯಕ್ಕೆ ಸಹಕರಿಸಿದ್ದ ಗ್ರಾಮಲೆಕ್ಕಿಗ ಮಂಜುನಾಥ್ ಎಂಬುವವನನ್ನು ದಸ್ತಗಿರಿ ಮಾಡಲಾಗಿದೆ.
ನ್ಯಾಯಾಲಯವು ಈ ಇಬ್ಬರನ್ನು ಒಂಬತ್ತು ದಿನ ಪೊಲೀಸ್ ವಶಕ್ಕೆ ನೀಡಿದೆ. ಐಎಂಎ ಒಡೆತನದ ಸಂಸ್ಥೆಗಳ ಮೇಲೆ ದಾಳಿ ಮುಂದುವರೆದಿದ್ದು ಅನಿಲ್ ಭೂಮಿ ರೆಡ್ಡಿ, ಡಿವೈಎಸ್ಪಿ ನೇತೃತ್ವದ ತಂಡ ಶಾಂತಿನಗರ, ಬಿಟಿಎಂ ಲೇಔಟ್, ಜಯನಗರದ ಎರಡು ಫ್ರಂಟ್ ಲೈನ್ ಫಾರ್ಮಾದ ಮೇಲೆ ದಾಳಿ ನಡೆಸಿ 1.20 ಮೌಲ್ಯದ ಫಾರ್ಮಸಿ ವಿದ್ಯುನ್ಮಾನ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.